ನವದೆಹಲಿ: ಐದು ವರ್ಷಗಳ ನಂತರ ಕೈಲಾಸ ಮಾನಸ ಸರೋವರ ಯಾತ್ರೆ ಪುನಾರಂಭವಾಗಲಿದೆ. 50 ಜನರ ಮೊದಲ ಗುಂಪು ಜೂನ್ 30ರಂದು ದೆಹಲಿಯಿಂದ ಕೈಲಾಸ ಪರ್ವತಕ್ಕೆ ತೆರಳುವ ಮೂಲಕ ಯಾತ್ರೆಗೆ ಚಾಲನೆ ಸಿಗಲಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಉತ್ತರಾಖಂಡದ ಪಿಥೋರಗಢ ಜಿಲ್ಲೆಯ ಲಿಪುಲೇಖ್ ಪಾಸ್ ಮೂಲಕ ಯಾತ್ರೆ ಆರಂಭವಾಗಲಿದೆ. ಯಾತ್ರೆಯ ವ್ಯವಸ್ಥೆಗಳ ಕುರಿತು ಚರ್ಚಿಸಲು ಕೇಂದ್ರ ವಿದೇಶಾಂಗ ಸಚಿವಾಲಯ ಮತ್ತು ಉತ್ತರಾಖಂಡದ ಅಧಿಕಾರಿಗಳು ದೆಹಲಿಯಲ್ಲಿ ಸಭೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ, ತೀರ್ಥಯಾತ್ರೆಯ ನಿರ್ವಹಣೆಯನ್ನು ಕುಮಾವೂನ್ ಮಂಡಲ ವಿಕಾಸ್ ನಿಗಮಕ್ಕೆ ಹಸ್ತಾಂತರಿಸಲು ನಿರ್ಧರಿಸಲಾಗಿದೆ.
ಕೈಲಾಸ ಯಾತ್ರೆಗೆ ಒಟ್ಟು 5 ಗುಂಪುಗಳು ತೆರಳಲಿವೆ. ಪ್ರತಿ ಗುಂಪಿನಲ್ಲಿ 50 ಜನರು ಇರುತ್ತಾರೆ. ಮೊದಲ ಗುಂಪು ಜುಲೈ 10ರಂದು ಲಿಪುಲೇಖ್ ಪಾಸ್ ಮೂಲಕ ಚೀನಾವನ್ನು ಪ್ರವೇಶಿಸಲಿದೆ. ಅಂತಿಮ ಗುಂಪು ಆಗಸ್ಟ್ 22ರಂದು ಹಿಂತಿರುಗಲಿದೆ. ದೆಹಲಿಯಿಂದ ಹೊರಡುವ ಪ್ರತಿಯೊಂದು ಗುಂಪು ಚೀನಾಕ್ಕೆ ಪ್ರವೇಶಿಸುವ ಮೊದಲು ಟನಕ್ಪುರ ಮತ್ತು ಧಾರ್ಚುಲಾದಲ್ಲಿ ತಲಾ ಒಂದು ರಾತ್ರಿ ಮತ್ತು ಗುಂಜಿ ಮತ್ತು ನಭಿದಾಂಗ್ನಲ್ಲಿ ಎರಡು ರಾತ್ರಿ ತಂಗಲಿದೆ.
ಕೈಲಾಸ ಯಾತ್ರೆಯ ಮುಗಿಸಿಕೊಂಡ ಬಳಿಕ ಗುಂಪುಗಳು, ಚೀನಾದಿಂದ ಹೊರಡಲಿವೆ. ಬುಂಡಿ, ಚೌಕೋರಿ ಮತ್ತು ಅಲ್ಮೋರಾದಲ್ಲಿ ಒಂದು ರಾತ್ರಿ ತಂಗಲಿದ್ದು, ನಂತರ ದೆಹಲಿ ತಲುಪಲಿದೆ. ಪ್ರತಿಯೊಂದು ಗುಂಪು ಸಂಪೂರ್ಣ ಯಾತ್ರೆಯನ್ನು ಪೂರ್ಣಗೊಳಿಸಲು 22 ದಿನ ತೆಗೆದುಕೊಳ್ಳಲಿದೆ. ಕೈಲಾಸ ಮಾನಸ ಸರೋವರ ಯಾತ್ರೆಗೆ ತೆರಳುವ ಭಕ್ತರಿಗೆ ದೆಹಲಿ ಹಾಗೂ ಉತ್ತರಾಖಂಡದ ಗುಂಜಿಯಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೊರೊನಾ ಕಾರಣಕ್ಕೆ ಸ್ಥಗಿತಗೊಂಡಿದ್ದ ಯಾತ್ರೆ: ವಿಶ್ವವನ್ನೇ ಅಲುಗಾಡಿಸಿದ್ದ ಕೋವಿಡ್ ಸಾಂಕ್ರಾಮಿಕದಿಂದಾಗಿ ಪ್ರತಿ ವರ್ಷ ನಡೆಯುತ್ತಿದ್ದ ಕೈಲಾಸ ಮತ್ತು ಮಾನಸ ಸರೋವರ ಯಾತ್ರೆಯಯನ್ನು 2020ರಲ್ಲಿ ಸ್ಥಗಿತಗೊಳಿಸಲಾಗಿತ್ತು. ಅದಾದ ನಂತರ, ಗಲ್ವಾನ್ ಘರ್ಷಣೆಯಿಂದಾಗಿ ಚೀನಾ ಮತ್ತು ಭಾರತದ ನಡುವಿನ ಸಂಬಂಧಗಳು ಹದಗೆಟ್ಟವು. ಇದು ಕೂಡ ಯಾತ್ರೆಯ ಪುನಾರಂಭಕ್ಕೆ ಅವಕಾಶ ನೀಡಲಿಲ್ಲ. ಇತ್ತೀಚೆಗೆ, ಎರಡೂ ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧಗಳು ವೃದ್ಧಿಸಿದ್ದು, ಯಾತ್ರೆಯು ಪುನಾರಂಭಕ್ಕೆ ಕಾರಣವಾಗಿದೆ.
ಯಾತ್ರೆಯಲ್ಲಿ ಈ ವಯೋಮಾನ ಕಡ್ಡಾಯ: ಆದಾಗ್ಯೂ, ಈ ಯಾತ್ರೆಯಲ್ಲಿ ಪಾಲ್ಗೊಳ್ಳಲು ವಯಸ್ಸಿನ ಮಿತಿ ಕಡ್ಡಾಯವಾಗಿದೆ. 18-70 ವರ್ಷಗಳ ಒಳಗೆ ಇರಬೇಕು. ನೀವು ಫಿಟ್ ಆಗಿದ್ದರೆ ಮಾತ್ರ ಪ್ರವಾಸ ಕೈಗೊಳ್ಳಬೇಕು. ನೋಂದಣಿಗಳನ್ನು ಅಧಿಕೃತ ವಿದೇಶಾಂಗ ಇಲಾಖೆಯ ಪೋರ್ಟಲ್ ಮೂಲಕ ನಡೆಸಲಾಗುವುದು. ಈ ಪ್ರಯಾಣವು ಎರಡು ಮಾರ್ಗಗಳ ಮೂಲಕ ಸಾಗುತ್ತದೆ. ಒಂದು ಲಿಪುಲೇಖ್ ಪಾಸ್ (ಉತ್ತರಾಖಂಡ) ಇನ್ನೊಂದು ನಾಥು ಲಾ ಪಾಸ್ (ಸಿಕ್ಕಿಂ). ಇದರಲ್ಲಿ ಪ್ರಯಾಣಿಕರು ಯಾವುದನ್ನು ಬೇಕಾದರೂ ಆಯ್ಕೆ ಮಾಡಬಹುದು.
ಆಯ್ಕೆ ಮಾಡಿದ ಮಾರ್ಗವನ್ನು ಅವಲಂಬಿಸಿ ವೆಚ್ಚಗಳಿವೆ. ಲಿಪುಲೇಖ್ ಪಾಸ್ ಮಾರ್ಗ ಆಯ್ದುಕೊಂಡರೆ, ಪ್ರತಿ ವ್ಯಕ್ತಿಗೆ 1.8ರಿಂದ 2 ಲಕ್ಷ ರೂಪಾಯಿ, ನಾಥುಲಾ ಪಾಸ್ ಮಾರ್ಗವಾದರೆ, 2.2ರಿಂದ 2.4 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಮೂರನೇ ಮಾರ್ಗವು ನೇಪಾಳದಿಂದ ಸಾಗಲಿದೆ. ಅದರ ವೆಚ್ಚ 3.2 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿರಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಈ ದಿನ ಕೇದಾರನಾಥ, ಬದರಿನಾಥ ದೇವಾಲಯಗಳು ಪುನಾರಂಭ: ಹೀಗೆ ನೋಂದಣಿ ಮಾಡಿಸಿಕೊಳ್ಳಿ
ಚಾರ್ ಧಾಮ್ ಯಾತ್ರೆಗೆ ಡೇಟ್ ಫಿಕ್ಸ್, ಯಾವ ಸಮಯದಲ್ಲಿ ತೆರಳೋದು ಉತ್ತಮ? ನೋಂದಣಿ ಸೇರಿ ಸಂಪೂರ್ಣ ವಿವರ ಇಲ್ಲಿದೆ ನೋಡಿ