ಜೋಧ್ಪುರ (ರಾಜಸ್ಥಾನ): ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯ ಪರಾಕ್ರಮವನ್ನು ಮದರಸಾಗಳ ಪಠ್ಯಕ್ರಮದಲ್ಲಿ ಸೇರಿಸಲು ರಾಜಸ್ಥಾನ ಮದರಸಾ ಶಿಕ್ಷಣ ಮಂಡಳಿ ನಿರ್ಧರಿಸಿದೆ. "ತಮ್ಮ ಆಶ್ರಯದಲ್ಲಿ ನಡೆಯುವ ಮದರಸಾಗಳ ಪಠ್ಯಕ್ರಮದಲ್ಲಿ 'ಆಪರೇಷನ್ ಸಿಂಧೂರ್' ಅನ್ನು ಸೇರಿಸಲು ಸಿದ್ಧತೆ ನಡೆಸುತ್ತಿರುವುದಾಗಿ" ಮದರಸಾ ಮಂಡಳಿಯ ಅಧ್ಯಕ್ಷ ಚೋಪ್ ದಾರ್ ಅವರು ಶುಕ್ರವಾರ ಬಹಿರಂಗಪಡಿಸಿದ್ದಾರೆ.
ಜೋಧ್ಪುರದ ಸರ್ಕ್ಯೂಟ್ನಲ್ಲಿ ನಡೆದ ಅನೌಪಚಾರಿಕ ಸಂಭಾಷಣೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಚೋಪ್ ದಾರ್, "ನಮ್ಮ ಸೇನಾ ಪಡೆಗಳು ಆಪರೇಷನ್ ಸಿಂಧೂರ್ ಮೂಲಕ ತೋರಿಸಿದ ಶೌರ್ಯವನ್ನು ಮದರಸಾ ಮಕ್ಕಳಿಗೂ ಕಲಿಸಬೇಕು ಎಂಬುವುದು ನನ್ನ ಬಯಕೆ. ನಾನು ಕೂಡ ಸೇನಾ ಕುಟುಂಬದಿಂದ ಬಂದವನಾಗಿದ್ದರಿಂದ ರಾಜಸ್ಥಾನ ಮದರಸಾ ಮಂಡಳಿಯ ಅಡಿ ನಡೆಯುವ ಮದರಸಾಗಳಲ್ಲಿನ ಪಠ್ಯಕ್ರಮದಲ್ಲಿ 'ಆಪರೇಷನ್ ಸಿಂಧೂರ' ಅನ್ನು ಸೇರಿಸುವ ಸಿದ್ಧತೆಗಳು ನಡೆಯುತ್ತಿವೆ" ಎಂದರು.
ಪಠ್ಯಕ್ರಮದಲ್ಲಿ ಏನೇನಿದೆ?: "ಕರ್ನಾಲ್ ಸೋಫಿಯಾ ಮೊದಲ ಬಾರಿಗೆ ಇಷ್ಟು ದೊಡ್ಡ ಕಾರ್ಯಾಚರಣೆಯ ಮುಂದಾಳತ್ವ ವಹಿಸಿದ್ದು ಹೆಮ್ಮೆ ಪಡುವ ವಿಷಯ. ನಾವು ಸಾಧ್ಯವಾದಷ್ಟು ಮುಸ್ಲಿಂ ಮಕ್ಕಳಿಗೆ ಅವರ ಬಗ್ಗೆ ಹೇಳಲು ಪ್ರಯತ್ನಿಸುತ್ತೇವೆ. ಆಪರೇಷನ್ ಸಿಂಧೂರ ಅಂದ್ರೆ ಏನು? ಇದನ್ನು ಏಕೆ ಪ್ರಾರಂಭಿಸಲಾಯ್ತು? ಭಾರತದ ಸೈನಿಕರ ಪರಾಕ್ರಮ, ತ್ಯಾಗ, ಬಲಿದಾನ ಹೇಗಿತ್ತು ಎಂಬ ಸಂಪೂರ್ಣ ವಿವರವನ್ನು ಪಠ್ಯದ ರೂಪದಲ್ಲಿ ಮಕ್ಕಳಿಗೆ ಕಲಿಸಲು ಪ್ರಯತ್ನಿಸಲಾಗುತ್ತಿದೆ. ಇದರಿಂದ ಮಕ್ಕಳ ಭವಿಷ್ಯವೂ ಸುಧಾರಿಸುತ್ತದೆ. ಇದಕ್ಕಾಗಿ ನಾವು ಮಾಧ್ಯಮಿಕ ಶಿಕ್ಷಣ ಮಂಡಳಿಯೊಂದಿಗೆ ಮಾತನಾಡಿ ಪಠ್ಯಕ್ರಮದಲ್ಲಿ ಸೇರಿಸುವ ಸಿದ್ಧತೆ ನಡೆಸುತ್ತಿದ್ದೇವೆ. ಅಲ್ಲದೇ, ಮಕ್ಕಳೊಂದಿಗೂ ಕೂಡ ಸಭೆ ನಡೆಸಿ ಅವರಿಗೆ ಅದರ ಬಗ್ಗೆ ತಿಳಿಸುತ್ತೇವೆ. ವಿಶೇಷವಾಗಿ ಹುಡುಗಿಯರು ಇದರ ಬಗ್ಗೆ ತಿಳಿದುಕೊಳ್ಳಬೇಕು. ಕರ್ನಲ್ ಸೋಫಿಯಾ ಮುಸ್ಲಿಂ ಸಮುದಾಯದ ಹೆಣ್ಣು ಮಗಳಾಗಿದ್ದು, ಅಂತಹ ಉನ್ನತ ಹುದ್ದೆಯನ್ನು ಹೊಂದಿದ್ದಾರೆ. ಇದು ಸಮಾಜ ಮತ್ತು ಮಕ್ಕಳಲ್ಲಿ ಜಾಗೃತಿಯ ಜೊತೆಗೆ ಪ್ರೇರಣೆ ತುಂಬುವ ಸಂದೇಶ" ಎಂದರು.
"ಮದರಸಾಗಳಿಗೆ 10ನೇ ತರಗತಿಯ ಮಾನ್ಯತೆ ಸಿಗಬೇಕು: ರಾಜಸ್ಥಾನ ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಡಿ 3,700 ಮದರಸಾಗಳು ನಡೆಯುತ್ತಿವೆ. ಪ್ರಸ್ತುತ, 8ನೇ ತರಗತಿಯವರೆಗೆ ಶಿಕ್ಷಣವನ್ನು ನೀಡಲಾಗುತ್ತದೆ. ಮದರಸಾಗಳ ಮಾನ್ಯತೆಯನ್ನು 10ನೇ ತರಗತಿಯವರೆಗೆ ವಿಸ್ತರಿಸಬೇಕು ಎಂದು ನಾನು ಈ ಹಿಂದಿನ ಸರ್ಕಾರಕ್ಕೂ ಒತ್ತಾಯಿಸಿದ್ದೆ. ಈಗಿನ ಸರ್ಕಾರಕ್ಕೂ ಕೂಡ ಒತ್ತಾಯಿಸುತ್ತಿದ್ದೇನೆ. ಇದರಿಂದ 8ನೇ ತರಗತಿಯ ನಂತರ ಶಾಲೆ ಬಿಡುವುದನ್ನು ನಿಯಂತ್ರಿಸಬಹುದು. ಇಲ್ಲಿ ಧಾರ್ಮಿಕ ಶಿಕ್ಷಣದ ಜೊತೆಗೆ ಮಾನವೀಯತೆ ಕಲಿಸಲಾಗುತ್ತದೆ" ಎಂದರು.
"ಈ ಹಿಂದಿನ ಸರ್ಕಾರವು ಮದರಸಾ ಮಂಡಳಿಯಲ್ಲಿ 5,000ಕ್ಕೂ ಹೆಚ್ಚು ಪ್ಯಾರಾ-ಶಿಕ್ಷಕರನ್ನು ಖಾಯಂಗೊಳಿಸಲು ಆದೇಶಿಸಿತ್ತು. ಆದರೆ, ಅದೇಕೋ ಅಷ್ಟಕ್ಕೆ ನಿಂತುಹೋಯಿತು. ಈಗಿನ ಸರ್ಕಾರವು ಆ ನಿರ್ಧಾರಕ್ಕೆ ಬದ್ಧವಾಗಿದೆ. ಆದರೆ, ಭ್ರಷ್ಟ ಅಧಿಕಾರಿಗಳು ಇದಕ್ಕೆ ಅಡ್ಡಿಯಾಗುತ್ತಿದ್ದಾರೆ. ಅವರು ನಿರಂತರವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದ್ದಾರೆ. ಉತ್ತಮ ಶಿಕ್ಷಕರು ಮತ್ತು ಸರಿಯಾದ ದಾಖಲೆಗಳನ್ನು ಹೊಂದಿರುವವರನ್ನು ಖಾಯಂಗೊಳಿಸಬೇಕು ಎಂದು" ಚೋಪ್ ದಾರ್ ಇದೇ ವೇಳೆ ಒತ್ತಾಯಿಸಿದರು.
ಪಹಲ್ಗಾಮ್ನಲ್ಲಿ ಉಗ್ರರ ದಾಳಿ: ಏ. 22ರಂದು ಪಹಲ್ಗಾಮ್ನಲ್ಲಿ ಪಾಕಿಸ್ತಾನ ಪ್ರಾಯೋಜಿತ ಉಗ್ರರು 26 ಮಂದಿ ಪ್ರವಾಸಿಗರನ್ನು ಗುಂಡು ಹಾರಿಸಿ ಕೊಂದಿದ್ದರು. ಈ ಕ್ರೌರ್ಯಕ್ಕೆ ಪ್ರತೀಕಾರವಾಗಿ ಭಾರತದ ಸೇನಾಪಡೆಗಳು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಉಗ್ರರ ಅಡುಗು ತಾಣಗಳನ್ನು ಧ್ವಂಸಗೊಳಿಸಿದ್ದವು. ಅಷ್ಟೇ ಅಲ್ಲ, ಪಾಕ್ ವಾಯುಸೇನೆಯ ಪ್ರಮುಖ ನೆಲೆಗಳ ಮೇಲೂ ಕ್ಷಿಪಣಿ ದಾಳಿ ನಡೆಸಿದ್ದವು. ಇದಾದ ನಂತರದ ಬೆಳವಣಿಗೆಯಲ್ಲಿ ಉಭಯ ದೇಶಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದು, ಇದೀಗ ಅಂತಾರಾಷ್ಟ್ರೀಯ ಗಡಿಯಲ್ಲಿ ಶಾಂತಿ ನೆಲೆಸಿದೆ.
ಇದನ್ನೂ ಓದಿ: ಉತ್ತರಾಖಂಡದ ಮದರಸಾಗಳಲ್ಲಿ ಮಕ್ಕಳಿಗೆ 'ಆಪರೇಷನ್ ಸಿಂಧೂರ'ದ ಪಾಠ - UTTARAKHAND MADRASA CURRICULUM