ಕನ್ನಡ ಸಾಹಿತ್ಯಲೋಕದ ದಿಗ್ಗಜ ಡಾ.ಡಿ.ವಿ.ಗುಂಡಪ್ಪ (ಡಿ.ವಿ.ಜಿ) ಅವರ ಜನಪ್ರಿಯ ಪುಸ್ತಕ "ಮಂಕುತಿಮ್ಮನ ಕಗ್ಗ''ಗೆ ಸಿನಿ ಸ್ಪರ್ಶ ಸಿಕ್ಕಿದೆ. ಕನ್ನಡದಲ್ಲಿ ಈಗಾಗಲೇ ಕೆಲ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿರುವ ರಾಜ ರವಿಶಂಕರ್ (ವಿ.ರವಿ) ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಟ್ರೇಲರ್ ಇತ್ತೀಚೆಗೆ ಅದ್ದೂರಿಯಾಗಿ ಬಿಡುಗಡೆಯಾಯಿತು.
ನಿರ್ದೇಶಕ ರಾಜ ರವಿಶಂಕರ್ ಮಾತನಾಡಿ, ಚಿತ್ರದಲ್ಲಿ ಡಿ.ವಿ.ಜಿ ಬಾಲ್ಯದ ದಿನಗಳ ಬಗ್ಗೆ ಹೇಳಲಾಗಿದೆ. ಬಾಲ್ಯದಲ್ಲಿ ಡಿ.ವಿ.ಜಿ ಅವರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಅವರ ಸೋದರಮಾವ ತಿಮ್ಮಣ್ಣ ಮೇಷ್ಟ್ರು. ಸೋದರಮಾವ ಹಾಗೂ ಸೋದರಳಿಯನ ಬಾಂಧವ್ಯವನ್ನು ಈ ಚಿತ್ರದಲ್ಲಿ ತೋರಿಸಿದ್ದೇವೆ. ತಿಮ್ಮಣ್ಣ ಮೇಷ್ಟ್ರು ಪಾತ್ರದಲ್ಲಿ ಹಿರಿಯ ನಟ ರಾಮಕೃಷ್ಣ, ಡಿ.ವಿ.ಜಿ ಅವರ ಪಾತ್ರದಲ್ಲಿ ಮಾಸ್ಟರ್ ರಣವೀರ್, ಅಲಮೇಲು ಪಾತ್ರದಲ್ಲಿ ಭವ್ಯಶ್ರೀ ರೈ, ವೆಂಕರಮಣಯ್ಯ ಪಾತ್ರದಲ್ಲಿ ರವಿನಾರಾಯಣ್ ಹಾಗೂ ಅಜ್ಜಿಯ ಪಾತ್ರದಲ್ಲಿ ಲಕ್ಷ್ಮೀ ನಾಡಗೌಡ ಅಭಿನಯಿಸಿದ್ದಾರೆ.
ಸಾಯಿಪ್ರಕಾಶ್, ನರಸೇಗೌಡ, ಶ್ರೀನಿವಾಸ್ ಕೆಮ್ತೂರ್ ಮುಂತಾದವರು ತಾರಾಬಳಗದಲ್ಲಿದ್ದಾರೆ. ನನಗೆ ಹಾಗೂ ನಿರ್ಮಾಪಕರಿಗೆ ಈ ಚಿತ್ರ ಮಾಡಬೇಕೆನಿಸಿತು. ಗೋಖುಲೆ ಇನ್ಸ್ಟಿಟ್ಯೂಟ್ ಅವರ ಬಳಿ "ಮಂಕುತಿಮ್ಮನ ಕಗ್ಗ"ವನ್ನು ಸಿನಿಮಾ ರೂಪದಲ್ಲಿ ತರುತ್ತೇವೆ ಎಂದಾಗ ಸಂತೋಷದಿಂದ ಒಪ್ಪಿಗೆ ನೀಡಿದರು. ಚಿತ್ರವೀಗ ತೆರೆಗೆ ಬರಲು ಸಜ್ಜಾಗಿದೆ ಎಂದು ತಿಳಿಸಿದರು.
ರಂಗನಾಯಕಿ, ಮಾನಸ ಸರೋವರ ಚಿತ್ರಗಳ ಖ್ಯಾತಿಯ ಹಿರಿಯ ನಟ ರಾಮಕೃಷ್ಣ ಮಾತನಾಡಿ, ತಿಮ್ಮಣ್ಣ ಮೇಷ್ಟ್ರು ಪಾತ್ರ ನಿರ್ವಹಿಸಿರುವುದು ಬಹಳ ಖುಷಿಯಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: ನಿರ್ದೇಶಕ ಬಿ.ಸುರೇಶ್, ಶೈಲಜಾ ನಾಗ್ ಪುತ್ರಿ ಚಂದನಾ ನಾಗ್ ರಂಗಪ್ರವೇಶಕ್ಕೆ ಸಾಕ್ಷಿಯಾದ ದರ್ಶನ್; ಪತ್ನಿ ಸಾಥ್ - ವಿಡಿಯೋ
ಹಲವು ವರ್ಷಗಳಿಂದ ಪ್ರಸಾದನ ಕಲಾವಿದನಾಗಿ ಕನ್ನಡ ಚಿತ್ರರಂಗದಲ್ಲಿದ್ದೇನೆ. 20 ವರ್ಷಗಳ ಹಿಂದೆ "ಅವಳೆ ನನ್ನ ಗೆಳತಿ" ಚಿತ್ರ ನಿರ್ಮಾಣ ಮಾಡಿದ್ದೆ. ಇದು ಎರಡನೇ ಚಿತ್ರ. ಡಿ.ವಿ.ಜಿ ಅವರ ಕುರಿತಾಗಿನ ಚಿತ್ರ ನಿರ್ಮಾಣ ಮಾಡಿರುವುದಕ್ಕೆ ಹೆಮ್ಮೆ ಇದೆ ಎಂದು ನಿರ್ಮಾಪಕ ಶಿವಕುಮಾರ್ ತಿಳಿಸಿದರು.

ಮೀನಾ ಶಿವಕುಮಾರ್ ಈ ಚಿತ್ರದ ಸಹನಿರ್ಮಾಪಕರು. ಟ್ರೈಲರ್ನಿಂದ ಗಮನ ಸೆಳೆಯುತ್ತಿರೋ ಮಂಕುತಿಮ್ಮನ ಕಗ್ಗ ಚಿತ್ರ ಮೇ ಎರಡನೇ ವಾರದಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: 'ಕೋಪದಲ್ಲಿ ಕೆಟ್ಟದಾಗಿ ಮಾತನಾಡಿದೆ': ಬ್ರಾಹ್ಮಣರ ಕುರಿತು ವಿವಾದಾತ್ಮಕ ಹೇಳಿಕೆಗೆ ಅನುರಾಗ್ ಕಶ್ಯಪ್ ಕ್ಷಮೆ
ರಾಮೋಹಳ್ಳಿ ಶ್ರೀಗಳು ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದರು. ಸಾ.ರಾ.ಗೋವಿಂದು, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು, ಉಪಾಧ್ಯಕ್ಷ ಶಿಲ್ಪ ಶ್ರೀನಿವಾಸ್, ಕಾರ್ಯದರ್ಶಿ ಪ್ರವೀಣ್ ಕುಮಾರ್, ನಿರ್ದೇಶಕ ಸಾಯಿಪ್ರಕಾಶ್, ನಿರ್ದೇಶಕಿ, ನಟಿ ರೂಪ ಅಯ್ಯರ್, ನಟ ಸುಂದರರಾಜ್, ಸಂಗೀತ ನಿರ್ದೇಶಕ ವಿ.ಮನೋಹರ್, ಸಂಗಮೇಶ್ ಉಪಾಸೆ, ನಿರ್ಮಲ ಸಿ ಎಲಿಗಾರ್, ಮಾಜಿ ಶಾಸಕ ಲಕ್ಷ್ಮೀನಾರಾಯಣ್ ಸೇರಿದಂತೆ ಅನೇಕ ಗಣ್ಯರು ಡಿ.ವಿ.ಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಟ್ರೇಲರ್ ಅನಾವರಣಗೊಳಿಸಿದರು. ಆರಂಭದಲ್ಲಿ ಆದರ್ಶ್ ಅವರು "ಮಂಕುತಿಮ್ಮನ ಕಗ್ಗ"ದ ನಾಲ್ಕು ಪದ್ಯಗಳನ್ನು ಮನಮುಟ್ಟುವಂತೆ ಹಾಡಿದರು. ನಂತರ ಗಣ್ಯರು ಡಿ.ವಿ.ಜಿ ಅವರ ಬಾಲ್ಯವನ್ನು ಸಿನಿಮಾ ರೂಪಕ್ಕೆ ತಂದಿರುವ ನಿರ್ದೇಶಕ ಹಾಗೂ ನಿರ್ಮಾಪಕರ ಜೊತೆಗೆ ಚಿತ್ರತಂಡವನ್ನು ಮುಕ್ತಕಂಠದಿಂದ ಶ್ಲಾಘಿಸಿದರು.