ಗಯಾ (ಬಿಹಾರ): ಚಿಕ್ಕಪುಟ್ಟ ಜಗಳಗಳಿಗೂ ಜನರು ಪೊಲೀಸ್ ಠಾಣೆ ಮೆಟ್ಟಿಲೇರುವ ಈ ದಿನಮಾನಗಳಲ್ಲಿ ಗಯಾ ಜಿಲ್ಲೆಯ ಬಂಕಟ್ ಎಂಬ ಪುಟ್ಟ ಗ್ರಾಮವು 111 ವರ್ಷಗಳಿಂದ ಒಂದೇ ಒಂದು ಪೊಲೀಸ್ ಪ್ರಕರಣ ದಾಖಲಾಗದೇ ಶಾಂತಿ ಕಾಪಾಡಿಕೊಂಡು ಬರುತ್ತಿದೆ. ಸ್ವಾತಂತ್ರ್ಯಕ್ಕೂ ಮುನ್ನವೇ ಈ ಗ್ರಾಮ ಹುಟ್ಟಿಕೊಂಡಿದ್ದು, ಅಲ್ಲಿಂದ ಈವರೆಗೂ ಶಾಂತಿ ಕಾಪಾಡಿಕೊಂಡು ಬಂದಿದೆ. ಇದು ಅಚ್ಚರಿ ಅನ್ನಿಸಿದರೂ ಸತ್ಯ ಎನ್ನುತ್ತಾರೆ ಗ್ರಾಮಸ್ಥರು.
1914ರಲ್ಲಿ ಅರಣ್ಯ ಭೂಮಿಯಲ್ಲಿ ಹುಟ್ಟಿಕೊಂಡ ಬಂಕಟ್ ಗ್ರಾಮವು, ಅಂದಿನಿಂದ ಈವರೆಗೆ ತನ್ನದೇಯಾದ ಕಾನೂನು, ಕಟ್ಟಳೆ ಹಾಗೂ ಕಾಯ್ದೆಗಳನ್ನು ರೂಪಿಸಿಕೊಂಡು ಬರುತ್ತಿದೆ. ಸ್ವ-ಆಡಳಿತ ನಿಯಮಗಳನ್ನು ರಚಿಸಿಕೊಂಡಿದ್ದಲ್ಲದೇ, ಯಾವುದರ ತಂಟೆಗೂ ಹೋಗದೇ ಎಲ್ಲರೂ ಸ್ಥಳೀಯ ಕಾನೂನು ಅಡಿಯಲ್ಲಿ ಶಾಂತತೆಯಿಂದ ಬದುಕುತ್ತಿರುವುದು ಗಮನಾರ್ಹ ಸಂಗತಿಯಾಗಿದೆ.

''ಬಂಕಟ್ ಗ್ರಾಮದ ಹಿರಿಯರು ನಮಗಾಗಿ ಈ ಹಿಂದೆಯೇ ಕೆಲವು ನಿಯಮಗಳನ್ನು ರಚಿಸಿದ್ದಾರೆ. ನಾವೆಲ್ಲರೂ ಇಲ್ಲಿಯವರೆಗೆ ಅದನ್ನು ಅನುಸರಿಸಿಕೊಂಡು ಬರುತ್ತಿದ್ದೇವೆ" ಎನ್ನುತ್ತಾರೆ ಗ್ರಾಮದ ನಿವಾಸಿ ರಾಮದೇವ್ ಯಾದವ್.
ಸುಮಾರು 600 ಜನರು ಮತ್ತು 60 ಮನೆಗಳಿರುವ ಈ ಗ್ರಾಮದಲ್ಲಿ ಮೂರು ಸಮುದಾಯದವರಿದ್ದಾರೆ. ಯಾವುದೇ ಜಗಳ, ತಂಟೆ, ತಕರಾರು ಉಂಟಾದರೆ, ಗ್ರಾಮದ ಹಿರಿಯರು ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸುತ್ತಾರೆ. ಹಿರಿಯರ ನೇತೃತ್ವದ ಐವರು ಸದಸ್ಯರ ತಂಡ, ಸಂಬಂಧಪಟ್ಟವರೊಂದಿಗೆ ಮಾತನಾಡಿ ಉದ್ಭವಿಸಿದ ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸುವುದು ಇಲ್ಲಿನ ಸಂಪ್ರದಾಯ.

"ನನಗೆ ತಿಳಿದಮಟ್ಟಿಗೆ ಗ್ರಾಮಸ್ಥರಲ್ಲಿ ಈವರೆಗೆ ಯಾರೂ ಪೊಲೀಸ್ ಠಾಣೆಯ ಬಾಗಿಲು ಹತ್ತಿದ ಸುದ್ದಿ ಕೇಳಿಲ್ಲ. ಸ್ವಾತಂತ್ರ್ಯ ಪೂರ್ವ ಈ ಗ್ರಾಮ ಅಸ್ತಿತ್ವಕ್ಕೆ ಬಂದಿದ್ದು, ಇಲ್ಲಿಯವರೆಗೆ ಯಾರೂ ಗ್ರಾಮದ ಹೊರಗೆ ಯಾವುದೇ ತೊಂದರೆಯಲ್ಲಿ ಸಿಲುಕಿಕೊಂಡಿಲ್ಲವೆಂದು ನನ್ನ ಅಜ್ಜ ಮತ್ತು ತಂದೆ ಯಾವಾಗಲೂ ನಮಗೆ ಹೇಳುತ್ತಿದ್ದರು" ಎಂದು ಗ್ರಾಮದ ಮತ್ತೊಬ್ಬ ನಿವಾಸಿ ಹೀರಾ ರಾವಣಿ ತಿಳಿಸಿದರು.
"ದಾಖಲೆಗಳನ್ನು ಗಮನಿಸಲಾಗಿದೆ. ಬಂಕಟ್ ಗ್ರಾಮಸ್ಥರು ಹೇಳುತ್ತಿರುವುದು ನಿಜ. ನಮ್ಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಗ್ರಾಮಕ್ಕೆ ಸಂಬಂಧಪಟ್ಟಂತೆ ಇಲ್ಲಿಯವರೆಗೆ ಯಾವುದೇ ದೂರು ಆಗಲಿ, ಎಫ್ಐಆರ್ ಆಗಲಿ ದಾಖಲಾಗಿಲ್ಲ. ನಾನು ಸಾಕಷ್ಟು ದಾಖಲೆಗಳನ್ನು ಪರಿಶೀಲಿಸಿದ್ದೇನೆ. ಸ್ಥಳೀಯರು ಮತ್ತು ಸರಪಂಚರೊಂದಿಗೂ ಚರ್ಚಿಸಿದ್ದೇನೆ. ಈ ವಿಷಯ ತಿಳಿದು ಅಚ್ಚರಿಯ ಜೊತೆಗೆ ಖುಷಿ ಕೂಡ ಆಯಿತು" ಎಂದು ಅಮಾಸ್ ಪೊಲೀಸ್ ಠಾಣೆಯ ಉಸ್ತುವಾರಿ ಶೈಲೇಶ್ ಕುಮಾರ್ ಗ್ರಾಮಸ್ಥರನ್ನು ಹಾಡಿಹೊಗಳಿದ್ದಾರೆ.

"ನಾವು ಶಾಂತಿ ಪ್ರಿಯರು. ಗ್ರಾಮದ ಶಾಂತಿಗೆ ಭಂಗ ತರುವ ಯಾವುದೇ ವಿಷಯಗಳಲ್ಲಿ ಭಾಗಿಯಾಗಲು ನಾವು ಬಯಸುವುದಿಲ್ಲ. ಕಳೆದ ಹಲವು ದಿನಗಳಿಂದ ಸರಪಂಚರು ಗ್ರಾಮದ ಅಭಿವೃದ್ಧಿಗಾಗಿ ಶ್ರಮಿಸಿಕೊಂಡು ಬರುತ್ತಿದ್ದಾರೆ. ಏನೇ ಸಮಸ್ಯೆ, ತಂಟೆ, ತಕರಾರು ಹುಟ್ಟಿಕೊಂಡರೂ ಎರಡೂ ಕಡೆಯಿಂದ ವಿಚಾರಿಸಿ, ಚರ್ಚಿಸಿ, ಒಮ್ಮತಕ್ಕೆ ಬರುವ ಮೂಲಕ ನ್ಯಾಯ ನೀಡಲಾಗುತ್ತದೆ" ಎನ್ನುತ್ತಾರೆ ಸರಪಂಚ ರಾಜ್ ಕುಮಾರ್ ಗೆಹ್ಲೋಟ್.
"ಪಂಚರು ಹೇಳಿದ್ದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಅವರ ನಿರ್ಧಾರವೇ ಅಂತಿಮ. ಅದನ್ನು ಯಾರೂ ಉಲ್ಲಂಘಿಸುವಂತಿಲ್ಲ. ಹಾಗೊಂದು ವೇಳೆ ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಸಾಮಾಜಿಕ ಬಹಿಷ್ಕಾರ ಕೂಡ ಎದುರಿಸಬೇಕಾಗುತ್ತದೆ. ಹೀಗೆ ಪಂಚರು ಹೇಳಿದ್ದನ್ನು ಕೇಳದ ವ್ಯಕ್ತಿಯೊಬ್ಬ 11 ಬಾರಿ ಬೆತ್ತದ ಹೊಡೆತಗಳನ್ನು ಅನುಭವಿಸಬೇಕಾಯಿತು" ಎಂದು ರಾಮದೇವ್ ಎಂಬುವರು ನೆನಪಿಸಿಕೊಂಡರು.

"ಒಮ್ಮೆ ಒಂದು ವಿವಾದ ಪೊಲೀಸ್ ಠಾಣೆಯವರೆಗೂ ತಲುಪುತ್ತಿತ್ತು. ಆದರೆ, ವಿಷಯ ಉಲ್ಬಣಗೊಳ್ಳುವ ಮುನ್ನವೇ ನಾವು, ಗ್ರಾಮದ ಹಿರಿಯರೂ ಬಂದು ಪರಸ್ಪರ ಒಪ್ಪಂದದೊಂದಿಗೆ ಆ ಸಮಸ್ಯೆಯನ್ನು ಬಗೆಹರಿಸಿದೆವು" ಎನ್ನುತ್ತಾರೆ ರಾಮದೇವ್.
"ನಮ್ಮ ಕಟ್ಟಳೆಗಳನ್ನು ಮೀರಿದರೆ ಗ್ರಾಮದಲ್ಲಿ ದಂಡ ವಿಧಿಸುವ ಅವಕಾಶ ಕೂಡ ಇದೆ. ಆ ದಂಡದ ಮೊತ್ತವನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ. ಕೆಲವು ವೇಳೆ ಬಡವರಿಗೆ ತುರ್ತು ಸಹಾಯಕ್ಕಾಗಿ ನೀಡಿದರೆ, ಇನ್ನು ಕೆಲ ಸಂದರ್ಭಗಳಲ್ಲಿ ಖರ್ಚು ಮಾಡಲು ಸಾಧ್ಯವಾಗದವರ ಮದುವೆಗಳಿಗೆ ಈ ಹಣ ನೀಡಲಾಗುತ್ತದೆ. ನಿರ್ಗತಿಕರಿಗೆ ಸಾಲವಾಗಿಯೂ ನೀಡಲಾಗುತ್ತದೆ. ಇದು ಇಂದು-ನಿನ್ನೆಯದ್ದಲ್ಲ. ನಮ್ಮ ಪೂರ್ವಿಕರಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ. ನಮಗೆ ನಾವೇ ಕೆಲವು ಕಾನೂನು ರೂಪಿಸಿಕೊಂಡು ಬರುತ್ತಿದ್ದೇವೆ" ಎನ್ನುತ್ತಾರೆ ಗ್ರಾಮದ ಮತ್ತೋರ್ವ ಮುಖಂಡರು.

''ಗ್ರಾಮವು 352 ಮತದಾರರನ್ನು ಹೊಂದಿದ್ದು, ಮುಖ್ಯವಾಗಿ ಕೃಷಿಯನ್ನು ಅವಲಂಬಿಸಿದೆ. ಕಳೆದ 15 ವರ್ಷಗಳಲ್ಲಿ, ಅನೇಕ ಯುವಕರು ಉದ್ಯೋಗಕ್ಕಾಗಿ ಬೇರೆ ಬೇರೆ ನಗರಗಳಿಗೆ ತೆರಳಿದ್ದಾರೆ. ಆರಂಭದಲ್ಲಿ ನಾಲ್ಕರಿಂದ ಐದು ಮನೆಗಳೊಂದಿಗೆ ಪ್ರತ್ಯೇಕವಾಗಿದ್ದ ಈ ಗ್ರಾಮವು ಈಗ ಸರಿಯಾದ ರಸ್ತೆ, ನೀರು ಸರಬರಾಜು ಮತ್ತು ವಿದ್ಯುತ್ ಸಂಪರ್ಕವನ್ನು ಹೊಂದಿದೆ. ಕಾಲಕಾಲಕ್ಕೆ ಅಭಿವೃದ್ಧಿಯತ್ತ ಸಾಗುತ್ತಿದೆ. 1990ರ ದಶಕದಲ್ಲಿ ಗಯಾ ನಕ್ಸಲೈಟ್ ಚಟುವಟಿಕೆಯ ಕೇಂದ್ರವಾಗಿದ್ದಾಗ, ನಕ್ಸಲರು ಬಂಕಟ್ ಗ್ರಾಮಸ್ಥರ ಒಗ್ಗಟ್ಟನ್ನು ಮುರಿಯಲು ಬಂದಿದ್ದರು. ಆದರೆ, ಅದು ಕೈಗೂಡಲಿಲ್ಲ. ಹಲವು ಬಾರಿ ಮಧ್ಯಪ್ರವೇಶಿಸಲು ವಿಫಲ ಪ್ರಯತ್ನ ಮಾಡಿದರು. ನಾವು ಯಾರಿಗೂ ತಲೆಬಾಗದಿರಲು ನಿರ್ಧರಿಸಿದ್ದನ್ನು ಕಂಡು ಅವರು ಅಷ್ಟಕ್ಕೆ ಸುಮ್ಮನಾದರು. ಸದ್ಯ ಗ್ರಾಮ ಬೆಳೆಯುತ್ತಿದೆ. ಯುವಕರ ಶಿಕ್ಷಣ ಮಟ್ಟವೂ ಉತ್ತಮವಾಗಿದೆ. ಅನೇಕ ಯುವತಿಯರು ಪದವೀಧರರಾಗಿದ್ದರೆ, ಅನೇಕರು ಹೊರಗೆ ಕೆಲಸ ತೆರಳುತ್ತಿದ್ದಾರೆ. ಒಂದು ಪ್ರಾಥಮಿಕ ಶಾಲೆ ಇದೆ. ಹೆಚ್ಚಿನ ಅಧ್ಯಯನ ಮಾಡಲು ಬಯಸುವವರು ಹತ್ತಿರದಲ್ಲಿರುವ ಔರಂಗಾಬಾದ್ ಜಿಲ್ಲೆಯ ಮದನ್ಪುರ ಪ್ರೌಢಶಾಲೆಗೆ ತೆರಳುತ್ತಿದ್ದಾರೆ. ನಮ್ಮ ಕಟ್ಟಳೆ ನಮಗೆ ಖುಷಿ ತರಿಸಿವೆ'' ಎನ್ನುತ್ತಾರೆ ರಾಮದೇವ್.

ಪ್ರಾದೇಶಿಕ ಪತ್ರಿಕೆಯಲ್ಲಿ ಕೆಲಸ ಮಾಡುವ ಪತ್ರಕರ್ತ ಧನಂಜಯ್ ಕುಮಾರ್ ಮಾತನಾಡಿ, ''ಬಂಕಟ್ ಗ್ರಾಮಸ್ಥರು ಯಾವಾಗಲೂ ಸರ್ವಾನುಮತದ ನಿರ್ಧಾರದೊಂದಿಗೆ ಮತ ಚಲಾಯಿಸಲು ನಿರ್ಧರಿಸುತ್ತಾರೆ. ಯಾರಿಗೆ ಮತ ಹಾಕಬೇಕೆಂದು ಗ್ರಾಮಸ್ಥರು ಮೊದಲೇ ತಮ್ಮಲ್ಲಿಯೇ ನಿರ್ಧರಿಸುತ್ತಾರೆ. ಯಾವ ಅಭ್ಯರ್ಥಿ ಗ್ರಾಮಕ್ಕೆ ಪ್ರಯೋಜನಕಾರಿ ಅಂತ ತಿಳಿದು ನಂತರ ಅವರು ತಮ್ಮ ನಿರ್ಧಾರದ ಪ್ರಕಾರ ತಮ್ಮ ಮತದಾನದ ಹಕ್ಕನ್ನು ಚಲಾಯಿಸುತ್ತಾರೆ. ಇದು ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ" ಎಂದು ಅವರು ಹೇಳುತ್ತಾರೆ.
''ಬಂಕಟ್ ಗ್ರಾಮಸ್ಥರಿಗೆ ಏಕತೆ ಮತ್ತು ಸಮಗ್ರತೆಯು ಅನ್ನೋದು ಹುಟ್ಟಿನಿಂದಲೇ ಅವರಲ್ಲಿ ಬೇರೂರಿದೆ. ನಮ್ಮ ಪೂರ್ವಜರು ಶಾಂತಿಯನ್ನು ಕಾಪಾಡಿಕೊಂಡು, ಸೌಹಾರ್ದಯುತವಾಗಿ ಸಮಸ್ಯೆಗಳನ್ನು ಬಗೆಹರಿಸಿದ್ದರಿಂದ, ನಾವು ವಿಮುಖರಾಗಲು ಬಯಸುವುದಿಲ್ಲ. ನಿಯಮಗಳು ನಮ್ಮ ಒಳಿತಿಗಾಗಿರುವಾಗ, ಇನ್ನೂ ಹೆಚ್ಚಿನದನ್ನು ಮಾಡುತ್ತೇವೆ" ಎಂದು ಗ್ರಾಮಸ್ಥರು ಒಗ್ಗಟ್ಟಿನ ಮಂತ್ರ ಹೇಳುತ್ತಾರೆ.