ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯ ನಂತರ ಗಾಯಕಿ ಶ್ರೇಯಾ ಘೋಷಾಲ್ ತಮ್ಮ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದರು. "ಡೋಲಾ ರೆ ಡೋಲಾ", "ಸುನ್ ರಹಾ ಹೈ" ಮತ್ತು "ಝೂಬಿ ದೂಬಿ"ನಂತಹ ಸೂಪರ್ ಹಿಟ್ ಹಾಡುಗಳಿಗೆ ಕಂಠದಾನ ಮಾಡಿರುವ ಘೋಷಾಲ್, ತಮ್ಮ "ಆಲ್ ಹಾರ್ಟ್ಸ್ ಟೂರ್"ನ ಭಾಗವಾಗಿ ಶನಿವಾರ ಸೂರತ್ನಲ್ಲಿ ಪ್ರದರ್ಶನ ನೀಡಬೇಕಿತ್ತು. ಆದ್ರೆ ಪಹಲ್ಗಾಮ್ ದಾಳಿ ಹಿನ್ನೆಲೆ ಕಾರ್ಯಕ್ರಮ ನಡೆಯಲಿಲ್ಲ.
ಕಳೆದ ಮಂಗಳವಾರ, ದಕ್ಷಿಣ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ಜನರು ಸಾವನ್ನಪ್ಪಿದ್ದರು. 2019ರ ಪುಲ್ವಾಮಾ ದಾಳಿಯ ನಂತರ ಕಣಿವೆಯಲ್ಲಿ ನಡೆದ ಅತ್ಯಂತ ಮಾರಕ ದಾಳಿ ಇದಾಗಿದೆ. ಕಾರ್ಯಕ್ರಮದ ಆಯೋಜಕರು ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ ಹ್ಯಾಂಡಲ್ನಲ್ಲಿ ಒಂದು ಪೋಸ್ಟ್ ಹಂಚಿಕೊಂಡಿದ್ದರು, ಅದನ್ನು ಘೋಶಾಲ್ ತಮ್ಮ ಖಾತೆಯಲ್ಲಿ ರೀ ಪೋಸ್ಟ್ ಮಾಡಿ ಅಭಿಮಾನಿಗಳಿಗೆ ಸುದ್ದಿ ಮುಟ್ಟಿಸಿದರು.
ಸಂಗೀತ ಕಾರ್ಯಕ್ರಮ ರದ್ದುಗೊಳಿಸುವುದು ಗಾಯಕಿ ಮತ್ತು ಆಯೋಜಕರ ನಿರ್ಧಾರ ಎಂದು ಪೋಸ್ಟ್ನಲ್ಲಿ ಹೇಳಲಾಗಿದೆ. "ಪ್ರಮುಖ ಅಪ್ಡೇಟ್. ಇತ್ತೀಚಿನ ಮತ್ತು ದುರಂತ ಘಟನೆಗಳ ಹಿನ್ನೆಲೆಯಲ್ಲಿ, ಸಂಘಟಕರು ಮತ್ತು ಕಲಾವಿದರು ಒಟ್ಟಾಗಿ ಶನಿವಾರ, ಏಪ್ರಿಲ್ 26ರಂದು ಸೂರತ್ನಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ" ಎಂದು ಪೋಸ್ಟ್ ತಿಳಿಸಿದೆ.
"ಏಪ್ರಿಲ್ 26ರಂದು ನಡೆಯಬೇಕಿದ್ದ ಶ್ರೇಯಾ ಘೋಷಾಲ್ ಅವರ ಸೂರತ್ ಶೋ ರದ್ದಾಗಿದೆ. ದುರಂತಕ್ಕೊಳಗಾದವರಿಗೆ ನಾವು ಮೌನ ಮತ್ತು ಒಗ್ಗಟ್ಟಿನಿಂದ ಸಂತಾಪ ಸೂಚಿಸುತ್ತೇವೆ" ಎಂದು ಕ್ಯಾಪ್ಷನ್ನಲ್ಲಿ ಬರೆಯಲಾಗಿತ್ತು.
ಸಂಗೀತ ಕಾರ್ಯಕ್ರಮ ರದ್ದುಗೊಳಿಸಿದ ಗಾಯಕರಿವರು:
- ಇದಕ್ಕೂ ಮೊದಲು, ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಅವರು ಭಾನುವಾರದಂದು ನಿಗದಿಯಾಗಿದ್ದ ತಮ್ಮ ಚೆನ್ನೈ ಸಂಗೀತ ಕಾರ್ಯಕ್ರಮವನ್ನು ರದ್ದುಗೊಳಿಸಿದರು.
- ರ್ಯಾಪರ್ ಎಪಿ ಧಿಲ್ಲೋನ್ ತಮ್ಮ ಮುಂಬರುವ ಮ್ಯೂಸಿಕ್ ಆಲ್ಬಮ್ ಬಿಡುಗಡೆಯನ್ನು ಮುಂದೂಡಿದ್ದಾರೆ.
- ಗಾಯಕ ಪಾಪನ್ ಶನಿವಾರದಂದು ನಿಗದಿಯಾಗಿದ್ದ ಅಹಮದಾಬಾದ್ ಕಾರ್ಯಕ್ರಮವನ್ನು ರದ್ದುಗೊಳಿಸಿದರು.
- ಸಂಗೀತ ಸಂಯೋಜಕ ಮತ್ತು ಗಾಯಕ ಅನಿರುದ್ಧ್ ರವಿಚಂದರ್ ತಮ್ಮ ಮುಂಬರುವ ಬೆಂಗಳೂರು ಸಂಗೀತ ಕಾರ್ಯಕ್ರಮದ ಟಿಕೆಟ್ ಮಾರಾಟವನ್ನು ಮುಂದೂಡಿದ್ದಾರೆ.
ಇದನ್ನೂ ಓದಿ: 'ಮುಂದಿನ ಪ್ರವಾಸ ಕಾಶ್ಮೀರಕ್ಕೇನೇ ಕೈಗೊಳ್ಳಿ, ಕಾಶ್ಮೀರ ನಮ್ಮದು, ನಮ್ಮದಾಗೇ ಇರುತ್ತದೆ': ಸುನೀಲ್ ಶೆಟ್ಟಿ
ಜೂನ್ 1ರಂದು ಬೆಂಗಳೂರಿನಲ್ಲಿ ನಡೆಯಲಿರುವ ದಕ್ಷಿಣ ಚಿತ್ರರಂಗದ ಖ್ಯಾತ ಗಾಯಕ ಅನಿರುದ್ಧ್ ರವಿಚಂದರ್ ಅವರ ಸಂಗೀತ ಕಾರ್ಯಕ್ರಮದ ಅಡ್ವಾನ್ಸ್ ಟಿಕೆಟ್ ಮೂಲತಃ ಏಪ್ರಿಲ್ 24ರ ಮಧ್ಯಾಹ್ನ 2ಗಂಟೆಗೆ ಮಾರಾಟವಾಗಬೇಕಿತ್ತು. ಅದಾಗ್ಯೂ, ರಾಷ್ಟ್ರೀಯ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಆಯೋಜಕರು ಟಿಕೆಟ್ ಮಾರಾಟವನ್ನು ಮುಂದೂಡಿದ್ದಾರೆ.
ಇದನ್ನೂ ಓದಿ: 'ಶತ್ರುಗಳು ಕಾಶ್ಮೀರದ ಶಾಂತಿಯುತ ವಾತಾವರಣ ಹಾಳುಮಾಡಲು ಪ್ರಯತ್ನಿಸಿದ್ದಾರೆ': ರಜನಿಕಾಂತ್
ಏಪ್ರಿಲ್ 27ರ ಭಾನುವಾರದಂದು ಚೆನ್ನೈನಲ್ಲಿ ಜನಪ್ರಿಯ ಗಾಯಕ ಅರಿಜಿತ್ ಸಿಂಗ್ ಅವರ ಕಾರ್ಯಕ್ರಮ ನಡೆಯಬೇಕಿತ್ತು. ಆದ್ರೆ, ಭೀಕರ ಭಯೋತ್ಪಾದಕ ದಾಳಿಯಲ್ಲಿ ಕೊನೆಯುಸಿರೆಳೆದವರಿಗೆ ಗೌರವ ಸೂಚಿಸಲು ಅರಿಜಿತ್ ಸಿಂಗ್ ತಮ್ಮ ಮ್ಯೂಸಿಕ್ ಈವೆಂಟ್ ರದ್ದುಗೊಳಿಸಿದರು.