ಹೈದರಾಬಾದ್(ತೆಲಂಗಾಣ): ಆಕೆ ಬಡತನದಲ್ಲಿ ಹುಟ್ಟಿ ಬೆಳೆದ ಹುಡುಗಿ. ಬಾಲ್ಯದಿಂದಲೇ ಸಿಕಲ್ ಸೆಲ್ ಅನಿಮಿಯಾ ಎಂಬ ಖಾಯಿಲೆ ಆಕೆಯನ್ನು ಹಿಂಡಿ ಹಿಪ್ಪೆ ಮಾಡಿದೆ. ಇಂಥ ಪರಿಸ್ಥಿತಿಯಲ್ಲಿ ನಿನಗೆ ಶಿಕ್ಷಣದ ಹಪಹಪಿ ಏಕೆ? ಎಂದು ಹೇಳಿದವರೇ ಹೆಚ್ಚಂತೆ. ಹೀಗಿದ್ದರೂ ಕಲಿಕೆ ನಿಲ್ಲಿಸಲಿಲ್ಲ. ಇಡೀ ದೇಹವನ್ನೇ ನೋವು ಆವರಿಸಿದರೂ ಛಲ, ಆತ್ಮವಿಶ್ವಾಸ ಆಕೆಯಲ್ಲಿ ಕಮ್ಮಿಯಾಗಲಿಲ್ಲ. ಈ ಯುವತಿಯ ಹೆಸರು ಜಂಗಮ್ ಜ್ಯೋತಿ ಸಿರಿಶಾ.
"ನಾವು ಖಮ್ಮಮ್ ಜಿಲ್ಲೆಯ ಮಿಟ್ಟಪಳ್ಳಿ ಗ್ರಾಮದವರು. ನನ್ನ ತಂದೆ ಕಲ್ಲುಕುಟಿಗನಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಶರಮ್ಮ ಕೃಷಿ ಕೂಲಿ ಕೆಲಸ ಮಾಡುತ್ತಾರೆ. ತಂಗಿ ಸ್ಪಂದನಾ ಪದವಿ ಶಿಕ್ಷಣ ಮುಗಿಸಿದ್ದು, ನೌಕರಿಗೆ ಹುಡುಕಾಟ ಮಾಡುತ್ತಿದ್ದಾಳೆ. ನನಗೆ ಬಾಲ್ಯದಿಂದಲೇ ಕಲಿಕೆಯಲ್ಲಿ ಅತೀವ ಆಸಕ್ತಿ. ನಾನು ಶಿಕ್ಷಣವನ್ನು ಮನಸಾರೆ ಪ್ರೀತಿಸುತ್ತೇನೆ. ಖಾಸಗಿ ಶಾಲೆಯಲ್ಲಿ ಓದುವಷ್ಟು ಹಣಕಾಸಿನ ಶಕ್ತಿ ನಮ್ಮಲ್ಲಿರಲಿಲ್ಲ. ಹಾಗಾಗಿ ಗುರುಕುಲ ಶಾಲೆಯಲ್ಲಿ ಶಿಕ್ಷಣ ಪಡೆದೆ. ಸಾರ್ವತ್ರಿಕ ಶಿಕ್ಷಣ (Universal Education) ವ್ಯವಸ್ಥೆಯಲ್ಲೇ ಪದವಿ ಶಿಕ್ಷಣವನ್ನೂ ಪೂರೈಸಿದೆ. ಒಸ್ಮಾನಿಯಾದಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣ ಪಡೆದ ನಂತರ ನಾನು ಟಿಟಿಸಿ ಮತ್ತು ಬಿ.ಎಡ್ ಮಾಡಿದೆ. ನಂತರ ನಾಗರಿಕ ಸೇವಾ ಪರೀಕ್ಷೆ ಸೇರಿದಂತೆ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದೆ. ಹೀಗೆ ನನ್ನ ಶೈಕ್ಷಣಿಕ ಅರ್ಹತೆಯನ್ನು ನಿರಂತರವಾಗಿ ಸುಧಾರಿಸಿಕೊಂಡೇ ಮುಂದೆ ಬಂದೆ".
"ನನ್ನ ಶೈಕ್ಷಣಿಕ ಜೀವನ ಆರಾಮದಾಯಕವಾಗೇನೂ ಇರಲಿಲ್ಲ. ನಾನು ಸಿಕಲ್ ಸೆಲ್ ಅನಿಮಿಯಾ (ಗಂಭೀರ ಸ್ವರೂಪ) ಖಾಯಿಲೆಯ ಸಂತ್ರಸ್ತೆ. 6ನೇ ತರಗತಿಯಲ್ಲಿರುವಾಗಲೇ ವೈದ್ಯರು ನನಗೆ ಈ ಸಮಸ್ಯೆ ಇರುವುದನ್ನು ಪತ್ತೆ ಹಚ್ಚಿದ್ದರು. ನನ್ನ ದೇಹದಲ್ಲಿ ಆಗಾಗ್ಗೆ ರಕ್ತ ಕಡಿಮೆಯಾಗತೊಡಗಿತು. ಮತ್ತು ನನ್ನ ಕಾಲುಗಳು ಮತ್ತು ಕೈಗಳು ಊದಿಕೊಳ್ಳತೊಡಗಿದವು. ಇದರ ಜೊತೆಗೆ, ತಲೆನೋವು. ದೇಹದ ಎಲುಬುಗಳಿಗೆ ಸೂಜಿಯಲ್ಲಿ ಚುಚ್ಚಿದಂಥ ನೋವು ನನ್ನನ್ನು ಪದೇ ಪದೇ ಕಾಡುತ್ತಿತ್ತು. ಇದರೊಂದಿಗೆ ಹೋರಾಟ ನಡೆಸುತ್ತಾ ಹಲ್ಲು ಕಚ್ಚಿಕೊಂಡು ಛಲದಿಂದ ಶಿಕ್ಷಣ ಮುಂದುವರೆಸಿದೆ. ನನ್ನ ಗುರಿಯೆಡೆ ದಿಟ್ಟ ಹೆಜ್ಜೆ ಹಾಕುತ್ತಿದ್ದೇನೆ. ನಾನು ಹಲವು ಬಾರಿ ಆಸ್ಪತ್ರೆಗಳಿಗೆ ಹೋಗುತ್ತಿದ್ದೇನೆ. ನನಗೆ ಇಲ್ಲಿಯವರೆಗೆ 50 ಬಾರಿ ರಕ್ತ ವರ್ಗಾವಣೆ ಮಾಡಲಾಗಿದೆ ಎಂದರೆ ನೀವು ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬಹುದು."
"ನನ್ನ ಕುಟುಂಬ ರಕ್ತ ವರ್ಗಾವಣೆಗಾಗಿ ಭಯ, ಆತಂಕಪಡುತ್ತಿಲ್ಲ. ಆದರೆ, ನನ್ನ ಈ ಸಮಸ್ಯೆಗಳಿಂದಾಗಿ ಸಂಬಂಧಿಕರು ಮತ್ತು ಸ್ನೇಹಿತರಿಂದ ಸಾಕಷ್ಟು ಬಾರಿ ಅವಮಾನ ಎದುರಿಸಬೇಕಾಯಿತು. ಇದರ ನಡುವೆಯೂ ನನ್ನ ಪೋಷಕರು ನನಗೆ ಪ್ರೋತ್ಸಾಹ ನೀಡಿದರು. ಅವರು ಕೃಷಿ, ಕೂಲಿ ಕೆಲಸ ಮಾಡುತ್ತಿದ್ದರೂ ನನ್ನನ್ನು ಬೆಂಬಲಿಸುವುದರಲ್ಲಿ ಯಾವತ್ತೂ ಹಿಂದೆ ಬೀಳಲಿಲ್ಲ. ನಾನು ನನ್ನ ಶಿಕ್ಷಣ ಮುಗಿಸಿದ ಬಳಿಕ ತರಬೇತಿ ಪಡೆದು ನಾಗರಿಕ ಸೇವಾ ಪರೀಕ್ಷೆ ಮತ್ತು ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಿದೆ. ನಾನೊಬ್ಬ ವಿಜಯಶಾಲಿ ಆಗಲೇಬೇಕು ಎಂಬ ಬದ್ಧತೆ ಮತ್ತು ಹಠದಿಂದ ಬದುಕಿನಲ್ಲಿ ಮುಂದುವರೆಯುತ್ತಿದ್ದೇನೆ. ಈ ಪ್ರಕ್ರಿಯೆಯಲ್ಲಿ, ನನಗೆ ಸಹಾಯಹಸ್ತ ಚಾಚಿದ ಗೆಳೆಯರು ಮತ್ತು ನನ್ನ ಚಿಕ್ಕಪ್ಪನನ್ನು ಎಂದೂ ಮರೆಯಲಾರೆ".
"ಕಳೆದ ವರ್ಷ ನಾನು ಗ್ರೂಪ್-4 ನೌಕರಿಗೆ ಆಯ್ಕೆಯಾಗಿದ್ದೆ. ಇದೇ ಸಂದರ್ಭದಲ್ಲಿ ಗುರುಕುಲ ಟೀಚರ್ ಹುದ್ದೆಗಳ ಪರೀಕ್ಷೆಯಲ್ಲಿ ನನಗೆ ಉತ್ತಮ ರ್ಯಾಂಕ್ ಬಂದಿತ್ತು. ಹಾಗಾಗಿ, ನಾನು ಗ್ರೂಪ್-4ರ ಉದ್ಯೋಗವನ್ನು ನಿರಾಕರಿಸಿ, ದನವೈಗುಡೆಮ್ನ ಬಿ.ಸಿ (BC) ಗುರುಕುಲದಲ್ಲಿ ಶಿಕ್ಷಕಿಯಲ್ಲಿ ಸೇರಿಕೊಂಡೆ. ಇದಾಗಿ ಮೂರು ತಿಂಗಳ ನಂತರ, ಕಳೆದ ಅಕ್ಟೋಬರ್ ತಿಂಗಳಲ್ಲಿ ಡಿಎಸ್ಸಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿತು. ನಾನು ಸಮಾಜ ವಿಜ್ಞಾನ ಸಹಾಯಕ ಶಿಕ್ಷಕಿ (Social Studies School Assistant)ಯಾದೆ. ಸದ್ಯಕ್ಕೆ ವೈರ ಸರ್ಕಾರಿ ಹೆಣ್ಣುಮಕ್ಕಳ ಹೈಸ್ಕೂಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಕಳೆದ ವರ್ಷದ ಮಾರ್ಚ್ ತಿಂಗಳಲ್ಲಿ ICDS Extension Officer ಆಗಿಯೂ ಆಯ್ಕೆಯಾದೆ. ಇದರ ಹೊರತಾಗಿ ಇತ್ತೀಚೆಗೆ ಹೊರಬಂದ ಗ್ರೂಪ್ 1 ಪರೀಕ್ಷಾ ಫಲಿತಾಂಶದಲ್ಲಿ 450.5 ಅಂಕಗಳೊಂದಿಗೆ ರಾಜ್ಯಕ್ಕೆ 604ನೇ ರ್ಯಾಂಕ್ ಗಳಿಸಿದ್ದೇನೆ. ನಾನು ನನ್ನ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಲಾರೆ. ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗುವುದು ನನ್ನ ಬದುಕಿನ ಬಹುದೊಡ್ಡ ನನ್ನ ಗುರಿ. ಸದ್ಯಕ್ಕೆ ವೈದ್ಯರ ಸಲಹೆ, ಸೂಚನೆಗಳಂತೆ ನನ್ನ ಆರೋಗ್ಯವೂ ಚೇತರಿಕೆ ಕಾಣುತ್ತಿದೆ. ನನ್ನ ಯಶಸ್ಸು ಕೆಲವು ಜನರ ಮನೋಭಾವನನ್ನು ಬದಲಿಸಬೇಕು, ಬದಲಾವಣೆಗೆ ಕಾರಣವಾಗಬೇಕು ಎಂಬುದೇ ನನ್ನ ಆಶಯ" ಎನ್ನುತ್ತಾರೆ ಜಂಗಮ್ ಜ್ಯೋತಿ ಸಿರಿಶಾ.