ಕೊಡೆರ್ಮಾ (ಜಾರ್ಖಂಡ್): ಜಿಲ್ಲೆಯ ಚಂದ್ವಾರಾ ಬ್ಲಾಕ್ನ ಬೆಂಡಿ ಪಂಚಾಯತ್ ವ್ಯಾಪ್ತಿಯ ಛತಾರಾ ಗ್ರಾಮದಲ್ಲಿ, ಒಂದು ನಿರ್ದಿಷ್ಟ ಸಮುದಾಯದ ಜನರು ಬೇರೆ ಧರ್ಮಕ್ಕೆ ಸೇರಿದ್ದಾರೆಂದು ಗ್ರಾಮದ ಜನರೆಲ್ಲ ಸೇರಿಕೊಂಡು ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಿರುವ ಆರೋಪ ಕೇಳಿ ಬಂದಿದೆ. ಗ್ರಾಮದ 9 ಕುಟುಂಬಗಳು ಬೇರೆ ಧರ್ಮಕ್ಕೆ ಮತಾಂತರಗೊಂಡಿವೆ ಎಂದು ಆ 9 ಕುಟುಂಬಗಳನ್ನು ಸಾಮಾಜಿಕವಾಗಿ ಬಹಿಷ್ಕಾರ ಹಾಕಿರುವ ಆರೋಪ ಕೇಳಿ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಅಧೀನ ಅಧಿಕಾರಿಗಳಿಗೆ ಕೊಡೆರ್ಮಾ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.
ಸಾಮರಸ್ಯಕ್ಕೆ ಸಮಸ್ಯೆ: ಛತಾರಾ ಗ್ರಾಮವು ಜಿಲ್ಲಾ ಕೇಂದ್ರದಿಂದ ಸುಮಾರು 45 ಕಿಲೋಮೀಟರ್ ಮತ್ತು ಬ್ಲಾಕ್ ಕೇಂದ್ರ ಕಚೇರಿಯಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿದೆ. ಅಲ್ಲದೇ ಬಿಹಾರ ರಾಜ್ಯಕ್ಕೆ ಬಹಳ ಹತ್ತಿರದಲ್ಲಿದೆ. ಜೊತೆಗೆ ಸರ್ಕಾರದ ನಿರ್ಲಕ್ಷ್ಯ ಹಾಗೂ ಸಡಿಲ ಆಡಳಿತದ ಪರಿಣಾಮ ಧಾರ್ಮಿಕ ಬೋಧಕರ ಚಟುವಟಿಕೆ ಇಲ್ಲಿ ಹೆಚ್ಚಾಗಿದೆ. ಇದರಿಂದಾಗಿ ಹಲವರು ಮತಾಂತರಗೊಳ್ಳುತ್ತಿದ್ದಾರೆ. ಅಂತವರನ್ನು ಪ್ರಶ್ನೆ ಮಾಡಿದರೆ ಸ್ವಯಂಪ್ರೇರಣೆಯಿಂದ ಮತಾಂತರಗೊಂಡಿರುವೆ ಅಂತ ಹೇಳಿಕೊಂಡು ಓಡಾಡುತ್ತಾರೆ. ಅಲ್ಲದೇ ಮತಾಂತರದ ಬಳಿಕ ಮೊದಲಿದ್ದ ಆರೋಗ್ಯ ಹಾಗೂ ಇತರ ಸಮಸ್ಯೆಗಳು ಇದೀಗ ದೂರವಾಗಿವೆ ಅಂತಲೂ ವಾದ ಮಾಡುತ್ತಾರೆ. ಗ್ರಾಮದಲ್ಲಿ ಸುಮಾರು 40 ಕುಟುಂಬಗಳು ವಾಸಿಸುತ್ತಿದ್ದು, ನಮಗೆ ತಿಳಿದ ಮಟ್ಟಿಗೆ ಇದಕ್ಕೂ ಮುನ್ನ ಒಂದೇ ಜಾತಿಯ ಮತ್ತು ಒಂದೇ ಧರ್ಮದ ಜನರು ಮಾತ್ರ ಇಲ್ಲಿ ವಾಸಿಸುತ್ತಿದ್ದರು. ಆದರೆ, 9 ಕುಟುಂಬಗಳು ಇನ್ನೊಂದು ಧರ್ಮವನ್ನು ಅಳವಡಿಸಿಕೊಂಡ ನಂತರ, ಗ್ರಾಮಸ್ಥರ ನಡುವಿನ ಪರಸ್ಪರ ಸಮನ್ವಯ ಮತ್ತು ಸಾಮರಸ್ಯಕ್ಕೆ ತೊಂದರೆಯಾಗುತ್ತಿದೆ. ಸುಖ-ದುಃಖದ ಸಮಯದಲ್ಲಿ ಬೇರೆ ಧರ್ಮವನ್ನು ಅಳವಡಿಸಿಕೊಂಡ 9 ಕುಟುಂಬಗಳನ್ನು ಭೇಟಿ ಮಾಡುವುದನ್ನು ಗ್ರಾಮದ ಉಳಿದ ಜನರು ನಿಲ್ಲಿಸಿದ್ದಾರೆ. ಪರಿಸ್ಥಿತಿ ಎಲ್ಲೇ ಮೀರುತ್ತದೆ ಎಂದು ಸ್ಥಳೀಯರೊಬ್ಬರು ಬೇಸರ ಹೊರಹಾಕಿದ್ದಾರೆ.
ಗ್ರಾಮಸ್ಥ ಉಪೇಂದ್ರ ಭೂನ್ಯಾ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಬರಾಚಟ್ಟಿ ಮತ್ತು ಬಿಹಾರದ ಇತರ ಪ್ರದೇಶಗಳಿಂದ ಧಾರ್ಮಿಕ ಪ್ರಚಾರಕರು ಈ ಗ್ರಾಮಕ್ಕೆ ಆಗಮಿಸುತ್ತಿದ್ದಾರೆ. ಅವರ ಪ್ರಭಾವದಿಂದ ಅನೇಕ ಗ್ರಾಮಸ್ಥರು ತಮ್ಮ ಧರ್ಮವನ್ನು ಬದಲಾಯಿಸಿಕೊಳ್ಳುತ್ತಿದ್ದಾರೆ. ಇದು ಸ್ಥಳೀಯ ಆಡಳಿತ ಮತ್ತು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈಗ ಪರಿಸ್ಥಿತಿ ಹೇಗಿದೆ ಎಂದರೆ ಹಳ್ಳಿಯ ಜನಸಂಖ್ಯೆಯ ಶೇಕಡಾ 80ರಷ್ಟು ಜನರು ಮತಾಂತರಗೊಂಡಿದ್ದಾರೆ. ಅಲ್ಲಲ್ಲಿ, ಅನೇಕ ಕುಟುಂಬಗಳು ತಮ್ಮ ಹಳೆಯ ಧರ್ಮಕ್ಕೆ ಮರಳುತ್ತಿವೆ ಎಂದರು.
ತನಿಖೆಗೆ ಆದೇಶ: ಗ್ರಾಮಸ್ಥರ ಮತಾಂತರ ಮತ್ತು ಸಾಮಾಜಿಕ ಬಹಿಷ್ಕಾರದ ವಿಷಯ ಬೆಳಕಿಗೆ ಬರುತ್ತಿದ್ದಂತೆ ಉಪ ಆಯುಕ್ತೆ ಮೇಘಾ ಭಾರದ್ವಾಜ್ ಅವರು ಚಂದ್ವಾರಾ ಬ್ಲಾಕ್ ಅಭಿವೃದ್ಧಿ ಅಧಿಕಾರಿಗೆ ತನಿಖೆ ನಡೆಸುವಂತೆ ಆದೇಶ ಹೊರಡಿಸಿದ್ದಾರೆ. ಜನರು ಸ್ವಇಚ್ಛೆಯಿಂದ ಬೇರೆ ಧರ್ಮವನ್ನು ಅಳವಡಿಸಿಕೊಂಡಿದ್ದಾರೆಯೇ ಅಥವಾ ಒತ್ತಡದಿಂದ ಹಾಗೆ ಮಾಡಿದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಅಲ್ಲದೇ ಸಾಮಾಜಿಕ ಬಹಿಷ್ಕಾರದ ವಿಷಯವನ್ನೂ ತನಿಖೆ ಮಾಡಲಾಗುತ್ತದೆ. ತನಿಖೆಯ ಬಳಿಕ ಪೂರ್ಣ ಮಾಹಿತಿ ವದಗಿಸುವುದಾಗಿ ಉಪ ಆಯುಕ್ತರು ತಿಳಿಸಿದ್ದಾರೆ.
ಇದನ್ನೂ ಓದಿ: ಮತಾಂತರಕ್ಕೆ ಕುಮ್ಮಕ್ಕು ಆರೋಪ: ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್ - CONVERSION ALLEGATION CASE