ನವದೆಹಲಿ: ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಮತ್ತೊಂದು ಮೈಲುಗಲ್ಲು ನಡೆಲು ಸಜ್ಜಾಗಿದೆ. ಗಗನಯಾನಿ ಶುಭಾಂಶು ಶುಕ್ಲಾ ಅವರನ್ನು ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಕಳುಹಿಸಲು ಇಸ್ರೋ ಸಿದ್ಧತೆ ಮಾಡಿಕೊಂಡಿದೆ.
ಈ ಕುರಿತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ಮಾತನಾಡಿ, ಆಕ್ಸಿಮ್ 4 ಮಿಶನ್ ಭಾಗವಾಗಿ ಗಗನಯಾನಿ ಶುಭಾಂಶು ಶುಕ್ಲಾ ಅವರು ಮೇ ತಿಂಗಳಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಇಸ್ರೋ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯಗಳ ಪರಿಶೀಲನೆ ಸಭೆ ಬಳಿಕ ಕೇಂದ್ರ ಸಚಿವರು ಈ ಕುರಿತು ಹೇಳಿಕೆ ನೀಡಿದ್ದಾರೆ.
ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಪ್ರಯಾಣವು ಕೇವಲ ಒಂದು ಬಾಹ್ಯಾಕಾಶ ಯಾತ್ರೆ ಆಗಿರಲ್ಲ. ಇದು ಬಾಹ್ಯಾಕಾಶ ಪರಿಶೋಧನೆಯ ಹೊಸ ಯುಗಕ್ಕೆ ಭಾರತವು ಧೈರ್ಯದಿಂದ ಹೆಜ್ಜೆ ಹಾಕುತ್ತಿದೆ ಎಂಬುದರ ಸಂಕೇತವಾಗಲಿದೆ ಎಂದು ಜಿತೇಂದ್ರ ಸಿಂಗ್ ವ್ಯಾಖ್ಯಾನಿಸಿದ್ದಾರೆ.
ಮುಂಬರುವ ವಿವಿಧ ಬಾಹ್ಯಾಕಾಶ ಕಾರ್ಯಾಚರಣೆಗಳ ಕುರಿತು ಇಸ್ರೋ ಅಧ್ಯಕ್ಷ ವಿ ನಾರಾಯಣನ್ ಅವರು ಪ್ರಸ್ತುತಿ ನೀಡಿದ್ದಾರೆ. ಜೂನ್ನಲ್ಲಿ ಜಿಎಸ್ಎಲ್ವಿ-ಮಾರ್ಕ್ 2 ರಾಕೆಟ್ನಲ್ಲಿ ಎನ್ಐಎಸ್ಎಆರ್ ಉಪಗ್ರಹವನ್ನು ಉಡಾವಣೆ ಮಾಡಲು ಇಸ್ರೋ ಸಜ್ಜಾಗಿದೆ. ಬಳಿಕ ಜುಲೈನಲ್ಲಿ ಹೆವಿ-ಲಿಫ್ಟ್ ಎಲ್ವಿಎಂ -3 ರಾಕೆಟ್ ಬಳಸಿ ಯುಎಸ್ ಮೂಲದ ಬ್ಲೂಬರ್ಡ್ ಬ್ಲಾಕ್ -2 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ ಎಂದು ಸಚಿವರು ಮಾಹಿತಿ ನೀಡಿದರು.
ಮೇ ತಿಂಗಳಲ್ಲಿ ನಿಗದಿಯಾಗಿರುವ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರ ಪ್ರಯಾಣವು ಭಾರತದ ವಿಸ್ತರಿಸುತ್ತಿರುವ ಅಂತರಾಷ್ಟ್ರೀಯ ಬಾಹ್ಯಾಕಾಶ ಸಹಯೋಗದಲ್ಲಿ ಒಂದು ಮೈಲಿಗಲ್ಲು ಎಂದು ಸಿಂಗ್ ಬಣ್ಣಿಸಿದರು. ಇಸ್ರೋದ ಮಾನವ ಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮದ ಅಡಿಯಲ್ಲಿ ಗ್ರೂಪ್ ಕ್ಯಾಪ್ಟನ್ ಶುಕ್ಲಾ ಅವರು ಶಾರ್ಟ್ಲಿಸ್ಟ್ ಆಗಿದ್ದಾರೆ ಮತ್ತು ಗಗನಯಾನ ಮಿಷನ್ನ ಅಗ್ರ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ.
ರಷ್ಯಾದ ಸೋಯುಜ್ ಬಾಹ್ಯಾಕಾಶ ನೌಕೆಯಲ್ಲಿ ಭಾರತದ ಗಗನಯಾನಿ ರಾಕೇಶ್ ಶರ್ಮಾ ಅವರು ನಾಲ್ಕು ದಶಕಗಳ ಹಿಂದೆ ಗಗನಯಾನ ಕೈಗೊಂಡಿದ್ದರು. ಇದೀಗ ನಾಲ್ಕು ದಶಕಗಳ ಬಳಿಕ ಭಾರತದ ಗಗನಯಾನಿ ಶುಕ್ಲಾ ಅವರು ಬಾಹ್ಯಾಕಾಶ ಪ್ರಯಾಣ ಕೈಗೊಳ್ಳಲಿದ್ದಾರೆ.
ಇದನ್ನೂ ಓದಿ: ಭಿಕ್ಷುಕರ ಜೊತೆ ಕೂತು ಶಿರಡಿ ದೇಗುಲದ ಮುಂದೆ ಭಿಕ್ಷೆ ಬೇಡಿದ ಇಸ್ರೋ ಮಾಜಿ ಅಧಿಕಾರಿ: ಕಾರಣ ಏನು ಗೊತ್ತಾ?
ಇದನ್ನೂ ಓದಿ: ಇಸ್ರೋದಿಂದ ಮತ್ತೊಂದು ಸಾಧನೆ: ಇನ್ಮುಂದೆ ಮಿಂಚಿನ ಬಗ್ಗೆ ಎರಡೂವರೆ ತಾಸು ಮುಂಚೆಯೇ ತಿಳಿಯಲಿದೆ ಎಂದ ಬಾಹ್ಯಾಕಾಶ ಸಂಸ್ಥೆ