ನವದೆಹಲಿ: ಕಳೆದ ತಿಂಗಳು ನಡೆದ ದೆಹಲಿ ಚುನಾವಣೆಯಲ್ಲಿ ಸೋಲು ಕಂಡ ಆಮ್ ಆದ್ಮಿ ಪಕ್ಷ (ಎಎಪಿ) ಇದೀಗ ಪಕ್ಷ ಸಂಘಟನೆಗೆ ಒತ್ತು ನೀಡಲು ಮುಂದಾಗಿದ್ದು, ರಾಜ್ಯಗಳ ಉಸ್ತುವಾರಿ ಹೊಣೆಯನ್ನು ಹಲವು ನಾಯಕರಿಗೆ ಹಂಚಿದೆ. ಕ್ಷೇತ್ರ ಗೆಲ್ಲುವಲ್ಲಿ ವಿಫಲರಾದ ಎಎಪಿ ಪ್ರಮುಖ ನಾಯಕರಿಗೆ ಇದೀಗ ಪಕ್ಷದ ಬಲಗೊಳಿಸುವ ಹೊಸ ಜವಾಬ್ದಾರಿ ನೀಡುವ ಮೂಲಕ ಸಕ್ರಿಯರನ್ನಾಗಿಸಿದೆ.
ದೆಹಲಿ ಘಟಕದ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ಸೌರಭ್ ಭಾರದ್ವಾಜ್ ನೇಮಕವಾಗಿದ್ದು, ಹಿರಿಯ ನಾಯಕ ಮನೀಶ್ ಸಿಡೋಡಿಯಾಗೆ ಪಂಜಾಬ್ನ ಉಸ್ತುವಾರಿ ನೀಡಲಾಗಿದೆ.
ಗೋಪಾಲ್ ರಾಯ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಭಾರದ್ವಾಜ್ಗೆ ಸ್ಥಾನ ನೀಡಲಾಗಿದೆ. ಇನ್ನು ಇಡೀ ದೇಶದಲ್ಲಿ ಎಎಪಿ ಸರ್ಕಾರ ಅಸ್ತಿತ್ವದಲ್ಲಿರುವ ಏಕೈಕ ರಾಜ್ಯವಾಗಿರುವ ಪಂಜಾಬ್ ರಾಜ್ಯದ ಎಎಪಿ ಉಸ್ತುವಾರಿ ಹೊಣೆಯನ್ನು ಸಿಸೋಡಿಯಾಗೆ ವಹಿಸಲಾಗಿದೆ.
ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ನಿವಾಸದಲ್ಲಿ ಸಾಗಿದ ಎಎಪಿಯ ರಾಜಕೀಯ ವಿಚಾರಗಳ ಸಮಿತಿ (ಪಿಎಸಿ)ಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಈ ಪದಾಧಿಕರಗಳ ಪಟ್ಟಿ ಬಿಡುಗಡೆ ಬೆನ್ನಲ್ಲೇ ಮಾತನಾಡಿರುವ ಎಎಪಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಸಂದೀಪ್ ಪಠಾಕ್, "ಸಭೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ. ಗೋಪಾಲ್ ರೈ ಅವರಿಗೆ ಗುಜರಾಜ್ ಹೊಣೆ ಹೊರಿಸಲಾಗಿದ್ದು, ಅಲ್ಲಿ ನಮ್ಮ ಪಕ್ಷದ ನೆಲೆಯನ್ನು ವಿಸ್ತರಿಸುವ ಗುರಿ ಹೊಂದಿದ್ದೇವೆ" ಎಂದು ತಿಳಿಸಿದ್ದಾರೆ.
ರಾಜ್ಯಸಭಾ ಸಂಸದರಾಗಿರುವ ಪಠಾಕ್ರಿಗೆ ಛತ್ತೀಸ್ಗಢ ಘಟಕದ ಉಸ್ತುವಾರಿ ನೀಡಲಾಗಿದ್ದು, ಪಂಕಜ್ ಗುಪ್ತಾ ಗೋವಾ ಉಸ್ತುವಾರಿ ನಿರ್ವಹಿಸಲಿದ್ದಾರೆ. ಮೆಹ್ರಾಜ್ ಮಲಿಕ್ರನ್ನು ಜಮ್ಮು ಮತ್ತು ಕಾಶ್ಮೀರ ಘಟಕದ ಪಕ್ಷದ ಮುಖ್ಯಸ್ಥರಾಗಿ ನೇಮಿಸಲಾಗಿದೆ.
ಇದನ್ನೂ ಓದಿ: ಜಗನ್ಮೋಹನ್ ರೆಡ್ಡಿ ಐಷಾರಾಮಿ ಬಂಗಲೆ ವಿಚಾರ: ನಾರಾ ಲೋಕೇಶ್ ಹೇಳಿದ್ದೇನು ನೋಡಿ