ಬ್ರಸೆಲ್ಸ್, ಬೆಲ್ಜಿಯಂ: ರಫೇಲ್ನ ಪರಿಣಾಮಕಾರಿತ್ವಕ್ಕೆ ಸ್ಪಷ್ಟ ಪುರಾವೆ ಎಂದರೆ ಅದು ನಾಶವಾದ ಮತ್ತು ನಿಷ್ಕ್ರಿಯಗೊಳಿಸಲಾದ ಪಾಕಿಸ್ತಾನದ ವಾಯುನೆಲೆಗಳು ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ. ಆಪರೇಷನ್ ಸಿಂಧೂರ್ ಸಮಯದಲ್ಲಿ ಆದ ನಷ್ಟಗಳ ಬಗ್ಗೆ ಕೇಳಿದ ಪ್ರಶ್ನೆಗೆ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತ ಆಪರೇಷನ್ ಸಿಂಧೂರ್ ಪ್ರಾರಂಭಿಸಿದ ಒಂದು ತಿಂಗಳ ನಂತರ ಯುರೋಪ್ಗೆ ಭೇಟಿ ನೀಡಿರುವ ವಿದೇಶಾಂಗ ಸಚಿವರು, ಸೋಮವಾರ ಬ್ರಸೆಲ್ಸ್ನಲ್ಲಿ ಪೊಲಿಟಿಕೊ ಜೊತೆ ಮಾತನಾಡಿದರು. ಈ ಸಂದರ್ಭದಲ್ಲಿ ಅವರ ಈ ಹೇಳಿಕೆ ಹೊರ ಬಿದ್ದಿದೆ. ಮತ್ತೆ ಭಯೋತ್ಪಾದಕ ದಾಳಿ ಮೂಲಕ ಕೆಣಕುವ ಪ್ರಯತ್ನ ಮಾಡಿದರೆ, ಭಾರತ ಪಾಕ್ ಮೇಲೆ ಆಳವಾಗಿ ದಾಳಿ ಮಾಡುತ್ತದೆ ಎಂದು ಜೈಶಂಕರ್ ಎಚ್ಚರಿಸಿದ್ದಾರೆ. ಏಪ್ರಿಲ್ 22 ರ ಪಹಲ್ಗಾಮ್ ದಾಳಿಯಂತಹ ಘಟನೆಗಳು ಪುನರಾವರ್ತನೆಯಾದರೆ ಭಯೋತ್ಪಾದಕ ಸಂಘಟನೆಗಳು ಮತ್ತು ಅವರ ನಾಯಕರ ವಿರುದ್ಧ ಭಾರತ ಪ್ರತೀಕಾರ ತೀರಿಸಿಕೊಳ್ಳದೇ ಬಿಡುವುದಿಲ್ಲ ಎಂದು ಅವರು ಇದೇ ವೇಳೆ ನೇರ ಎಚ್ಚರಿಕೆ ನೀಡಿದ್ದಾರೆ.
ನಷ್ಟಗಳ ಬಗ್ಗೆ ಕೇಳಿದಾಗ, ಸಂಬಂಧಿತ ಅಧಿಕಾರಿಗಳು ಸರಿಯಾದ ಸಮಯದಲ್ಲಿ ಈ ವಿಷಯವನ್ನು ಬಹಿರಂಗಪಡಿಸುತ್ತಾರೆ ಎಂದು ಜೈಶಂಕರ್ ತಿಳಿಸಿದರು. ಭಾರತದ ಯುದ್ಧ ವಿಮಾನಗಳು ಮತ್ತು ಕ್ಷಿಪಣಿಗಳು ಪಾಕಿಸ್ತಾನದ ವಾಯುಪಡೆಗೆ ಪ್ರತಿಯಾಗಿ ಹಾನಿ ಮಾಡುವುದಕ್ಕಿಂತ ಹೆಚ್ಚಿನ ಹಾನಿಯನ್ನುಂಟು ಮಾಡಿವೆ ಎಂದು ಅವರು ಹೇಳಿದರು. ಇದರಿಂದಾಗಿ ಪಾಕಿಸ್ತಾನ ಶಾಂತಿಗಾಗಿ ಮೊರೆ ಇಡಬೇಕಾಗಿತು ಎಂದು ವಿದೇಶಾಂಗ ಸಚಿವರು ವಿವರಿಸಿದರು.
"ನನ್ನ ಮಟ್ಟಿಗೆ ಹೇಳುವುದಾದರೆ, ರಫೇಲ್ ಎಷ್ಟು ಪರಿಣಾಮಕಾರಿಯಾಗಿತ್ತು ಎಂದು ಹೇಳುವುದಾದರೆ, ಇತರ ವ್ಯವಸ್ಥೆಗಳು ಎಷ್ಟು ಪರಿಣಾಮಕಾರಿಯಾಗಿದ್ದವು ಎಂಬುದಕ್ಕೆ ಸ್ಪಷ್ಟ ಪುರಾವೆ ಎಂದರೆ ಪಾಕಿಸ್ತಾನದಲ್ಲಿ ನಾಶವಾದ ಮತ್ತು ನಿಷ್ಕ್ರಿಯಗೊಂಡ ವಾಯುನೆಲೆಗಳು ಎಂದು ಅವರು ಹೇಳಿದರು. 10 ನೇ ತಾರೀಖಿನ ಬೆಳಗ್ಗೆ ನಾವು ಪಾಕಿಸ್ತಾನದ ಪ್ರಮುಖ ಎಂಟು ವಾಯುನೆಲೆಗಳನ್ನು ಹೊಡೆದು ಅವುಗಳನ್ನು ನಿಷ್ಕ್ರಿಯಗೊಳಿಸಿದ್ದೇವೆ. ರನ್ವೇಗಳು ಮತ್ತು ಹಾನಿಗೊಳಗಾದ ಹ್ಯಾಂಗರ್ಗಳನ್ನು ತೋರಿಸುವ ಚಿತ್ರಗಳು ಗೂಗಲ್ನಲ್ಲಿ ಲಭ್ಯವಿದೆ ಎಂದು ಅವರು ಹೇಳಿದರು.
ಪಾಕಿಸ್ತಾನ ಬಹಿರಂಗವಾಗಿ ಉಗ್ರರಿಗೆ ತರಬೇತಿ ನೀಡುತ್ತಿದೆ: ಪಾಕಿಸ್ತಾನವು ಸಾವಿರಾರು ಭಯೋತ್ಪಾದಕರಿಗೆ ತೆರೆದ ಸ್ಥಳದಲ್ಲಿ ತರಬೇತಿ ನೀಡುತ್ತಿದೆ ಮತ್ತು ಅವರನ್ನು ಭಾರತದ ಮೇಲೆ ಪ್ರಾಕ್ಸಿ ವಾರ್ ಗೆ ಕಳುಹಿಸುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಆರೋಪಿಸಿದರು. ನಾವು ಅದರೊಂದಿಗೆ ಬದುಕಲು ಹೋಗುವುದಿಲ್ಲ. ಆದ್ದರಿಂದ ಅವರಿಗೆ ನಮ್ಮ ಸಂದೇಶ ಏನೆಂದರೆ ಏಪ್ರಿಲ್ನಲ್ಲಿ ಅವರು ಮಾಡಿದ ರೀತಿಯ ಅನಾಗರಿಕ ಕೃತ್ಯಗಳನ್ನು ಮತ್ತೆ ಹೀಗೆ ಮುಂದುವರಿಸಿದರೆ, ಪ್ರತೀಕಾರ ತೆಗೆದುಕೊಳ್ಳದೇ ಬಿಡುವುದಿಲ್ಲ. ಮತ್ತು ಆ ಪ್ರತೀಕಾರ ಭಯೋತ್ಪಾದಕ ಸಂಘಟನೆಗಳು ಮತ್ತು ಭಯೋತ್ಪಾದಕ ನಾಯಕತ್ವದ ವಿರುದ್ಧ ಇರುತ್ತದೆ ಎಂದು ಅವರು ಹೇಳಿದರು. ಅವರು ಎಲ್ಲಿದ್ದಾರೆ ಎಂಬುದು ನಮಗೆ ಮುಖ್ಯವಲ್ಲ. ಅವರು ಪಾಕಿಸ್ತಾನದ ಆಳದಲ್ಲಿದ್ದರೆ, ನಾವು ಪಾಕಿಸ್ತಾನದ ಆಳಕ್ಕೆ ಹೋಗುತ್ತೇವೆ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.
ಏಪ್ರಿಲ್ 22 ರಂದು 26 ಜೀವಗಳನ್ನು ಬಲಿ ಪಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚಾಗಿತ್ತು. ಮೇ 7 ರಂದು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ಮೇಲೆ ಭಾರತ ನಿಖರವಾದ ದಾಳಿ ನಡೆಸಿತು. ಮೇ 10 ರಂದು ಎರಡೂ ಕಡೆಯ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರ ನಡುವಿನ ಮಾತುಕತೆಯ ನಂತರ ಮಿಲಿಟರಿ ಕ್ರಮಗಳನ್ನು ನಿಲ್ಲಿಸುವ ತಿಳುವಳಿಕೆಯೊಂದಿಗೆ ಭಾರತ ಮತ್ತು ಪಾಕಿಸ್ತಾನದ ಕಡೆಯಿಂದ ನಾಲ್ಕು ದಿನಗಳ ಹೋರಾಟಕ್ಕೆ ಕದನ ವಿರಾಮ ಘೋಷಣ ಆಯಿತು.
ಬೆಲ್ಜಿಯಂನಲ್ಲಿರುವ ಭಾರತೀಯ ಸಮುದಾಯದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್, ಭಾರತದ ಭಯೋತ್ಪಾದನಾ ನಿಗ್ರಹ ಪ್ರಯತ್ನಗಳ ಬಗ್ಗೆ ಅವರಿಗೆ ತಿಳಿಸಿದರು. ಬೆಲ್ಜಿಯಂನ ಮ್ಯಾಕ್ಸಿಮ್ ಪ್ರೀವೋಟ್ ಅವರೊಂದಿಗಿನ ಮಾತುಕತೆಯ ಸಮಯದಲ್ಲಿ ಭಯೋತ್ಪಾದನೆ ಒಂದು ನಿರ್ದಿಷ್ಟ ದೇಶದ ಸಮಸ್ಯೆಯಲ್ಲ ಎಂಬ ಅಂಶವನ್ನು ಒತ್ತಿ ಹೇಳಿದರು.