ಹೈದರಾಬಾದ್ (ತೆಲಂಗಾಣ): ಜಮ್ಮು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ಹೇಯ ಕೃತ್ಯಕ್ಕೆ ಗುಪ್ತಚರ ಇಲಾಖೆಯ(ಐಬಿ) ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಕಾಶ್ಮೀರ ಪ್ರವಾಸದಲ್ಲಿದ್ದ ಅಧಿಕಾರಿ ಮನೀಶ್ ರಂಜನ್ ಅವರನ್ನು ಅವರ ಪತ್ನಿ ಮತ್ತು ಮಕ್ಕಳೆದುರೇ ಗುಂಡಿಟ್ಟು ಕೊಂದು ಉಗ್ರರು ಅಟ್ಟಹಾಸ ಮೆರೆದಿದ್ದಾರೆ.
ಮೂಲಭೂತವಾದದ ಮದವೇರಿಸಿಕೊಂಡಿರುವ ಕ್ರಿಮಿಗಳು ಮಂಗಳವಾರ (ಏಪ್ರಿಲ್ 22) ರಂದು ಪ್ರವಾಸಿಗರ ಮಾರಣಹೋಮ ನಡೆಸಿರುವ ಈ ದುಷ್ಕೃತ್ಯ ನಡೆಸಿದ್ದಾರೆ.
ಬಿಹಾರ ಮೂಲದ ಐಬಿ ಅಧಿಕಾರಿ ಮನೀಶ್ ರಂಜನ್ ಅವರು ಹೈದರಾಬಾದ್ನಲ್ಲಿ ಸಚಿವಾಲಯದ ಗುಪ್ತಚರ ಇಲಾಖೆಯ ಕರ್ತವ್ಯದಲ್ಲಿದ್ದರು. ಅವರು ಕರ್ತವ್ಯಕ್ಕೆ ರಜೆ ಹಾಕಿ ತಮ್ಮ ಕುಟುಂಬದೊಂದಿಗೆ ಕಾಶ್ಮೀರ್ ಪ್ರವಾಸ ಕೈಗೊಂಡಿದ್ದರು. ಆದ್ರೆ ನಿರ್ದಯಿಯಾಗಿರುವ ಭಯೋತ್ಪಾದಕರು ಅವರನ್ನು ಕೊಂದು ಹೀನ ಕೃತ್ಯ ಎಸಗಿದ್ದಾರೆ.
ಪಹಲ್ಗಾಮ್ನ ಬೈಸಾರಾನ್ನ ಲ್ಲಿರುವ ಈ ಕಣಿವೆ ಪ್ರದೇಶ ಮಿನಿಸ್ವಿಟ್ವರ್ಲೆಂಡ್ನನಂತಿದ್ದು ಪ್ರವಾಸಿಗರನ್ನು ಆಕರ್ಷಿಸುವ ಸ್ಥಳವಾಗಿದೆ. ಮಕ್ಕಳಿಗೆ ಬೇಸಿಗೆ ರಜೆ ಇರುವುದರಿಂದ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಕುಟುಂಬದವರೊಂದಿಗೆ ತೆರಳಿದ ಅಮಾಯಕರ ನರಮೇಧವನ್ನು ಉಗ್ರರು ನಡೆಸಿದ್ದಾರೆ.
ಈ ದಾಳಿಯ ವಿಚಾರ ತಿಳಿದು ಆಘಾತಕ್ಕೊಳಗಾಗಿರುವ ಸಿಎಂ ರೇವಂತ್ ರೆಡ್ಡಿ, ಇದನ್ನು ತೀವ್ರವಾಗಿ ಖಂಡಿಸಿದ್ದಾರೆ. ಇದು ರಣಹೇಡಿಗಳ ಕೃತ್ಯವೆಂದು ಹೇಳಿದ್ದಾರೆ. ಅಲ್ಲದೆ, ಭಯೋತ್ಪಾದನೆ ವಿರುದ್ಧ ಕೇಂದ್ರ ಸಕರ್ಕರ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಭಯೋತ್ಪಾದಕ ದಾಳಿಯಿಂದ ನೊಂದಿರುವ ಅಧಿಕಾರಿ ಮನೀಶ್ ರಂಜನ್ ಕುಟುಂಬಕ್ಕೆ ಸಿಎಂ ಸಾಂತ್ವನ ಹೇಳಿದ್ದಾರೆ.
ಆಂಧ್ರ ಪ್ರದೇಶ ಸಿಎಂ, ಡಿಸಿಎಂ ರಿಂದ ಖಂಡನೆ: ಉಗ್ರರ ಅಟ್ಟಹಾಸವನ್ನು ತೀವ್ರವಾಗಿ ಖಂಡಿಸಿರುವ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಇದು ಅವಿವೇಕಿತನದ ಹಿಂಸೆ ಎಂದು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಈ ಕೃತ್ಯಕ್ಕೆ ಬಲಿಯಾದವರ ಕುಟುಂಬಗಳಿಗೆ ಧೈರ್ಯ ತುಂಬಿದ್ದಾರೆ. ಈ ಘಟನೆಯಿಂದ ತೀವ್ರ ದುಃಖಿತನಾಗಿದ್ದು, ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಗಾಯಗೊಂಡವರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುವುದಾಗಿ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆಂಧ್ರ ಡಿಸಿಎಂ ಪವನ್ ಕಲ್ಯಾಣ್ ಖಂಡನೆ: ಉಗ್ರರ ದುಷ್ಕೃತ್ಯವನ್ನು ಖಂಡಿಸಿರುವ ಡಿಸಿಎಂ ಪವನ್ ಕಲ್ಯಾಣ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರಂತರ ಕ್ರಮಗಳಿಂದ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಯಂತ್ರಣಕ್ಕೆ ಬಂದಿದ್ದರೂ ಸಹ ಇನ್ನೂ ಕೆಲವೆಡೆ ಹೀನ ಮನಸ್ಥಿತಿಯ ಉಗ್ರರು ಇರುವುದು ಇದರಿಂದ ಗೊತ್ತಾಗಿದೆ ಎಂದಿದ್ದಾರೆ.
26 ಪ್ರವಾಸಿಗರು ಸಾವನ್ನಪ್ಪಿದ್ದರೆ, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಮತ್ತು ನೊಂದಿರುವ ಕುಟುಂಬಗಳಿಗೆ ಸಾಂತ್ವನ ಹೇಳುತ್ತೇನೆ ಎಂದು ಅವರು ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಬಿಆರ್ಎಸ್ ಪಕ್ಷದ ಕಾರ್ಯದರ್ಶಿ ಕೆ ಟಿ ರಾಮರಾವ್ ಪ್ರತಿಕ್ರಿಯಿಸಿ, ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ ಮತ್ತು ನೊಂದ ಕುಟುಂಬಗಳಿಗೆ ನ್ಯಾಯ ಒದಗಿಸುವಂತೆ ಕೇಂದ್ರ ಸರಕಾರಕ್ಕೆ ಒತ್ತಾಯಿಸುತ್ತೇನೆ ಎಂದಿದ್ದಾರೆ.
ನಿನ್ನೆ ನಡೆದ ಈ ಉಗ್ರ ಕೃತ್ಯದಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆರ್ಎಫ್) ಈ ದಾಳಿಯ ಹೊಣೆ ಹೊತ್ತಿದೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ: ಸಹಾಯವಾಣಿ ತೆರೆದ ರಾಜ್ಯ ಸರ್ಕಾರ; ಮೃತದೇಹ ಗುರುತಿಸಲು ಕನ್ನಡಿಗರಿಗೆ ಸಚಿವ ಲಾಡ್ ನೆರವು
ಕಾಶ್ಮೀರ ಉಗ್ರ ದಾಳಿ: ದೆಹಲಿ ವಿಮಾನ ನಿಲ್ದಾಣದಲ್ಲಿ ಅಜಿತ್ ದೋವಲ್, ಜೈಶಂಕರ್ ಜೊತೆ ಪ್ರಧಾನಿ ಮೋದಿ ಸಭೆ