ದಕ್ಷಿಣ ಚಿತ್ರರಂಗದ ಖ್ಯಾತ ನಟ ರಜನಿಕಾಂತ್ ಮುಖ್ಯಭೂಮಿಕೆಯ 'ಜೈಲರ್' ಚಿತ್ರದ ಮೂಲಕ ಶಿವರಾಜ್ಕುಮಾರ್ ತಮಿಳಿನಲ್ಲಿಯೂ ಅತ್ಯಂತ ಜನಪ್ರಿಯರಾಗಿದ್ದಾರೆ. ಕನ್ನಡ ಚಿತ್ರರಂಗದ ಅಗ್ರ ನಟರಾಗಿರುವ ಅವರು, ಜೈಲರ್ ನಂತರ ತಮಿಳುನಾಡಿನಲ್ಲಿ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚೆಗೆ, ತಮ್ಮ ಮುಂದಿನ ಚಿತ್ರ '45'ರ ಪ್ರಚಾರ ಕಾರ್ಯಕ್ರಮವನ್ನು ಚೆನ್ನೈನ ಸತ್ಯಂ ಚಿತ್ರಮಂದಿರದಲ್ಲಿ ನಡೆಸಿದರು. ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ನಿರ್ದೇಶಕ ಅರ್ಜುನ್ ಜನ್ಯ, ಶಿವರಾಜ್ಕುಮಾರ್, ಉಪೇಂದ್ರ, ನಿರ್ಮಾಪಕ ರಮೇಶ್ ರೆಡ್ಡಿ ಮತ್ತು ಉಮಾ ರಮೇಶ್ ರೆಡ್ಡಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಉಪೇಂದ್ರ, "ನಾನು ಗೀತರಚನೆಕಾರ, ಸಂಭಾಷಣೆ ಬರಹಗಾರ ಮತ್ತು ಸಹಾಯಕ ನಿರ್ದೇಶಕನಾಗಿ ನನ್ನ ವೃತ್ತಿಜೀವನವನ್ನು ಪ್ರಾರಂಭಿಸಿದೆ. ನಾನು 2 ಚಿತ್ರಗಳನ್ನು ನಿರ್ದೇಶಿಸಿದ್ದೆ. ಕೆಲ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ" ಎಂದು ತಿಳಿಸಿದರು.
'ಶಿವಣ್ಣ ಸಖತ್ ಸಪೋರ್ಟಿವ್': ವೃತ್ತಿಜೀವದ ಆರಂಭದ ದಿನಗಳಲ್ಲಿ ನಾನು ಶಿವರಾಜ್ಕುಮಾರ್ ಜೊತೆ 'ಓಂ' ಸಿನಿಮಾ ಮಾಡಿದೆ. ಆ ಚಿತ್ರ ದೊಡ್ಡ ಹಿಟ್ ಕಂಡಿತು. ಶಿವಣ್ಣ ನನ್ನನ್ನು ಹೊಗಳಿ ಪ್ರೋತ್ಸಾಹಿಸಿದರು. ಇನ್ನಷ್ಟು ಚಿತ್ರಗಳನ್ನು ಮಾಡುವಂತೆ ತಿಳಿಸಿದರು. ಅವರು ನಿರ್ದೇಶಕರ ಮೆಚ್ಚಿನ ನಟ. ಈ ಪಯಣದಲ್ಲಿ ಪ್ರತಿದಿನವೂ ಒಳ್ಳೆಯ ಅನುಭವಗಳಾಗಿವೆ. ಇನ್ನು, ನಾನು ಚೆನ್ನೈಗೆ ಬಂದಾಗ ಚೆನ್ನಾಗಿ ಊಟ ಮಾಡುತ್ತೇನೆಂದು ಹೇಳಿದರು.
ಸಿನಿಮಾದಲ್ಲಿ ನಟಿಸುತ್ತೇನೆಂದು ಅಂದುಕೊಂಡಿರಲಿಲ್ಲ - ಶಿವಣ್ಣ: ನಟ ಶಿವರಾಜ್ ಕುಮಾರ್ ಮಾತನಾಡಿ, "ಚೆನ್ನೈಗೆ ಬಂದಾಗಲೆಲ್ಲಾ ತುಂಬಾನೇ ಸಂತೋಷವಾಗುತ್ತದೆ. ನನ್ನ ಊರಿಗೆ ಹಿಂತಿರುಗಿ ಬಂದಂತೆ ಭಾಸವಾಗುತ್ತದೆ. ನಾನು ಚೆನ್ನೈನಲ್ಲಿ ಹುಟ್ಟಿ ಬೆಳೆದೆ. ನನ್ನ ಶಾಲಾ ಮತ್ತು ಕಾಲೇಜು ಶಿಕ್ಷಣವನ್ನೆಲ್ಲ ಇಲ್ಲೇ ಪೂರ್ಣಗೊಳಿಸಿದೆ. ಕಾಲೇಜಿಗೆ ಬಸ್ಸಿನಲ್ಲೇ ಹೋಗುತ್ತಿದ್ದೆ. ಆಗ ಜೀವನ ತುಂಬಾನೇ ಸಂತೋಷದಿಂದ ಕೂಡಿತ್ತು. ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದು ನನಗೆ ತಿಳಿದಿರಲಿಲ್ಲ" ಎಂದರು.
ನಾನೋರ್ವ ಹೀರೋ ಎಂಬ ಭಾವನೆ ಮೂಡಿತು: ದೇವಿ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋದಾಗ, ನಿರ್ದೇಶಕರೊಬ್ಬರು ಮಲಯಾಳಂ ಚಿತ್ರದಲ್ಲಿ ನಟಿಸಲು ಕೇಳಿದರು. ನಂತರ ಅವರು ಮನೆಗೂ ಬಂದಿದ್ದರು. ಆ ಸಂದರ್ಭ ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡಾಗ, ಹೀರೋನಂತೆ ಕಾಣುತ್ತಿದ್ದೇನೆ ಎಂದು ಭಾವಿಸಿದೆ ಎಂದು ತಿಳಿಸಿದರು.
ನನ್ನ ಮೆಚ್ಚಿನ ನಟರಿವರು: ನಾಯಕ ನಟರ ವಿಷಯಕ್ಕೆ ಬಂದರೆ, ಅವರು ಕಮಲ್ ಹಾಸನ್ ಅಥವಾ ಅಮಿತಾಭ್ ಬಚ್ಚನ್ ಅವರಂತೆ ಇರಬೇಕು ಎಂದು ನಾನು ಭಾವಿಸುತ್ತೇನೆ. ಅವರಿಬ್ಬರೂ ನನ್ನ ಮೆಚ್ಚಿನ ನಟರು. ಅವರು ನನ್ನಲ್ಲಿ ನಟಿಸಲು ಕೇಳಿದರೆ, ನಾನು ಕೂಡಾ ನಟಿಸಬಹುದು ಎಂದು ಭಾವಿಸಿ ನಾನು ನಟಿಸಲು ಪ್ರಾರಂಭಿಸಿದೆ. ನಾನು ಯಾವಾಗಲೂ ಬಹಳ ಹರ್ಷಚಿತ್ತದಿಂದ ಇರುತ್ತೇನೆ. ಅದು ಸಂತೋಷವಾಗಲಿ ಅಥವಾ ದುಃಖವಾಗಲಿ, ಎರಡನ್ನೂ ಸಮಾನವಾಗಿ ಸ್ವೀಕರಿಸುತ್ತೇನೆ ಎಂದು ತಿಳಿಸಿದರು.
ಜೀವನದಲ್ಲಿ ಎಲ್ಲವನ್ನೂ ಕಂಡಿದ್ದೇನೆ: ಕಳೆದ 10, 20 ವರ್ಷಗಳಲ್ಲಿ ಬಹಳಷ್ಟು ಅನುಭವಗಳಾಗಿವೆ. ನನ್ನ ತಂದೆ, ತಾಯಿ ಮತ್ತು ತಮ್ಮ ನಿಧನರಾದರು. ನನಗೆ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಈ ನಡುವೆ, ನನಗೆ ಶಸ್ತ್ರಚಿಕಿತ್ಸೆ ಕೂಡಾ ನಡೆಯಿತು. ಇದೀಗ ಗುಣಮುಖನಾಗಿದ್ದೇನೆ. ಜೀವನದಲ್ಲಿ ಎಲ್ಲವನ್ನೂ ನೋಡಿದ್ದೇನೆಂದು ತಿಳಿಸಿದರು. ಜೊತೆಗೆ ಆ ಸಮಯದಲ್ಲಿ, ತಮಿಳುನಾಡು ಮತ್ತು ಕರ್ನಾಟಕ ಸೇರಿದಂತೆ ಭಾರತದ ಅನೇಕ ಜನರು ನನ್ನ ಚೇತರಿಕೆಗಾಗಿ ಪ್ರಾರ್ಥಿಸಿದರು ಎಂದು ಇದೇ ವೇಳೆ ಸ್ಮರಿಸಿದರು.
ಜೈಲರ್ 2ರಲ್ಲಿ ಹ್ಯಾಟ್ರಿಕ್ ಹೀರೋ: ಈ ಚಿತ್ರ ಹೊಸತನದೊಂದಿಗೆ ಬರಲಿದೆ. ಯುವಕರು ಮತ್ತು ಹಿರಿಯರು ಸೇರಿದಂತೆ ಎಲ್ಲರಿಗೂ ಬಹಳ ಮುಖ್ಯವಾದ ಸಂದೇಶ ತಲುಪಿಸಲಿದ್ದೇವೆ ಎಂದರು. ಇದೇ ವೇಳೆ "ನಾನು ಜೈಲರ್ 2ರಲ್ಲಿದ್ದೇನೆ" ಎಂಬ ಪ್ರಮುಖ ಮಾಹಿತಿಯನ್ನು ಒದಗಿಸಿದರು.
ರಜನಿ, ಕಮಲ್ ಬಗ್ಗೆ ಮಾತು... "ರಜನಿ ಸರ್ ನನ್ನ ಅನಾರೋಗ್ಯದ ಬಗ್ಗೆ ತುಂಬಾನೇ ಬೇಸರಗೊಂಡಿದ್ದರು. ಅವರಿಗೆ ನನ್ನನ್ನು ಆ ಸ್ಥಿತಿಯಲ್ಲಿ ನೋಡಲು ಸಾಧ್ಯವಾಗಲಿಲ್ಲ. ಚಿಕ್ಕವನಿದ್ದಾಗಿನಿಂದಲೂ ಅವರು ನನ್ನನ್ನು ನೋಡುತ್ತಾ ಬಂದಿದ್ದಾರೆ. ಅದಕ್ಕಾಗಿಯೇ ಅವರು ಆ ವೇಳೆ ನನ್ನ ಜೊತೆ ಮಾತನಾಡಲಿಲ್ಲ ಅಂತಾ ನನಗನಿಸುತ್ತದೆ. ಅವರು ಮಾತನಾಡಿದ್ದರೆ, ಬಹುಶಃ ನಾನು ಭಾವುಕನಾಗುತ್ತಿದ್ದೆ. ಆದರೆ, ಕಮಲ್ ಹಾಸನ್ ನನ್ನನ್ನು ಫೋನ್ ಮೂಲಕ ಸಂಪರ್ಕಿಸಿ ಮಾತನಾಡಿದರು. ಶಸ್ತ್ರಚಿಕಿತ್ಸೆಯ ನಂತರ ನಾನು ಅಮೆರಿಕದಲ್ಲಿದ್ದಾಗ, ಆಗಾಗ್ಗೆ ಕರೆ ಮಾಡಿ ಮಾತನಾಡುತ್ತಿದ್ದರು'' ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: 'ಟಾಕ್ಸಿಕ್' ಸೆಟ್ ಫೋಟೋ ವೈರಲ್: ರಾಕಿಂಗ್ ಸ್ಟಾರ್ ಯಶ್ ಜೊತೆ ಬಹುಭಾಷಾ ಪ್ರತಿಭೆ ಸುದೇವ್ ನಾಯರ್
ಕಮಲ್ ಹಾಸನ್ ಸಖತ್ ಹ್ಯಾಂಡ್ಸಂ: ಖ್ಯಾತ ನಟರಾದ ಕಮಲ್ ಹಾಸನ್ ಮತ್ತು ಅಮಿತಾಭ್ ಬಚ್ಚನ್ ನನಗೆ ಸ್ಪೂರ್ತಿ. ಕಮಲ್ ಹಾಸನ್ ಸಖತ್ ಹ್ಯಾಂಡ್ಸಂ. ನಾನು ಹೆಣ್ಣಾಗಿ ಹುಟ್ಟಿದ್ದರೆ ಅವರನ್ನೇ ಮದುವೆಯಾಗುತ್ತಿದ್ದೆ. ಅವರು ಮನೆಗೆ ಬಂದಾಗ, ಅಪ್ಪಿಕೊಳ್ಳಲು ಅನುಮತಿ ಕೇಳಿ ಹಗ್ ಮಾಡಿದ್ದೆ. ನನಗೆ ಅವರು ತುಂಬಾನೇ ಇಷ್ಟ. ಅವರ ಎಲ್ಲ ಚಿತ್ರಗಳನ್ನು ಮೊದಲ ದಿನದಿಂದೇ ನೋಡುತ್ತೇನೆ ಎಂದು ತಿಳಿಸಿದರು. ಹೀಗೆ ಸಾಕಷ್ಟು ಮಾಹಿತಿ ನೀಡಿದರು.
ಇದನ್ನೂ ಓದಿ: ನಟ, ರಾಜಕಾರಣಿ ವಿಜಯ್ ವಿರುದ್ಧ ಅಖಿಲ ಭಾರತ ಮುಸ್ಲಿಂ ಜಮಾತ್ ಫತ್ವಾ
'45' ಸಿನಿಮಾದಲ್ಲಿ ಅರ್ಜುನ್ ಜನ್ಯ ನಿರ್ದೇಶನದ ಜೊತೆಗೆ ಕಥೆ, ಚಿತ್ರಕಥೆ, ಸಂಗೀತವನ್ನೂ ನಿರ್ವಹಿಸಿದ್ದಾರೆ. ಸಿನಿಮಾ ವಿಶ್ವಾದ್ಯಂತ ಆಗಸ್ಟ್ 15ರಂದು ಕನ್ನಡ, ತಮಿಳು, ತೆಲುಗು, ಹಿಂದಿ, ಮಲಯಾಳಂನಲ್ಲಿ ಬಿಡುಗಡೆಯಾಗಲಿದೆ. ಶಿವಣ್ಣ, ಉಪ್ಪಿ, ರಾಜ್ ಬಿ ಶೆಟ್ಟಿ ನಟನೆಯ ಸಿನಿಮಾ ನೋಡಲು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.