ನೃತ್ಯ ನಿರ್ದೇಶಕರು ಸಿನಿಮಾ ಡೈರೆಕ್ಟರ್ಗಳಾಗೋದು ಹೊಸ ವಿಷಯವೇನಲ್ಲ. ಈಗಾಗಲೇ ಎ ಹರ್ಷ, ಇಮ್ರಾನ್ ಸರ್ದಾರಿಯ, ಮುರಳಿ ಮಾಸ್ಟರ್ಸ್ ಚಲನಚಿತ್ರ ನಿರ್ದೇಶಕರಾಗಿ ಯಶಸ್ಸು ಕಂಡಿದ್ದಾರೆ. ಇದೀಗ ಧನಂಜಯ್ ಗೋಲ್ಟನ್ ಸ್ಟಾರ್ ಗಣೇಶ್ ಅಭಿನಯದ ಪಿನಾಕ ಸಿನಿಮಾ ಡೈರೆಕ್ಷನ್ ಮಾಡುತ್ತಿದ್ದು, ಚಿತ್ರೀಕರಣ ಭರದಿಂದ ಸಾಗಿದೆ.
500 ವರ್ಷಗಳ ಹಿಂದಿನ 'ದೇವಗಿರಿ ಸಾಮ್ರಾಜ್ಯ': ನೆಲಮಂಗಲ ಬಳಿ ಆರು ಎಕರೆ ಪ್ರದೇಶದಲ್ಲಿ ಚಿತ್ರಕ್ಕಾಗಿ ದೊಡ್ಡ ಸೆಟ್ ಹಾಕಲಾಗಿದೆ. 500 ವರ್ಷಗಳ ಹಿಂದಿನ ದೇವಗಿರಿ ಎಂಬ ಸಾಮ್ರಾಜ್ಯವನ್ನೇ ಸೃಷ್ಟಿಸಲಾಗಿದೆ. ಒಂದು ನಗರವನ್ನೇ ನಿರ್ಮಿಸಲಾಗಿದ್ದು, ಮಧ್ಯದಲ್ಲೊಂದು ಅರ್ಧನಾರೀಶ್ವರನ ಪ್ರತಿಮೆ ನಿಲ್ಲಿಸಲಾಗಿದೆ.

ಹೊರಗಿನವರಿಗೆ ಪ್ರವೇಶವಿಲ್ಲ: ಕಳೆದ 32 ದಿನಗಳಿಂದ ಇಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ಇನ್ನೂ 15 ದಿನಗಳ ಕಾಲ ಶೂಟಿಂಗ್ ಇದೆ. ಈ ಸೆಟ್ ಚಿತ್ರದಲ್ಲಿ ಮಹತ್ವದ ಪಾತ್ರ ವಹಿಸಿರುವುದರಿಂದ, ಚಿತ್ರತಂಡ ಈ ಸೆಟ್ ಹೇಗಿದೆ ಎಂಬುದನ್ನು ಗೌಪ್ಯವಾಗಿಟ್ಟಿದೆ. ಚಿತ್ರಂಡದವರು ಮತ್ತು ಚಿತ್ರಕ್ಕೆ ಸಂಬಂಧಪಟ್ಟವರನ್ನು ಹೊರತುಪಡಿಸಿದರೆ, ಇಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ. ಮಾಧ್ಯಮದವರಿಗೆ ಇಡೀ ನಗರವನ್ನು ಪರಿಚಯ ಮಾಡಿಕೊಟ್ಟ ನಂತರ ನಿರ್ದೇಶಕ ಧನಂಜಯ್ ಚಿತ್ರತಂಡದವರ ಜೊತೆಗೆ ಮಾತಿಗೆ ಕುಳಿತರು.

2 ತಿಂಗಳಲ್ಲಿ ಸೆಟ್ ನಿರ್ಮಾಣ, ಪ್ರತಿದಿನ 800 ಜನರಿಂದ ಕೆಲಸ: ''ಮಳೆ, ಬಿಸಿಲು, ಗಾಳಿಯ ನಡುವೆ ಕಳೆದ ಒಂದು ತಿಂಗಳಿನಿಂದ ಚಿತ್ರೀಕರಣ ಮಾಡುತ್ತಿದ್ದೇವೆ. ಅದಕ್ಕೂ ಮುನ್ನ 2 ತಿಂಗಳ ಕಾಲ ಸೆಟ್ ನಿರ್ಮಾಣದ ಕೆಲಸ ನಡೆದಿದೆ. ಸಂತೋಷ್ ಪಾಂಚಲ ಮತ್ತು ತಂಡದವರು ಈ ಸೆಟ್ ನಿರ್ಮಿಸಿದ್ದಾರೆ. ಯುದ್ಧ ನಡೆದ ನಂತರದ ದೃಶ್ಯಗಳನ್ನು ಇದೀಗ ಚಿತ್ರೀಕರಣ ಮಾಡಿದ್ದೇವೆ. ಕಳೆದ ಒಂದು ತಿಂಗಳಿನಿಂದ ಪ್ರತಿದಿನ 800 ಜನರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಚಿತ್ರೀಕರಣ ನಡೆಸಿ, ಹೈದರಾಬಾದ್ಗೆ ಫುಟೇಜ್ ಕಳುಹಿಸುತ್ತಿದ್ದೇವೆ. ಅಲ್ಲಿ ಗ್ರಾಫಿಕ್ಸ್ ಕೆಲಸ ಸತತವಾಗಿ ನಡೆಯುತ್ತಿದೆ'' ಎಂದು ಮಾಹಿತಿ ಕೊಟ್ಟರು.
ಮುಂದಿನ ವರ್ಷ ಚಿತ್ರ ತೆರೆಗೆ: ''ಪಿನಾಕ ಎಂದರೆ ಒಬ್ಬ ರಕ್ಷಕ. ಇದೊಂದು ಕಾವಲುಗಾರ ಪರಂಪರೆಯ ಕುರಿತಾದ ಚಿತ್ರ. ಮುಂದಿನ ವರ್ಷ ಚಿತ್ರ ತೆರೆಗೆ ಬರಲಿದೆ. ಇದು ಒತ್ತಡದಲ್ಲಿ ಮಾಡುವ ಕೆಲಸವಲ್ಲ. ಒಂದೊಂದು ಸಣ್ಣ ದೃಶ್ಯಕ್ಕೂ ಸಾಕಷ್ಟು ಸಮಯ ಹಿಡಿಯುತ್ತಿದೆ. ಗಣೇಶ್ ಜೊತೆಗೆ ನೃತ್ಯ ನಿರ್ದೇಶಕನಾಗಿ ಕೆಲಸ ಮಾಡಿದ್ದೆ. ಅವರ ಜೊತೆಗೊಂದು ಒಳ್ಳೆಯ ಸಂಬಂಧ ಇದೆ. ಅವರೊಂದಿಗೆ ಕೆಲಸ ಮಾಡುವುದು ಖುಷಿಯ ವಿಚಾರ. ಈ ಚಿತ್ರಕ್ಕೆ ಅವರ ಸಹಕಾರ ದೊಡ್ಡದು. ನಿರ್ಮಾಪಕರು ಪ್ರತೀ ಹೆಜ್ಜೆಯಲ್ಲೂ ಜೊತೆಯಾಗಿದ್ದಾರೆ. ಇದು ನನ್ನೊಬ್ಬನ ಚಿತ್ರವಲ್ಲ. ಇದೊಂದು ತಂಡದ ಚಿತ್ರ'' ಎಂದರು ನಿರ್ದೇಶಕ ಧನಂಜಯ್.

ನಿರ್ಮಾಣದ ಮೇಲ್ವಿಚಾರಣೆ ಹೊತ್ತಿರುವ ವಿಜಯಾ ಮಾತನಾಡಿ, ''ಗಣೇಶ್ ಅವರ ಜೊತೆ ಸಿನಿಮಾ ಮಾಡಬೇಕೆಂಬುದು ನನ್ನ ಸಹೋದರನ (ವಿಶ್ವಪ್ರಸಾದ್) ಆಸೆಯಾಗಿತ್ತು. ಅವರ ಜೊತೆಗೆ ಚಿತ್ರ ಮಾಡಬೇಕೆಂದು ನಿರ್ಧಾರವಾದಾಗ, ಕಥೆ ಸಹ ಇರಲಿಲ್ಲ. ಗಣೇಶ್ ಅವರಿಗೆ ಎಂತಹ ಚಿತ್ರ ಮಾಡಬೇಕು ಎಂದು ಯೋಚಿಸಿ, ಒಂದು ವಿಭಿನ್ನ ಪ್ರಯತ್ನ ಮಾಡುತ್ತಿದ್ದೇವೆ. ಕಳೆದ 7 ವರ್ಷಗಳಲ್ಲಿ ನಮ್ಮ ಸಂಸ್ಥೆಯಿಂದ 50 ಚಿತ್ರಗಳು ತಯಾರಾಗಿವೆ. ಈ ಪೈಕಿ 43 ಬಿಡುಗಡೆಯಾದರೆ, 7 ಚಿತ್ರಗಳು ತೆರೆಕಾಣಲು ತಯಾರಿ ನಡೆಸಿವೆ. 20 ಚಿತ್ರಗಳು ಬೇರೆ ಬೇರೆ ಹಂತಗಳಲ್ಲಿವೆ'' ಎಂದು ವಿವರಿಸಿದರು.
ಈ ಚಿತ್ರದಲ್ಲಿನ ರಾಜಗುರುವಿನ ಪಾತ್ರಕ್ಕೆ ಶ್ರೀನಿವಾಸಮೂರ್ತಿ ಅವರೇ ಬೇಕು ಎಂದು ಗಣೇಶ್ ಪಟ್ಟು ಹಿಡಿದಿದ್ದರಂತೆ. ಈ ಕುರಿತು ಮಾತನಾಡಿದ ಹಿರಿಯ ನಟ ಶ್ರೀನಿವಾಸಮೂರ್ತಿ, ''ಕೃಷ್ಣಂ ಪ್ರಣಯ ಸಖಿ ಚಿತ್ರದ ನಂತರ ಗಣೇಶ್ ಜೊತೆಗೆ ಬಾಂಧವ್ಯ ಗಟ್ಟಿಯಾಗಿದೆ. ಈ ಚಿತ್ರವನ್ನು ನೀವೇ ಮಾಡಬೇಕು ಎಂದು ಅವರು ಹೇಳಿದರು. ಈ ಸಿನಿಮಾ ಬೇರೆಯದ್ದೇ ಲೆವೆಲ್ನಲ್ಲಿದೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಾಯಕ ನಟ ಹೇಳಿದ್ದಿಷ್ಟು: ಬರುವಾಗಲೇ ಏನಾದರೂ ವಿಭಿನ್ನವಾಗಿ ಮಾಡಬೇಕೆಂಬ ತೀರ್ಮಾನದೊಂದಿಗೆ ನಿರ್ಮಾಪಕರು ಬಂದರು ಎಂದ ನಾಯಕ ನಟ ಗಣೇಶ್, ''ಈ ತರಹದ ಪಾತ್ರವನ್ನು ನನ್ನಿಂದ ಮಾಡಿಸಬಹುದು ಎಂದು ಮಾಡಿಸುತ್ತಿದ್ದಾರೆ. ಪ್ರತೀ ದೃಶ್ಯದಲ್ಲೂ ನಿರ್ಮಾಪಕರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಚಿತ್ರೀಕರಣ ಪ್ರಾರಂಭವಾಗಿ 2 ದಿನಗಳಲ್ಲೇ ನಿರ್ಮಾಪಕಿ ವಿಜಯಮ್ಮ ಕಿರುಚಾಡುತ್ತಿದ್ದರು. ಏನು ಎಂದು ಕೇಳಿದಾಗ, ಕೇವಲ 600 ಜೂನಿಯರ್ ಆರ್ಟಿಸ್ಟ್ಗಳು ಬಂದಿದ್ದಾರೆ, 800 ಮಂದಿ ಬರಬೇಕಿತ್ತು ಎಂದರು. ಕಡಿಮೆಯಾದರೆ ಹಣ ಉಳಿಯುತ್ತದೆ ಎಂದು ಖುಷಿಪಡಬೇಕು. ಆದರೆ, ಅವರು ಹಾಗಲ್ಲ. ಈ ಸೆಟ್ ಈ ಮಟ್ಟಕ್ಕೆ ಬರಬೇಕೆಂದರೆ ಅವರು ಮತ್ತು ನಿರ್ದೇಶಕ ಧನಂಜಯ್ ಕಾರಣ. ಧನು ಮೊದಲ ಚಿತ್ರದಲ್ಲೇ ಇಂಥದ್ದೊಂದು ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆ. ಅವರು ಹೇಗೆ ಮಾಡಬಹುದು ಎಂಬ ಪ್ರಶ್ನೆ ನನಗೂ ಇತ್ತು. ಆದರೆ, ಇಲ್ಲಿ ನೂರಕ್ಕೆ ನೂರು ಎಫರ್ಟ್ ಹಾಕಿದ್ದಾರೆ. ಪ್ರತಿ ದಿನ ಸೆಟ್ನಲ್ಲಿ ನಾಲ್ಕು ಕ್ಯಾಮರಾಳಿರುತ್ತವೆ. 32 ದಿನಗಳಲ್ಲಿ 64 ದಿನಗಳ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ: 'ಕಾಲ್ತುಳಿತ ಪ್ರಕರಣದಲ್ಲಿ ಕೊಹ್ಲಿ ಹೆಸರು ಹಾಳು ಮಾಡೋದು ಸರಿಯಲ್ಲ': ಸುಮಲತಾ ಅಂಬರೀಶ್
ಇನ್ನು, ತಮ್ಮ ಪಾತ್ರದ ಬಗ್ಗೆ ಮಾತನಾಡಿದ ಅವರು, ಬಹಳ ಖುಷಿಕೊಟ್ಟ ಪಾತ್ರವಿದು. ನನಗೆ ಖುಷಿಕೊಟ್ಟರೆ ಪ್ರೇಕ್ಷಕರಿಗೂ ಖುಷಿಯಾಗುತ್ತದೆ ಎಂದು ನಂಬಿದವನು ನಾನು. ಇದು ಬೇರೆ ತರಹದ ಸಿನಿಮಾ. ನನ್ನ ವೃತ್ತಿಜೀವನದಲ್ಲೇ ವಿಭಿನ್ನ ಸಿನಿಮಾ. ಅದನ್ನು ನಿಜವಾಗಿಸಲು ಸಂಪೂರ್ಣ ಪ್ರಯತ್ನ ಮಾಡುತ್ತೇನೆ. ನನ್ನ ಕನ್ನಡದ ಸಂಭಾಷಣೆ ಬಗ್ಗೆ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅದರಲ್ಲೂ ವಿಶೇಷವಾಗಿ "ಭೋಜರಾಜ"ರಿಂದ ನನ್ನ ಕನ್ನಡದ ಮಾತಿಗೆ ಮೆಚ್ಚುಗೆ ದೊರಕಿದ್ದು ಖುಷಿಯಾಗಿದೆ ಎಂದರು.
ಇದನ್ನೂ ಓದಿ: ವಿಡಿಯೋ: ನಾಗಾರ್ಜುನ ಕಿರಿಮಗನ ಆರತಕ್ಷತೆ ಕಾರ್ಯಕ್ರಮದಲ್ಲಿ ಯಶ್, ಸುದೀಪ್ ಸೇರಿ ಗಣ್ಯರು
ಪೀಪಲ್ ಮೀಡಿಯಾ ಫ್ಯಾಕ್ಟರಿ ಲಾಂಛನದಲ್ಲಿ ವಿಶ್ವಪ್ರಸಾದ್ ಅವರು ಅದ್ದೂರಿಯಾಗಿ ನಿರ್ಮಿಸುತ್ತಿರುವ ಚಿತ್ರವಿದು. ಈ ಚಿತ್ರದಲ್ಲಿ ಗಣೇಶ್ ಜೊತೆಗೆ ಹಿರಿಯ ನಟ ಹೊನ್ನವಳ್ಳಿ ಕೃಷ್ಣ, ರವೀಂದ್ರನಾಥ್ ಸೇರಿ ಮೊದಲಾದವರು ಅಭಿನಯಿಸುತ್ತಿದ್ದಾರೆ. ಕರಮ್ ಚಾವ್ಲಾ ಅವರ ಕ್ಯಾಮರಾ ವರ್ಕ್ ಇದೆ.