ಲಂಡನ್ (ಇಂಗ್ಲೆಂಡ್) : ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಖಂಡಿಸಿ ಅನಿವಾಸಿ ಭಾರತೀಯರು ಲಂಡನ್ನಲ್ಲಿರುವ ಪಾಕಿಸ್ತಾನ ಹೈಕಮಿಷನ್ ಹೊರಗೆ ಪ್ರತಿಭಟನೆ ನಡೆಸಿದರು. ಈ ವೇಳೆ ಪಾಕಿನ ಅಧಿಕಾರಿ ಭಾರತೀಯರಿಗೆ ಭಯಾನಕ ಎಚ್ಚರಿಕೆಯ ಸನ್ನೆ ಮಾಡಿರುವುದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಅನಿವಾಸಿ ಭಾರತೀಯರು ದೇಶದ ಧ್ವಜಗಳು, ಬ್ಯಾನರ್ಗಳು ಮತ್ತು ಫಲಕಗಳನ್ನು ಹಿಡಿದು ಪ್ರವಾಸಿಗರ ಹತ್ಯೆ ಮಾಡಿದ್ದರ ವಿರುದ್ಧ ಘೋಷಣೆ ಕೂಗಿದರು. ಮೃತರ ಕುಟುಂಬಗಳಿಗೆ ನ್ಯಾಯ ಒದಗಿಸಬೇಕೆಂದು ಆಗ್ರಹಿಸಿದರು. ಪಾಕಿಸ್ತಾನವು ಭಯೋತ್ಪಾದಕ ಗುಂಪುಗಳನ್ನು ಬೆಂಬಲಿಸುತ್ತಿದೆ. ಉಗ್ರರಿಗೆ ಆಶ್ರಯ ನೀಡುತ್ತಿದೆ ಎಂದು ಟೀಕಿಸಿ, ಭಯೋತ್ಪಾದನೆ ವಿರುದ್ಧ ಘೋಷಣೆಗಳನ್ನು ಕೂಗಿದರು.
ದಾರ್ಷ್ಟ್ಯ ಮೆರೆದ ಪಾಕ್ ಅಧಿಕಾರಿ: ಭಾರತೀಯರು ರಾಯಭಾರಿ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದರೆ, ಭಾರತೀಯ ವಾಯುಪಡೆಯ ಯೋಧ ಅಭಿನಂದನ್ ವರ್ಧಮಾನ್ ಅವರ ಚಿತ್ರವಿರುವ ಪೋಸ್ಟರ್ ಕೈಯಲ್ಲಿ ಹಿಡಿದುಕೊಂಡಿದ್ದ ಅಧಿಕಾರಿಯೊಬ್ಬ ಪ್ರತಿಭಟನಾಕಾರರನ್ನು ಉದ್ದೇಶಿಸಿ ಬೆದರಿಕೆಯ ಸನ್ನೆ ಮಾಡಿದ್ದಾನೆ
ಸನ್ನೆ ಮಾಡಿದ ಅಧಿಕಾರಿಯನ್ನು ಕರ್ನಲ್ ತೈಮೂರ್ ರಾಹತ್ ಎಂದು ಗುರುತಿಸಲಾಗಿದೆ. ಪಾಕ್ ಸೇನೆಯ ಅಧಿಕಾರಿಯೂ ಆಗಿರುವ ಆತ, ಲಂಡನ್ ಹೈಕಮಿಷನ್ನ ಸಲಹೆಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದಾನೆ. ರಾಯಭಾರಿ ಕಚೇರಿಯ ಕಟ್ಟಡದ ಮೇಲೆ ನಿಂತು ಪ್ರತಿಭಟನಾನಿರತ ಭಾರತೀಯರನ್ನು ಉದ್ರೇಕಿಸುವ ರೀತಿಯಲ್ಲಿ ನಡೆದುಕೊಂಡಿದ್ದಾನೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು.
ಅದರ ಜೊತೆಗೆ, ಕಚೇರಿಯ ಬಾಲ್ಕನಿಯಲ್ಲಿ ಕಾಶ್ಮೀರಿಗಳೊಂದಿಗೆ ಪಾಕಿಸ್ತಾನ ನಿಲ್ಲುತ್ತದೆ ಎಂದು ಬರೆದ ಬೋರ್ಡ್ ಅನ್ನು ನೇತು ಹಾಕಲಾಗಿದೆ. ಇನ್ನೊಂದೆಡೆ, ಪಾಕಿಸ್ತಾನ ಪ್ರತಿಭಟನಾಕಾರರು ಧ್ವನಿವರ್ಧಕದಲ್ಲಿ ದೇಶಭಕ್ತಿ ಗೀತೆಯನ್ನು ಹಾಡುವುದೂ ವಿಡಿಯೋದಲ್ಲಿ ಕೇಳಿಸುತ್ತದೆ.
ಸಿಂಧೂ ನದಿ ನೀರು ಒಪ್ಪಂದ ಸ್ಥಗಿತ: ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನ ಕೈವಾಡ ಇದೆ ಎಂದು ಆರೋಪಿಸಿ ಭಾರತ ಸರ್ಕಾರವು, ಸಿಂಧೂ ನದಿ ನೀರು ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಘೋಷಿಸಿದೆ. ಇದು ಪಾಕಿಸ್ತಾನದ ನಾಲ್ಕು ಪ್ರಾಂತ್ಯಗಳಿಗೆ 'ಜಲಾಘಾತ' ಉಂಟು ಮಾಡುವ ಸಾಧ್ಯತೆ ಇದೆ. ಅಲ್ಲದೆ, ಹಲವು ರಾಜತಾಂತ್ರಿಕ ಕಠಿಣ ನಿಲುವುಗಳನ್ನು ತೆಗೆದುಕೊಂಡಿದೆ.
ಇದರ ವಿರುದ್ಧವಾಗಿ ಪಾಕಿಸ್ತಾನವು ಸಿಮ್ಲಾ ಒಪ್ಪಂದವನ್ನು ಸ್ಥಗಿತಗೊಳಿಸುವುದಾಗಿ ಮತ್ತು ಭಾರತದೊಂದಿಗೆ ಇತರ ದ್ವಿಪಕ್ಷೀಯ ಒಪ್ಪಂದಗಳನ್ನು ತಡೆಹಿಡಿಯುವುದಾಗಿ ಹೇಳಿದೆ. ಭಾರತದೊಂದಿಗಿನ ವ್ಯಾಪಾರ ಸ್ಥಗಿತ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶ ನಿರ್ಬಂಧ ಹೇರಿದೆ.
ಭಯೋತ್ಪಾದಕ ದಾಳಿ: ದಕ್ಷಿಣ ಕಾಶ್ಮೀರದ ಪಹಲ್ಗಾಮ್ ನಲ್ಲಿ ಏಪ್ರಿಲ್ 22 ರಂದು ಭಯೋತ್ಪಾದಕರು ದಾಳಿ ನಡೆಸಿ ಕರ್ನಾಟಕದ ಮೂವರು ಸೇರಿ 26 ಮಂದಿಯನ್ನು ಬಲಿ ತೆಗೆದುಕೊಂಡಿದ್ದರು. ಅದರಲ್ಲಿ ಹೆಚ್ಚಿನವರು ಪ್ರವಾಸಿಗರಾಗಿದ್ದಾರೆ. ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾದ ಅಂಗಸಂಸ್ಥೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ದಾಳಿಯ ಹೊಣೆ ಹೊತ್ತುಕೊಂಡಿದೆ.
ಇದನ್ನೂ ಓದಿ: "ಭಾರತ ನೀರು ನಿಲ್ಲಿಸಿದರೆ, ಸಿಂಧೂ ನದಿಯಲ್ಲಿ ರಕ್ತ ಹರಿಯುತ್ತದೆ": ಬಿಲಾವಲ್ ಭುಟ್ಟೋ ಬೆದರಿಕೆ
"ಪಹಲ್ಗಾಮ್ ದಾಳಿ ವಿರುದ್ಧ ತಟಸ್ಥ ತನಿಖೆಗೆ ಸಿದ್ಧ": ಪಾಕಿಸ್ತಾನ ಪ್ರಧಾನಿ