ಚಿತ್ತೂರು. ಆಂಧ್ರಪ್ರದೇಶ: ದಟ್ಟಾರಣ್ಯದಲ್ಲಿ ಕಾಡುಪ್ರಾಣಿಗಳು ಅಥವಾ ಕಾಡುಗಳ್ಳರು ಯಾವ ಹೊತ್ತಿನಲ್ಲಿ ಎಲ್ಲಿಂದ ದಾಳಿ ಮಾಡುತ್ತಾರೆ ಎಂಬುದು ಗೊತ್ತಾಗುವುದೇ ಇಲ್ಲ. ಈ ಭೀತಿಯನ್ನು ಬಿಟ್ಟು ಹಗಲು - ರಾತ್ರಿ ಕಾಡು ಸುತ್ತಿ ಅರಣ್ಯ ರಕ್ಷಣೆಗಾಗಿ ಪಣತೊಟ್ಟ ಮಹಿಳೆಯೇ ಈ ಚಿತ್ರಾ. ಅರಣ್ಯ ಇಲಾಖೆಗೆ ಕೆಲಸಕ್ಕೆ ಸೇರಿದಾಗಿನಿಂದಾಗಿನಿಂದ ಕಾಡೇ ತನ್ನ ಉಸಿರು ಎಂದು ಭಾವಿಸಿ, ಗಸ್ತು ತಿರುಗುವ ಮೂಲಕ ಜೀವನವನ್ನೇ ಪಣಕ್ಕಿಟ್ಟಿದ್ದಾರೆ ಇವರು. ಜೀವದ ಹಂಗು ತೊರೆದು, ಅರಣ್ಯ ರಕ್ಷಣೆ ಉಸಿರಾಗಿಸಿಕೊಂಡು ಧೈರ್ಯ ಮತ್ತು ಸಮರ್ಪಣೆಯಿಂದ ಕೆಲಸ ನಿರ್ವಹಿಸುತ್ತಿರುವ ಅವರ ಕಾರ್ಯ ಶ್ಲಾಘನೀಯವೇ ಸರಿ. ಅಂತಾರಾಷ್ಟ್ರೀಯ ಅರಣ್ಯ ದಿನದ ಹಿನ್ನೆಲೆ ಅವರ ಸ್ಪೂರ್ತಿಯ ಕಥೆ ಇಲ್ಲಿದೆ.
ಶೇಷಾಚಲಂನ ದಟ್ಟಾರಣ್ಯದಲ್ಲಿ ತಿರುಪತಿ ಜಿಲ್ಲೆಯ ಭೀಮಾವರಂ ಅರಣ್ಯ ವಲಯದಲ್ಲಿ ಬೀಟ್ ಅಧಿಕಾರಿಯಾಗಿ ಚಿತ್ರಾ ಎಂಬುವವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈಟಿವಿ ಭಾರತ್ ಜೊತೆ ತಮ್ಮ ಸಾಹಸದ ಕಥೆಯನ್ನು ಹಂಚಿಕೊಂಡಿರುವ ಅವರು, ತಮ್ಮ ದೈನಂದಿನ ದಿನದ ಸವಾಲುಗಳ ಬಗ್ಗೆ ವಿವರಿಸಿದ್ದಾರೆ.
ಹೀಗಿತ್ತು ಇವರ ಬಾಲ್ಯ: ತಿರುಪತಿ ಮೂಲದ ಹಸುಗಳನ್ನು ಮೇಯಿಸುತ್ತಿದ್ದ ಕುಟುಂಬದಲ್ಲಿ ಜನಿಸಿದೆ. 1998ರಲ್ಲಿ ಚಿತ್ತೋರಿನ ಮಧು ಶೇಖರ್ ಎಂಬುವರಿಗೆ ನನ್ನನ್ನು ಮದುವೆ ಮಾಡಿಕೊಟ್ಟ ಕಾರಣ ಓದಿ ಅರ್ಧದಲ್ಲಿಯೇ ನಿಂತಿತು. ಬಳಿಕ ಮೂರು ಮಕ್ಕಳ ಆರೈಕೆಯಲ್ಲಿ ಮುಳುಗಿದೆ. ಈ ವೇಳೆ ನನ್ನಂತೆ ನನ್ನ ಮಕ್ಕಳು ಅವಿದ್ಯಾವಂತರಾಗಬಾರದು ಎಂಬ ಕಿಚ್ಚು ಹೊತ್ತಿತ್ತು. ಇದೇ ಕಾರಣಕ್ಕೆ ಐಟಿಐ ಕಂಪ್ಯೂಟರ್ ಮಾಡಿ, ಬಳಿಕ ಎಸ್ವಿ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ ಪದವಿಯನ್ನು ಪಡೆದುಕೊಂಡೆ.
ಸರ್ಕಾರಿ ಕೆಲಸ ತೆಗೆದುಕೊಳ್ಳಬೇಕು ಎಂಬ ಹಠದ ನಡುವೆ ಅನೇಕ ಬಾರಿ ವಿಫಲವಾದರೂ ಎದೆಗುಂದಲಿಲ್ಲ. ಅಂತಿಮವಾಗಿ ಅರಣ್ಯ ಇಲಾಖೆ ಕರೆ ಮಾಡಿದ್ದ ಬೀಟ್ ಆಫೀಸರ್ ಹುದ್ದೆಗೆ ಅರ್ಜಿ ಸಲ್ಲಿಸಿದೆ. ಭರವಸೆಯೊಂದಿಗೆ ಅರ್ಜಿ ಸಲ್ಲಿಸಿದ ಕೆಲಸಕ್ಕೆ ಆಯ್ಕೆಯೂ ಆದೆ ಅಂತಾರೆ ಚಿತ್ರಾ ಅವರು.
ಇದು ಅದೃಷ್ಟ ಎಂದು ಭಾವಿಸಿ ಸೇವೆಗೆ ಸಿದ್ಧವಾದೆ: ಹುದ್ದೆ ಬಗ್ಗೆ ಹೆಚ್ಚು ತಿಳಿಯದ ನಾನು ಇದು ಕಚೇರಿ ಕೆಲಸ ಎಂದೆ ಭಾವಿಸಿದ್ದೆ. ಆದರೆ, ಈ ಹುದ್ದೆಗೆ ಸೇರಿದ ಬಳಿಕವೆ ಹುದ್ದೆ ನಿರ್ವಹಣೆ ಸ್ವರೂಪ ತಿಳಿಯಿತು. ಒಬ್ಬಂಟಿಯಾಗಿ ಅರಣ್ಯ ಗಸ್ತು ಹಾಕುವುದು. ಹಗಲು ಮತ್ತು ರಾತ್ರಿ ಕೆಲಸ ನಿರ್ವಹಣೆ ಮಾಡುವುದು. ಅರಣ್ಯದಲ್ಲಿಯೇ ಜೀವಿಸುವುದನ್ನು ತಿಳಿದು ಆಗ ಅಂಜಿಕೆಯೂ ಆಯಿತು. ಆದರೂ ಒಂದು ಕ್ಷಣ ಹೆಮ್ಮೆಯಾಯಿತು. ನಾಡಿನ ಜೀವವಾಗಿರುವ ಕಾಡನ್ನು ರಕ್ಷಿಸುವ ಅದೃಷ್ಟ ಎಷ್ಟು ಜನರಿಗೆ ಲಭ್ಯವಾಗಲಿದೆ ಎಂದು ಹುದ್ದೆ ನಿರ್ವಹಿಸಲು ಸಿದ್ಧಳಾದೆ.
ಕೆಲಸಕ್ಕೆ ಸೇರಿದ ಮೂರೇ ವರ್ಷದಲ್ಲಿ ಗಂಡನ ಅಗಲಿಕೆ: ಇದೇ ವೇಳೆ ಹುದ್ದೆಗೆ ಸೇರಿದ ಮೂರು ವರ್ಷದಲ್ಲಿ ಗಂಡನ ಅಗಲಿಕೆ ಉಂಟಾಯಿತು. ಈ ವೇಳೆ ಯಾರ ಬೆಂಬಲವೂ ಇಲ್ಲದೇ, ಮಕ್ಕಳನ್ನು ಬೆಳೆಸುವ ಹೊಣೆಯು ಬಿತ್ತು. ಅರಣ್ಯದಲ್ಲೇ ಇರಬೇಕಾದ ನಾನು ಏನು ಮಾಡುವುದು ಎಂದು ದಿಕ್ಕು ತೋಚದೇ ಇಬ್ಬರು ಮಕ್ಕಳನ್ನು ಹಾಸ್ಟೆಲ್ಗೆ ಸೇರಿಸಿದೆ. ಸಣ್ಣ ಮಗಳನ್ನು ನನ್ನ ಬಳಿಯೆ ಅರಣ್ಯಕ್ಕೆ ಕರೆತಂದು ಸಾಕಲು ಆರಂಭಿಸಿದೆ. ಈ ವೇಳೆ ಮನೆಯಲ್ಲಿ ಅವಳನ್ನು ನೋಡಿಕೊಳ್ಳುವವರು ಯಾರು ಇಲ್ಲದೇ, ಅನೇಕ ಬಾರಿ ಆಕೆಯನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ಬರುತ್ತಿದ್ದೆ. ನಾನು ತಡರಾತ್ರಿಯಲ್ಲಿ ಮನೆಗೆ ಮರಳಿದಾಗ ಮಗು ಅಳುತ್ತಿರುವುದು ನೋಡುತ್ತಿದ್ದೆ ಎಂದು ಗದ್ಗದಿತರಾದರು.
ಒಬ್ಬಂಟಿಯಾಗಿ ಬದುಕು ಕಟ್ಟಿಕೊಂಡ ವೀರಗಾಥೆ ಇದು: ಈ ಎಲ್ಲ ಕಠಿಣ ಪರಿಸ್ಥಿತಿ ನಡುವೆಯೂ ಚಿತ್ರ ತಮ್ಮ ಕೆಲಸಕ್ಕೆ ಸದಾ ಬದ್ಧರಾಗಿದ್ದರು. ದಿನವೂ 30ರಿಂದ 40 ಕಿ,ಮೀ ಬೆಟ್ಟ ಹತ್ತುವುದು, ಹೊಳೆ ದಾಟುವುದು, ಕಾಡು ಪ್ರಾಣಿಗಳ ಬೆದರಿಕೆ ನಿರಂತರವಾಗಿ ಎದುರಾಗುತ್ತಿದ್ದವು. ಅನೇಕ ಬಾರಿ ಚಿರತೆ, ಆನೆಗಳು ಎದುರಾಗಿ ಓಡಿರುವುದೂ ಇದೆ. ನಾಲ್ಕು ದಿನದ ಹಿಂದೆ ಕೂಡ ಆನೆ ನಮ್ಮನ್ನು ಅಟ್ಟಿಸಿಕೊಂಡು ಬಂದಿತು. ಈ ವೇಳೆ ಕೊಳದ ಒಂದು ಬದಿಗೆ ನಾವು ಮತ್ತೊಂದು ಬದಿಗೆ ಆನೆ ಬಿದ್ದಿತು. ಅದೃಷ್ಟವಶಾತ್ ನಾವು ಬೆಟ್ಟ ನೋಡಿ, ಅದನ್ನು ಹತ್ತಿ ಬದುಕಿದೆವು ಎಂದು ತಮ್ಮ ಉದ್ಯೋಗದ ಸಾಹಸ ನೆನೆದರು.
ಕಾಡುಪ್ರಾಣಿಗಳ ಭಯ ಮಾತ್ರವಲ್ಲ, ಕಳ್ಳಕಾರದ್ದೂ ಭಾರಿ ಭೀತಿಯುಂಟು: ಅರಣ್ಯದಲ್ಲಿ ಕರ್ತವ್ಯದ ವೇಳೆ ನಮಗೆ ಕೇವಲ ಕಾಡು ಪ್ರಾಣಿಗಳ ಭಯ ಮಾತ್ರವಿರುವುದಿಲ್ಲ. ಅನೇಕ ಬಾರಿ ರಕ್ತ ಚಂದನ ಕಳ್ಳಕೋರರು ಎದುರಾಗುತ್ತಾರೆ. ಅವರು ನಮ್ಮ ಮೇಲೆ ಕಲ್ಲು ಅಥವಾ ಗನ್ನಿಂದ ದಾಳಿ ಮಾಡು ಹಿಂಜರಿಯುವುದಿಲ್ಲ.
ಈ ಎಲ್ಲ ಸಾಹಸದ ನಡುವೆ ಚಿತ್ರಾ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬ ನಂಬಿಕೆಯಲ್ಲಿ ಉದ್ಯೋಗ ನಿರ್ವಹಣೆ ಮಾಡುತ್ತಿದ್ದಾರೆ. ಚಿತ್ರಾ ಅವರ ತ್ಯಾಗಕ್ಕೆ ಫಲವಾಗಿ ಮೊದಲ ಮಗಳು ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು, ಎರಡನೇ ಮಗಳು ಮೆಡಿಸಿನ್ ಓದುತ್ತಿದ್ದಾಳೆ. ಇನ್ನು ಮೂರನೇ ಮಗಳು ಇಂಜಿನಿಯರಿಂಗ್ ಕಲಿಯುತ್ತಿದ್ದಾರೆ.
ಮಹಿಳೆಯೊಬ್ಬಳು ಮನಸ್ಸು ಪೂರ್ವಕವಾಗಿ ಜವಾಬ್ದಾರಿಯ ಹೊಣೆ ಹೊತ್ತಲ್ಲಿ ಆಕೆಯನ್ನು ತಡೆಯಲು ಯಾರಿಂದ ಸಾಧ್ಯವಿಲ್ಲ ಎಂಬ ತತ್ವದೊಂದಿಗೆ ನಾನು ಇಷ್ಟು ವರ್ಷ ಕೆಲಸ ಮಾಡಿದ್ದಾಗಿ ಗರ್ವದಿಂದ ಹೇಳುತ್ತಾರೆ ಚಿತ್ರಾ.
ಇದನ್ನೂ ಓದಿ: ಚುನಾವಣೆ ಸೋತ ನಾಯಕರಿಗೆ ಪಕ್ಷ ಬಲಗೊಳಿಸುವ ಜವಾಬ್ದಾರಿ ನೀಡಿದ ಎಎಪಿ
ಇದನ್ನೂ ಓದಿ: ಚಾರ್ಧಾಮ್ ಯಾತ್ರೆ: ಮೊದಲ ದಿನವೇ ದಾಖಲೆಯ ನೋಂದಣಿ