ಡೆಹ್ರಾಡೂನ್(ಉತ್ತರಾಖಂಡ): ಪವಿತ್ರ ಚಾರ್ಧಾಮ್ ಯಾತ್ರೆಗೆ ಆನ್ಲೈನ್ ನೋಂದಣಿ ಆರಂಭವಾಗಿದ್ದು, ಒಂದೇ ದಿನ ದಾಖಲೆ ಮಟ್ಟದ ನೋಂದಣಿ ನಡೆದಿದೆ.
ಉತ್ತರಾಖಂಡದ ಯಮುನೋತ್ರಿ, ಗಂಗೋತ್ರಿ, ಕೇದಾರನಾಥ ಹಾಗೂ ಬದರಿನಾಥಗಳನ್ನು ಒಟ್ಟಾಗಿ ಚಾರ್ ಧಾಮ್ ಯಾತ್ರೆ ಎಂದು ಕರೆಯಲಾಗುತ್ತದೆ. ಹಿಂದೂಗಳ ಪವಿತ್ರ ಯಾತ್ರೆಗಳಲ್ಲಿ ಇದು ಪ್ರಮುಖವಾಗಿದೆ.
ವರ್ಷದಲ್ಲಿ ಎರಡು ಬಾರಿ ಮಾತ್ರ ಈ ಯಾತ್ರೆಯನ್ನು ನಡೆಸಲಾಗುತ್ತದೆ. ಈ ಬಾರಿಯ ಬೇಸಿಗೆಯ ಯಾತ್ರೆ ಏಪ್ರಿಲ್ 30ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 20ರಿಂದ ಆನ್ಲೈನ್ ನೋಂದಣಿ ನಡೆಯುತ್ತಿದೆ. ಮೊದಲ ದಿನವೇ 1,65,292 ಭಕ್ತರು ಹೆಸರು ನೋಂದಾಯಿಸುವ ಮೂಲಕ ಕಳೆದ ವರ್ಷದ ದಾಖಲೆ ಮುರಿದಿದ್ದಾರೆ.
ಬೆಳಗ್ಗೆ 7ರಿಂದ ಸಂಜೆ 5ರವರೆಗೆ ನೋಂದಣಿ ನಡೆಯುತ್ತಿದೆ. ಕಳೆದ ವರ್ಷ ಮೊದಲ ದಿನ 1.50 ಲಕ್ಷ ನೋಂದಣಿಯಾಗಿತ್ತು. ನಾಲ್ಕು ಧಾಮದಲ್ಲಿ ಅತಿ ಹೆಚ್ಚು ಭಕ್ತರು ಕೇದಾರ್ನಾಥ್ಗೆ ನೋಂದಣಿ ಮಾಡಿದ್ದಾರೆ.
ಯಾವ ಯಾವ ಧಾಮಕ್ಕೆ ಎಷ್ಟು ಜನರಿಂದ ನೋಂದಣಿ:
- ಯಮುನೋತ್ರಿ ಧಾಮ: 30,224 ಭಕ್ತರು
- ಗಂಗೋತ್ರಿ ಧಾಮ: 30,933
- ಕೇದಾರನಾಥ್ ಧಾಮ: 53,570
- ಬದ್ರಿನಾಥ್ ಧಾಮ್: 49,385
- ಹೇಮಗುಂಡ್ ಸಹೀಬ್: 1,180
1,63,125 ಭಕ್ತರು ವೆಬ್ ಪೋರ್ಟಲ್ ಮೂಲಕ ನೋಂದಣಿ ಮಾಡಿದ್ದಾರೆ. ಮೊಬೈಲ್ ಆ್ಯಪ್ ಮೂಲಕ 3,167 ಮಂದಿ ನೋಂದಣಿ ಮಾಡಿದ್ದಾರೆ. ಭಕ್ತರು ತಮ್ಮ ವಾಹನದ ನೋಂದಣಿ ನಡೆಸುವುದು ಕಡ್ಡಾಯವಾಗಿದ್ದು, 1,750 ಖಾಸಗಿ ವಾಹನಗಳನ್ನು ನೋಂದಾಯಿಸಲಾಗಿದೆ.
ನೋಂದಣಿ ಪ್ರಕ್ರಿಯೆ ಸುಲಭಗೊಳಿಸಲು ಇದೇ ಮೊದಲ ಬಾರಿಗೆ ಆಧಾರ್ ಆಧಾರಿತ ದೃಢೀಕರಣವನ್ನು ಪರಿಚಯಿಸಲಾಗಿದೆ.
ಚಾರ್ಧಾಮ್ ಸ್ಥಳಗಳ ಬಾಗಿಲು ತೆರೆಯುವ ದಿನಾಂಕಗಳು:
- ಏಪ್ರಿಲ್ 30: ಗಂಗೋತ್ರಿ ಮತ್ತು ಯಮುನೋತ್ರಿ ಧಾಮ
- ಮೇ 2: ಕೇದಾರನಾಥ್ ಧಾಮ
- ಮೇ 4: ಬದ್ರಿನಾಥ್ ಧಾಮ
ಚಾರ್ಧಾಮ್ ಯಾತ್ರೆ ಮಾಡಲಿಚ್ಚಿಸುವ ಭಕ್ತರು ಟೂರಿಸ್ಟ್ ಕೇರ್ ಉತ್ತರಾಖಂಡ್ ಆ್ಯಪ್ ಅಥವಾ registrationandtouristcare.uk.gov.in ಇಲ್ಲಿ ನಡೆಸಬಹುದು.
ಇದನ್ನೂ ಓದಿ: ಜಗನ್ಮೋಹನ್ ರೆಡ್ಡಿ ಐಷಾರಾಮಿ ಬಂಗಲೆ ವಿಚಾರ: ನಾರಾ ಲೋಕೇಶ್ ಹೇಳಿದ್ದೇನು ನೋಡಿ
ಇದನ್ನೂ ಓದಿ: ಸೆಲ್ ಅಂಡ್ ಜೀನ್ ಥೆರಪಿ ಕ್ಷೇತ್ರಕ್ಕೆ ಕಾಲಿಟ್ಟ 'ಲಸಿಕೆಗಳ ಶೋಧಕ' ಭಾರತ್ ಬಯೋಟೆಕ್