ಶೀರ್ಷಿಕೆಯಿಂದಲೇ ಕನ್ನಡ ಚಿತ್ರರಂಗದಲ್ಲಿ ಟಾಕ್ ಆಗುತ್ತಿರುವ ಚಿತ್ರ 'ಸೂತ್ರಧಾರಿ'. ರ್ಯಾಪರ್ ಹಾಗೂ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹೀರೋ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಮಿಂಚಲು ರೆಡಿಯಾಗಿರೋ ಈ ಚಿತ್ರಕ್ಕೆ ಸ್ಯಾಂಡಲ್ವುಡ್ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್ ಕೊಟ್ಟಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಬಹುನಿರೀಕ್ಷಿತ ಚಿತ್ರದ ಟ್ರೇಲರ್ ಅನ್ನು ನಟ ಧ್ರುವ ಸರ್ಜಾ ಅನಾವರಣಗೊಳಿಸಿ, ಬಾಲ್ಯದ ಗೆಳೆಯ ಚಂದನ್ ಶೆಟ್ಟಿ ಸಿನಿಮಾಗೆ ಸಾಥ್ ಕೊಟ್ಟಿದ್ದಾರೆ.
ಬಾಲ್ಯದ ಗೆಳೆಯ ಚಂದನ್ ಶೆಟ್ಟಿಗೆ ಸಾಥ್: ಸೂತ್ರಧಾರಿ ಟ್ರೈಲರ್ ಲಾಂಚ್ ಮಾಡಿ ಮಾತನಾಡಿದ ಧ್ರುವ ಸರ್ಜಾ, ಟ್ರೇಲರ್ ಬಹಳ ಚೆನ್ನಾಗಿದೆ. ತಂತ್ರಜ್ಞರ ಕೆಲಸ ಹಾಗೂ ಕಲಾವಿದರ ಅಭಿನಯ ಸೊಗಸಾಗಿದೆ. ನಾನು ಇಲ್ಲಿಗೆ ಬರಲು ಎರಡು ಕಾರಣವಿದೆ. ಒಂದು ನಮ್ಮ "ಪೊಗರು" ಚಿತ್ರದ ಈವೆಂಟ್ ಆಯೋಜನೆ ಮಾಡಿದ್ದು ನವರಸನ್ ಅವರು. ಮತ್ತೊಂದು ನನ್ನ ಬಾಲ್ಯದ ಗೆಳೆಯ ಚಂದನ್ ಶೆಟ್ಟಿ ನಾಯಕ ನಟನಾಗಿ ನಟಿಸಿರುವ ಚೊಚ್ಚಲ ಚಿತ್ರವಿದು. ಹಾಗಾಗಿ, ನನ್ನ ಗೆಳೆಯನ ಸಿನಿಮಾಗೆ ಹಾರೈಸಲು ಬಂದೆ. ಮೇ 9ರಂದು ಕುಟುಂಬ ಸಮೇತ ಈ ಸಿನಿಮಾ ನೋಡುವುದಾಗಿ ಭರವಸೆ ನೀಡಿದರು.
ಸರ್ಜಾ ಕುಟುಂಬದ ಸಾಥ್: ಬಳಿಕ ನಾಯಕ ನಟ ಚಂದನ್ ಶೆಟ್ಟಿ ಮಾತನಾಡಿ, ನನ್ನ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಸರ್ಜಾ ಕುಟುಂಬದವರು. ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರದ ಟ್ರೇಲರ್ ಬಿಡುಗಡೆಗೆ ಧ್ರುವ ಸರ್ಜಾ ಬಂದಿದ್ದಾರೆ. ಈ ಸಮಯದಲ್ಲಿ ನನಗೆ ಅವರ ಮೊದಲ ಚಿತ್ರ "ಅದ್ದೂರಿ"ಯ ಬಿಡುಗಡೆ ದಿನದ ನೆನಪಾಗುತ್ತಿದೆ. ಬಿಡುಗಡೆ ಸಂದರ್ಭ ಅವರು ಹಾಗೂ ನಾನು ಚಿತ್ರಮಂದಿರಗಳಿಗೆ ಭೇಟಿ ನೀಡಿದ್ದು, ಮಾರ್ನಿಂಗ್ ಶೋ ಮುಗಿದ ಕೂಡಲೇ ಪ್ರೇಕ್ಷಕರು ಧ್ರುವ ಅವರ ಅಭಿನಯ ನೋಡಿ ಸಂಭ್ರಮಿಸಿದ್ದು ಇಂದು ನೆನಪಿಗೆ ಬರುತ್ತಿದೆ. ಇನ್ನೂ "ಸೂತ್ರಧಾರಿ" ನಾನು ನಾಯಕನಾಗಿ ನಟಿಸಿರುವ ಮೊದಲ ಚಿತ್ರ. ಪೊಲೀಸ್ ಅಧಿಕಾರಿಯಾಗಿ ಅಭಿನಯಿಸಿದ್ದೇನೆ. ನಾನು ನಾಯಕನಾಗಲೂ ನವರಸನ್ ಅವರೇ ಪ್ರಮುಖ ಕಾರಣ ಎಂದರು.

ಪೊಗರು ಚಿತ್ರದ ಮೂಲಕ ನಮ್ಮ ಈವೆಂಟ್ ಶುರುವಾಯ್ತು - ನವರಸನ್: ನಿರ್ಮಾಪಕ ನವರಸನ್ ಮಾತನಾಡಿ ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಧ್ರುವ ಸರ್ಜಾ ಅವರಿಗೆ ಧನ್ಯವಾದಗಳು. ನಾವು ಇಲ್ಲಿಯವರೆಗೂ ಸಾಕಷ್ಟು ಈವೆಂಟ್ಗಳನ್ನು ಮಾಡಿದ್ದೇವೆ. ಅದಕ್ಕೆ ಓಂಕಾರ ಹಾಕಿದ್ದು ಧ್ರುವ ಸರ್ಜಾ ಅವರು. "ಪೊಗರು" ಚಿತ್ರದ ಮೂಲಕ ನಮ್ಮ ಈವೆಂಟ್ ಶುರುವಾಯ್ತು ಎಂದು ತಿಳಿಸಿದರು. ಇನ್ನೂ, ಮೇ 9ರಂದು ಬಿಡುಗಡೆಯಾಗಲಿರುವ ನಮ್ಮ "ಸೂತ್ರಧಾರಿ" ಚಿತ್ರದ ಮೂಲಕ ಚಂದನ್ ಶೆಟ್ಟಿ ನಾಯಕನಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ತಂತ್ರಜ್ಞರ ಸಹಕಾರ ಅಪಾರ ಎಂದರು.

ಇದನ್ನೂ ಓದಿ: 70 ವರ್ಷದ ಹಳೇ ಸೀರೆ ಧರಿಸಿ ಸೊಬಗು ಬೀರಿದ ಪೂಜಾ ಹೆಗ್ಡೆ: ಅಜ್ಜಿ, ಮಂಗಳೂರಿನ ನೆನಪಲ್ಲಿ ಬಹುಭಾಷಾ ನಟಿ
ಚಂದನ್ ಶೆಟ್ಟಿ ಜೋಡಿಯಾಗಿ ಅಪೂರ್ವ ಅಭಿನಯಿಸಿದ್ದು, ಇವರ ಜೊತೆ ಸಂಜಯ್ ಗೌಡ, ಪ್ರಶಾಂತ್, ಲೋಹಿತ್, ರಮೇಶ್ ಮಾಸ್ಟರ್ ಸಾಕಷ್ಟು ಕಲಾವಿದರು ನಟಿಸಿದ್ದಾರೆ. ಕಿರಣ್ ಕುಮಾರ್ ನಿರ್ದೇಶಿಸಿದ್ದು, ಗಣೇಶ್ ನಾರಾಯಣ್, ಕಿನ್ನಾಳ್ ರಾಜ್ ಹಾಡುಗಳನ್ನು ಬರೆದಿದ್ದಾರೆ. ಈಗಲ್ ಮೀಡಿಯಾ ಕ್ರಿಯೇಷನ್ಸ್ ಮೂಲಕ ನವರಸನ್ ನಿರ್ಮಾಣ ಮಾಡಿದ್ದಾರೆ.

ಇದನ್ನೂ ಓದಿ: ಪಹಲ್ಗಾಮ್ ದಾಳಿ: ಶ್ರೇಯಾ ಘೋಷಾಲ್ ಸೇರಿ ತಮ್ಮ ಸಂಗೀತ ಕಾರ್ಯಕ್ರಮ ರದ್ದುಗೊಳಿಸಿದ ಗಾಯಕರಿವರು
ಬೆಳ್ಳಿತೆರೆ ಮೇಲೆ ಮೊದಲ ಬಾರಿಗೆ ಮಿಂಚಲು ರೆಡಿಯಾಡಿಗಿರೋ ಸೂತ್ರಧಾರಿ ಮೇ 9ಕ್ಕೆ ಬಿಡುಗಡೆಯಾಗಲಿದೆ. ಖಾಕಿ ಖದರ್ನಲ್ಲಿ ಚಂದನ್ ಶೆಟ್ಟಿ ಸಿನಿ ಪ್ರೇಮಿಗಳನ್ನು ಎಷ್ಟರ ಮಟ್ಟಿಗೆ ರಂಜಿಸುತ್ತಾರೆ ಅನ್ನೋದು ಈ ವಾರ ಗೊತ್ತಾಗಲಿದೆ.