ವಿಭಿನ್ನ ಹಾಡುಗಳು ಹಾಗೂ ಟ್ರೇಲರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಕ್ರೇಜ್ ಹುಟ್ಟಿಸಿರುವ ಚಿತ್ರ 'ಫೈರ್ ಫ್ಲೈ'. ನಿವೇದಿತಾ ಶಿವರಾಜ್ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿಪ್ರಿಯರ ಮೆಚ್ಚುಗೆಗಳಿಸುತ್ತಿದೆ.
ಯುವ ನಟ ವಂಶಿ ಕೃಷ್ಣ ನಟಿಸಿ, ನಿರ್ದೇಶಿಸಿರುವ 'ಫೈರ್ ಫ್ಲೈ' ಇಂದಿನ ಯುವ ಜನಾಂಗ ಅಪ್ಪ ಅಮ್ಮನ ಮಾತನ್ನು ಹೆಚ್ಚು ಕೇಳದೇ ಇದ್ದಾಗ, ಜೀವನದಲ್ಲಿ ಸುಖ ದುಃಖಗಳನ್ನು ಯಾವ ರೀತಿ ನಿಭಾಯಿಸಬೇಕು ಹಾಗೂ ಸಂಬಂಧಿಕರು, ಸ್ನೇಹಿತರು ಹೇಗೆ ನಮ್ಮನ್ನು ನಡೆಸಿಕೊಳ್ಳುತ್ತಾರೆ ಎಂಬ ಕಥೆ ಹೊಂದಿದೆ.
ಈ ಚಿತ್ರವನ್ನು ಸಿನಿಪ್ರೇಮಿಗಳು ಅಲ್ಲದೇ ಚಿತ್ರರಂಗದ ತಾರೆಯರಾದ ಉಪೇಂದ್ರ, ನಿರೂಪ್ ಭಂಡಾರಿ, ಶ್ರುತಿ, ಶಿವರಾಜ್ಕುಮಾರ್ ಹಾಗೂ ಗೀತಾ ಶಿವರಾಜ್ಕುಮಾರ್, ಸಂಗೀತ ನಿರ್ದೇಶಕ ವಾಸುಕಿ ವೈಭವ್, ನಟ ನಾಗಭೂಷಣ್, ಯುವ ನಟ ಅಮೃತಾ, ನಟ ಸಂತೋಷ್, ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಸೇರಿದಂತೆ ಸಾಕಷ್ಟು ಕಲಾವಿದರು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಶ್ರುತಿ ಮಾತನಾಡಿ, ''ಫೈರ್ ಫ್ಲೈ ಚಿತ್ರದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಲಾಗಿದೆ. ನಿವೇದಿತಾ ಶಿವರಾಜ್ ಕುಮಾರ್ ಟ್ಯಾಲೆಂಟ್ ಇರುವ ಯುವ ನಟ ವಂಶಿಗೆ ಅವಕಾಶ ನೀಡಿದ್ದಾರೆ. ಜೊತೆಗೆ ನಿರ್ದೇಶನದ ಜವಾಬ್ದಾರಿ ಕೊಟ್ಟಿರೋದು ದೊಡ್ಡ ವಿಷಯ. ರಾಜ್ಕುಮಾರ್ ಕುಟುಂಬದಿಂದ ಚಿತ್ರರಂಗಕ್ಕೆ ಪರಿಚಯಿಸಿದ ಸ್ಟಾರ್ ನಟಿಯರಲ್ಲಿ ನಾನೂ ಒಬ್ಬಳು. ಅಪ್ಪಾಜಿ ಬ್ಯಾನರ್ನಲ್ಲಿ ಮೂರನೇ ತಲೆಮಾರು ಅಂದ್ರೆ ನಿವೇದಿತಾ ಈ ಕೆಲಸ ಮಾಡಿರೋದು ದೊಡ್ಡ ವಿಚಾರ. ಈ ಚಿತ್ರ ವಿಭಿನ್ನವಾಗಿದೆ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಸಪೋರ್ಟ್ ಮಾಡಿದಾಗ ಮುಂದಿನ ದಿನಗಳಲ್ಲಿ ಹೊಸ ಚಿತ್ರಗಳು ಬರುತ್ತವೆ'' ಎಂದರು.
ನಟ, ನಿರ್ದೇಶಕ ಉಪೇಂದ್ರ ಮಾತನಾಡಿ, ''ಪಾರ್ವತಮ್ಮನವರು ಹೊಸ ನಿರ್ದೇಶಕರಿಗೆ, ನಟ, ನಟಿಯರಿಗೆ ಅವಕಾಶ ಕೊಡ್ತಿದ್ರು. ಅದೇ ರೀತಿ ನಿವೇದಿತಾ ಕೂಡಾ ಹೊಸಬರ ಜೊತೆ ಸಿನಿಮಾ ಮಾಡಿರೋದು ತುಂಬಾನೇ ಖುಷಿಯಾಗಿದೆ'' ಎಂದು ಹೇಳಿದರು.
ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮಾತನಾಡಿ, ''ಇದು ಟೆಕ್ನೀಶಿಯನ್ ಸಿನಿಮಾ. ಇದರಲ್ಲಿ ಚರಣ್ ರಾಜ್ ಅವರ ಸಂಗೀತ ಬಹಳ ವಿಭಿನ್ನವಾಗಿದೆ" ಎಂದರು.
ಬಳಿಕ ನಾಗಭೂಷಣ್ ಮಾತನಾಡಿ, "ಚಿತ್ರದಲ್ಲಿ ಹೊಸತನವಿದೆ. ಸಂಪೂರ್ಣ ಟೆಕ್ನೀಶಿಯನ್ ಚಿತ್ರ'' ಎಂದು ತಿಳಿಸಿದರು.
ನಿರೂಪ್ ಭಂಡಾರಿ ಮಾತನಾಡಿ, ''ಫೈರ್ ಫ್ಲೈ ಮೇಕಿಂಗ್ ಸ್ಟೈಲ್ ಹಾಗೂ ಕಥೆ ಇಂದಿನ ಟ್ರೆಂಡ್ಗೆ ತಕ್ಕಂತಿದೆ. ನಿವೇದಿತಾ ಆ್ಯಂಡ್ ಟೀಮ್ಗೆ ಒಳ್ಳೆಯದಾಗಲಿ'' ಎಂದು ಹರಸಿದರು.
ಮಗಳು ನಿವೇದಿತಾ ನಿರ್ಮಾಣದ ಸಿನಿಮಾ ನೋಡಿ ಮಾತನಾಡಿದ ನಟ ಶಿವರಾಜ್ಕುಮಾರ್, ''ವಿಕ್ಕಿ ಪಾತ್ರ ಬಹಳ ಕಾಡುತ್ತದೆ. ಕ್ಯಾಮರಾ ವರ್ಕ್, ಮ್ಯೂಸಿಕ್ ಹೊಸತನದಿಂದ ಕೂಡಿದೆ. ಚಿತ್ರದಲ್ಲಿ ನಾನೂ ಕೂಡ ಒಂದು ಸಣ್ಣ ಪಾತ್ರ ನಿರ್ವಹಿಸಿದ್ದೇನೆ. ಹೊಸ ಪ್ರಯೋಗದಿಂದ ಕೂಡಿರುವ ಚಿತ್ರವನ್ನು ಸಿನಿಮಾ ಪ್ರೇಮಿಗಳು ನೋಡಿ ಪ್ರೋತ್ಸಾಹಿಸಬೇಕು'' ಎಂದು ಕೇಳಿಕೊಂಡರು.
ಗೀತಾ ಶಿವರಾಜ್ಕುಮಾರ್ ಮಾತನಾಡಿ, ''ಫೈರ್ ಫ್ಲೈ ನೋಡಿ ಹೊರಗಡೆ ಬಂದಾಗಿ ವಿಕ್ಕಿ ಪಾತ್ರ ಮನಸ್ಸಿನಲ್ಲಿ ಉಳಿಯುತ್ತದೆ. ನಿಜವಾಗ್ಲೂ ಚಿತ್ರ ಎಲ್ಲರಿಗೂ ಇಷ್ಟವಾಗುತ್ತದೆ'' ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಟ ಸಂತೋಷ್ ಮಾತನಾಡಿ, ''ದೊಡ್ಮನೆಯಿಂದ ಒಂದೊಳ್ಳೆ ಕಥೆ ಇರುವ ಸಿನಿಮಾ ಬಂದಿದೆ. ನಿವೇದಿತಾ ಒಳ್ಳೆ ಸ್ಕ್ರಿಪ್ಟ್ ಸೆಲೆಕ್ಟ್ ಮಾಡಿದ್ದಾರೆ'' ಎಂದರು.
ಇದನ್ನೂ ಓದಿ: ಕನ್ನಡದ ವರನಟ ದಿ.ಡಾ.ರಾಜ್ ಕುಮಾರ್ ಜನ್ಮದಿನ: ಸಮಾಧಿಗೆ ಪೂಜೆ ಸಲ್ಲಿಸಿದ ಕುಟುಂಬಸ್ಥರು
ಚಿತ್ರದಲ್ಲಿ ಸುಧಾರಾಣಿ, ರಚನಾ ಇಂದರ್, ಅಚ್ಯುತ್ ಕುಮಾರ್, ಮೂಗು ಸುರೇಶ್, ಶೀತಲ್ ಶೆಟ್ಟಿ ಸೇರಿದಂತೆ ಮತ್ತಿತರರು ಅಭಿನಯಿಸಿದ್ದಾರೆ.
ವಿಶೇಷವೆಂದರೆ, ಮಗಳ ನಿರ್ಮಾಣದಲ್ಲಿ ಶಿವಣ್ಣ ಕೂಡ ನಟಿಸಿದ್ದಾರೆ. ಶಿವಣ್ಣ ಇಲ್ಲಿ ದಿ ಕಿಂಗ್ಸ್ ಪಿಜ್ಜಾ ಬಾಯ್ ಆಗಿದ್ದಾರೆ. ಜಯರಾಮ್ ಶ್ರೀನಿವಾಸ್ ಹಾಗೂ ಹ್ಯಾಪಿ ಹನುಮಂತ್ ಸಹ-ನಿರ್ದೇಶನ ಚಿತ್ರಕ್ಕಿದೆ. ಅಭಿಲಾಷ್ ಕಳತ್ತಿ ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಸುರೇಶ್ ಆರ್ಮುಗಮ್ ಸಂಕಲನ, ವರದರಾಜ್ ಕಾಮತ್ ಕಲೆ, ಅರ್ಜುನ್ ರಾಜ್ ಸಾಹಸ ಹಾಗೂ ರಾಹುಲ್ ಮಾಸ್ಟರ್ ನೃತ್ಯ ಸಂಯೋಜನೆ ಮಾಡಿದ್ದಾರೆ.
ಇದನ್ನೂ ಓದಿ: 'ಅಪ್ಪಾಜಿ ವಿಶ್ವ ಕನ್ನಡಿಗರ ಜೀವಂತ ಪ್ರತಿರೂಪ': ಅಶ್ವಿನಿ, ಶಿವಣ್ಣ ಸೇರಿ ಗಣ್ಯರಿಂದ ರಾಜ್ ಸ್ಮರಣೆ