ಉಜ್ಜಯಿನಿ (ಮಧ್ಯಪ್ರದೇಶ): ಕೆಜಿಎಫ್ ಮೂಲಕ ವಿಶ್ವವಿಖ್ಯಾತರಾಗಿರುವ ಜನಪ್ರಿಯ ನಟ ಯಶ್ ಅವರಿಂದು ಮಧ್ಯಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಳೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಶಿವನ ಆಶೀರ್ವಾದ ಪಡೆದುಕೊಂಡಿದ್ದಾರೆ. ಜೊತೆಗೆ, ಎಲ್ಲರಿಗೂ ಸಂತೋಷ ತರಲಿ ಎಂದು ಪ್ರಾರ್ಥಿಸಿದರು.
ಭಸ್ಮಾರತಿಯಲ್ಲಿ ಯಶ್ ಭಾಗಿ: ಭಾರತದಾದ್ಯಂತ ಅಭಿಮಾನಿಗಳ ಪ್ರೀತಿ ಸಂಪಾದಿಸಿರುವ ನಟ, ಇಂದು ಬೆಳಗಿನ ಜಾವ ಭಸ್ಮಾರತಿಯಲ್ಲಿ ಭಾಗವಹಿಸಿದ್ದರು. ಇದು ದೇವಾಲಯದ ಅತ್ಯಂತ ಪ್ರಮುಖ ಪೂಜ್ಯ ಆಚರಣೆಗಳಲ್ಲಿ ಒಂದಾಗಿದ್ದು, ಆಧ್ಯಾತ್ಮಿಕ ಮಹತ್ವಕ್ಕೆ ಹೆಸರುವಾಸಿಯಾಗಿದೆ.
ಭಕ್ತಿಯಲ್ಲಿ ಮಿಂದೆದ್ದ ರಾಕಿಂಗ್ ಸ್ಟಾರ್: ದೇವಾಲಯದ ಅರ್ಚಕರ ಸೂಚನೆಯಂತೆ ಪ್ರಮುಖ ವಿಧಿವಿಧಾನಗಳನ್ನು ಪೂರ್ಣಗೊಳಿಸುವ ವೇಳೆ ರಾಕಿಂಗ್ ಸ್ಟಾರ್ ಭಕ್ತಿಯಲ್ಲಿ ಮಿಂದೆದ್ದರು.
ಗಮನ ಸೆಳೆದ ಸಾಂಪ್ರದಾಯಿಕ ನೋಟ: 'ಕೆಜಿಎಫ್' ನಟ ತಮ್ಮ ಈ ಧಾರ್ಮಿಕ ಭೇಟಿ ಸಂದರ್ಭ ಆರತಿಯಲ್ಲಿ ಭಾಗಿ ಆದರು. ಪುರೋಹಿತರು ಸಹ ಈ ಪವಿತ್ರ ಆಚರಣೆಯಲ್ಲಿ ಸೇರಿಕೊಂಡರು. ನಟ ಎಂದಿನಂತೆ ಬಿಯರ್ಡ್ ಲುಕ್ನಲ್ಲಿ ಕಾಣಿಸಿಕೊಂಡರು. ಅವರ ಸಾಂಪ್ರದಾಯಿಕ ನೋಟ ಗಮನ ಸೆಳೆಯುವಂತಿತ್ತು.

ಎಲ್ಲರ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ: ಮಾಧ್ಯಮದ ಜೊತೆ ಮಾತನಾಡುತ್ತಾ, ಶಿವನ ದೇವಾಲಯಕ್ಕೆ ಭೇಟಿ ನೀಡಿದ ಬಗ್ಗೆ ತಮ್ಮ ಸಂತೋಷ ವ್ಯಕ್ತಪಡಿಸಿದರು. "ನನಗೆ ತುಂಬಾನೇ ಸಂತೋಷವಾಗಿದೆ. ನಾನು ಶಿವನ ದೊಡ್ಡ ಭಕ್ತನಾಗಿರುವುದರಿಂದ ಶಿವನ ಆಶೀರ್ವಾದ ಪಡೆಯಲು ಬಯಸುತ್ತೇನೆ. ಎಲ್ಲರ ಸಂತೋಷ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದೆ" ಎಂದು ಯಶ್ ತಿಳಿಸಿದರು.
'ರಾಮಾಯಣ' ಚಿತ್ರೀಕರಣ: ನಿತೇಶ್ ತಿವಾರಿ ಅವರ 'ರಾಮಾಯಣ' ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದ್ದು, ಅದಕ್ಕೂ ಮೊದಲು ಉಜ್ಜಯಿನಿಯ ಶ್ರೀ ಮಹಾಕಾಳೇಶ್ವರ ದೇವಸ್ಥಾನಕ್ಕೆ ನಟ ಭೇಟಿ ನೀಡಿದ್ದಾರೆಂದು ವರದಿಯಾಗಿದೆ.

ಅರಿಜಿತ್ ಸಿಂಗ್ ಭೇಟಿ: ಭಾನುವಾರ, ಗಾಯಕ ಅರಿಜಿತ್ ಸಿಂಗ್ ಅವರೂ ಕೂಡಾ ಮಹಾಕಾಳೇಶ್ವರನ ದರ್ಶನ ಪಡೆದರು. ಪತ್ನಿಯೊಂದಿಗೆ ಪವಿತ್ರ ಆಚರಣೆಗಳಲ್ಲಿ ಭಾಗಿಯಾಗಿದ್ದರು. ದಂಪತಿ ಬೆಳಗಿನ ಜಾವದ ಭಸ್ಮ ಆರತಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಕೊನೆಯ ಬಾರಿ ನೀವು ನಿಮಗಾಗಿ ಹೂ ಪಡೆದುಕೊಂಡದ್ದು ಯಾವಾಗ? 'ಸೆಲ್ಫ್ ಲವ್' ಮುಖ್ಯ ಅಂತಿದ್ದಾರೆ ರಶ್ಮಿಕಾ ಮಂದಣ್ಣ
ಶಿಪ್ರಾ ನದಿಯ ದಡದಲ್ಲಿರುವ ಮಹಾಕಾಳೇಶ್ವರ ದೇವಾಲಯವು ಭಾರತದ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಶಿವ ಭಕ್ತರು ಈ ಪುಣ್ಯ ಸ್ಥಳಗಳ ಬಗ್ಗೆ ಅಪಾರ ಭಕ್ತಿ ಹೊಂದಿದ್ದಾರೆ. ಇದು ವರ್ಷವಿಡೀ ಯಾತ್ರಾರ್ಥಿಗಳನ್ನು ಆಕರ್ಷಿಸುತ್ತದೆ. ವಿಶೇಷವಾಗಿ ಮಹಾಶಿವರಾತ್ರಿ ಮತ್ತು ಶ್ರಾವಣ ಮಾಸದಂತಹ ಶುಭ ಸಂದರ್ಭಗಳಲ್ಲಿ ಭಸ್ಮ ಆರತಿ ಒಂದು ಪ್ರಮುಖ ಆಚರಣೆಯಾಗಿದೆ.

ಇದನ್ನೂ ಓದಿ: ತಮ್ಮ ಹೆಸರಿನಲ್ಲಿ ದೇವಾಲಯವಿದ್ದು, ಜನರು ತಮ್ಮನ್ನು ಪೂಜಿಸುತ್ತಾರೆ: ನಟಿ ಊರ್ವಶಿ ರೌಟೇಲಾ ಹೇಳಿಕೆಗೆ ಆಕ್ರೋಶ
ಟಾಕ್ಸಿಕ್: ರಾಕಿಂಗ್ ಸ್ಟಾರ್ನ ಮುಂದಿನ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್. ಗೀತು ಮೋಹನ್ ದಾಸ್ ನಿರ್ದೇಶನದ ಈ ಸಿನಿಮಾವನ್ನು ವೆಂಕಟ್ ಕೆ ನಾರಾಯಣ್ ಹಾಗೂ ಯಶ್ ಜಂಟಿಯಾಗಿ ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ, 2026ರ ಮಾರ್ಚ್ 19ಕ್ಕೆ ಸಿನಿಮಾ ವಿಶ್ವದಾದ್ಯಂತ ಬಹಳ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ಮೊದಲು 2025ರ ಏಪ್ರಿಲ್ 10ರಂದು ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಆದ್ರೆ ಸಿನಿಮಾ ವಿಳಂಬ ಎದುರಿಸಿದೆ.