ಅಲ್ಲೂರಿ ಸೀತಾರಾಮ ರಾಜು ಜಿಲ್ಲೆ(ಆಂಧ್ರ ಪ್ರದೇಶ): ಆಂಧ್ರ ಪ್ರದೇಶ ಡಿಸಿಎಂ ಪವನ್ ಕಲ್ಯಾಣ್ ಅವರು ಅಲ್ಲೂರಿ ಸೀತಾರಾಮ ರಾಜು ಜಿಲ್ಲೆಯ ದುಂಬ್ರಿಗುಡ ಮಂಡಲದ ಪೆದಪಾಡು ಗ್ರಾಮದ ಪ್ರತಿ ನಿವಾಸಿಗಳಿಗೆ ಪಾದರಕ್ಷೆಗಳನ್ನು ಕಳುಹಿಸಿದ್ದಾರೆ.
ಇತ್ತೀಚೆಗೆ ಪವನ್ ಕಲ್ಯಾಣ್, ಅರಕು ಮತ್ತು ದುಂಬ್ರಿಗುಡ ಪ್ರದೇಶಕ್ಕೆ ಎರಡು ದಿನದ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಪೆದಪಡು ಗ್ರಾಮಕ್ಕೆ ಭೇಟಿ ನೀಡಿದ್ದು, ಸ್ಥಳೀಯ ಸಮಸ್ಯೆಗಳನ್ನು ಆಲಿಸಿದ್ದರು. ಗ್ರಾಮದಲ್ಲಿನ ಹಿರಿಯ ಮಹಿಳೆಯರು ಬರಿಗಾಲಲ್ಲಿ ಇರುವುದನ್ನೂ ಈ ಸಂದರ್ಭದಲ್ಲಿ ಗಮನಿಸಿದ್ದಾರೆ. ಬರಿಗಾಲಲ್ಲಿರುವ ಜನರನ್ನು ಕಂಡು ವೈಯಕ್ತಿಕವಾಗಿ ಸಹಾನುಭೂತಿ ವ್ಯಕ್ತಪಡಿಸಿ, ಗ್ರಾಮದಲ್ಲಿ ಎಷ್ಟು ನಿವಾಸಿಗಳಿದ್ದಾರೆ ಎಂಬ ಮಾಹಿತಿಯನ್ನು ಅಧಿಕಾರಿಗಳಿಂದ ಪಡೆದರು. ಇದಾದ ಬಳಿಕ, ಗ್ರಾಮದ ಪ್ರತಿ ನಿವಾಸಿಗಳಿಗೂ ಪಾದರಕ್ಷೆ ಒದಗಿಸುವಂತೆ ಸೂಚಿಸಿದ್ದಾರೆ.
ಪವನ್ ಕಲ್ಯಾಣ್ ಅವರ ಈ ಕ್ರಮಕ್ಕೆ ಗ್ರಾಮಸ್ಥರು ಸಂತೋಷ ಮತ್ತು ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಸಂಕಷ್ಟವನ್ನು ಗುರುತಿಸಿ, ಸ್ಪಂದಿಸಿರುವುದು ಸಂತಸ ಮೂಡಿಸಿದೆ ಎಂದು ಕೆಲವು ಗ್ರಾಮಸ್ಥರು ಗದ್ಗದಿತರಾದರು. ಬೇರೆ ಯಾವುದೇ ನಾಯಕರು ನಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸಿರಲಿಲ್ಲ. ಗ್ರಾಮಕ್ಕೆ ಭೇಟಿ ನೀಡಿದ ಉಪ ಮುಖ್ಯಮಂತ್ರಿಗಳು, ನಮ್ಮ ಕಷ್ಟದ ಕುರಿತು ಅರಿಯಲು ಮುಂದಾಗಿದ್ದಾರೆ. ದುಂಬ್ರಿಗುಡದ ಗ್ರಾಮದಲ್ಲಿ ಮಾತ್ರವಲ್ಲ, ಪೆಡಪಡು ಗ್ರಾಮಸ್ಥರೂ ಕೂಡ ಡಿಸಿಎಂ ಅವರ ಈ ನಡೆಗೆ ಹರ್ಷ ವ್ಯಕ್ತಪಡಿಸಿದ್ದು, ಕೃತಜ್ಞತೆ ಸಲ್ಲಿಸಿದ್ದಾರೆ.
ಈ ಪ್ರವಾಸದ ಸಂದರ್ಭದಲ್ಲಿ ಪವನ್ ಕಲ್ಯಾಣ್ ಮಗ ಸಿಂಗಾಪುರದಲ್ಲಿ ಓದುತ್ತಿದ್ದ ಶಾಲೆಯಲ್ಲಿ ಅಗ್ನಿ ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಪ್ರವಾಸ ಪೂರ್ಣಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಪ್ರವಾಸ ಕೈಗೊಂಡು, ಅರಕು ಬಳಿಕ ಕುರಿಡಿ ಗ್ರಾಮಕ್ಕೆ ಭೇಟಿ ನೀಡಿ, ಜನರ ಸಮಸ್ಯೆಯನ್ನು ಆಲಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಸಿಂಗಾಪುರ ಶಾಲೆಯಲ್ಲಿ ಅಗ್ನಿ ಅವಘಡ: ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಮಗನಿಗೆ ಗಾಯ
ಇದನ್ನೂ ಓದಿ: ಆನೆ ದಾಳಿಯಿಂದಾಗಿ ದೇವಸ್ಥಾನಕ್ಕೆ ತೆರಳುತ್ತಿದ್ದ ಮೂವರು ಭಕ್ತರು ಬಲಿ: ಪವನ್ ಕಲ್ಯಾಣ್ ಕಳವಳ