ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರದ ಘಟನೆಗಳ ತನಿಖೆ ನಡೆಸಲು ಪಶ್ಚಿಮ ಬಂಗಾಳ ಸರ್ಕಾರ ವಿಶೇಷ ತನಿಖಾ ತಂಡ (SIT) ರಚಿಸಿ ಆದೇಶಿಸಿದೆ.
ಹೊಸ ವಕ್ಫ್ ಕಾನೂನಿನ ವಿರುದ್ಧ ಕಳೆದ ವಾರ ಭುಗಿಲೆದ್ದ ಹಿಂಸಾಚಾರದಲ್ಲಿ ತಂದೆ-ಮಗ ಸೇರಿದಂತೆ ಮೂವರು ಸಾವಿಗೀಡಾಗಿದ್ದರು. ಮುಸ್ಲಿಂ ಪ್ರಾಬಲ್ಯದ ಮುರ್ಷಿದಾಬಾದ್ನಿಂದ ಹಿಂದುಗಳು ಜೀವ ಭಯದಿಂದ ನದಿ ದಾಟಿ ಬೇರೆಡೆಗೆ ಹೋಗಿದ್ದಾರೆ.
ಹಿಂಸಾಚಾರ ಭುಗಿಲೆದ್ದಿದ್ದು, ಎಚ್ಚೆತ್ತುಕೊಂಡಿರುವ ಸಿಎಂ ಮಮತಾ ಬ್ಯಾನರ್ಜಿ ಅವರ ನೇತೃತ್ವದ ಸರ್ಕಾರ ಘಟನೆ ಕುರಿತಂತೆ ತನಿಖೆ ನಡೆಸಲು, ಗುಪ್ತಚರ ಶಾಖೆಯ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ, ಉಪ ಸೂಪರಿಂಟೆಂಡೆಂಟ್ಗಳು, ದಂಗೆ ನಿಗ್ರಹ ಪಡೆ (ಸಿಐಎಫ್), ಅಪರಾಧ ತನಿಖಾ ಇಲಾಖೆ (ಸಿಐಡಿ) ಮತ್ತು ಸುಂದರಬನ್ ಜಿಲ್ಲೆಯ ಸೈಬರ್ ಅಪರಾಧ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನು ಒಳಗೊಂಡು ಒಂಬತ್ತು ಸದಸ್ಯರುಳ್ಳ ತಂಡವನ್ನು ರಚಿಸಿದೆ.
ಹಿಂಸಾತ್ಮಕ ಪ್ರತಿಭಟನೆ: ಏಪ್ರಿಲ್ 11 ರಂದು ವಕ್ಫ್ ತಿದ್ದುಪಡಿ ಕಾಯ್ದೆಯ ವಿರುದ್ಧ ಒಂದು ಸಮುದಾಯದವರು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಮುರ್ಷಿದಾಬಾದ್ನಲ್ಲಿ ಹಿಂಸಾಚಾರ ಭುಗಿಲೆದ್ದಿತು. ಈ ವೇಳೆ ತಂದೆ-ಮಗ ಇಬ್ಬರು ಸಾವನ್ನಪ್ಪಿದರು. ಪೊಲೀಸ್ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಹತನಾಗಿದ್ದಾನೆ. ಹಲವಾರು ಜನರು ಗಾಯಗೊಂಡಿದ್ದಾರೆ. ವ್ಯಾಪಕ ಆಸ್ತಿ-ಪಾಸ್ತಿ ಹಾನಿಯಾಗಿದೆ.
ಇದರ ನಂತರ, ಕೇಂದ್ರ ಗೃಹ ಸಚಿವಾಲಯವು ಮುರ್ಷಿದಾಬಾದ್ನಲ್ಲಿ ಗಡಿ ಭದ್ರತಾ ಪಡೆಯ 900 ಸಿಬ್ಬಂದಿಯ ಒಂಬತ್ತು ತುಕಡಿಗಳನ್ನು ನಿಯೋಜಿಸಿತು. 300 ಬಿಎಸ್ಎಫ್ ಯೋಧರೂ ರಕ್ಷಣೆ ಒದಗಿಸುತ್ತಿದ್ದಾರೆ. ರಾಜ್ಯ ಸರ್ಕಾರದ ಕೋರಿಕೆಯ ಮೇರೆಗೆ ಹೆಚ್ಚುವರಿ ಪಡೆಗಳನ್ನೂ ಕೇಂದ್ರ ಸರ್ಕಾರ ರವಾನಿಸಿದೆ. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 150 ಮಂದಿಯನ್ನು ಬಂಧಿಸಲಾಗಿದೆ.
ಪರಿಸ್ಥಿತಿ ಸಹಜ ಸ್ಥಿತಿಗೆ: ಕೇಂದ್ರೀಯ ಪಡೆಗಳನ್ನು ನಿಯೋಜಿಸಿದ ಬಳಿಕ ಗಲಭೆಪೀಡಿತ ಪ್ರದೇಶಗಳಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಸಿಆರ್ಪಿಎಫ್, ರಾಜ್ಯ ಪೊಲೀಸರು ಮತ್ತು ಜಂಟಿ ಪಡೆಗಳನ್ನು ನಿಯೋಜಿಸಲಾಗಿದೆ. ವದಂತಿಗಳಿಗೆ ಕಿವಿಗೊಡಬೇಡಿ ಎಂದು ವಿನಂತಿಸಿದ್ದೇವೆ. ನಿಯಂತ್ರಣ ಕೊಠಡಿಯನ್ನು ತೆರೆದಿದ್ದೇವೆ. ಸಮಸ್ಯೆ ಎದುರಾದಲ್ಲಿ ಸಂಪರ್ಕಿಸಲು ಕೋರಲಾಗಿದೆ ಎಂದು ದಕ್ಷಿಣ ಬಂಗಾಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸುಪ್ರತಿಮ್ ಸರ್ಕಾರ್ ತಿಳಿಸಿದ್ದಾರೆ.
ಗಲಭೆಯ ನಡುವೆ, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕೋಲ್ಕತ್ತಾದಲ್ಲಿ ಮುಸ್ಲಿಂ ಧರ್ಮಗುರುಗಳನ್ನು ಭೇಟಿಯಾದರು. ಧಾರ್ಮಿಕ ನಾಯಕರೊಂದಿಗಿನ ಸಭೆಯಲ್ಲಿ, ಮುರ್ಷಿದಾಬಾದ್ ಹಿಂಸಾಚಾರದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ: 'ಪಶ್ಚಿಮ ಬಂಗಾಳದಲ್ಲಿ ಹಿಂದೂಗಳ ವಿರುದ್ಧ ಸರ್ಕಾರಿ ಪ್ರಾಯೋಜಿತ ಹಿಂಸಾಚಾರ': ಬಿಜೆಪಿ ಆಕ್ರೋಶ
ವಕ್ಫ್ ಕಾಯ್ದೆ ವಿರೋಧಿ ಪ್ರತಿಭಟನೆ ವೇಳೆ ಹಿಂಸಾಚಾರ: ಪಶ್ಚಿಮ ಬಂಗಾಳದಲ್ಲಿ 110ಕ್ಕೂ ಅಧಿಕ ಜನರ ಬಂಧನ