ಚೆನ್ನೈ (ತಮಿಳುನಾಡು) : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ರದ್ದು ಮಾಡಬೇಕು ಎಂದು ತಮಿಳುನಾಡಿನಲ್ಲಿ ಒತ್ತಾಯಿಸುತ್ತಿರುವ ನಡುವೆ, ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಡಿದೆ. ಇದು ರಾಜ್ಯದಲ್ಲಿ ನೀಟ್ ಕಾರಣಕ್ಕಾಗಿ ಆದ 19 ನೇ ಸಾವಾಗಿದೆ.
NEET ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಚೆನ್ನೈನ ದೇವದರ್ಶಿನಿ ಆತ್ಮಹತ್ಯೆ ಮಾಡಿಕೊಂಡವರು. ಈಕೆ ವೈದ್ಯೆಯಾಗುವ ಕನಸು ಕಂಡಿದ್ದಳು. ಇದಕ್ಕಾಗಿ ತಯಾರಿ ನಡೆಸುತ್ತಿದ್ದು, ಈಗಾಗಲೇ ಮೂರು ಬಾರಿ ನೀಟ್ನಲ್ಲಿ ನಪಾಸಾಗಿದ್ದಾರೆ. ನಾಲ್ಕನೇ ಬಾರಿ ಪರೀಕ್ಷಾ ಸಿದ್ಧತೆ ನಡೆಸುತ್ತಿರುವಾಗಲೇ ಪ್ರಾಣ ಕಳೆದುಕೊಂಡಿದ್ದಾರೆ.
ನಾಲ್ಕನೇ ಪರೀಕ್ಷೆಗೆ ಸಿದ್ಧತೆಯಲ್ಲಿದ್ದ ವಿದ್ಯಾರ್ಥಿನಿ: ಚೆನ್ನೈನ ಅಯ್ಯನ್ಶೇರಿ ಪ್ರದೇಶದ ನಿವಾಸಿಯಾದ ದೇವದರ್ಶಿನಿ (21) ನೀಟ್ಗೆ ಸಿದ್ಧತೆ ನಡೆಸುತ್ತಿದ್ದರು. 2023 ರಿಂದ ಖಾಸಗಿ ಕೋಚಿಂಗ್ ಸೆಂಟರ್ನಲ್ಲಿ ತರಬೇತಿ ಪಡೆಯುತ್ತಿದ್ದರು. ಈಗಾಗಲೇ ಮೂರು ಬಾರಿ ನೀಟ್ ಪರೀಕ್ಷೆ ಬರೆದಿದ್ದರೂ, ಅರ್ಹತೆಗೆ ಬೇಕಾದಷ್ಟು ಅಂಕ ಗಳಿಸಿರಲಿಲ್ಲ. ಇದರಿಂದ ಆಕೆ ಮೇ ತಿಂಗಳಲ್ಲಿ ನಡೆಯುವ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದರು.
ಎರಡು ದಿನಗಳ ಹಿಂದಷ್ಟೇ ಕೋಚಿಂಗ್ ಸೆಂಟರ್ನಿಂದ ಮನೆಗೆ ವಾಪಸ್ ಆಗಿದ್ದರು. ತೀವ್ರ ಬೇಸರದಲ್ಲಿದ್ದ ಆಕೆಯನ್ನು ಕುಟುಂಬಸ್ಥರು ಸಮಾಧಾನಿಸಿದ್ದರು. ಮಾರ್ಚ್ 28 ರಂದು ಆಕೆ ತಂದೆ ನಡೆಸುತ್ತಿದ್ ಬೇಕರಿಯಲ್ಲಿ ಕೆಲಸ ಮಾಡಿ ಬಳಿಕ ಮನೆಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದಾಗ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಗಳ ಖಿನ್ನತೆ ಅರಿತಿದ್ದ ತಂದೆ, ಪತ್ನಿಯನ್ನು ಮನೆಗೆ ಕಳುಹಿಸಿದ್ದಾರೆ. ಈ ವೇಳೆ ದೇವದರ್ಶಿನಿ ಆತ್ಮಹತ್ಯೆ ಮಾಡಿಕೊಂಡಿದ್ದು ಗೊತ್ತಾಗಿದೆ.
ವಿಪಕ್ಷಗಳಿಂದ ಆಕ್ರೋಶ: ನೀಟ್ಗೆ ಮತ್ತೊಂದು ವಿದ್ಯಾರ್ಥಿನಿ ಜೀವ ಕಳೆದುಕೊಂಡಿದ್ದರ ವಿರುದ್ಧ ವಿಪಕ್ಷಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ವಿರೋಧ ಪಕ್ಷದ ನಾಯಕ ಮತ್ತು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. "ನೀಟ್ ಪರೀಕ್ಷೆಯ ಭಯದಿಂದ ಚೆನ್ನೈನಲ್ಲಿ ದೇವದರ್ಶಿನಿ ಎಂಬ ವಿದ್ಯಾರ್ಥಿನಿ ಸಾವನ್ನಪ್ಪಿರುವುದು ಆಘಾತಕಾರಿ. ಆಡಳಿತರೂಢ ಡಿಎಂಕೆ ಇದರ ವಿರುದ್ಧ ಏನೂ ಮಾಡುತ್ತಿಲ್ಲ. ಈ ಮೂಲಕ ತಮಿಳುನಾಡು ವಿದ್ಯಾರ್ಥಿಗಳ ವೈದ್ಯಕೀಯ ಕನಸುಗಳನ್ನು ನಾಶಮಾಡುತ್ತಿದೆ" ಎಂದು ಆಕ್ರೋಶ ಟೀಕಿಸಿದ್ದಾರೆ.
ನೀಟ್ನಿಂದಾಗಿ ರಾಜ್ಯದಲ್ಲಿ 19 ವಿದ್ಯಾರ್ಥಿಗಳು ಸಾವಿಗೀಡಾಗಿದ್ದಾರೆ. ಇನ್ನು ಎಷ್ಟು ಮಕ್ಕಳು ಪ್ರಾಣ ಕಳೆದುಕೊಳ್ಳಬೇಕು ಎಂದು ಸಿಎಂ ಸ್ಟಾಲಿನ್, ಡಿಸಿಎಂ ಉದಯನಿಧಿ ಸ್ಟಾಲಿನ್ ಅವರನ್ನು ಉಲ್ಲೇಖಿಸಿ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ಒಂದು ರಾಷ್ಟ್ರ ಒಂದು ಚುನಾವಣೆ, ನೀಟ್ಗೆ ವಿರೋಧ: ಸೂಪರ್ಸ್ಟಾರ್ ವಿಜಯ್ರ ಟಿವಿಕೆ ಪಕ್ಷದ ನಿರ್ಣಯ