ಇಂದು ಡಾ.ರಾಜ್ಕುಮಾರ್ ಅವರ 19ನೇ ಪುಣ್ಯಸ್ಮರಣೆ. 70ರಿಂದ 90ರ ದಶಕದವರೆಗೂ ಕನ್ನಡ ಚಿತ್ರರಂಗದಲ್ಲಿ ಪ್ರಾಬಲ್ಯ ಸಾಧಿಸಿದ್ದ ಕನ್ನಡ ಚಿತ್ರರಂಗದ ಅಗ್ರಗಣ್ಯ ನಟ, ಅಭಿಮಾನಿಗಳ ಪ್ರೀತಿಯ ಅಣ್ಣಾವ್ರು 2006ರ ಏಪ್ರಿಲ್ 12ರಂದು ಬೆಂಗಳೂರಿನಲ್ಲಿ ನಿಧನರಾದರು. ಅಂದು ಅವರನ್ನು ಕಳೆದುಕೊಂಡ ಕರುನಾಡಿಗೆ ಬರಸಿಡಿಲು ಬಡಿದಂತಾಗಿತ್ತು. ಚಂದನವನದ ಮಹಾನಟ ಇಂದು ನಮ್ಮೊಂದಿಗಿಲ್ಲವಾದರೂ ಅವರ ನೆನಪುಗಳು ಮಾತ್ರ ಕನ್ನಡಿಗರೆದೆಯಲ್ಲಿ ಸದಾ ಜೀವಂತವಾಗಿವೆ.
ಗಾನ ಗಂಧರ್ವನ ನೆನಪು: ನಾಡಿನಾದ್ಯಂತ ನಟಸಾರ್ವಭೌಮನ ಸ್ಮರಣೆ ನಡೆಯುತ್ತಿದೆ. ರಾಜ್ಕುಮಾರ್ ಅವರ ಹೆಸರಿನಲ್ಲಿ ಮಾನವೀಯ ಕಾರ್ಯಗಳು ಜರುಗುತ್ತಿವೆ. ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಗಾನ ಗಂಧರ್ವನ ನೆನಪು ಮಾಡುತ್ತಿದ್ದಾರೆ. ಪುತ್ರ, ಕರುನಾಡ ಚಕ್ರವರ್ತಿ ಖ್ಯಾತಿಯ ಶಿವರಾಜ್ಕುಮಾರ್ ಅವರೂ ಕೂಡಾ ತಂದೆಯ ನೆನೆದು ಸೋಷಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. 'ನೀವು ನಾಡಿನ ಜನರ ಮನದಲ್ಲಿ ಶಾಶ್ವತವಾಗಿದ್ದೀರಿ' ಎಂದು ಅಭಿಪ್ರಾಯಪಟ್ಟಿದ್ದಾರೆ.
ಶಿವರಾಜ್ಕುಮಾರ್ ಪೋಸ್ಟ್: ''ಕನ್ನಡಿಗರ ಆರಾಧ್ಯ ದೈವ , ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತ, ಕರ್ನಾಟಕ ರತ್ನ, ಪದ್ಮಭೂಷಣ, ರಸಿಕರ ರಾಜ, ಕೆಂಟಕಿ ಕರ್ನಲ್, ಗಾನ ಗಂಧರ್ವ, ವಿಶ್ವ ಕಂಡ ಶ್ರೇಷ್ಠ ವ್ಯಕ್ತಿ, ಅಭಿಮಾನಿಗಳನ್ನು ದೇವರೆಂದು ಕರೆದು, ನಿರ್ಮಾಪಕರನ್ನು ಅನ್ನದಾತರೆಂದು ಕರೆದು, ಕನ್ನಡ ನಾಡಿಗೆ ಸಮಸ್ಯೆ ಬಂದಾಗಲೆಲ್ಲಾ ಮೊದಲಿಗೆ ಬೀದಿಗಿಳಿದು ನಾಡಿಗಾಗಿ ಹೋರಾಟ ಮಾಡಿ, ಅದೆಷ್ಟೋ ಜನರ ಹಸಿವನ್ನು ಸಮಾಜಕ್ಕೆ ತಿಳಿಯದಂತೆ ತೀರಿಸಿ, ನಾನು ಎಂಬುದು ಏನಿಲ್ಲ ಎಂದು ಜಗತ್ತಿಗೆ ತಿಳಿಸಿ ನಾಡಿನ ಜನರ ಮನದಲ್ಲಿ ಶಾಶ್ವತ "ರಾಜಕುಮಾರ"ನಾಗಿ ಉಳಿದಿರುವ ಕನ್ನಡಿಗರ ಕಣ್ಮಣಿ ಡಾ.ರಾಜ್ಕುಮಾರ್ ಅವರ ಪುಣ್ಯ ಸ್ಮರಣೆ''.
ಗೌರವಪೂರ್ವಕ ನಮನಗಳು: ರಾಜ್ಕುಮಾರ್ ಅವರ ಫೋಟೋ ಹಂಚಿಕೊಂಡ ಶಿವರಾಜ್ಕುಮಾರ್ ಫ್ಯಾನ್ ಪೇಜ್ ಒಂದು, ''ಕಲಾ ಸೇವೆಯ ಮೂಲಕ ಕನ್ನಡಿಗರ ಜನಮಾನಸ ತಲುಪಿದ ವರನಟ, ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್ಕುಮಾರ್ ಅವರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು'' ಎಂದು ಬರೆದುಕೊಂಡಿದೆ.
ಇದನ್ನೂ ಓದಿ: ಡಾ.ರಾಜ್ಕುಮಾರ್ ಪುಣ್ಯಸ್ಮರಣೆ: ಅಭಿಮಾನಿಗಳ ಮನದಲ್ಲಿ ಅಣ್ಣಾವ್ರು ಎಂದಿಗೂ ಅಜರಾಮರ
ಅಮೋಘ ಅಭಿನಯದ ಜೊತೆಗೆ, ಸಾಮಾಜಿಕ ಕಾರ್ಯಗಳಿಂದ ಇಡೀ ಭಾರತದಾದ್ಯಂತ ಹೆಸರು ಮಾಡಿದ್ದರು. ಪಾತ್ರ ಯಾವುದೇ ಇರಲಿ ಅದಕ್ಕೆ ಜೀವ ತುಂಬೋದನ್ನು ವರನಟ ರಾಜ್ಕುಮಾರ್ ಅವರು ಕರಗತ ಮಾಡಿಕೊಂಡಿದ್ದರು. ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿ, ಪ್ರತೀ ಸಿನಿಮಾದಲ್ಲೂ ಸಮಾಜಕ್ಕೊಂದು ಸಂದೇಶ ಸಾರುತ್ತಿದ್ದರು. ನಾಡಿನ ನೆಲ ಜಲ ಭಾಷೆ ವಿಷಯ ಬಂದಾಗ ಹೋರಾಟದ ಹಾದಿಯನ್ನೂ ಹಿಡಿಯುತ್ತಿದ್ದರು. ಹೀಗೆ ಹಲವು ವಿಷಯಗಳಲ್ಲಿ ಕನ್ನಡಿಗರಿಗೆ ಮಾದರಿಯಾಗಿದ್ದರು. ಸಮಾಜ ಸೇವೆಯಲ್ಲಿ ಎತ್ತಿದ್ದ ಕೈ ಅವರದ್ದಾಗಿತ್ತು. ಇಂದಿಗೂ ನಟನ ಹೆಸರಿನಲ್ಲಿ ಪುಣ್ಯಕಾರ್ಯಗಳು ಜರುಗುತ್ತಿವೆ. ಅವರು ದೈಹಿಕವಾಗಿ ನಮ್ಮೊಂದಿಗಿಲ್ಲವಾದರೂ, ಅವರ ಕಲಾ ಸೇವೆ ಮತ್ತು ಸಮಾಜ ಸೇವೆ ಮೇರು ತಾರೆಯನ್ನು ಜೀವಂತವಾಗಿರಿಸಿದೆ.
ಇದನ್ನೂ ಓದಿ: 'ರೈತರು ಉಳಿದರೆ ಮಾತ್ರ ನಾವು ಉಳಿಯೋದು': ಕೃಷಿ ಉತ್ಪನ್ನಗಳ ನೇರ ಮಾರಾಟಕ್ಕೆ ಅದಿತಿ, ಡಾಲಿ ಬೆಂಬಲ