'ಬಜಾರ್', 'ಬೈ ಟು ಲವ್' ಮತ್ತು 'ಕೈವ' ಸಿನಿಮಾಗಳ ಮೂಲಕ ಜನಪ್ರಿಯರಾಗಿರುವ ನಟ ಧನ್ವೀರ್ ಗೌಡ ಅವರ ಮುಂದಿನ ಬಹುನಿರೀಕ್ಷಿತ ಚಿತ್ರ 'ವಾಮನ'. ಗುರುವಾರದಂದು ಸಿನಿಮಾದ ಟ್ರೇಲರ್ ಅನಾವರಣಗೊಂಡಿದೆ. ಟ್ರೇಲರ್ ರಿಲೀಸ್ ಮಾಡಿಕೊಡುವ ಮೂಲಕ ಆಪ್ತ ಗೆಳೆಯನಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ಕೊಟ್ಟಿದ್ದಾರೆ. ಪೋಸ್ಟರ್ಸ್, ಟೀಸರ್, ಹಾಡುಗಳಿಂದ ಪ್ರೇಕ್ಷಕರ ಗಮನ ಸೆಳೆದಿದ್ದ 'ವಾಮನ' ಚಿತ್ರದ ಟ್ರೇಲರ್ ನಿನ್ನೆ ಸಂಜೆ ಅನಾವರಣಗೊಂಡಿದ್ದು, ಏಪ್ರಿಲ್ 10ಕ್ಕೆ ಸಿನಿಮಾ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.
ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡ ನಟ ದರ್ಶನ್, ''ನಮ್ಮ ಪ್ರೀತಿಯ ಹೀರೋ ಧನ್ವೀರ್ ಗೌಡ 'ವಾಮನ'ನಾಗಿ ಏಪ್ರಿಲ್ 10 ರಿಂದ ನಿಮ್ಮ ಮುಂದೆ ಬರಲು ಸಜ್ಜಾಗಿದ್ದಾರೆ. ಚಿತ್ರದ ಟ್ರೇಲರ್ ಸೊಗಸಾಗಿ ಮೂಡಿಬಂದಿದ್ದು ಜನಮೆಚ್ಚುಗೆ ಗಳಿಸುವಲ್ಲಿ ನಂಬಿಕೆ ಹೆಚ್ಚಾಗಿದೆ. ಕನ್ನಡ ಸಿನಿಪ್ರೇಮಿಗಳ ಪ್ರೋತ್ಸಾಹ ಮತ್ತು ಬೆಂಬಲದಿಂದ ಈ ಚಿತ್ರವು ಎಲ್ಲೆಡೆ ಯಶಸ್ವಿಯಾಗಿ ಅಬ್ಬರಿಸಲಿ ಎಂದು ಆಶಿಸುತ್ತೇನೆ. ಒಳ್ಳೆ ಕನ್ನಡ ಚಿತ್ರಗಳಿಗೆ ನಮ್ಮ ಸೆಲೆಬ್ರಿಟಿಗಳ ಪ್ರೋತ್ಸಾಹ ಎಂದಿನಂತೆ ಸದಾ ಬೆನ್ನೆಲುಬಾಗಿ ನಿಂತರಲಿ'' ಎಂದು ತಿಳಿಸಿದ್ದಾರೆ. ದರ್ಶನ್, ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟಿಗಳೆಂದು ಕರೆದೋದು ನಿಮಗೆ ತಿಳಿದಿರುವ ವಿಚಾರವೇ.
ವಿಡಿಯೋದಲ್ಲಿ ದರ್ಶನ್ ಹೇಳಿರೋದೇನು? ''ಎಲ್ಲರಿಗೂ ನಮಸ್ಕಾರ. ತಂದೆ ತಾಯಿ ಸಮಾನರಾದ ಎಲ್ಲಾ ಗುರು ಹಿರಿಯರಿಗೆ, ಅಣ್ಣ ತಮ್ಮ, ಅಕ್ಕ ತಂಗಿಯಂದಿರಿಗೆ, ಪ್ರಿತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ. ಏಪ್ರಿಲ್ 10ರಂದು ವಾಮನ ಸಿನಿಮಾ ಬರುತ್ತಿದೆ. ಅದಕ್ಕೂ ಮುನ್ನ, ವಾಮನ ಟ್ರೇಲರ್ ಲಾಂಚ್ ಆಗುತ್ತಿದೆ. ಧನ್ವೀರ್ ಅವರನ್ನು ನಾನು ನೋಡಿದಂಗೆ, ಬಜಾರ್ ಅಲ್ಲೇ ಒಂದು ರೀತಿಯ ಧನ್ವೀರ್, ಬೈಟುಲವ್ ಅಲ್ಲೇ ಬೇರೆ ಒಂದು ಪ್ಯಾಟ್ರನ್ನ ಧನ್ವೀರ್. ಕೈವ ಒಂದು ರಿಯಲ್ ಸ್ಟೋರಿ. ನನಗೆ ಬಹಳ ಇಷ್ಟವಾದ ಸಿನಿಮಾ. ಈಗ ವಾಮನ ನೋಡುವ ಸಮಯ. ಅವರ ಸಿನಿಮಾಗಳಲ್ಲಿ ಎಲ್ಲೂ ಯಾವುದೂ ರಿಪೀಟ್ ಇಲ್ಲ ಅನ್ನೋದೇ ಖುಷಿಯ ಸಂಗತಿ''.
''ವಾಮನ ಚಿತ್ರಕ್ಕೆ ಬಂದರೆ, ತಾಯಿ ಸೆಂಟಿಮೆಂಟ್ ಇರುವ ಸಿನಿಮಾ. ತಾಯಿಗೋಸ್ಕರ, ಪ್ರೀತಿಗೋಸ್ಕರ ಒಬ್ಬ ಹೆಂಗೆಂಗೆಲ್ಲಾ ಟರ್ನ್ ಆಗುತ್ತಾನೆ ಅನ್ನೋದನ್ನು ನೋಡಬಹುದು. ಮುದ್ದು ರಾಕ್ಷಸಿ ನನಗೆ ಬಹಳ ಇಷ್ಟವಾದ ಸಾಂಗ್. ಎಲ್ಲಿಂದ ಹುಡುಕ್ದೆ ಈ ತರ ಹಾಡನ್ನು ಬಹಳ ಚೆನ್ನಾಗಿದೆ ಎಂದು ನಾನು ಯಾವಾಗಲು ಹೇಳುತ್ತಿರುತ್ತೇನೆ. ನಾನು ನನ್ನ ಮನೇಲಿ ಪತ್ನಿಗೆ ಮುದ್ದು ರಾಕ್ಷಸಿ ಅಂತಾ ಹೇಳುತ್ತಿರುತ್ತೇನೆ. ಒಂದೊಳ್ಳೆ ಎಂಟರ್ಟೈನ್ ಮೂವಿ''.
''ಎಲ್ಲ ಕರ್ನಾಟಕದ ಜನರಲ್ಲಿ ಕೇಳಿಕೊಳ್ಳೋದು ಒಂದೇ. ದಯಮಾಡಿ ಕನ್ನಡ ಸಿನಿಮಾನ ಹರಸಿ ಬೆಳೆಸಿ. ಭಾರತದಲ್ಲಿ ಹೆಚ್ಚಿನವರು ಬಹುಭಾಷೆಗಳಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಆದ್ರೆ ಕೆಲವೇ ಕೆಲ ಮಂದಿ ನಾನು ಇಲ್ಲಿಗೇನೆ ಸೀಮಿತ ಅಂತಾ ಇರುತ್ತಾರೆ. ಕನ್ನಡ ಸಿನಿಮಾ ನೋಡಿಲ್ಲ ಎಂದರೆ ನಾವು ಇಲ್ಲಿಂದ ಬಿಟ್ಟು ಹೋಗುತ್ತೇವೆ ಅಂತಾ ಏನಿಲ್ಲ. ನೀವುಗಳು ಕೊಟ್ಟ ಆಶೀರ್ವಾದದಿಂದ ತೋಟ ಮಾಡ್ಕೊಂಡಿದ್ದೀವಿ. ಹಸು - ಗಿಸು ಸಾಕ್ಕೊಂಡು ಅಲ್ಲೇ ಇರ್ತೀವಿ. ಯಾವತ್ತಿದ್ದರೂ ನಾನು ಕನ್ನಡಕ್ಕೇನೆ ಸಿನಿಮಾ ಮಾಡೋದು. ಕನ್ನಡ ಸಿನಿಮಾನೇ ಮಾಡೋದು. ಕನ್ನಡ ಬಿಟ್ಟು ಬೇರೆ ನಮ್ಗೆ ಗೊತ್ತಿಲ್ಲ. ನಾವೆಲ್ಲಾ ನಂಬ್ಕೊಂಡು ಬಂದಿರೋದು ಕನ್ನಡ ಚಿತ್ರರಂಗ ಮತ್ತು ಕನ್ನಡ ಪ್ರೇಕ್ಷಕರನ್ನು. ಚಿತ್ರಮಂದಿರ ಮತ್ತು ಸಿನಿಮಾವೊಂದರಲ್ಲಿ ಕೆಲಸ ಮಾಡೋ ಪ್ರತಿಯೊಬ್ಬರೂ ಕನ್ನಡ ಸಿನಿಮಾಗಳನ್ನು ನಂಬಿಕೊಂಡಿರುತ್ತಾರೆ. ಹಾಗಾಗಿ, ಕನ್ನಡ ಸಿನಿಮಾಗಳನ್ನು ಹರಸಿ, ಬೆಳೆಸಿ, ಪ್ರೋತ್ಸಾಹಿಸಿ ಅಂತಾ ಕೇಳ್ಕೊಳ್ತೀನಿ. ವಾಮನ ತಂಡಕ್ಕೆ ಶುಭ ಹಾರೈಕೆಗಳು. ಪ್ರತಿಯೊಬ್ಬರೂ ತುಂಬಾ ಚೆನ್ನಾಗಿ ಮಾಡಿದ್ದೀರ. ಥ್ಯಾಂಕ್ ಯೂ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಸಿನಿಪ್ರಿಯರಿಗೆ ಗುಡ್ ನ್ಯೂಸ್: 'ಕ್ರಿಶ್ 4' ಕನ್ಫರ್ಮ್; ಹೃತಿಕ್ ರೋಷನ್ ಸೂಪರ್ ಹೀರೋ ಮಾತ್ರವಲ್ಲ...
ಶಂಕರ್ ರಾಮನ್ ನಿರ್ದೇಶನದ ಈ ಚಿತ್ರದಲ್ಲಿ ರೀಷ್ಮಾ ನಾಣಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಶಂಕರ್ ಡೈರೆಕ್ಷನ್ ಜೊತೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಬರೆದಿದ್ದಾರೆ. ಚೇತನ್ ಗೌಡ ನಿರ್ಮಾಣದ ಚಿತ್ರಕ್ಕೆ ಅಜನೀಶ್ ಬಿ.ಲೋಕನಾಥ್ ಸಂಗೀತ, ಮಹೇನ್ ಸಿಂಹ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್ ನೃತ್ಯ ನಿರ್ದೇಶನ, ಅರ್ಜುನ್ ರಾಜ್, ವಿಕ್ರಂ ಮೋರ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ನವೀನ್ ಹಾಡೋನಳ್ಳಿ ಅವರ ಕಲಾ ನಿರ್ದೇಶನವಿದೆ.
ಇದನ್ನೂ ಓದಿ: 'ಎಂಪುರಾನ್' ಭರ್ಜರಿ ಕಲೆಕ್ಷನ್: ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಮಲಯಾಳಂ ಸಿನಿಮಾ