ನವದೆಹಲಿ: "ದೆಹಲಿ ಹೈಕೋರ್ಟ್ ನ್ಯಾಯಾಧೀಶರ ಮನೆಯಲ್ಲಿ ಹಣದ ಕಂತೆಗಳು ಸುಟ್ಟು ಹೋದ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ಏಕೆ ದಾಖಲಿಸಿಲ್ಲ" ಎಂದು ಉಪ ರಾಷ್ಟ್ರಪತಿ ಜಗದೀಪ್ ಧನಕರ್ ಅವರು ಪ್ರಶ್ನಿಸಿದ್ದಾರೆ.
"ಆರೋಪಗಳು ಬಂದಾಗ ನ್ಯಾಯಾಂಗವೂ ಸೇರಿದಂತೆ ಯಾವುದೇ ಸಂಸ್ಥೆಗಳು ಸಂವಿಧಾನ ಮತ್ತು ದೇಶದ ಕಾನೂನುಗಳಿಗಿಂತ ಮಿಗಿಲಲ್ಲ. ಹೀಗಿದ್ದಾಗ, ಪೊಲೀಸ್ ತನಿಖೆ ನಡೆಯದೇ ಇರುವುದು ದೇಶದ ಜನರಿಗೆ ಅಚ್ಚರಿ ಮೂಡಿಸಿದೆ" ಎಂದು ಅವರು ಹೇಳಿದ್ದಾರೆ.
"ಇಂಥದ್ದೇ ಘಟನೆ ಸಾಮಾನ್ಯ ವ್ಯಕ್ತಿಯ ಮನೆಯಲ್ಲಿ ನಡೆದಿದ್ದರೆ, ತನಿಖೆಯು ರಾಕೆಟ್ ವೇಗ ಪಡೆಯುತ್ತಿತ್ತು. ಈಗ ಎತ್ತಿನಬಂಡಿಯಂತೆಯೂ ನಡೆಯುತ್ತಿಲ್ಲ. ನ್ಯಾಯಾಂಗಕ್ಕಿರುವ ಸ್ವಾತಂತ್ರ್ಯವು ತನ್ನ ವಿರುದ್ಧದ ಆರೋಪಗಳನ್ನು ತಡೆಯುವ 'ರಕ್ಷಣಾ ಕವಚ'ವಲ್ಲ" ಎಂದು ಹೇಳುವ ಮೂಲಕ ನ್ಯಾಯಾಂಗದ ಅಪರಿಮಿತಿ ಅಧಿಕಾರದ ಮೇಲೆ ಪ್ರಶ್ನೆ ಎತ್ತಿದ್ದಾರೆ.
ಜಡ್ಜ್ಗಳ ಸಮಿತಿ ಏನು ಮಾಡುತ್ತದೆ?: ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ರಚಿಸಿರುವ ಮೂವರು ನ್ಯಾಯಾಧೀಶರ ಸಮಿತಿಯ ಕಾನೂನು ಮಾನ್ಯತೆಯ ಬಗ್ಗೆಯೂ ಅಪಸ್ವರ ಎತ್ತಿರುವ ಉಪ ರಾಷ್ಟ್ರಪತಿಗಳು, ಸಮಿತಿಯು ಏನು ಮಾಡುತ್ತದೆ?, ಹೆಚ್ಚೆಂದರೆ ಶಿಫಾರಸು ಮಾಡಬಹುದು. ಯಾರಿಗೆ ಶಿಫಾರಸು ಮಾಡುತ್ತದೆ. ಏತಕ್ಕಾಗಿ ಈ ಶಿಫಾರಸು. ಸಂವಿಧಾನ ಅಥವಾ ಕಾನೂನಿನ ಯಾವ ನಿಬಂಧನೆಯ ಅಡಿಯಲ್ಲಿ ಸಮಿತಿ ರಚಿಸಲಾಗಿದೆ ಎಂಬುದು ತಿಳಿಯುತ್ತಿಲ್ಲ ಎಂದರು.
ಯಾವುದೇ ಪ್ರಕರಣದ ಪ್ರಾಥಮಿಕ ತನಿಖೆ ನಡೆಸುವುದು ಕಾರ್ಯಾಂಗದ ಅಧಿಕಾರಿ ವ್ಯಾಪ್ತಿಗೆ ಬರುತ್ತದೆಯೇ ಹೊರತು, ನ್ಯಾಯಾಂಗಕ್ಕಲ್ಲ. ನ್ಯಾಯಾಧೀಶರನ್ನು ನೇಮಿಸುವ ಮತ್ತು ಕಿತ್ತುಹಾಕುವ ಅಧಿಕಾರ ಕಾರ್ಯಾಂಗಕ್ಕಿದೆ. ಹೀಗಿದ್ದಾಗ, ಸಮಿತಿಯ ವರದಿಯು ಕಾನೂನಿನ ಮಾನ್ಯತೆಗೆ ಒಳಪಡುತ್ತದೆಯೇ ಎಂದು ಪಶ್ನೆ ಮಾಡಿದ್ದಾರೆ.
ತನಿಖೆಯೂ ವಿಳಂಬ: ಘಟನೆ ನಡೆದು 7 ದಿನದ ಬಳಿಕ ಬೆಳಕಿಗೆ ಬಂದಿತ್ತು. ಇದೀಗ, ಒಂದು ತಿಂಗಳು ಕಳೆದಿದೆ. ಅಡಗಿರುವ ಸತ್ಯವನ್ನು ಸಮಾಜಕ್ಕೆ ತಿಳಿಸುವ ಸಮಯ ಇದು. ಕಪಾಟಿನಿಂದ ಅಸ್ಥಿಪಂಜರ ಹೊರತರುವ, ಹುಳುಳನ್ನು ಹಿಡಿಯುವ ಸಮಯವಿದು. ಈ ವಿಳಂಬ ಯಾಕೆ ಎಂದು ವಿವರಿಸಬಹುದೇ?, ಇದನ್ನು ಕ್ಷಮಿಸಬಹುದೇ? ಇಂತಹ ಮೂಲಭೂತ ಪ್ರಶ್ನೆಗಳನ್ನು ಹುಟ್ಟುಹಾಕುವುದಿಲ್ಲವೇ? ಸಾಮಾನ್ಯ ಪ್ರಕರಣಗಳಿಗೂ ಇದಕ್ಕೂ ವಿಭಿನ್ನತೆ ಉಂಟೇ ಎಂದೆಲ್ಲಾ ಕೇಳಿದ್ದಾರೆ.
ನ್ಯಾಯಾಧೀಶರ ಮನೆಯಲ್ಲಿ ಹಣ ಪತ್ತೆಯಾಗಿದೆ ಎಂದು ಕೋರ್ಟ್ ಒಪ್ಪಿಕೊಂಡಿದೆ. ಈ ಕುರಿತು ತನಿಖೆ ನಡೆಯುವುದು ಸ್ಪಷ್ಟವಾಯಿತು. ದೇಶವೇ ಗೌರವಿಸುವ ಸಂಸ್ಥೆಯ ಮೇಲೆಯೇ ಇಂಥದ್ದೊಂದು ಕಳಂಕ ಬಂದಾಗ, ಪ್ರಕರಣ ಏನಾದೀತು ಎಂದು ರಾಷ್ಟ್ರವೇ ಉಸಿರು ಬಿಗಿಹಿಡಿದಿಕೊಂಡು ಕಾಯುತ್ತಿದೆ. ವಿಚಾರಣೆ ನಡೆಯುತ್ತಿರುವುದರಿಂದ ಆತಂಕ ಉಂಟಾಗಿದೆ ಎಂದು ಅವರು ಹೇಳಿದರು.
ಇವರಿಗೆ ಮಾತ್ರ ವಿನಾಯಿತಿ: ಸಂವಿಧಾನವು ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಮಾತ್ರ ಕಾನೂನಿನ ಕೆಲ ವಿನಾಯಿತಿ ನೀಡಲಾಗಿದೆ. ಉಪರಾಷ್ಟ್ರಪತಿ ಸೇರಿದಂತೆ ದೇಶದ ಯಾವುದೇ ಸಂಸ್ಥೆಯು ಕಾನೂನಿಗಿಂತ ಅತೀತವಲ್ಲ. ಯಾರ ವಿರುದ್ಧ ಬೇಕಾದರೂ, ಎಫ್ಐಆರ್ ದಾಖಲಿಸಬಹುದು. ಹಾಗಿದ್ದಾಗ, ಈ ಪ್ರಕರಣದಲ್ಲಿ ಯಾಕೆ ಪ್ರಾಥಮಿಕ ಮಾಹಿತಿ ವರದಿ ಏಕೆ ದಾಖಿಲಿಸಿಲ್ಲ ಎಂದು ದೇಶದ ಜನರಿ ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಇದನ್ನೂ ಓದಿ: ದೆಹಲಿ ಜಡ್ಜ್ ಮನೆಯಲ್ಲಿ ಹಣ ಸಿಕ್ಕ ಫೋಟೋ, ವಿಡಿಯೋ ಪ್ರಕಟಿಸಿದ ಸುಪ್ರೀಂ ಕೋರ್ಟ್; ತನಿಖೆಗೆ ತ್ರಿಸದಸ್ಯ ಸಮಿತಿ ರಚನೆ
ಬಂಗಲೆಯಲ್ಲಿ ನಗದು ಪತ್ತೆ ವಿವಾದ; ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ವರ್ಮಾ ವರ್ಗಾವಣೆ