ಜಮ್ಮು: ಸತತ 6ನೇ ದಿನವೂ ಕದನ ವಿರಾಮ ಉಲ್ಲಂಘಿಸಿರುವ ಪಾಕಿಸ್ತಾನ ಸೇನೆ, ಜಮ್ಮು ಹಾಗೂ ಕಾಶ್ಮೀರದ ನಾಲ್ಕು ಗಡಿ ಜಿಲ್ಲೆಗಳಾದ್ಯಂತ ನಿಯಂತ್ರಣ ರೇಖೆ (ಎಲ್ಒಸಿ) ಮತ್ತು ಅಂತಾರಾಷ್ಟ್ರೀಯ ಗಡಿ (ಐಬಿ) ಉದ್ದಕ್ಕೂ ಅಪ್ರಚೋದಿತ ಗುಂಡಿನ ನಡೆಸಿದೆ. ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಸಣ್ಣ ಶಸ್ತ್ರಾತ್ರಗಳೊಂದಿಗೆ ಗುಂಡಿನ ದಾಳಿ ಪ್ರಾಂಭವಾಗಿದ್ದು, ಜಮ್ಮು ಜಿಲ್ಲೆಯ ಪರ್ಗ್ವಾಲ್ ವಲಯದ ಅಂತಾರಾಷ್ಟ್ರೀಯ ಗಡಿಯುದ್ದಕ್ಕೂ ಹಾಗೂ ರಾಜೌರಿ ಜಿಲ್ಲೆಯ ಸುಂದರ್ಬಾನಿ ಮತ್ತು ನೌಶೇರಾ ವಲಯಗಳಲ್ಲೂ ಗುಂಡಿನ ದಾಳಿ ನಡೆಸಿರುವ ವರದಿಯಾಗಿದೆ.
ಏಪ್ರಿಲ್ 22ರಂದು ಪಹಲ್ಗಾಮ್ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯ ಬಳಿಕ ಭಾರತ ಹಾಗೂ ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗಿದೆ. ಈ ನಡುವೆ ಪಾಕಿಸ್ತಾನ ಸತತ ಆರನೇ ದಿನವೂ ಕದನ ವಿರಾಮ ಉಲ್ಲಂಘನೆ ಮಾಡಿದೆ.
"ಏಪ್ರಿಲ್ 29ರ ತಡರಾತ್ರಿ ಪಾಕಿಸ್ತಾನ ಸೇನಾ ನೆಲೆಗಳು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿರುವ ನೌಶೇರಾ, ಸುಂದರ್ಬಾನಿ ಮತ್ತು ಅಖ್ನೂರ್ ಸೆಕ್ಟರ್ಗಳ ಎದುರಿನ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಸಣ್ಣ ಶಸ್ತ್ರಾಸ್ತ್ರ ಗುಂಡಿನ ದಾಳಿ ನಡೆಸಲು ಪ್ರಾರಂಭಿಸಿದವು. ಇದಕ್ಕೆ ಭಾರತೀಯ ಸೇನೆ ತ್ವರಿತವಾಗಿ, ತಕ್ಕ ಉತ್ತರ ನೀಡಿತ್ತು. ಕಾಶ್ಮೀರ ಕಣಿವೆಯ ಬಾರಾಮುಲ್ಲಾ ಮತ್ತು ಕುಪ್ವಾರ ಜಿಲ್ಲೆಗಳಲ್ಲಿನ ಎಲ್ಒಸಿಯಾದ್ಯಂತ ಮತ್ತು ಪರ್ಗ್ವಾಲ್ ಸೆಕ್ಟರ್ನ ಅಂತಾರಾಷ್ಟ್ರೀಯ ಗಡಿಯಾದ್ಯಂತ ಪಾಕಿಸ್ತಾನಿ ನೆಲೆಗಳಿಂದಲೂ ಅಪ್ರಚೋದಿತ ಗುಂಡಿನ ದಾಳಿಯ ಘಟನೆಗಳು ವರದಿಯಾಗಿವೆ" ಎಂದು ಜಮ್ಮುವಿನ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಆರಂಭದಲ್ಲಿ ಕುಪ್ವಾರಾ ಮತ್ತು ಬಾರಾಮುಲ್ಲಾ ಜಿಲ್ಲೆಗಳಲ್ಲಿ ಗುಂಡಿನ ದಾಳಿ ಪ್ರಾರಂಭವಾಯಿತು. ನಂತರ ಪೂಂಚ್ ಹಾಗೂ ಅಖ್ನೂರ್ ವಲಯ ಅಲ್ಲಿಂದ ಮುಂದುವರೆದು, ರಾಜೌರಿ ಜಿಲ್ಲೆಯ ಸುಂದರ್ಬಾನಿ ಮತ್ತು ನೌಶೇರಾ ವಲಯಗಳಲ್ಲೂ ಗುಂಡಿನ ದಾಳಿ ನಡೆದಿದೆ. ಬಳಿಕ ಜಮ್ಮುವಿನ ಪರ್ಗ್ವಾಲ್ ವಲಯದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕ್ ಪಡೆ ಗುಂಡು ಹಾರಿಸಿದೆ.
ಕದನ ವಿರಾಮ ಉಲ್ಲಂಘನೆ: ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಸಿಂಧೂ ಜಲ ಒಪ್ಪಂದವನ್ನು ಅಮಾನತುಗೊಳಿಸಿತು. ಇದಾದ ಸ್ವಲ್ಪ ಸಮಯದ ನಂತರ ಏಪ್ರಿಲ್ 24ರಂದು ರಾತ್ರಿ ಪಾಕಿಸ್ತಾನಿ ಪಡೆಗಳು ಕದನ ವಿರಾಮವನ್ನು ಉಲ್ಲಂಘಿಸಿ ಕಾಶ್ಮೀರ ಕಣಿವೆಯಿಂದ ಪ್ರಾರಂಭಿಸಿ, ಜಮ್ಮು ಮತ್ತು ಕಾಶ್ಮೀರದ ಎಲ್ಒಸಿಯ ವಿವಿಧ ಸ್ಥಳಗಳಲ್ಲಿ ಅಪ್ರಚೋದಿತ ಗುಂಡಿನ ದಾಳಿ ಪ್ರಾರಂಭಿಸಿವೆ.
ಅದೇ ದಿನ ಪಾಕಿಸ್ತಾನ, ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ತನ್ನ ವಾಯುಪ್ರದೇಶವನ್ನು ಮುಚ್ಚಿತ್ತು. ವ್ಯಾಪಾರ ವಹಿವಾಟುಗಳ ಸ್ಥಗಿತ, ವಾಘಾ ಗಡಿ ದಾಟುವಿಕೆಗೆ ನಿರ್ಬಂಧ ಹೇರಿತು. ಜೊತೆಗೆ ಸಿಂಧೂ ಜಲ ಒಪ್ಪಂದದ ಅಡಿಯಲ್ಲಿ ನೀರನ್ನು ಬೇರೆಡೆಗೆ ತಿರುಗಿಸುವ ಯಾವುದೇ ಪ್ರಯತ್ನವನ್ನು 'ಯುದ್ಧದ ನಡೆ'ಯೆಂದೇ ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು.
ಕದನ ವಿರಾಮಕ್ಕೆ ಸಹಿ: ಭಾರತ ಮತ್ತು ಪಾಕಿಸ್ತಾನ ಫೆಬ್ರವರಿ 2021ರಲ್ಲಿ ನವೀಕರಿಸಿದ ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿದ್ದವು. ಎರಡೂ ದೇಶಗಳ ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕರು (DGMOಗಳು) 2003ರ ಕದನ ವಿರಾಮ ಒಪ್ಪಂದಕ್ಕೆ ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದ್ದರು.
ಭಾರತ ಪಾಕಿಸ್ತಾನದ ಜೊತೆಗೆ 3,323 ಕಿಮೀ ಉದ್ದದ ಗಡಿ ಹಂಚಿಕೊಂಡಿದೆ. ಇದರಲ್ಲಿ ಗುಜರಾತ್ನಿಂದ ಜಮ್ಮುವಿನ ಅಖ್ನೂರ್ವರೆಗೆ ಸುಮಾರು 2,400 ಕಿಮೀ ಅಂತಾರಾಷ್ಟ್ರೀಯ ಗಡಿ (ಐಬಿ); ಜಮ್ಮುವಿನಿಂದ ಲೇಹ್ವರೆಗಿನ 740 ಕಿಮೀ ಉದ್ದದ ಎಲ್ಒಸಿ; ಮತ್ತು ಸಿಯಾಚಿನ್ ಪ್ರದೇಶದಲ್ಲಿ 110 ಕಿಮೀ ವಾಸ್ತವಿಕ ನೆಲದ ಸ್ಥಾನ ರೇಖೆ (ಎಜಿಪಿಎಲ್) ಸೇರಿವೆ.
ಇದನ್ನೂ ಓದಿ: ಪಾಕ್ನಿಂದ ಸತತ 4ನೇ ದಿನವೂ ಕದನ ವಿರಾಮ ಉಲ್ಲಂಘನೆ: ತಕ್ಕ ಪ್ರತ್ಯುತ್ತರ ನೀಡಿದ ಭಾರತೀಯ ಸೇನೆ