ಮೀರತ್ (ಉತ್ತರ ಪ್ರದೇಶ ) : ಕಳೆದ ಮಾರ್ಚ್ ತಿಂಗಳಲ್ಲಿ ತನ್ನ ಪ್ರಿಯಕರನೊಂದಿಗೆ ಸೇರಿ ತಾಳಿ ಕಟ್ಟಿದ ಗಂಡನನ್ನೇ ಭೀಕರವಾಗಿ ಕೊಂದು ಸುದ್ದಿಯಾಗಿದ್ದ ಮಹಿಳೆ ಈಗ ಮತ್ತೊಮ್ಮೆ ಸದ್ದು ಮಾಡಿದ್ದಾಳೆ.
ಈಗಾಗಲೇ ಜೈಲಿನ ಕಂಬಿ ಎಣಿಸುತ್ತಿರುವ ಮುಸ್ಕಾನ್ 50 ದಿನದ ಗರ್ಭಿಣಿ ಎಂದು ವರದಿಯಾಗಿದ್ದು, ಈ ಕುರಿತಂತೆ ಡಿಎನ್ಎ ಪರೀಕ್ಷೆ ನಡೆಸಬೇಕೆಂದು ಮೃತ ಸೌರಭ್ ರಜಪುತ್ ಅವರ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ಮೀರತ್ ಪೊಲೀಸ್ ಸಿಬ್ಬಂದಿ ಆರೋಪಿ ಮುಸ್ಕಾಳನನ್ನು ಏಪ್ರಿಲ್ 11 ರಂದು ಅಲ್ಟ್ರಾಸೌಂಡ್ ಪರೀಕ್ಷೆಗೆಂದು ಆಸ್ಪತ್ರೆಗೆ ಕರೆದೊಯ್ದ ಸಂದರ್ಭದಲ್ಲಿ ಮುಸ್ಕಾನ್ ಆರು ವಾರಗಳ ಗರ್ಭಿಣಿ ಅನ್ನೋದು ತಿಳಿದಿದೆ. ಅಂದಿನಿಂದ ಮುಸ್ಕಾನ್ ಗೆ ಬಂಧಿಖಾನೆಯಲ್ಲಿ ವಿಶೇಷ ನಿಗಾ ವಹಿಸಲಾಗುತ್ತಿದೆ.
ಈ ಮುಂಚೆಯೇ ಮುಸ್ಕಾನ್ ಗೆ ಪ್ರಾಥಮಿಕ ಪರೀಕ್ಷೆಗಳನ್ನು ನಡೆಸಲಾಗಿತ್ತು. ಆ ವೇಳೆ ಗರ್ಭ ಧರಿಸಿರುವ ಸಾಧ್ಯತೆ ಬಗ್ಗೆ ಗೊತ್ತಾಗಿತ್ತು. ಈಗ ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮುಖಾಂತರ ಮುಸ್ಕಾನ್ ಗರ್ಭಿಣಿ ಅನ್ನೋದು ಖಚಿತವಾಗಿದೆ ಎಂದು ಜೈಲಿನ ಹಿರಿಯ ಸೂಪರಿಂಡೆಂಟ್ ವಿರೇಶ್ ರಾಜ್ ಶರ್ಮಾ ತಿಳಿಸಿದ್ದಾರೆ.
ಕೊಲೆ ಪ್ರಕರಣ ಹಿನ್ನೆಲೆ: ಕಳೆದ ಮಾರ್ಚ್ 4 ರಂದು ತನ್ನ ಪ್ರಿಯಕರ ಸಾಹಿಲ್ ಜೊತೆ ಪತಿಯನ್ನು ಕೊಂದು ಬಳಿಕ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್ನಲ್ಲಿರಿಸಿ್ದ್ದರು. ಬಳಿಕ ಅದರ ಮೇಲೆ ಸಿಮೆಂಟ್ ಹಾಕಿ ಮುಚ್ಚಿ ಇಬ್ಬರು ಬೇರೆಡೆಗೆ ತೆರಳಿದ್ದರು. ಮಾರ್ಚ್ 18 ರಂದು ಪೊಲೀಸರ ಗಮನಕ್ಕೆ ಈ ವಿಚಾರ ತಿಳಿದಿತ್ತು. ಮಾರ್ಚ್ 19 ರಂದು ಮುಸ್ಕಾನ್ ಮತ್ತು ಸಾಹಿಲ್ ನನ್ನು ಪೊಲೀಸರು ಬಂಧಿಸಿದ್ದರು.

ಈ ಕುರಿತು ಕೊಲೆಗೀಡಾದ ಸೌರಭ್ ಅವರ ಸಹೋದರ ರಾಹುಲ್ ರಜಪುತ್ ಪ್ರತಿಕ್ರಿಯಿಸಿದ್ದು, ತಮ್ಮ ಮಾಜಿ ಅತ್ತಿಗೆ ಗರ್ಭಿಣಿಯಾಗಿದ್ದು, ಡಿಎನ್ಎ ಪರೀಕ್ಷೆ ಮೂಲಕ ಆಕೆಯ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಶಿಶುವಿನ ತಂದೆ ಯಾರು ಅನ್ನೋದು ಗೊತ್ತಾಗಬೇಕು ಎಂದು ಆಗ್ರಹಿಸಿದ್ದಾರೆ. ಆ ಮಗು ಕೊಲೆ ಆರೋಪಿ ಸಾಹಿಲ್ ನದ್ದು ಎಂದಾದರೆ ಅದಕ್ಕು ನಮಗೆ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
ಶುಕ್ರವಾರ ಮೀರತ್ ವೈದ್ಯಕೀಯ ಕಾಲೇಜಿಗೆ ಕರೆತಂದಾಗ ಮುಸ್ಕಾನ್ ಮುಖವನ್ನು ಕೆಂಪು ಸ್ಕಾರ್ಪ್ಅನ್ನು ಮುಖಕ್ಕೆ ಸುತ್ತಿಕೊಂಡಿದ್ದಳು. ಪೊಲೀಸ್ ವ್ಯಾನ್ ನಲ್ಲಿ ಕರೆತಂದಾಗ ಅಲ್ಲಿ ಜನಸಂದಣಿ ಇತ್ತು. ಮುಸ್ಕಾನ್ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಸಾಹಿಲ್ ಗೆ ಸೇರಿದ್ದಾ ಅಥವಾ ಮೃತ ಸೌರಭ್ ರಜಪುತ್ ಅವರಿಗೆ ಸಂಬಂಧಿಸಿದ್ದಾ ಎಂಬುದು ಕುತೂಹಲ ಮೂಡಿಸಿದ್ದು ಎಲ್ಲದಕ್ಕೂ ಡಿಎನ್ಎ ಪರೀಕ್ಷೆಯಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ : ಮೀರತ್ ಕೊಲೆ ಪ್ರಕರಣ : ಮುಸ್ಕಾನ್ಳ ವಿವಾಹೇತರ ಸಂಬಂಧ ಸೌರಭ್ಗೆ ತಿಳಿದಿತ್ತು - ಕುಟುಂಬಸ್ಥರ ಆರೋಪ