ಗೋಪೇಶ್ವರ್ (ಉತ್ತರಾಖಂಡ); ಮದುವೆ ಸಮಾರಂಭದಿಂದ ವಾಪಸ್ ಆಗುತ್ತಿದ್ದ ಐವರು ಪ್ರಯಾಣಿಸುತ್ತಿದ್ದ ಕಾರು ಶುಕ್ರವಾರ ಚಮೋಲಿ ಜಿಲ್ಲೆಯಲ್ಲಿ ಕಮರಿಗೆ ಬಿದ್ದು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಾರೀ ಬಿರುಗಾಳಿ ಹಾಗೂ ಮಳೆಯಾಗುತ್ತಿದೆ. ಇದು ಭಾರಿ ಅನಾಹುತಗಳಿಗೂ ಕಾರಣವಾಗುತ್ತಿದೆ. ಈ ನಡುವೆ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳವರೆಗೆ ಮಳೆ ಎಚ್ಚರಿಕೆಯನ್ನು ನೀಡಿದೆ ಎಂದು ಚಮೋಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಬಿರ್ಹಿ ಕಣಿವೆಯ ನಿಜಮುಲಾ ಗ್ರಾಮದ ಬಳಿ ಅಪಘಾತದ ಬಗ್ಗೆ ಮಾಹಿತಿ ಪಡೆದ ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್ಡಿಆರ್ಎಫ್), ಪೊಲೀಸ್ ಮತ್ತು ಕಂದಾಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ ಸಂದೀಪ್ ತಿವಾರಿ ಮಾಹಿತಿ ನೀಡಿದ್ದಾರೆ ನಿರಂತರ ಮಳೆ ಮತ್ತು ಕತ್ತಲೆಯಿಂದಾಗಿ ಅಪಘಾತದ ಸ್ಥಳದಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯ ಕೈಗೊಳ್ಳುವಲ್ಲಿ ಸವಾಲುಗಳು ಎದುರಾಗಿವೆ ಎಂದು ತಿಳಿದು ಬಂದಿದೆ.
ಆಳವಾದ ಕಂದಕಕ್ಕೆ ಬಿದ್ದಿರುವ ವಾಹನ ಹಾಗೂ ಮೃತರ ಶವಗಳನ್ನು ಹೊರತೆಗೆಯುವ ಕಾರ್ಯ ಮುಂದುವರೆದಿದೆ. ಸಂಜೆ 6 ರಿಂದ 7 ರ ನಡುವೆ ಅಪಘಾತ ಸಂಭವಿಸಿದ್ದು, ಕಾರು ನೂರಾರು ಮೀಟರ್ ಆಳಕ್ಕೆ ಬಿದ್ದಿದೆ. ಹವಾಮಾನ ವೈಪರೀತ್ಯದಿಂದಾಗಿ ಆಡಳಿತ ಮಂಡಳಿಗೆ ಘಟನೆಯ ಸುದ್ದಿ ತಡವಾಗಿ ತಲುಪಿದೆ ಎಂದು ಹೇಳಲಾಗುತ್ತಿದೆ. ಏತನ್ಮಧ್ಯೆ, ಜಿಲ್ಲೆಯಲ್ಲಿ ಮಳೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಅಲ್ಲಿನ ಜಿಲ್ಲಾಧಿಕಾರಿಗಳು ಅಂಗನವಾಡಿ ಕೇಂದ್ರಗಳು ಮತ್ತು ಶಾಲೆಗಳಿಗೆ ರಜೆ ಘೋಷಿಸಿದ್ದಾರೆ.
ಪ್ರತಿಕೂಲ ಹವಾಮಾನದ ಕಾರಣ ಅಗತ್ಯ ಬಿದ್ದರೆ ಮಾತ್ರ ಜನರು ಪ್ರಯಾಣ ಮಾಡಲು ಮುಂದಾಗಬೇಕು. ಅನಗತ್ಯವಾಗಿ ಮನೆಯಿಂದ ಹೊರ ಬರಬೇಡಿ ಹಾಗೂ ದೂರ ಪ್ರಯಾಣ ಮಾಡಬೇಡಿ ಎಂದು ಡಿಸಿ ತಿವಾರಿ ಜನರಲ್ಲಿ ಮನವಿ ಮಾಡಿದ್ದಾರೆ.
ರಸ್ತೆ ಅಪಘಾತದ ಬಗ್ಗೆ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸೂಕ್ತ ಪರಿಹಾರದ ಮೊತ್ತವನ್ನು ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.
ಇದನ್ನು ಓದಿ: 20 ತಿಂಗಳ ಬಳಿಕ ಪುರಾತನ ದ್ರೌಪದಿ ಅಮ್ಮನ್ ದೇಗುಲ ಓಪನ್: ದೂರ ಉಳಿದ ನಿರ್ದಿಷ್ಟ ಸಮುದಾಯದ ಜನ