ಜಮ್ಮು ಮತ್ತು ಕಾಶ್ಮೀರ: ಕಣಿವೆ ರಾಜ್ಯ ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಪಾಕಿಸ್ತಾನವು ಕದನ ವಿರಾಮವನ್ನು ಉಲ್ಲಂಘಿಸಿದ್ದು, ಪ್ರಚೋದನಕಾರಿ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ನಮ್ಮ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ಇಂದು ತಿಳಿಸಿದ್ದಾರೆ.
"ಏಪ್ರಿಲ್ 25-26ರ ರಾತ್ರಿ, ಕಾಶ್ಮೀರದ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಅನೇಕ ಪಾಕಿಸ್ತಾನ ಸೇನಾ ಶಿಬಿರಗಳು ಯಾವುದೇ ಪ್ರಚೋದನೆಯಿಲ್ಲದೆ ಗುಂಡಿನ ದಾಳಿ ನಡೆಸಿವೆ. ಕದನ ವಿರಾಮ ಉಲ್ಲಂಘನೆಗೆ ಪ್ರತ್ಯುತ್ತರವಾಗಿ ನಮ್ಮ ಸೇನಾ ಪಡೆ ಪ್ರತಿದಾಳಿ ಮಾಡಿ ಉತ್ತರ ನೀಡಿದೆ" ಎಂದು ಶ್ರೀನಗರ ಮೂಲದ ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ.
ಇನ್ನು ನಿನ್ನೆ ಬಂಡಿಪೋರಾದಲ್ಲಿ ನಡೆದ ಎನ್ಕೌಂಟರ್ನಲ್ಲಿ ಲಷ್ಕರ್-ಎ-ತಾಲಿಬಾ (ಎಲ್ಇಟಿ) ಭಯೋತ್ಪಾದಕ ಸಹಚರನನ್ನು ಭದ್ರತಾ ಪಡೆಗಳು ಬೇಟೆಯಾಡಿವೆ. ಭಯೋತ್ಪಾದಕ ಸಹಚರನನ್ನು ಲಷ್ಕರ್-ಎ-ತೊಯ್ಬಾ ಸಂಘಟನೆಯ ಅಲ್ತಾಫ್ ಲಾಲಿ ಎಂದು ಗುರುತಿಸಲಾಗಿದೆ. ಜಿಲ್ಲೆಯ ಅಜಾಸ್ನ ಕುಲ್ನಾರ್ ಪ್ರದೇಶದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ಗುಂಡಿನ ಚಕಮಕಿಯಲ್ಲಿ ಇಬ್ಬರು ಪೊಲೀಸರು ಗಾಯಗೊಂಡಿದ್ದಾರೆ. ಚಿಕಿತ್ಸೆಗಾಗಿ ಅವರನ್ನು ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ. ಭಯೋತ್ಪಾದಕರ ಇರುವಿಕೆಯ ಬಗ್ಗೆ ಗುಪ್ತಚರ ಮಾಹಿತಿಯ ಆಧಾರದ ಮೇಲೆ ಭದ್ರತಾ ಪಡೆಗಳು ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು, ನಂತರ ಗುಂಡಿನ ಚಕಮಕಿ ನಡೆದಿದೆ.
ಪಹಲ್ಗಾಮ್ ಉಗ್ರರ ದಾಳಿ ಬಳಿಕ ಹೈ ಅಲರ್ಟ್ ಆಗಿರುವ ಭದ್ರತಾ ಪಡೆಯು ಹಲವೆಡೆ ಉಗ್ರರ ವಿರುದ್ಧ ಕಾರ್ಯಾಚರಣೆಗೆ ಇಳಿದಿದೆ. ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶುಕ್ರವಾರ ಉಧಾಮ್ಪುರಕ್ಕೆ ಭೇಟಿ ನೀಡಿ, ಭದ್ರತಾ ಪರಿಶೀಲನೆ ನಡೆಸಿದರು.
26 ಪುರುಷರ ಉಸಿರು ಚೆಲ್ಲಿಸಿದ ಉಗ್ರರು: ಏಪ್ರಿಲ್ 22ರ ಮಧ್ಯಾಹ್ನ ಕಾಶ್ಮೀರದ ಪಹಲ್ಗಾಮ್ಗೆ ನುಗ್ಗಿ ಭಯೊತ್ಪಾದಕರು ಅಲ್ಲಿದ್ದ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು. ಮೃತರಲ್ಲಿ ಕರ್ನಾಟಕದ ಇಬ್ಬರೂ ಸೇರಿದ್ದಾರೆ. ಘಟನೆ ಬಳಿಕ ಭಾರತ ಸರ್ಕಾರವು ಪಾಕಿಸ್ತಾನ ವಿರುದ್ಧ ಕೆಲ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡು ಕಠಿಣ ಸಂದೇಶ ರವಾನಿಸಿದೆ. ಈ ಮಧ್ಯೆ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸುತ್ತಿದೆ.
ಇತ್ತ ಉಗ್ರರ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆದಿದೆ. ಇನ್ನು ಪಾಕಿಸ್ತಾನಿ ಉಗ್ರರಿಗೆ ಕುಮ್ಮಕ್ಕು ನೀಡಿದ ಜಮ್ಮು ಮತ್ತು ಕಾಶ್ಮೀರ ನಿವಾಸಿಗಳಾದ ಉಗ್ರರ ಮನೆಯನ್ನು ಧ್ವಂಸ ಮಾಡಲಾಗಿದೆ, ಸ್ಥಳೀಯರನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:ಪಹಲ್ಗಾಮ್ ಭಯೋತ್ಪಾದಕರ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಕೇರಳದ ಕುಟುಂಬ ಪಾರು: ಹೇಗೆ ಗೊತ್ತಾ?