ನೋಯ್ಡಾ (ಉತ್ತರಪ್ರದೇಶ) : ತನ್ನ ಮಗನ ಮೇಲೆ ಬೊಗಳಿತು ಎಂಬ ಕಾರಣಕ್ಕಾಗಿ ಮೂಕಪ್ರಾಣಿ ನಾಯಿಯನ್ನು ವ್ಯಕ್ತಿಯೊಬ್ಬ ಕಾರಿಗೆ ಕಟ್ಟಿಕೊಂಡು 3 ಕಿಲೋ ಮೀಟರ್ ಎಳೆದೊಯ್ದ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ನೋಯ್ಡಾದಲ್ಲಿ ಇತ್ತೀಚೆಗೆ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ.
ನಾಯಿಯ ಮಾಲೀಕರು ನೀಡಿದ ದೂರಿನ ಅನ್ವಯ ಆರೋಪಿ ಅಮಿತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗ್ರೇಟರ್ ನೋಯ್ಡಾದ ನಯಿ ಬಸ್ತಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಆರೋಪಿ ಅಮಿತ್ ಅವರ ನಿವಾಸದ ಮುಂದೆ ನಾಯಿ ಹಾದುಹೋಗುವಾಗ ಆತನ 10 ವರ್ಷದ ಮಗ ಅದಕ್ಕೆ ಕಲ್ಲು ಎಸೆದಿದ್ದಾನೆ.
ಇದರಿಂದ ನಾಯಿ ಬಾಲಕನನ್ನು ಕಂಡ ಬೊಗಳಿದೆ. ಬೆದರಿದ ಬಾಲಕ ಅಲ್ಲಿಯೇ ಬಿದ್ದಿದ್ದಾನೆ. ಇದನ್ನು ಕಂಡು ಕುಪಿತನಾದ ಅಮಿತ್ ನಾಯಿಯನ್ನು ಕೋಲಿನಿಂದ ಮನಸೋಇಚ್ಚೆ ಥಳಿಸಿದ್ದಾನೆ. ನಂತರ ಅದನ್ನು ತನ್ನ ಕಾರಿಗೆ ಕಟ್ಟಿಕೊಂಡು ಮೂರು ಕಿಲೋ ಮೀಟರ್ ದೂಎ ಎಳೆದೊಯ್ದಿದ್ದಾನೆ ಎಂದು ನಾಯಿಯ ಮಾಲೀಕರು ಆರೋಪಿಸಿದ್ದಾರೆ.
ಶ್ವಾನವನ್ನು ರಸ್ತೆಯಲ್ಲಿ ಎಳೆದೊಯ್ದ ಕಾರಣ, ಗಂಭೀರವಾಗಿ ಗಾಯಗೊಂಡಿದೆ. ಸದ್ಯ ಅದಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಮೂಕಪ್ರಾಣಿಯ ಮೇಲೆ ಕ್ರೌರ್ಯ ಮೆರೆದ ಆರೋಪಿಯ ವಿರುದ್ಧ ಕ್ರಮಕ್ಕೆ ಮಾಲೀಕರು ಆಗ್ರಹಿಸಿ ಪೊಲೀಸರಿಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಆರೋಪಿ ಅಮಿತ್ನ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಶುಕ್ರವಾರ ಆತನನ್ನು ಬಂಧಿಸಲಾಗಿದೆ. ಆತನ ಕಾರನ್ನು ಸಹ ವಶಕ್ಕೆ ಪಡೆದಿದ್ದಾಗಿ ಪೊಲೀಸರು ತಿಳಿಸಿದ್ದಾರೆ. ಆದರೆ, ಅಮಿತ್ ತನ್ನ ಮಗನನ್ನು ನಾಯಿ ಕಚ್ಚಿದೆ ಎಂದು ಹೇಳಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಮರಿಗಳಿಗೆ ಪೆಟ್ರೋಲ್ ಸುರಿದು ಬೆಂಕಿ: ರಾತ್ರಿ ವೇಳೆ ಬೊಗಳುವ ಮೂಲಕ ನಿದ್ರೆಗೆ ಅಡ್ಡಿ ಮಾಡುತ್ತಿವೆ ಎಂದು 5 ನಾಯಿ ಮರಿಗಳ ಮೇಲೆ ಮಹಿಳೆಯರು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ದಾರುಣ ಘಟನೆ ಉತ್ತರ ಪ್ರದೇಶದ ಮೀರತ್ನಲ್ಲಿ ಈ ಹಿಂದೆ ನಡೆದಿತ್ತು. ಘಟನೆ ಸಂಬಂಧ ಮಹಿಳೆಯರಿಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ವಿಷಯ ತಿಳಿದ ಪ್ರಾಣಿದಯಾ ಸಂಘಟನೆಯ ಸದಸ್ಯರು ಘಟನೆಯನ್ನು ಖಂಡಿಸಿ ಪೊಲೀಸ್ ಠಾಣೆ ಎದುರು ಧರಣಿ ನಡೆಸಿದ್ದರು.
ಪ್ರಾಣಿಗಳ ಮೇಲಿನ ಕ್ರೂರತೆ ತಡೆ ಕಾಯ್ದೆ 1960: ಮೂಕ ಪ್ರಾಣಿಗಳಿಗೆ ಅನಗತ್ಯ ನೋವು ಉಂಟು ಮಾಡುವುದನ್ನು ತಡೆಗಟ್ಟಲು, ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟಲು ಕಾನೂನು ಇದೆ. ಮೂಕಪ್ರಾಣಿಗಳಿಗೆ ಹಾನಿ ಮಾಡುವ ಜನರ ವಿರುದ್ಧ 1960 ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಬಹುದಾಗಿದೆ.
ಇದನ್ನೂ ಓದಿ: ರಾಯಚೂರು: ಬೀದಿ ನಾಯಿಗಳ ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕ ಸಾವು
6 ವರ್ಷದ ಬಾಲಕನ ಮೇಲೆ ಪಿಟ್ಬುಲ್ ನಾಯಿ ದಾಳಿ : ಮಾಲೀಕನ ವಿರುದ್ಧ ಪ್ರಕರಣ ದಾಖಲು