ವಿಜಯವಾಡ, ಆಂಧ್ರಪ್ರದೇಶ: ಮಕ್ಕಳು ತಮ್ಮ ತಂದೆ -ತಾಯಿಗಳನ್ನು ಸಾಕಲು ಆಗದೇ ಕೈಬಿಟ್ಟಿದ್ದರಿಂದ ಕೆಲವರು, ತಂದೆ - ತಾಯಿ ಸಿಟ್ಟು ಮಾಡಿದರು ಎಂದು ಇನ್ನು ಹಲವರು, ಮತ್ತೊಂದಿಷ್ಟು ಜನ ದಾರಿ ತಪ್ಪಿ ನಗರಗಳಿಗೆ ಬಂದು ಸೇರುತ್ತಾರೆ. ಇದು ಒಂದು ವರ್ಗದ ಸಮಸ್ಯೆಯಾದರೆ, ಒಂದಿಷ್ಟು ಮಂದಿ ಕೆಲಸ ಅರಸಿ, ಕೆಲವರು ನಿರುದ್ಯೋಗಿಗಳಾಗಿ ಹೀಗೆ ಹಲವಾರು ಜನರು ದೊಡ್ಡ ದೊಡ್ಡ ನಗರಗಳಿಗೆ ಬಂದು ಸೇರುತ್ತಾರೆ. ಇದರಲ್ಲಿ ಬಹುತೇಕರು ಉದ್ಯೋಗಕ್ಕಾಗಿ ನಗರಕ್ಕೆ ಬರುತ್ತಾರೆ. ರಾತ್ರಿ ಲಾಡ್ಜ್ ನಲ್ಲಿ ತಂಗಬೇಕೆಂದರೂ ಹೆಚ್ಚಿನ ಮೊತ್ತ ತೆರಬೇಕಾಗುತ್ತದೆ. ಆಹಾರ ಮತ್ತು ಇತರ ಅಗತ್ಯಗಳಿಗಾಗಿ ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಈ ವೆಚ್ಚವನ್ನು ಭರಿಸಲಾಗದೇ ಅನೇಕ ವಲಸೆ ಕಾರ್ಮಿಕರು ಮತ್ತು ವಸತಿ ರಹಿತರು ನಗರದ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ರಸ್ತೆ, ಮೇಲ್ಸೇತುವೆ, ಫುಟ್ಪಾತ್ಗಳಲ್ಲಿ ಆಶ್ರಯ ಪಡೆದುಕೊಳ್ಳುತ್ತಾರೆ.
ನಗರಕ್ಕೆ ಬಂದು ಕಷ್ಟಪಡುವವರಿಗಾಗಿ ಈ ಶಿಬಿರ: ಇಂಥವರಿಗಾಗಿ ನಗರ ಬಡತನ ನಿರ್ಮೂಲನಾ ಸಂಸ್ಥೆ ವಿಜಯವಾಡ ನಗರದಲ್ಲಿ ನಾಲ್ಕು ನಿರಾಶ್ರಿತ ವಸತಿ ಗೃಹಗಳ ವ್ಯವಸ್ಥೆ ಮಾಡಿದೆ. ಇದರ ಅರಿವಿಲ್ಲದ ಅನೇಕರು ರಾತ್ರಿಯಿಡೀ ಮುಖ್ಯ ರಸ್ತೆಗಳಲ್ಲಿ ಮತ್ತು ಫುಟ್ಪಾತ್ಗಳಲ್ಲಿ ಮಲಗುತ್ತಾರೆ. ಬೆಳಗ್ಗೆ ಎದ್ದ ನಂತರ ನಗರಸಭೆಯ ಶೌಚಾಲಯ, ಸ್ನಾನಗೃಹಗಳಲ್ಲಿ ನಿತ್ಯದ ಕೆಲಸಗಳನ್ನು ನಿರ್ವಹಿಸಿ, ನಂತರ ಕೆಲಸಕ್ಕಾಗಿ ಹೊರಟು ಹೋಗುತ್ತಾರೆ. ರಾತ್ರಿ ಆಗುತ್ತಿದಂತೆ ಮತ್ತೆ ಇಂತಹುದೇ ಸ್ಥಳಗಳನ್ನ ಆಶ್ರಯಿಸುತ್ತಾರೆ. ಅಂತಹವರ ಕಷ್ಟ ನೀಗಿಸಲು ನಗರ ಬಡತನ ನಿರ್ಮೂಲನಾ ಸಂಸ್ಥೆ ನಿರಾಶ್ರಿತ ವಸತಿ ಗೃಹಗಳ ವ್ಯವಸ್ಥೆ ಮಾಡಿದೆ.

ನಿಮ್ಮ ಆಧಾರ್ ಕಾರ್ಡ್ ತೋರಿಸಿ ಯಾವುದೇ ಅಂಜಿಕೆ ಇಲ್ಲದೇ ಇಲ್ಲಿ ಉಳಿಯಿರಿ: ನಿಮಗೆ ಕೆಲಸ ಸಿಗುವವರೆಗೆ ನೀವು ಈ ವಸತಿ ನಿಲಯಗಳಲ್ಲಿ ಕೆಲವು ದಿನಗಳವರೆಗೆ ಉಚಿತವಾಗಿ ಉಳಿಯಬಹುದು. ಇಂತಹವರು ತಮ್ಮ ಆಧಾರ್ ಕಾರ್ಡ್ ತೋರಿಸುವ ಮೂಲಕ 30 ದಿನಗಳವರೆಗೆ ಉಚಿತ ವಸತಿ ಮತ್ತು ಊಟದ ಸೌಲಭ್ಯವನ್ನು ಪಡೆದುಕೊಳ್ಳಬಹುದು. ಹೊಸ ರಾಜಧಾನಿ ಕಟ್ಟುವ ಕೆಲಸ ಜೋರಾಗುತ್ತಿರುವ ಹಿನ್ನೆಲೆಯಲ್ಲಿ ಈ ವಸತಿ ಕೇಂದ್ರಗಳು ಈಗ ಭರ್ತಿಯಾಗುತ್ತಿವೆ.
ನಿರಾಶ್ರಿತ ವಸತಿ ಗೃಹಗಳನ್ನು ಹೆಚ್ಚಿಸುವಂತೆ ಆಗ್ರಹ: ನಗರದಲ್ಲಿ ಸಾವಿರಾರು ನಿರಾಶ್ರಿತರು ನಿತ್ಯ ರಸ್ತೆಗಳಲ್ಲಿ ಪರದಾಡುತ್ತಿದ್ದಾರೆ. ನಿಯಮಗಳ ಪ್ರಕಾರ, ಒಂದು ಲಕ್ಷ ಜನಸಂಖ್ಯೆಯ ಪ್ರದೇಶಗಳಲ್ಲಿ ಒಂದು ವಸತಿ ರಹಿತರ ಆಶ್ರಯ ಮನೆ ಇರಬೇಕು. ಆದರೆ 1.2 ದಶಲಕ್ಷಕ್ಕೂ ಹೆಚ್ಚು ಜನರು ವಾಸಿಸುವ ವಿಜಯವಾಡ ನಗರದಲ್ಲಿ ಸಾಕಷ್ಟು ವಸತಿ ಕೇಂದ್ರಗಳಿಲ್ಲ. ಈ ಗೃಹಗಳ ಸಂಖ್ಯೆಗಳನ್ನು ಹೆಚ್ಚಿಸಬೇಕಾಗಿದೆ. ನಗರ ಬಡತನ ನಿರ್ಮೂಲನಾ ಸಂಸ್ಥೆ, ನಗರಾಡಳಿತ, ಸ್ವಯಂ ಸೇವಾ ಸಂಸ್ಥೆಗಳ ಸಮನ್ವಯದೊಂದಿಗೆ ನಗರದಲ್ಲಿ ಈ ಆಶ್ರಯ ಮನೆಗಳ ಕುರಿತು ಜಾಗೃತಿ ಮೂಡಿಸಬೇಕಿದೆ. ಬೀದಿಯಲ್ಲಿ ಮಲಗಿರುವ ನಿರಾಶ್ರಿತರನ್ನು ಆಶ್ರಯಧಾಮಕ್ಕೆ ಸ್ಥಳಾಂತರಿಸುವ ಕೆಲಸವಾಗಬೇಕಿದೆ. ಮಹಿಳೆಯರಿಗಾಗಿಯೂ ವಸತಿ ನಿಲಯಗಳನ್ನು ಸ್ಥಾಪಿಸುವ ಅಗತ್ಯ ಇದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮೂರು ಹೊತ್ತಿನ ಊಟ: ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ವಿಜಯವಾಡದಲ್ಲಿ ಕಟ್ಟಡ ನಿರ್ಮಾಣ ಕ್ಷೇತ್ರ ವೇಗ ಪಡೆದುಕೊಂಡಿದೆ. ಇದರಿಂದ ಅನೇಕ ಪ್ರದೇಶಗಳ ಬಡ ಮತ್ತು ಮಧ್ಯಮ ವರ್ಗದ ಜನರು ಉದ್ಯೋಗಕ್ಕಾಗಿ ನಗರಕ್ಕೆ ವಲಸೆ ಬರುತ್ತಿದ್ದಾರೆ. ಅವರಿಗೆ ದಿನಕ್ಕೆ ಮೂರು ಊಟದ ಜೊತೆಗೆ ಹಾಸಿಗೆಗಳು, ಹೊದಿಕೆಗಳು, ಶೌಚಾಲಯಗಳು ಮತ್ತು ಸ್ನಾನ ಗೃಹಗಳನ್ನು ಒದಗಿಸಲಾಗುತ್ತಿದೆ. ವೈದ್ಯಕೀಯ ಪರೀಕ್ಷೆಗಳ ಜೊತೆಗೆ ಧ್ಯಾನ ಮತ್ತು ಯೋಗ ತರಬೇತಿ ತರಗತಿಗಳನ್ನು ನಡೆಸಲಾಗುತ್ತಿದೆ. ಹೀಗೆ ಬರುವವರ ಮನರಂಜನೆಗಾಗಿ ಟಿವಿಗಳ ವ್ಯವಸ್ಥೆಯನ್ನೂ ಮಾಡಲಾಗಿದೆ. ಮನೆಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕಟ್ಟುನಿಟ್ಟಿನ ಕಣ್ಗಾವಲು ವ್ಯವಸ್ಥೆ ಮಾಡಲಾಗಿದೆ. ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಶೆಲ್ಟರ್ಗಳಲ್ಲಿ ಮದ್ಯ, ಧೂಮಪಾನ ಮತ್ತು ಗುಟ್ಖಾ ನಿಷೇಧಿಸಲಾಗಿದೆ.
ಇದನ್ನು ಓದಿ: ಇಲ್ಲಿ ಇನ್ಮುಂದೆ ಮನೆ ಕಟ್ಟುವುದು ಸುಲಭ: ನಕ್ಷೆ ರವಾನಿಸುವ ಅಗತ್ಯವಿಲ್ಲ: ಸರ್ಕಾರದ ಬಹುದೊಡ್ಡ ನಿರ್ಧಾರ
ಏನಿವು IIT - NIT - IIIT: ಇವುಗಳ ನಡುವಿನ ವ್ಯತ್ಯಾಸಗಳೇನು?; ಪ್ರವೇಶ ಪಡೆಯುವುದು ಹೇಗೆ? , ಎಷ್ಟಿರುತ್ತೆ ಶುಲ್ಕ?