ಕಟಕ್ (ಒಡಿಶಾ): ತನ್ನ ಅಜ್ಜನಿಗೆ ಕೊಟ್ಟ ಮಾತು ಉಳಿಸಿಕೊಳ್ಳಲು ಮೊಮ್ಮಗ 200ಕ್ಕೂ ಹೆಚ್ಚು ನವಿಲುಗಳನ್ನು ಕುಟುಂಬ ಸದಸ್ಯರನ್ನಾಗಿಸಿಕೊಂಡಿದ್ದಾನೆ.. ಅಷ್ಟೇ ಏಕೆ, ನಿತ್ಯ ಎರಡು ಬಾರಿ ಅರಣ್ಯಕ್ಕೆ ಬಂದು ತನ್ನ ಸದಸ್ಯರ ಹೊಟ್ಟೆ ತುಂಬಿಸಿ ಖುಷಿ ಪಡ್ತಾನೆ.. ನವಿಲುಗಳು ಕೂಡ ಈತ ಕರೆದರೆ ಸಾಕು, ಎಲ್ಲಿದ್ದರೂ ಓಡಿಬಂದು ದರ್ಶನ ನೀಡುತ್ತವೆ!
ಇದು ಒಡಿಶಾದ ಕಟಕ್ ಜಿಲ್ಲೆಯ ಸಾನಾ ಮುಂಡಳಿ ಅರಣ್ಯದಲ್ಲಿ ನಿತ್ಯ ಕಂಡು ಬರುವ ದೃಶ್ಯ. ಹೆಸರು ಕನ್ಹು ಬೆಹೆರಾ. ಜ್ಯೂನಿಯರ್ ನವಿಲು ಪ್ರೇಮಿ ಅಂತಾನೇ ಇಲ್ಲಿ ಖ್ಯಾತಿ ಗಳಿಸಿದ್ದಾರೆ. ಈತನ ಪಕ್ಷಿ ಪ್ರೀತಿ ಕಂಡು ಅಲ್ಲಿನ ಅಗ್ನಿಶಾಮಕ ಇಲಾಖೆಯು ಈ ವ್ಯಕ್ತಿಯನ್ನು ಹೋಮ್ ಗಾರ್ಡ್ ಆಗಿ ನೇಮಿಸಿಕೊಂಡಿದೆ. ಅರಣ್ಯದ ಬಳಿಯೇ ಕಚೇರಿ ಇರುವುದರಿಂದ ಈತ, ನವಲುಗಳಿಗೆ ಇನ್ನಷ್ಟು ಹತ್ತಿರವಾಗಿದ್ದಾನೆ.
ಅಜ್ಜ ಪಾನು ಬೆಹೆರಾ ಕೂಡ ನವಿಲು ಪ್ರೇಮಿ: ಕನ್ಹು ಬೆಹೆರಾ ಅವರ ಅಜ್ಜ ಪಾನು ಬೆಹೆರಾ ಕೂಡ ನವಿಲು ಪ್ರೇಮಿಯಾಗಿದ್ದರು. 1999ರ ಸೂಪರ್ ಸೈಕ್ಲೋನ್ ವೇಳೆ ಇವರಿಗೂ ನವಿಲುಗಳ ನಡುವೆ ಬಾಂಧವ್ಯ ಆರಂಭವಾಗುತ್ತದೆ. ಸೈಕ್ಲೋನ್ ವೇಳೆ ಒಂದು ಗಂಡು ಮತ್ತು ಎರಡು ಹೆಣ್ಣು ನವಿಲುಗಳು ಆಹಾರ ಅರಸಿ ಕಾಡಿನಿಂದ ಬಂದಿದ್ದವು. ಈ ವೇಳೆ ಅವು ಗಾಯಗೊಂಡು ಕೆಳಗೆ ಬಿದ್ದಿದ್ದವು. ಆಗ ಪಾನು ಅವರು ಆ ನವಿಲುಗಳನ್ನು ಆರೈಕೆ ಮಾಡಿದರು. ನವಿಲುಗಳು ಚೇತರಿಸಿಕೊಂಡ ಬಳಿಕ ಅವುಗಳನ್ನು ಅರಣ್ಯಕ್ಕೆ ಪಾನು ಬಿಟ್ಟು ಬಂದರು. ಆ ವೇಳೆ ಗಂಡು ನವಿಲಿಗೆ ರಾಜ ಎಂದು ಹೆಸರಿಟ್ಟು ಕಳುಹಿಸಿದರು. ಆ ಬಳಿಕ ನಿತ್ಯ ಅರಣ್ಯಕ್ಕೆ ತೆರಳಿ ನವಿಲುಗಳಿಗೆ ಪಾನು ಆಹಾರ ಹಾಕುತ್ತಾ ಇದ್ದರು. ಇಲ್ಲಿಂದ ನವಿಲುಗಳ ಜೊತೆ ನಂಟು ಬೆಳೆಯಿತು. ಇದು ಮೊಮ್ಮಗನಿಗೂ ಹಸ್ತಾಂತರವಾಗಿ ಇದೀಗ 204 ನವಿಲುಗಳು ದೊಡ್ಡ ಕುಟುಂಬವಾಗಿದೆ.

ಮಾತು ತೆಗೆದುಕೊಂಡ ಅಜ್ಜ: ಪಾನು ಅನಾರೋಗ್ಯಕ್ಕೀಡಾಗಿ ಹಾಸಿಗೆ ಹಿಡಿದಾಗ ತನ್ನ ಮೊಮ್ಮಗನಿಗೆ ನವಿಲುಗಳನ್ನು ನೋಡಿಕೊಳ್ಳುವಂತೆ ಮಾತು ತೆಗೆದುಕೊಂಡಿದ್ದರು. ಆದ್ದರಿಂದ 2017ರಲ್ಲ ಅಜ್ಜ ತೀರಿಕೊಂಡ ನಂತರ ಕನ್ಹು, ಕೊಟ್ಟ ಮಾತು ಉಳಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ 54 ನವಿಲುಗಳಿದ್ದವು. ಈಗ ಇದು 204ಕ್ಕೆ ತಲುಪಿದ್ದು, ಎಲ್ಲಕ್ಕೂ ಕನ್ಹು ನಿತ್ಯ ಆಹಾರ ಹಾಕುತ್ತಾರೆ.

ಕನ್ಹು ಮಾಡುವ ನಿಸ್ವಾರ್ಥ ಕೆಲಸ ಮೆಚ್ಚಿ 2019 ರಲ್ಲಿ ಹತ್ತಿರದ ಅಗ್ನಿಶಾಮಕ ಕಚೇರಿಯಲ್ಲಿ ಹೋಮ್ ಗಾರ್ಡ್ ಆಗಿ ನೇಮಿಸಲಾಯಿತು. "ನಾನು ನವಿಲುಗಳಿಗೆ ನಿಗದಿತ ಸಮಯದಲ್ಲಿ ಆಹಾರ ನೀಡಬೇಕಾಗಿರುವುದರಿಂದ ಹತ್ತಿರದಲ್ಲಿ ಕೆಲಸ ಮಾಡುವುದು ಸ್ವಲ್ಪ ಸುಲಭವಾಗುತ್ತದೆ. ಕೆಲವೊಮ್ಮೆ ನನ್ನ ಕಿರಿಯ ಸಹೋದರ ಸಹ ಸಹಾಯ ಮಾಡುತ್ತಾನೆ" ಎಂದು ಕನ್ಹು ಆತ್ಮವಿಶ್ವಾಸದಿಂದ ಹೇಳುತ್ತಾರೆ.

"ಚಿಕ್ಕಂದಿನಲ್ಲಿ ನನ್ನ ಅಜ್ಜ ನನ್ನನ್ನು ಪಕ್ಷಿಗಳಿಗೆ ಆಹಾರ ಹಾಕಲು ಅರಣ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದರು. ಆದರೆ ಅವರು 100 ಮೀಟರ್ ದೂರದಲ್ಲಿ ನನ್ನನ್ನು ಕೂರಿಸುತ್ತಿದ್ದರು. ಅವರು ನವಿಲುಗಳೊಂದಿಗೆ ಮಾತನಾಡುವ ಜೊತೆಗೆ ಆಟವಾಡುತ್ತಿದ್ದರು. ನವಿಲುಗಳು ಓಡಿ ಬಂದು ಅಜ್ಜನ ತಲೆ ಮತ್ತು ಹೆಗಲ ಮೇಲೆ ಕೂರುತ್ತಿದ್ದವು. ಇದು ನನಗೆ ಚಿಕ್ಕ ವಯಸ್ಸಿನಿಂದಲೂ ಪಕ್ಷಿಗಳ ಮೇಲೆ ಪ್ರೀತಿಯನ್ನು ಉಂಟುಮಾಡಿತು. ಅಜ್ಜ ಹಾಸಿಗೆ ಹಿಡಿದಾಗ ನವಿಲುಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನನಗೆ ಒಪ್ಪಿಸಿದರು. ಆಗ ನಾನು ಯೋಚಿಸದೇ ಒಪ್ಪಿಕೊಂಡೆ" ಎಂದು ಕನ್ಹು ನೆನೆಯುತ್ತಾರೆ.

ಮಳೆ ಬರಲಿ ಇಲ್ಲವೇ ಬಿಸಿಲಿರಲಿ ಕನ್ಹು ಮಾತ್ರ ನಿತ್ಯ ಎರಡು ಬಾರಿ ಅಕ್ಕಿ, ಭತ್ತ, ಗೋಧಿ, ರಾಗಿ, ಹುರುಳಿಕಾಳುಗಳನ್ನೊಳಗೊಂಡ ಆಹಾರವನ್ನು ತಂದು ನವಿಲುಗಳಿಗೆ ತಿನಿಸುತ್ತಾರೆ. "ದಿನಕ್ಕೆ ಸುಮಾರು 1200 ರೂಪಾಯಿಗಳು ಖರ್ಚಾಗುತ್ತದೆ. ಈ ವೆಚ್ಚವನ್ನು ಸಂದರ್ಶಕರ ಕೊಡುಗೆಯೊಂದಿಗೆ ನಿರ್ವಹಿಸುತ್ತೇನೆ. ಆದರೆ ಮಳೆಗಾಲದಲ್ಲಿ, ಪ್ರವಾಸಿಗರ ಸಂಖ್ಯೆ ಕಡಿಮೆಯಾಗುವುದರಿಂದ ಕಷ್ಟವಾಗುತ್ತದೆ. ಹಾಗಾಗಿ ಫೀಡ್ ಖರೀದಿಸಲು ನನ್ನ ಬಳಿ ಹಣವಿಲ್ಲದಿದ್ದಾಗ, ನಾನು ನನ್ನ ಉಳಿತಾಯ ಹಣವನ್ನು ಬಳಸುತ್ತೇನೆ" ಎಂದು ಅವರು ಮಾಹಿತಿ ನೀಡುತ್ತಾರೆ.
ಪ್ರತಿದಿನ ನೂರಾರು ಜನರು ನವಿಲುಗಳ ದೃಶ್ಯವನ್ನು ವೀಕ್ಷಿಸಲು ಆಗಮಿಸುತ್ತಾರೆ. ಕನ್ಹು ಮತ್ತು ಅವರ ಅಜ್ಜನ ಸೇವೆಯಿಂದಾಗಿ ಇದನ್ನು ನವಿಲುಗಳ ಕಣಿವೆ ಎಂದು ಗುರುತಿಸಲಾಗಿದೆ.

"ನನಗೆ ಗೌರವ ಅಥವಾ ಮನ್ನಣೆ ಬೇಕಾಗಿಲ್ಲ. ನನಗೆ ಬೇಕಿರುವುದು ನನ್ನ ನವಿಲು ಕುಟುಂಬಕ್ಕೆ ಆಹಾರ. ಅದು ಖಚಿತವಾಗಿದ್ದರೆ, ನಾನು ಚಿಂತಿಸಬೇಕಾಗಿಲ್ಲ, ಈ ನವಿಲುಗಳಿಂದ ನನಗೆ ತುಂಬಾ ಪ್ರೀತಿ ಸಿಗುತ್ತದೆ. ಅದಕ್ಕಿಂತ ದೊಡ್ಡ ಪ್ರತಿಫಲ ಯಾವುದೂ ಇಲ್ಲ" ಎಂದು ಕನ್ಹು ನಗುತ್ತಾ ಉತ್ತರಿಸುತ್ತಾರೆ.
ಇದನ್ನೂ ಓದಿ: ವಿಜಯನಗರ: ಧರೋಜಿ ಧಾಮದಲ್ಲಿ ಕರಡಿಗಳ ತುಂಟಾಟ; ವರ್ಷಧಾರೆಯ ಸಿಂಚನಕ್ಕೆ ನರ್ತನ ಮಾಡಿದ ನವಿಲು
ಇದನ್ನೂ ಓದಿ: ಬಂಡೀಪುರದಲ್ಲಿ ಸಂಗಾತಿ ಮುಂದೆ ನರ್ತಿಸಿದ ನವಿಲು: ಮನಮೋಹಕ ದೃಶ್ಯ ಸೆರೆ