ನವದೆಹಲಿ: ಆಪರೇಷನ್ ಸಿಂಧೂರ ಮೂಲಕ ಭಾರತವು ಪಾಕಿಸ್ತಾನ ಸೇನೆಗೆ ಅಪಾರ ನಷ್ಟವನ್ನುಂಟು ಮಾಡಿದೆ. ಇತ್ತೀಚಿನ ತಂತ್ರಜ್ಞಾನಗಳನ್ನು ಒಳಗೊಂಡ ಪಾಕ್ನ ಕೆಲವು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ್ದಲ್ಲದೇ ಅವರ ರಾಜಧಾನಿ ಇಸ್ಲಾಮಾಬಾದ್ಗೆ ಸಮೀಪವಿರುವ ಪ್ರಮುಖ ಮಿಲಿಟರಿ ಶಿಬಿರಗಳಿಗೆ ಹಾನಿ ಮಾಡಿದ್ದೇವೆ ಎಂದು ಭಾರತೀಯ ಸೇನೆ ಭಾನುವಾರ ತಿಳಿಸಿದೆ.
ಆಪರೇಷನ್ ಸಿಂಧೂರ ಕಾರ್ಯಾಚರಣೆ ಕುರಿತು ಮೂರು ಪಡೆಗಳ ಕಮಾಂಡರ್ಸ್ಗಳ ಜಂಟಿ ಮಾಧ್ಯಮಗೋಷ್ಠಿಯಲ್ಲಿ ಭಾನುವಾರ ಮಾಹಿತಿ ನೀಡಲಾಯಿತು. ಮಿಲಿಟರಿ ಕಾರ್ಯಾಚರಣೆಗಳ ಮಹಾನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಅವರು ಯುದ್ಧದಲ್ಲಿ 35-40 ಪಾಕಿಸ್ತಾನಿ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಭಾರತ ತನ್ನ ಗುರಿಗಳನ್ನು ಸಾಧಿಸಿದೆ ಮತ್ತು ಪಾಕಿಸ್ತಾನವು ಯಾವುದೇ ದುಸ್ಸಾಹಸಕ್ಕೆ ಮುಂದಾದರೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದರು.
ಭಾರತೀಯ ಸೇನೆಗೂ ಅಲ್ಪ ನಷ್ಟ ಆಗಿದೆ. ಆದರೆ ಕಾರ್ಯಾಚರಣೆಗಳು ನಡೆಯುತ್ತಿರುವುದರಿಂದ ವಿವರಗಳನ್ನು ನೀಡಲು ನಿರಾಕರಿಸಿತು.
"ನಾವು ಯುದ್ಧ ಸನ್ನಿವೇಶದಲ್ಲಿದ್ದೇವೆ. ನಷ್ಟ ಯುದ್ಧದ ಒಂದು ಭಾಗವಾಗಿದೆ. ಕೇಳಬೇಕಾದ ಪ್ರಶ್ನೆ ಎಂದರ ಭಯೋತ್ಪಾದಕ ಶಿಬಿರಗಳನ್ನು ನಾಶ ಮಾಡುವ ನಮ್ಮ ಉದ್ದೇಶಗಳನ್ನು ನಾವು ಸಾಧಿಸಿದ್ದೇವೆಯೇ? ಇದಕ್ಕೆ ಉತ್ತರ ಹೌದು" ಎಂದು ವಾಯು ಕಾರ್ಯಾಚರಣೆಗಳ ಮಹಾನಿರ್ದೇಶಕ ಏರ್ ಮಾರ್ಷಲ್ ಎಕೆ ಭಾರ್ತಿ ಮಾಧ್ಯಮಗೋಷ್ಠಿಯಲ್ಲಿ ಹೇಳಿದರು.
"ನಾವು ಆಯ್ಕೆ ಮಾಡಿದ ನಮ್ಮ ಗುರಿಗಳನ್ನು ಸಾಧಿಸಿದ್ದೇವೆ ಮತ್ತು ನಮ್ಮ ಎಲ್ಲಾ ಪೈಲಟ್ಗಳು ಮನೆಗೆ ಮರಳಿದ್ದಾರೆ" ಎಂದು ಅವರು ತಿಳಿಸಿದರು.
ಆಪರೇಷನ್ ಸಿಂಧೂರ್ ಕುರಿತ ಮಾಧ್ಯಮಗೋಷ್ಠಿಯಲ್ಲಿ ಸೇನೆ, ಭಾರತೀಯ ವಾಯುಪಡೆ ಮತ್ತು ಭಾರತೀಯ ನೌಕಾಪಡೆಯ ಹಿರಿಯ ಮಿಲಿಟರಿ ಅಧಿಕಾರಿಗಳು ಭಾರತೀಯ ಸೇನಾ ನೆಲೆ ಮತ್ತು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸುವ ಪಾಕಿಸ್ತಾನದ ಪ್ರಯತ್ನಗಳನ್ನು ಭಾರತ ಹೇಗೆ ಹಿಮ್ಮೆಟ್ಟಿಸಿತು ಎಂಬುದನ್ನು ಒಳಗೊಂಡಂತೆ ವಿವರಗಳನ್ನು ನೀಡಿದರು.
ಐಸಿ -814 ಅಪಹರಣ ಮತ್ತು ಪುಲ್ವಾಮಾ ಸ್ಫೋಟದಲ್ಲಿ ಭಾಗಿಯಾಗಿದ್ದ ಯೂಸುಫ್ ಅಜರ್, ಅಬ್ದುಲ್ ಮಲಿಕ್ ರೌಫ್ ಮತ್ತು ಮುದಾಸಿರ್ ಅಹ್ಮದ್ ಒಳಗೊಂಡಂತೆ 100 ಕ್ಕೂ ಹೆಚ್ಚು ಭಯೋತ್ಪಾದಕರನ್ನು ಮೇ 7 ರ ಆಪರೇಷನ್ ಸಿಂಧೂರ ವೇಳೆ ಹೊಡೆದಿದ್ದೇವೆ ಎಂದು ಲೆಫ್ಟಿನೆಂಟ್ ಜನರಲ್ ಘಾಯ್ ಹೇಳಿದರು.
"ಪಾಕ್ ವಿಮಾನಗಳು ನಮ್ಮ ಗಡಿಯೊಳಗೆ ಬರದಂತೆ ತಡೆಯಲಾಯಿತು. ಆದ್ದರಿಂದ ನಮ್ಮ ಬಳಿ ಅವಶೇಷಗಳಿಲ್ಲ. ಆದರೆ ಖಂಡಿತವಾಗಿಯೂ ನಾವು ಕೆಲವು ವಿಮಾನಗಳನ್ನು ಹೊಡೆದುರುಳಿಸಿದ್ದೇವೆ" ಎಂದು ಏರ್ ಮಾರ್ಷಲ್ ಭಾರ್ತಿ ತಿಳಿಸಿದರು.
ಆಪರೇಷನ್ ಸಿಂಧೂರ ಸಮಯದಲ್ಲಿ ಪ್ರಾಣ ಕಳೆದುಕೊಂಡ ಐವರು ಹುತಾತ್ಮ ಯೋಧರು ಮತ್ತು ನಾಗರಿಕರಿಗೆ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ಘಾಯ್ ಅವರು ಗೌರವ ಸಲ್ಲಿಸಿದರು.
"ನಾವು ಇಲ್ಲಿಯವರೆಗೆ ಅಪಾರ ಸಂಯಮವನ್ನು ಕಾಯ್ದುಕೊಂಡಿದ್ದೇವೆ ಮತ್ತು ನಮ್ಮ ಕ್ರಮಗಳನ್ನು ಕೇಂದ್ರೀಕರಿಸಲಾಗಿದೆ, ಅಳೆಯಲಾಗಿದೆ ಮತ್ತು ಉಲ್ಬಣಗೊಳಿಸಲಾಗಿಲ್ಲ. ಆದಾಗ್ಯೂ, ನಮ್ಮ ನಾಗರಿಕರ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸುರಕ್ಷತೆಗೆ ಯಾವುದೇ ಬೆದರಿಕೆಯನ್ನು ಬಲವಾಗಿ ಎದುರಿಸುತ್ತೇವೆ" ಎಂದು ಅವರು ಹೇಳಿದರು.
ಶನಿವಾರ ಬೆಳಿಗ್ಗೆ ರಫೀಕಿ, ಮುರಿದ್, ಚಕ್ಲಾಲಾ, ರಹೀಂ ಯಾರ್ ಖಾನ್, ಸುಕ್ಕೂರ್ ಮತ್ತು ಚುನಿಯನ್ ಸೇರಿದಂತೆ ಹಲವಾರು ಪಾಕಿಸ್ತಾನಿ ಮಿಲಿಟರಿ ನೆಲೆಗಳ ಮೇಲೆ ಭಾರತೀಯ ಸಶಸ್ತ್ರ ಪಡೆಗಳು ಉಗ್ರ ಪ್ರತಿದಾಳಿ ನಡೆಸಿದ ನಂತರ ಪಾಕಿಸ್ತಾನಿ ಡಿಜಿಎಂಒ ಅವರ ಕರೆ ಬಂದಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಮೇ 9-10ರ ರಾತ್ರಿ ಪಾಕಿಸ್ತಾನ ಮಿಲಿಟರಿ ಪ್ರಮುಖ ಭಾರತೀಯ ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಪ್ರಯತ್ನಿಸಿದ ನಂತರ ಭಾರತ ಕೂ ದಾಳಿಗಳನ್ನು ಪ್ರಾರಂಭಿಸಿತ್ತು.
ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಒಂಬತ್ತು ಭಯೋತ್ಪಾದಕರ ನೆಲೆಗಳನ್ನು ನಾಶಮಾಡಲು ಮೇ 7 ರ ಮುಂಜಾನೆ ಆಪರೇಷನ್ ಸಿಂಧೂರ ಪ್ರಾರಂಭಿಸಲಾಯಿತು. ಪಾಕಿಸ್ತಾನಿ ದಾಳಿಗಳಿಗೆ ನಂತರದ ಎಲ್ಲಾ ಪ್ರತೀಕಾರಗಳನ್ನು ಆಪರೇಷನ್ ಸಿಂಧೂರ ಅಡಿಯಲ್ಲಿ ನಡೆಸಲಾಯಿತು.
ಭಯೋತ್ಪಾದಕ ದಾಳಿಯ ಅಪರಾಧಿಗಳು ಮತ್ತು ಪ್ರಾಯೋಜಕರನ್ನು ಶಿಕ್ಷಿಸುವ ಸ್ಪಷ್ಟ ಮಿಲಿಟರಿ ಗುರಿಯೊಂದಿಗೆ ಆಪರೇಷನ್ ಸಿಂಧೂರ ಆರಂಭಿಸಿದ್ದೆವು ಎಂದು ಲೆಫ್ಟಿನೆಂಟ್ ಜನರಲ್ ಘಾಯ್ ಹೇಳಿದರು.
ಇದನ್ನೂ ಓದಿ: ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿದರೆ, ಪ್ರಬಲ ತಿರುಗೇಟು ನೀಡಲು ಕಮಾಂಡರ್ಗಳಿಗೆ ಪರಮಾಧಿಕಾರ
ಇದನ್ನೂ ಓದಿ: 9 ಭಯೋತ್ಪಾದಕ ನೆಲೆಗಳ ಮೇಲಿನ ದಾಳಿಯಲ್ಲಿ 100ಕ್ಕೂ ಹೆಚ್ಚು ಉಗ್ರರ ಹತ್ಯೆ: DGMO ಲೆ.ಜ.ರಾಜೀವ್ ಘಾಯ್