ರಾಜಮಹೇಂದ್ರವರಂ(ಆಂಧ್ರ ಪ್ರದೇಶ): ಇತ್ತೀಚಿಗೆ ಪಾಸ್ಟರ್ ಪ್ರವೀಣ್ ಸಾವು ಪ್ರಕರಣ ತೆಲುಗು ರಾಜ್ಯಗಳಲ್ಲಿ ಸಂಚಲನ ಮೂಡಿಸಿತ್ತು. ರಸ್ತೆ ಅಪಘಾತದಿಂದಲೇ ಪ್ರವೀಣ್ ಮೃತಪಟ್ಟಿದ್ದಾರೆ ಎಂದು ಐಜಿ ಅಶೋಕ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ರಾಜಮಹೇಂದ್ರವರಂನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, "ಪ್ರವೀಣ್ ರಸ್ತೆಯಲ್ಲಿ ಹೋಗುವಾಗ ಅನೇಕರೊಂದಿಗೆ ಮಾತನಾಡಿದ್ದರು. ನಾವು ಹಲವು ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಂಡಿದ್ದೇವೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಪ್ರವೀಣ್ ಸಾವಿನ ಬಗ್ಗೆ ಕುಟುಂಬಸ್ಥರು ಯಾವುದೇ ಅನುಮಾನ ವ್ಯಕ್ತಪಡಿಸಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಮಾತನಾಡಿದರು ಪ್ರವೀಣ್ ಸಾವಿನ ಬಗ್ಗೆ ಯಾವುದೇ ಸಾಕ್ಷ್ಯಗಳನ್ನು ನೀಡಿಲ್ಲ. ಪೊಲೀಸರ ತನಿಖೆಯಲ್ಲಿ ನಂಬಿಕೆ ಇದೆ" ಎಂದು ಪ್ರವೀಣ್ ಕುಟುಂಬಸ್ಥರು ಹೇಳಿದ್ದಾರೆ.
"ಸಾಮಾಜಿಕ ಮಾಧ್ಯಮದಲ್ಲಿ ಹೇಳುತ್ತಿರುವುದೆಲ್ಲವೂ ಆಧಾರ ರಹಿತ. ಪ್ರವೀಣ್ ಹೈದರಾಬಾದ್, ಕೊದಾಡ, ಏಲೂರಿನಲ್ಲಿ ಮದ್ಯದ ಅಂಗಡಿಗಳಿಗೆ ಹೋಗಿದ್ದರು. ಅವರು ಯುಪಿಐ ಮೂಲಕ ಹಣ ಪಾವತಿ ಮಾಡಿದ್ದರು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಸೇರಿದಂತೆ ಸ್ಪಷ್ಟ ಸಾಕ್ಷ್ಯಾಧಾರಗಳು ನಮ್ಮ ಬಳಿ ಇವೆ. ಅವರಿಗೆ ದಾರಿಯಲ್ಲಿ ಮೂರು ಸಣ್ಣ ಅಪಘಾತಗಳು ಸಂಭವಿಸಿದ್ದವು. ಮರಣೋತ್ತರ ಪರೀಕ್ಷೆ ಮತ್ತು ಎಸ್ಎಫ್ಎಲ್ ವರದಿಗಳು ಹಾಗೂ ಹೈದರಾಬಾದ್ನಲ್ಲಿರುವ ಕೇಂದ್ರೀಯ ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳನ್ನು ವಿಶ್ಲೇಷಿಸಿದ ನಂತರ ನಾವು ಈ ವಿಷಯವನ್ನು ಬಹಿರಂಗಪಡಿಸುತ್ತಿದ್ದೇವೆ" ಎಂದು ತಿಳಿಸಿದರು.
7 ಅಡಿ ಗುಂಡಿಗೆ ಬಿದ್ದಿದ್ದ ಪ್ರವೀಣ್: "ಕೊಂತಮೂರು ಬಳಿ ಪ್ರವೀಣ್ ಬೈಕ್ ಅಪಘಾತಕ್ಕೀಡಾದಾಗ ಯಾವ ವಾಹನವೂ ಡಿಕ್ಕಿ ಹೊಡೆದಿಲ್ಲ. ಜಲ್ಲಿಕಲ್ಲಿನಿಂದ ಕೂಡಿದ್ದ ರಸ್ತೆಯಲ್ಲಿ ಗಂಟೆಗೆ 70 ಕಿ.ಮೀ ವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದಾಗ ರಸ್ತೆ ಬದಿಯಿಂದ ಏಳು ಅಡಿ ಗುಂಡಿಗೆ ಬಿದ್ದಿದ್ದಾರೆ. ಆ ವೇಳೆ ಬುಲೆಟ್ ಬೈಕ್ ಪ್ರವೀಣ್ ಮೇಲೆ ಬಿದ್ದಿದೆ. ಹೀಗಾಗಿ ತಲೆ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ" ಎಂದು ಮಾಹಿತಿ ನೀಡಿದರು.
ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ: "ಈ ಪ್ರಕರಣದಲ್ಲಿ ಸಂಪೂರ್ಣ ವೈಜ್ಞಾನಿಕ ಮತ್ತು ತಾಂತ್ರಿಕ ತನಿಖೆ ನಡೆಸಲಾಗಿದೆ. ಮದ್ಯ ಸೇವಿಸಿ ಅತಿವೇಗದಲ್ಲಿ ಬೈಕ್ ಚಲಾಯಿಸುತ್ತಿದ್ದ ವೇಳೆ ಅಪಘಾತ ಸಂಭವಿಸಿ ಪ್ರವೀಣ್ ಮೃತಪಟ್ಟಿದ್ದಾರೆ. ಅವರ ಸಾವಿನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಧಾರ ರಹಿತವಾಗಿ ಮಾತನಾಡಬೇಡಿ ಎಂದು ಮನವಿ ಮಾಡಿದ ಅವರು, ಈ ಸಂಬಂಧ ಈಗಾಗಲೇ 11 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸುಳ್ಳು ಮಾಹಿತಿ ಹರಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಐಜಿ ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಅಗ್ನಿ ಅವಘಡ: ಪವನ್ ಕಲ್ಯಾಣ್ ಪುತ್ರ ಸೇರಿ ಮಕ್ಕಳನ್ನು ರಕ್ಷಿಸಿದ ಭಾರತೀಯ ಕಾರ್ಮಿಕರನ್ನು ಸನ್ಮಾನಿಸಿದ ಸಿಂಗಾಪುರ ಸರ್ಕಾರ