ವಿಶ್ವದ ಅತೀ ಎತ್ತರದ ಚೆನಾಬ್ ರೈಲ್ವೆ ಸೇತುವೆಯನ್ನು ಶುಕ್ರವಾರ ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದಾರೆ. ಉಧಂಪುರ-ಶ್ರೀನಗರ-ಬಾರಾಮುಲ್ಲಗಳಿಗೆ ಸಂಪರ್ಕ ಸಾಧಿಸುವ ಈ ಸೇತುವೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಇದರ ಜೊತೆಗೆ, ರೈಲ್ವೆ ಕಮಾನು ನಿರ್ಮಾಣದ ಹಿಂದಿರುವ ಇಂಜಿನಿಯರ್ಗಳತ್ತವೂ ದೇಶದ ಕಣ್ಣು ನೆಟ್ಟಿದೆ.
ಅದ್ಭುತವಾದ ರೈಲ್ವೆ ಕಮಾನು ನಿರ್ಮಾಣದ ಹಿಂದಿರುವ ತಜ್ಞರಲ್ಲಿ ಒಬ್ಬರು ನಮ್ಮ ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ)ಯ ಪ್ರೊ.ಜಿ.ಮಾಧವಿ ಲತಾ. ಐಐಎಸ್ಸಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ರಾಕ್ ಇಂಜಿನಿಯರಿಂಗ್ ತಜ್ಞೆ ಪ್ರೊ.ಲತಾ ಅವರು, ₹1,486 ಕೋಟಿ ರೂ. ವೆಚ್ಚದ ಸೇತುವೆಯ ವಿನ್ಯಾಸ ಮತ್ತು ನಿರ್ಮಾಣದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರೊಬ್ಬರು ಈ ಸೇತುವೆಯ ನಿರ್ಮಾಣಕ್ಕೆ ಬೇಕಾದ ಮಾರ್ಗದರ್ಶನ ನೀಡವಲ್ಲಿ ತಮ್ಮ 17 ವರ್ಷಗಳನ್ನು ಕಳೆದಿದ್ದಾರೆ.
ಮಾಧವಿ ಲತಾ ಅವರನ್ನು ಉತ್ತರ ರೈಲ್ವೆ ಮತ್ತು ಯೋಜನಾ ಗುತ್ತಿಗೆದಾರ ಆಫ್ಕಾನ್ಸ್, ಸೇತುವೆಯ ನಿರ್ಮಾಣ ಹಂತದಲ್ಲಿ ಬೇಕಾದಂತಹ ಮಾರ್ಗದರ್ಶನ ನೀಡುವಂತೆ ಆಹ್ವಾನಿಸಿತ್ತು. ಅತ್ಯದ್ಭುತ ಸೇತುವೆಯೊಂದು, ಶತಮಾನಕ್ಕೂ ಹೆಚ್ಚು ಕಾಲ, ಅತ್ಯಂತ ಕಠಿಣ ನೈಸರ್ಗಿಕ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ಬೇಕಾದಂತಹ ಸ್ಲೋಪ್ ಸ್ಟೆಬಿಲೈಸೇಶನ್ ಮತ್ತು ಸೇತುವೆ ಅಡಿಪಾಯದ ಕುರಿತು ಸಲಹೆ ನೀಡುವಂತೆ ಮನವಿ ಮಾಡಿತ್ತು.
ಜಿ. ಮಾಧವಿ ಲತಾ ಯಾರು?: ಮಾಧವಿ ಲತಾ ಅವರು ಆಂಧ್ರ ಪ್ರದೇಶದ ಒಂದು ಸಣ್ಣ ಹಳ್ಳಿಯಾದ ಯದುಗುಂಡ್ಲಪಾಡುವಿನವರು. ಇವರು ತಮ್ಮ ಸಮುದಾಯದಿಂದ ಬಂದಂತಹ ಮೊದಲ ಎಂಜಿನಿಯರ್. ಮಾಧವಿ ಲತಾ ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. 2021ರಲ್ಲಿ, ಭಾರತೀಯ ಭೂ ತಾಂತ್ರಿಕ ಸೊಸೈಟಿ ಅತ್ಯುತ್ತಮ ಮಹಿಳಾ ಭೂತಾಂತ್ರಿಕ ಸಂಶೋಧಕಿ ಪ್ರಶಸ್ತಿ ನೀಡಿ ಗೌರವಿಸಿದೆ. 2022ರಲ್ಲಿ ಸ್ಟೀಮ್ ಆಫ್ ಇಂಡಿಯಾದ ಟಾಪ್ 75 ಮಹಿಳೆಯರಲ್ಲಿ ಒಬ್ಬರು ಎಂಬ ಹಿರಿಮೆಗೆ ಪಾತ್ರರಾದರು.
ಶೈಕ್ಷಣಿಕ ಹಿನ್ನೆಲೆ: ಡಾ.ಲತಾ 1992ರಲ್ಲಿ ಕಾಕಿನಾಡದ ಜವಾಹರಲಾಲ್ ನೆಹರು ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಸಿವಿಲ್ ಎಂಜಿನಿಯರಿಂಗ್ನಲ್ಲಿ ಪ್ರಥಮ ಶ್ರೇಣಿಯಲ್ಲಿ ಬಿ.ಟೆಕ್ ಪೂರ್ಣಗೊಳಿಸಿದರು. ವಾರಂಗಲ್ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಎಂ.ಟೆಕ್ ವಿದ್ಯಾರ್ಥಿನಿಯಾಗಿ ಚಿನ್ನದ ಪದಕ ಪಡೆದರು. 2000ರಲ್ಲಿ ಐಐಟಿ-ಮದ್ರಾಸ್ನಲ್ಲಿ ಜಿಯೋಟೆಕ್ನಿಕಲ್ ಎಂಜಿನಿಯರಿಂಗ್ನಲ್ಲಿ ಡಾಕ್ಟರೇಟ್ ಪದವಿ ಪೂರ್ಣಗೊಳಿಸಿದರು. ನಂತರ ಬೆಂಗಳೂರಿನ ಐಐಎಸ್ಸಿನಲ್ಲಿ ವೃತ್ತಿಗೆ ಸೇರಿದರು. 2003ರಿಂದ ಇಲ್ಲಿ ಮಾಧವಿ ಅಧ್ಯಾಪಕ ವೃತ್ತಿ ಮಾಡುತ್ತಿದ್ದಾರೆ.
Congratulations to Prof. Madhavi Latha of @iiscbangalore for your remarkable contribution to the #ChenabBridge — the world’s highest railway arch bridge, inaugurated today by PM Shri @NarendraModi.
— Tejasvi Surya (@Tejasvi_Surya) June 6, 2025
Your role in this engineering marvel inspires young minds, especially women in… pic.twitter.com/ONfQqpuDwE
ಚೆನಾಬ್ ರೈಲು ಸೇತುವೆಯ ವಿಶೇಷತೆ: ಭಾರತದ ಹೆಮ್ಮೆಯ ಸಾಧನೆಯಾಗಿರುವ ಈ ಸೇತುವೆ ಜಮ್ಮು ಮತ್ತು ಶ್ರೀನಗರಕ್ಕೆ ಸಂಪರ್ಕ ಕಲ್ಪಿಸುತ್ತದೆ. ವಿಶ್ವದ ಅತೀ ಎತ್ತರದ ಏಕ-ಕಮಾನು ರೈಲ್ವೆ ಸೇತುವೆ. ಚೆನಾಬ್ ನದಿಪಾತ್ರದಿಂದ 359 ಮೀಟರ್ ಎತ್ತರದಲ್ಲಿರುವ 1,315 ಮೀಟರ್ ಉದ್ದದ ಕಮಾನು ಸೇತುವೆಯು ಐಫೆಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ. ಇದರ ಜೀವಿತಾವಧಿ 120 ವರ್ಷಗಳು ಎಂದು ಹೇಳಲಾಗಿದೆ.
ಗಂಟೆಗೆ 260 ಕಿ.ಮೀ.ವರೆಗಿನ ಗಾಳಿಯ ವೇಗ ಮತ್ತು ಭೂಕಂಪನ ತಡೆದುಕೊಳ್ಳುವಂತೆ ನಿರ್ಮಿಸಲಾದ ಸೇತುವೆಯ ಕೆಲಸ ಪೂರ್ಣಗೊಳ್ಳಲು ಸುಮಾರು ಎರಡು ದಶಕಗಳು ಬೇಕಾಯಿತು. 2008ರಲ್ಲಿ ಸ್ಥಗಿತಗೊಂಡಿದ್ದ ನಿರ್ಮಾಣ ಕಾರ್ಯ 2010ರಲ್ಲಿ ಪುನರಾರಂಭವಾಯಿತು.
ಚೆನಾಬ್ ಸೇತುವೆ ಯೋಜನೆಯಲ್ಲಿ ಜಿ.ಮಾಧವಿ ಲತಾ ಪಾತ್ರ ಮತ್ತು ಸವಾಲುಗಳು: ಮಾಧವಿ ಅವರು 2005ರಿಂದ 17 ವರ್ಷಗಳ ಕಾಲ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿ ಚೆನಾಬ್ ಸೇತುವೆ ರೂಪುಗೊಳ್ಳಲು ಸಹಾಯ ಮಾಡಿದ್ದಾರೆ. ಮಾಧವಿ ಲತಾ ಇತ್ತೀಚೆಗೆ ಇಂಡಿಯನ್ ಜಿಯೋಟೆಕ್ನಿಕಲ್ ಜರ್ನಲ್ನ ಮಹಿಳಾ ವಿಶೇಷ ಸಂಚಿಕೆಯಲ್ಲಿ "Design as You Go: The Case Study of Chenab Railway Bridge"ಎಂಬ ಶೀರ್ಷಿಕೆಯ ಪ್ರಬಂಧವನ್ನು ಪ್ರಕಟಿಸಿದರು. ಅದರಲ್ಲಿ ತಾವು ಹಾಗೂ ತಮ್ಮ ತಂಡ ಈ ಯೋಜನೆಯಲ್ಲಿ ಕೆಲಸ ಮಾಡಿದ ವೈಖರಿಯನ್ನು ವಿವರಿಸಿದ್ದಾರೆ.
"ಎರಡು ಎತ್ತರದ ಬೆಟ್ಟಗಳು. ಕೆಳಗೆ ಒಂದು ನದಿ. ಅವುಗಳ ನಡುವೆ ಸೇತುವೆ ನಿರ್ಮಿಸಬೇಕಾಗಿತ್ತು. ಬೆಟ್ಟಗಳನ್ನು ಕೆತ್ತುವಾಗ, ಬಂಡೆಗಳ ಹಲವು ರಹಸ್ಯಗಳು ಬಹಿರಂಗಗೊಂಡವು. ಬಂಡೆಗಳ ನಡುವೆ ದೊಡ್ಡ ಕುಳಿಗಳು ಗೋಚರಿಸುತ್ತಿದ್ದವು. ಅವುಗಳನ್ನು ದುರಸ್ತಿ ಮಾಡದಿದ್ದರೆ, ಬಂಡೆಗಳು ಕುಸಿಯುತ್ತಿದ್ದವು. ನಾವು ಗ್ರೌಟಿಂಗ್ ಸಿಮೆಂಟ್ನಿಂದ ಅಂತರವನ್ನು ತುಂಬಿದೆವು. ಬಂಡೆಗಳು ಬೀಳದಂತೆ ತಡೆಯಲು ನಾವು ಉಕ್ಕಿನ ಲಂಗರುಗಳನ್ನು ಸ್ಥಾಪಿಸಿದ್ದೇವೆ. ಬಂಡೆಗಳ ಹಾದಿಯನ್ನು ನಾವು ಅರ್ಥಮಾಡಿಕೊಂಡ ನಂತರ, ಉಕ್ಕಿನ ಲಂಗರುಗಳ ಉದ್ದ ಮತ್ತು ಜೋಡಣೆಯನ್ನು ಮತ್ತೆ ಮತ್ತೆ ಲೆಕ್ಕ ಹಾಕಬೇಕಾಗಿತ್ತು. ಯೋಜನೆಯನ್ನು ಕಾಲಕಾಲಕ್ಕೆ ಬದಲಾಯಿಸಬೇಕಾಗಿತ್ತು. ಆದ್ದರಿಂದ ನಾವು 'ಮುಂದುವರಿದಂತೆ ವಿನ್ಯಾಸ' ವಿಧಾನವನ್ನು ಅನುಸರಿಸಿದೆವು. ಇದಲ್ಲದೆ, ಇದು ಆಗಾಗ್ಗೆ ಭೂಕಂಪಗಳು ಸಂಭವಿಸುವ ಪ್ರದೇಶವಾಗಿದೆ. ಆದ್ದರಿಂದ ಅಡಿಪಾಯವನ್ನು ಆಳವಾಗಿ ಹಾಕಬೇಕಾಗಿತ್ತು. ಸೇತುವೆಯ ಮೇಲ್ಭಾಗದಲ್ಲಿ ಗಂಟೆಗೆ 260 ಕಿಮೀ ವೇಗದಲ್ಲಿ ಬೀಸುವ ಗಾಳಿ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ನಾವು 120 ವರ್ಷಗಳ ಕಾಲ ಯಾವುದೇ ಸಮಸ್ಯೆಗಳಿಲ್ಲದೆ ನಿಲ್ಲಬಲ್ಲಂತಹ ಸೇತುವೆಯನ್ನು ನಿರ್ಮಾಣ ಮಾಡಬೇಕಿತ್ತು. ಇದು ನಿಜವಾಗಿಯೂ ಒಂದು ಸವಾಲೇ ಆಗಿತ್ತು" ಎಂದು ತಾವು ಎದುರಿಸಿದ ಸವಾಲುಗಳನ್ನು ವಿವರಿಸಿದ್ದಾರೆ.
ಡಾ.ಲತಾ ಅವರು ರಾಕ್ ಆ್ಯಂಕರ್ಗಳ ವಿನ್ಯಾಸ ಮತ್ತು ಕಾರ್ಯತಂತ್ರದ ನಿಯೋಜನೆಯ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ಸೇತುವೆ ನಿರ್ಮಾಣ ಕಾರ್ಯದಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇದನ್ನೂ ಓದಿ: ಜಮ್ಮು ಕಾಶ್ಮೀರದಲ್ಲಿ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ಉದ್ಘಾಟಿಸಿದ ಪ್ರಧಾನಿ ಮೋದಿ