ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅವರ ಭಾರತೀಯ ಮೂಲದ ಪತ್ನಿ ಉಷಾ ವ್ಯಾನ್ಸ್ ಇಂದಿನಿಂದ ನಾಲ್ಕು ದಿನಗಳ ಕಾಲ ಭಾರತದ ಪ್ರವಾಸಕ್ಕೆ ಮುಂದಾಗಿದ್ದು, ದೆಹಲಿಗೆ ಬಂದಿಳಿದಿದ್ದಾರೆ. ಭಾರತಕ್ಕೆ ಇದು ಅವರ ಮೊದಲ ಭೇಟಿಯಾಗಿದೆ.
ಇಂದು ಬೆಳಗ್ಗೆ 9.30ರ ಸುಮಾರಿಗೆ ಪಾಲಂ ವಾಯುನೆಲೆಯಲ್ಲಿ ಇಳಿದ ಅವರಿಗೆ ಸರ್ಕಾರಿ ಗೌರವದ ಮೂಲಕ ಔಪಚಾರಿಕವಾಗಿ ಅದ್ದೂರಿ ಸ್ವಾಗತ ಕೋರಲಾಯಿತು. ಇಂದು ಸಂಜೆ ಸುಮಾರು 6.30ಕ್ಕೆ ಉಪರಾಷ್ಟ್ರಪತಿ ಜೊತೆ 7ಕ್ಕೆ ಪ್ರಧಾನಿ ನರೇಂದ್ರ ಮೋದಿ ಜೊತೆಗೆ ಅವರ ಅಧಿಕೃತ ನಿವಾಸದಲ್ಲಿ ಔಪಚಾರಿಕ ಸಭೆ ನಡೆಸಲಿದ್ದಾರೆ.
ಈ ವೇಳೆ ಅವರು ಎರಡು ದೇಶಗಳ ನಡುವಿನ ಆರ್ಥಿಕತೆ, ವ್ಯಾಪಾರ ಮತ್ತು ರಕ್ಷಣೆ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಿದ್ದಾರೆ. ಇದಾದ ಬಳಿಕ ವ್ಯಾನ್ಸ್ ಕುಟುಂಬ ಮಂಗಳವಾರ ಜೈಪುರಕ್ಕೆ ಬಳಿಕ ಏಪ್ರಿಲ್ 23ರಂದು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ.
ಆಗ್ರಾಕ್ಕೆ ಭೇಟಿ ನೀಡಲಿರುವ ಉಪಾಧ್ಯಕ್ಷ ವ್ಯಾನ್ಸ್ ಕುಟುಂಬ ವಿಶ್ವಪ್ರಸಿದ್ಧ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ತಾಜ್ ಮಹಲ್ ಸೌಂದರ್ಯವನ್ನು ಆಹ್ಲಾದಿಸಲಿದ್ದಾರೆ. 2020ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಡೊನಾಲ್ಡ್ ಟ್ರಂಪ್ ಕೂಡ ಪ್ರಥಮ ಮಹಿಳೆ ಮೆಲಾನಿಯಾ ಟ್ರಂಪ್ ಅವರೊಂದಿಗೆ ತಾಜ್ ಮಹಲ್ಗೆ ಭೇಟಿ ನೀಡಿದರು.
ಬಿಗಿ ಭದ್ರತೆ: ವ್ಯಾನ್ಸ್ ಕುಟುಂಬದ ಆಗಮನದ ಹಿನ್ನೆಲೆ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಶಿಷ್ಟಾಚಾರದ ಅನುಸಾರ ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದ್ದು, ಯಾವುದೇ ಲೋಪ ಅಥವಾ ಅಹಿತಕರ ಘಟನೆಯಾಗದಂತೆ ನಿಗಾ ವಹಿಸಲಾಗಿದೆ. ದೆಹಲಿಯ ವಿವಿಧ ಪ್ರದೇಶಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೆಹಲಿಗೆ ಬಂದಿಳಿದಿರುವ ಅವರು ಅಕ್ಷರಧಾಮ ದೇಗಲಕ್ಕೆ ಭೇಟಿ ನೀಡಲಿದ್ದಾರೆ. ಅವರ ಪ್ರವಾಸದ ವೇಳೆಯಲ್ಲಿ ಟ್ರಾಫಿಕ್ ಸಮಸ್ಯೆ ಕುರಿತಂತೆಯೂ ಕೂಡ ಕ್ರಮ ಗಮನ ಹರಿಸಲಾಗಿದೆ. ಸಾಂಪ್ರದಾಯಿಕ ಭಾರತೀಯ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಶಾಪಿಂಗ್ ಕಾಂಪ್ಲೆಕ್ಸ್ಗೆ ಭೇಟಿ ನೀಡಲಿದ್ದಾರೆ.
ಏಪ್ರಿಲ್ 24ರಂದು ತಮ್ಮ ಪ್ರವಾಸ ಮುಕ್ತಾಯವನ್ನು ವಾನ್ಸ್ ಕುಟುಂಬ ಮಾಡಲಿದೆ. ಈ ಭೇಟಿಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧಗಳ ಕುರಿತು ಮಾತುಕತೆ ನಡೆಸಲಿದ್ದು, ಇದು ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಉಷಾ ನಿರೀಕ್ಷೆಯಲ್ಲಿ ಸ್ವಗ್ರಾಮ: ವಾನ್ಸ್ ಕುಟುಂಬ ಭಾರತಕ್ಕೆ ಭೇಟಿ ನೀಡುತ್ತಿರುವ ಹಿನ್ನೆಲೆ ಉಷಾ ಅವರ ಹುಟ್ಟೂರಾದ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ವಡ್ಲೂರಿನಲ್ಲಿ ಸಂತಸ ಮನೆಮಾಡಿದೆ. ಅವರು ತಮ್ಮ ಪೂರ್ವಜರ ಸ್ಥಳಕ್ಕೆ ಭೇಟಿ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.
ಇದನ್ನೂ ಓದಿ: ಏಪ್ರಿಲ್ 21ಕ್ಕೆ ಜೈಪುರಕ್ಕೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ದಂಪತಿ; ಅದ್ಧೂರಿ ಸ್ವಾಗತಕ್ಕೆ ಸಿದ್ಧತೆ
ಇದನ್ನೂ ಓದಿ: ಅಮೆರಿಕಾ ಪ್ರವಾಸದಲ್ಲಿ ರಾಹುಲ್ ಗಾಂಧಿ: ಅನಿವಾಸಿ ಭಾರತೀಯರು, ಉದ್ಯಮಿಗಳ ಜೊತೆ ಸಂವಾದ