'ಅಗ್ನಿಸಾಕ್ಷಿ' ಧಾರಾವಾಹಿ ನಾಯಕಿ 'ಸನ್ನಿಧಿ' ಖ್ಯಾತಿಯ ವೈಷ್ಣವಿ ಗೌಡ ನವಪಯಣ ಆರಂಭಿಸಲು ಸಜ್ಜಾಗಿದ್ದಾರೆ. ಕನ್ನಡ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಜನಪ್ರಿಯತೆ ಹೊಂದಿರುವ ನಟಿ ಮದುವೆಯ ಮೊದಲ ಹೆಜ್ಜೆ ಎನ್ನುವಂತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಏಪ್ರಿಲ್ 15, ಸೋಮವಾರ ರಾತ್ರಿ ಕಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಸಮಾರಂಭ ಜರುಗಿದ್ದು, ಫೋಟೋ ವಿಡಿಯೋಗಳು ವಿವಿಧ ಸೋಷಿಯಲ್ ಮೀಡಿಯಾ ಪ್ಲ್ಯಾಟ್ಫಾರ್ಮ್ಗಳಲ್ಲಿ ವೈರಲ್ ಆಗುತ್ತಿವೆ. ಅಭಿಮಾನಿಗಳು ಅಭಿನಂದನೆಗಳ ಮಳೆ ಹರಿಸಿದ್ದಾರೆ.
ಸೆಲೆಬ್ರಿಟಿಗಳೆಂದ ಮೇಲೆ ಮಾಧ್ಯಮ, ಪಾಪರಾಜಿ, ಸೋಷಿಯಲ್ ಮೀಡಿಯಾಗಳ ಗಮನ ಸಹಜವಾಗೇ ಅವರ ಮೇಲಿರುತ್ತದೆ. ಅಭಿಮಾನಿಗಳು ಮತ್ತು ನೆಟ್ಟಿಗರೂ ಕೂಡಾ ಅವರ ವೃತ್ತಿಜೀವನದ ಜೊತೆ ಜೊತೆಗೆ ವೈಯಕ್ತಿಕ ಜವನದ ಬಗ್ಗೆ ತಿಳಿದುಕೊಳ್ಳಲು ಆಸಕ್ತರಾಗಿರುತ್ತಾರೆ. ಪ್ರೀತಿ ಪ್ರೇಮ, ಮದುವೆ ವಿಷಯಗಳ ಆರಂಭ, ಪಾರ್ಟಿ, ಫ್ರೆಂಡ್ಸ್ ಹೀಗೆ ಅವರಿಗೆ ಸಂಬಂಧಪಟ್ಟ ಬಹುತೇಕ ವಿಷಯಗಳು ಸೋಷಿಯಲ್ ಮೀಡಿಯಾಗಳಲ್ಲಿ ಕ್ಷಣಮಾತ್ರದಲ್ಲಿ ವೈರಲ್ ಆಗುತ್ತವೆ. ಅಂಥದರಲ್ಲಿ ನಟಿ ವೈಷ್ಣವಿ ಗೌಡ ಅವರ ನಿಶ್ಚಿತಾರ್ಥ ಸಮಾರಂಭ ಎಲ್ಲರಿಗೂ ಸರ್ಪೈಸ್ ಆಗಿದೆ.
ಅಭಿಮಾನಿಗಳಿಗೆ ಸಂತಸದ ಜೊತೆ ಸರ್ಪೈಸ್: ನಟಿ ಎಂಗೇಜ್ಮೆಂಟ್ ಮಾಡಿಕೊಳ್ಳುತ್ತಿದ್ದಾರೆ ಅನ್ನೋ ಸಣ್ಣ ಸುಳಿವೂ ಇರಲಿಲ್ಲ. ಮದುವೆ ಬಗ್ಗೆ ಯಾವುದೇ ಅಂತೆಕಂತೆಗಳಿರಲಿಲ್ಲ. ಲವ್, ರಿಲೇಶನ್ಶಿಪ್, ಡೇಟಿಂಗ್ ರೂಮರ್ಸ್ ಇಲ್ವೇ ಇಲ್ಲ. ಇದ್ದಕ್ಕಿದ್ದಂತೆ ಆನ್ಲೈನ್ನಲ್ಲಿ ಫೋಟೋ ವಿಡಿಯೋಗಳು ವೈರಲ್ ಆಗಿವೆ. ಇದನ್ನು ಕಂಡ ಅಭಿಮಾನಿಗಳು ಸಂತಸದ ಜೊತೆ ಸರ್ಪೈಸ್ ಆಗಿದ್ದಾರೆ.
ಆಪ್ತ ಗೆಳತಿ ನಟಿ ಅಮೂಲ್ಯ ಸಾಥ್: ವೈಷ್ಣವಿ ಹಾಗೂ ಅಮೂಲ್ಯ ಬಹಳ ಸಮಯದಿಂದ ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಗೆಳತಿಯ ವಿಶೇಷ ದಿನಕ್ಕೆ ಅಮೂಲ್ಯ ಕುಟುಂಬ ಸಾಕ್ಷಿಯಾಗಿದೆ.
ಉದ್ಯಮಿ ಜೊತೆ ನಟಿಯ ನಿಶ್ಚಿತಾರ್ಥ: ಕಳೆದ ಸಂಜೆ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಸಮಾರಂಭ ನಡೆದಿದೆ. ಅನುಕೂಲ್ ಮಿಶ್ರಾ ಎಂಬ ಉದ್ಯಮಿ ಜೊತೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ. ಇದು ಆಪ್ತರಿಗಷ್ಟೇ ಸೀಮಿತವಾಗಿದ್ದ ಸಮಾರಂಭ ಎಂಬಂತೆ ತೋರಿದೆ. ನಟಿ ಮಿನುಗುವ ಗೌನ್ನಲ್ಲಿ ಬಹಳ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಉಂಗುರ ಬದಲಾಯಿಸಿಕೊಂಡ ಕ್ಷಣ ಜೋಡಿಯ ಮೊಗ ಬಹಳ ಪ್ರೀತಿ, ಖುಷಿಯಿಂದ ಕಂಗೊಳಿಸಿದೆ.
ಇದನ್ನೂ ಓದಿ: 'ಕೆಜಿಎಫ್ 2'ಗೆ 3 ವರ್ಷ: 'ಟಾಕ್ಸಿಕ್' ಚಿತ್ರೀಕರಣ ಜೋರು; ಮುಂಬೈನಲ್ಲಿ ಯಶ್ ರಾಧಿಕಾ ದಂಪತಿ- ವಿಡಿಯೋ ನೋಡಿ
ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 8ಕ್ಕೆ ಎಂಟ್ರಿ ಕೊಟ್ಟಿದ್ದರು. ಅವರ ವಿನಮ್ರ ವ್ಯಕ್ತಿತ್ವ ಬಹುತೇಕರ ಮೆಚ್ಚುಗೆಗೆ ಪಾತ್ರವಾಗಿತ್ತು. ಕೋವಿಡ್ ಹಿನ್ನೆಲೆ, ಕಾರ್ಯಕ್ರಮ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಒಂದಿಷ್ಟು ಗ್ಯಾಪ್ ಬಳಿಕ ಶೋ ಪುನರಾರಂಭಗೊಂಡಾಗ ನಿರೂಪಕ ಕಿಚ್ಚ ಸುದೀಪ್ ಮದುವೆ ವಿಚಾರವನ್ನೆತ್ತಿದ್ದರು. ಈ ಗ್ಯಾಪ್ನಲ್ಲಿ ಬಂದ ಪ್ರಪೋಸಲ್ ಎಷ್ಟು ಎಂದು ಸುದೀಪ್ ಕೇಳಿದ್ದ ಪ್ರಶ್ನೆಗೆ ಅಂದಾಜು 300 ಇರಬಹುದು ಎಂದು ಉತ್ತರಿಸಿದ್ದರು. ಜೊತೆಗೆ, ನಾನು ನನ್ನ ಮನದ ಮಾತು ಕೇಳುವವಳು. ಯಾವುದೂ ಕನೆಕ್ಟ್ ಆಗಲಿಲ್ಲ ಎಂದು ಉತ್ತರಿಸಿದ್ದರು. ಇದೀಗ ಅಕಾಯ್ ಜೊತೆ ದಾಂಪತ್ಯ ಜೀವನ ಆರಂಭಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: ವಿಡಿಯೋ: ತಿರುಪತಿಗೆ ಮುಡಿಕೊಟ್ಟ ಪವನ್ ಕಲ್ಯಾಣ್ ಪತ್ನಿ; ಸಿಂಗಾಪುರ ಅಗ್ನಿ ಅವಘಡದಲ್ಲಿ ಸಿಲುಕಿದ್ದ ಪುತ್ರ ಭಾರತಕ್ಕೆ ವಾಪಸ್
ಇನ್ನೂ, ಬಿಗ್ ಬಾಸ್ ಎಪಿಸೋಡ್ ಒಂದರಲ್ಲಿ ಸಹಸ್ಪರ್ಧಿಯೊಂದಿಗೆ ಮದುವೆ ಬಗ್ಗೆ ಮಾತನಾಡಿದ್ದರು. ವೈವಾಹಿಕ ಜೀವನವನ್ನು ಅನುಭವಿಸಲು ಎದುರು ನೋಡುತ್ತಿದ್ದೇನೆ. ಸೂಕ್ತ ಬಾಳಸಂಗಾತಿಗಾಗಿ ಕಾಯುತ್ತಿದ್ದೇನೆ ಎಂಬರ್ಥದಲ್ಲಿ ಮಾತನಾಡಿದ್ದರು.