ಚೆನ್ನೈ (ತಮಿಳುನಾಡು) : ಪಹಲ್ಗಾಮ್ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತದಲ್ಲಿ ಉಳಿದಿರುವ ಎಲ್ಲ ಪಾಕಿಸ್ತಾನಿ ಪ್ರಜೆಗಳನ್ನು ದೇಶ ತೊರೆಯಲು ಸೂಚನೆ ನೀಡಲಾಗಿದೆ. ಇದರ ಮಧ್ಯೆ ಆ ದೇಶದ ವ್ಯಕ್ತಿಯೊಬ್ಬ ಅನಾರೋಗ್ಯ ನಿಮಿತ್ತ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ.
ಆತನ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಬಳಿಕ, ಶ್ರೀಲಂಕಾಕ್ಕೆ ವಿಮಾನದಲ್ಲಿ ಸೋಮವಾರ ರವಾನಿಸಲಾಗಿದ್ದು, ಅಲ್ಲಿಂದ ಮಂಗಳವಾರ ಪಾಕಿಸ್ತಾನದ ಲಾಹೋರ್ಗೆ ಕಳುಹಿಸಲಾಯಿತು ಎಂದು ವಲಸೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚಿಕಿತ್ಸೆ ವೇಳೆ ನಿಧನ: ಪಾಕಿಸ್ತಾನದ ಸೈಯದ್ ಆರಿಫ್ (23) ಮೃತ ಯುವಕ. ಈತ ಶ್ವಾಸಕೋಶ ಮತ್ತು ಹೃದಯ ಸಮಸ್ಯೆ ಸಮಸ್ಯೆಯಿಂದ ಬಳಲುತ್ತಿದ್ದು, ವೈದ್ಯಕೀಯ ವೀಸಾದ ಮೇಲೆ ತಮಿಳುನಾಡಿನ ಚೆನ್ನೈಗೆ ಬಂದಿದ್ದ. ಕಳೆದ 2 ತಿಂಗಳಿನಿಂದ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಈ ವೇಳೆ ಆತ ಮೃತಪಟ್ಟಿದ್ದಾನೆ.
ಈ ನಡುವೆ ಪಹಲ್ಗಾಮ್ ಉಗ್ರ ದಾಳಿ ಹಿನ್ನೆಲೆ ಪಾಕಿಸ್ತಾನಿಗಳು ದೇಶ ತೊರೆಯುವಂತೆ ಕೇಂದ್ರ ಸರ್ಕಾರ ಸೂಚಿಸಿರುವ ಹಿನ್ನೆಲೆ, ಆತನ ಮೃತದೇಹವನ್ನು ಶ್ರೀಲಂಕಾದ ಮೂಲಕ ಪಾಕಿಸ್ತಾನಕ್ಕೆ ರವಾನಿಸಲಾಗಿದೆ. ಶವದ ಜೊತೆಗೆ ಮತ್ತಿಬ್ಬರು ಪಾಕಿಸ್ತಾನಿಗರನ್ನೂ ಕಳುಹಿಸಲಾಗಿದೆ.
ಸುಧಾರಿತ ವೈದ್ಯಕೀಯ ಚಿಕಿತ್ಸೆಗಾಗಿ ಪಾಕಿಸ್ತಾನಿಯರು ಚೆನ್ನೈ ನಗರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಕಳೆದ ವರ್ಷ ಜನವರಿಯಲ್ಲಿ ಇದೇ ಆಸ್ಪತ್ರೆಯಲ್ಲಿ ದೀರ್ಘ ಕಾಲದ ಹೃದಯ ಕಾಯಿಲೆಯಿಂದ ಬಳಲುತ್ತಿದ್ದ 19 ವರ್ಷದ ಪಾಕಿಸ್ತಾನಿ ಮಹಿಳೆಗೆ ಹೃದಯ ಕಸಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಕರಾಚಿ ಬಾಲಕಿಯ ಶಸ್ತ್ರಚಿಕಿತ್ಸೆಯ ವೆಚ್ಚವನ್ನು ಆಸ್ಪತ್ರೆ ಮತ್ತು ಸರ್ಕಾರೇತರ ಸಂಸ್ಥೆ ಭರಿಸಿದ್ದವು.
ದೇಶ ತೊರೆಯಲು ಸೂಚನೆ: ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಕ್ರೂರ ದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದರೆ, ಹಲವರು ಗಾಯಗೊಂಡಿದ್ದಾರೆ. ಈ ಘಟನೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ಎಲ್ಲಾ ಪಾಕಿಸ್ತಾನಿಗಳು ತಕ್ಷಣ ದೇಶ ಬಿಟ್ಟು ತೆರಳುವಂತೆ ಮತ್ತು ವೈದ್ಯಕೀಯ ಚಿಕಿತ್ಸೆಗಾಗಿ ಬಂದವರು ಏಪ್ರಿಲ್ 29 ರೊಳಗೆ ದೇಶ ಬಿಡುವಂತೆ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ, ಕೇಂದ್ರ ಗುಪ್ತಚರ ಮತ್ತು ವಲಸೆ ಅಧಿಕಾರಿಗಳು ವೈದ್ಯಕೀಯ ವೀಸಾ ಸೇರಿದಂತೆ ವಿವಿಧ ವೀಸಾಗಳಲ್ಲಿ ಭಾರತಕ್ಕೆ ಬಂದಿರುವ ಪಾಕಿಸ್ತಾನಿಗಳನ್ನು ಗುರುತಿಸಿ ವಾಪಸ್ ಕಳುಹಿಸುತ್ತಿದೆ.
ಇದನ್ನೂ ಓದಿ: ಭಾರತೀಯ ಸೇನೆಯ ಸೈಟ್ಗಳ ಮೇಲೆ ದಾಳಿಗೆ ಪಾಕಿಸ್ತಾನ ಹ್ಯಾಕರ್ಗಳಿಂದ ವಿಫಲ ಯತ್ನ