ಅಹಮದಾಬಾದ್: "ಹತ್ತಿರ ಹೋಗಿ ನೋಡಿದಾಗ ನಾನು ಕಂಡ ಭಯಾನಕತೆ ಪದಗಳಿಗೆ ಮೀರಿದ್ದು! ಬೆಂಕಿಹೊತ್ತಿಕೊಂಡು ಜನರು ವಿಮಾನದ ಅವಶೇಷಗಳ ಅಡಿಯಿಂದ ಹೊರ ಬರುತ್ತಿದ್ದರು. ಅವರ ಚರ್ಮಗಳು ಸುಲಿದು ಹೋಗಿದ್ದವು. ಜೆಟ್ ಇಂಧನದಿಂದಾಗಿ ಅವರ ಬಟ್ಟೆಗಳಿಗೆ ಬೆಂಕಿ ಹತ್ತಿಕೊಂಡು ಸುಟ್ಟುಹೋಗಿದ್ದವು. ಆದರೆ ಅವರು ಪ್ರಯಾಣಿಕರಾಗಿರಲಿಲ್ಲ, ಸ್ಥಳೀಯ ದಾರಿಹೋಕರಾಗಿದ್ದರು. ವಿಮಾನ ಅಪಘಾತವಾದಾಗ ಅದರ ಜ್ವಾಲೆಯಿಂದ ಇವರು ಕೂಡ ಸಿಲುಕಿಕೊಂಡಿದ್ದರು" ಎಂದು ಪ್ರತ್ಯಕ್ಷದರ್ಶಿ ಇಶಾನ್ ವಿವರಿಸಿದ್ದಾರೆ.
ಅಹಮದಾಬಾದ್ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೈಋತ್ಯಕ್ಕೆ ಸುಮಾರು 500 ಮೀಟರ್ ದೂರದಲ್ಲಿರುವ ಘೋಡಾ ಕ್ಯಾಂಪ್ ಪ್ರದೇಶದಲ್ಲಿರುವ ಏರ್ ಇಂಡಿಯಾ ಮತ್ತು ಇಂಡಿಗೊಗೆ ಪಾರ್ಸೆಲ್ಗಳನ್ನು ನಿರ್ವಹಿಸುವ ಸರಕು ಕಂಪನಿಗೆ ಸೇರಿದ ಪ್ರತ್ಯಕ್ಷದರ್ಶಿಗಳು ತಾವು ಕಂಡ ವಿಮಾನ ಅಪಘಾತದ ಭಯಾನಕತೆಯನ್ನು ವಿವರಿಸಿದ್ದಾರೆ. ಎಂದಿನಂತೆ ಕೆಲಸದಲ್ಲಿ ನಿರತರಾಗಿದ್ದ ಸ್ಥಳೀಯರಿಗೆ ಒಂದೇ ಸಲಕ್ಕೆ ಭೂಮಿ ಅಲುಗಾಡಿದಂತೆ ಭಾಸವಾಗಿದೆ.
ಸ್ಥಳೀಯ ವ್ಯಕ್ತಿ ಇಶಾನ್ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ್ದು, "ನಿತ್ಯದಂತೆ ಕೆಲಸದಲ್ಲಿದ್ದೆವು. ಮಧ್ಯಾಹ್ನ ಸುಮಾರು 1.30ಕ್ಕೆ ದೊಡ್ಡ ಸ್ಫೋಟವಾದ ಶಬ್ದ ಕೇಳಿಸಿತು. ಯಾವುದೋ ದೊಡ್ಡ ಅಪಘಾತ ಅಥವಾ ಸ್ಫೋಟವಾಗಿರಬಹುದು ಎಂದು ಭಾವಿಸಿದೆವು. ಹೊರಗೆ ಇಣುಕಿ ನೋಡಿದಾಗ ದಟ್ಟವಾದ ಹೊಗೆ ಕಂಡೆವು. ತಕ್ಷಣ ಅಪಘಾತ ಸಂಭವಿಸಿದ ಸ್ಥಳಕ್ಕೆ ಸಹಾಯಕ್ಕಾಗಿ ಧಾವಿಸಿದೆವು. ಮೊದಲಿಗೆ ನಮಗೆ ಅದು ವಿಮಾನ ಅಪಘಾತ ಎಂದು ತಿಳಿದಿರಲಿಲ್ಲ" ಎಂದು ಹೇಳಿದರು. ಇಶಾನ್ ಹಾಗೂ ಅವರ ಸಹೋದ್ಯೋಗಿಗಳಾದ ಅಮಿತ್ ಮತ್ತು ಸುಧೀರ್ ಅವರು ಅಲ್ಲಿದ್ದ ಜನರಿಗೆ ಸಹಾಯ ಮಾಡಲು ಸ್ಥಳಕ್ಕೆ ಧಾವಿಸಿದವರಲ್ಲಿ ಮೊದಲಿಗರು.
ಭೂಕಂಪವಾದಂತೆ ಅನಿಸಿತು: "ಸ್ಫೋಟ ತುಂಬಾ ತೀವ್ರವಾಗಿದ್ದ ಕಾರಣ ಭೂಕಂಪವಾದಂತೆ ಭಾಸವಾಯಿತು. ನಾವು ನಮ್ಮ ವಾಹನದಲ್ಲಿ ಘಟನಾ ಸ್ಥಳಕ್ಕೆ ಧಾವಿಸಿದೆವು. ಪಾದಚಾರಿಗಳು ಬೆಂಕಿಯಲ್ಲಿ ಉರಿಯುತ್ತಿರುವುದನ್ನು ಹಾಗೂ ಗಾಯಗೊಂಡಿರುವುದನ್ನು ನೋಡಿದ ತಕ್ಷಣ ಸಹಾಯಕ್ಕೆ ಹೋದೆವು. 108ಕ್ಕೆ ಕರೆ ಮಾಡುವ ಮೊದಲು ಕೆಲವರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದೆವು. ಆರಂಭದಲ್ಲಿ ಸಾಧ್ಯವಾದಷ್ಟು ಜನರನ್ನು ಸುರಕ್ಷಿತ ಸ್ಥಳಕ್ಕೆ ತರಲು ಪ್ರಯತ್ನಿಸಿದೆವು" ಎಂದು ಅಮಿತ್ ಹೇಳಿದರು.
ನಾವು ಕೆಲವು ಜನರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದ ನಂತರ, ಸಹಾಯದ ಅಗತ್ಯ ಇರುವ ಇನ್ನೂ ಅನೇಕರು ಇರಬಹುದು ಎಂದು ನಮಗನಿಸಿತು. ತಕ್ಷಣ, ಮತ್ತೊಂದು ಸ್ಫೋಟದ ಶಬ್ಧ ಕೇಳುವ ಮೊದಲೇ ನಾವು ಅಲ್ಲಿಗೆ ಧಾವಿಸಿದೆವು. ಆದರೆ, ಎರಡನೇ ಸ್ಫೋಟದ ನಂತರ ನಮಗೆ ಸಹಾಯ ಮಾಡಲು ಸಾಧ್ಯವಾಗಲಿಲ್ಲ. ಜ್ವಾಲೆ ಭಾರೀ ಪ್ರಮಾಣದಲ್ಲಿದ್ದ ಕಾರಣ ಹತ್ತಿರ ಹೋಗಿ ಸಹಾಯ ಮಾಡಲು ನಾವು ಕೂಡ ಭಯಭೀತರಾದೆವು. ಒಂದು ಹಂತವನ್ನು ಮೀರಿದ ನಂತರ ನಿಜವಾಗಿಯೂ ನಾವು ಕೂಡ ಏನೂ ಮಾಡಲು ಸಾಧ್ಯವಾಗಲಿಲ್ಲ" ಎಂದು ವಿಷಾದ ವ್ಯಕ್ತಪಡಿಸಿದರು.
"ಅಪಘಾತ ಸ್ಥಳದಿಂದ ಹೊರಬರುತ್ತಿದ್ದ ಜ್ವಾಲೆ ಮತ್ತು ಹೊಗೆ ಮೈಲಿಗಟ್ಟಲೆ ದೂರದಿಂದ ಕಾಣುತ್ತಿತ್ತು. ಜ್ವಾಲೆಯ ತೀವ್ರತೆಯನ್ನು ಅದೇ ಒತ್ತಿ ಹೇಳುತ್ತದೆ. ಸಹಾಯ ಮಾಡಲು ನಾವು ಉತ್ಸುಕರಾಗಿದ್ದರೂ, ನಾವು ಶಕ್ತಿಹೀನರಾಗಿದ್ದೆವು" ಎಂದು ಸುಧೀರ್ ವಿವರಿಸುತ್ತಾರೆ.
ನಾವು ಸಹಾಯ ಮಾಡಲು ಪ್ರಯತ್ನಿಸುತ್ತಿರುವಾಗ, ಅಗ್ನಿಶಾಮಕ ದಳ ಮತ್ತು ಕಾನೂನು ಜಾರಿ ಅಧಿಕಾರಿಗಳು ವೈದ್ಯಕೀಯ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಬಂದರು. ತುರ್ತು ಪ್ರತಿಕ್ರಿಯೆ ನೀಡುವವರು ಸ್ಥಳಕ್ಕೆ ಬಂದ ನಂತರ, ನಮ್ಮ ಕೈಯ್ಯಲ್ಲಿ ಏನೂ ಸಾಧ್ಯವಿಲ್ಲದ ಕಾರಣ ಅವರು ಸಂಪೂರ್ಣವಾಗಿ ಜವಾಬ್ದಾರಿಯನ್ನು ವಹಿಸಿಕೊಂಡರು" ಎಂದು ಅಮಿತ್ ಹೇಳುತ್ತಾರೆ.
ಪ್ರತಿದಿನ ವಿಮಾನಗಳನ್ನು ನೋಡುವುದು ಅಭ್ಯಾಸ, ಆದರೆ ಇದು ತುಂಬಾ ಭಯಾನಕವಾಗಿತ್ತು: "ಘೋಡಾ ಕ್ಯಾಂಪ್ ಪ್ರದೇಶದ ಕಾರ್ಮಿಕರಾಗಿ, ನಾವು ವಿಮಾನಗಳು ಟೇಕ್ ಆಫ್ ಮತ್ತು ಲ್ಯಾಂಡ್ ಆಗುವುದನ್ನು ಪ್ರತಿದಿನ ನೋಡುತ್ತೇವೆ. ಅವುಗಳು ನಮಗೆ ಅಭ್ಯಾಸವಾಗಿಬಿಟ್ಟಿವೆ. ಆದರೆ, ಈ ವಿಮಾನ ಅಪಘಾತವನ್ನು ನೋಡಿದ್ದು ಮಾತ್ರ ಭಯಾನಕ ಅನುಭವವಾಗಿತ್ತು. ಅಪಘಾತ ಸಂಭವಿಸಿದಾಗ ನಾವು ಅನುಭವಿಸಿದ ಭಯ ವ್ಯಕ್ತಪಡಿಸಲು ಪದಗಳಿಲ್ಲ. ಈಗ ಆಕಾಶದಲ್ಲಿ ವಿಮಾನವನ್ನು ನೋಡಲು ನನಗೆ ಭಯವಾಗುತ್ತಿದೆ" ಎಂದು ಇಶಾನ್ ಹೇಳುತ್ತಾರೆ.
ಇದನ್ನೂ ಓದಿ: ಕಣ್ಣೆದುರಿಗೆ ತಲೆ ಕತ್ತರಿಸಿ ಬಿತ್ತು, ಇದ್ದಕ್ಕಿದ್ದಂತೆ ಬೆಂಕಿಯ ಜ್ವಾಲೆ ಉಲ್ಬಣಿಸಿತು: ಅಹಮದಾಬಾದ್ನ ಭಯಾನಕ ಕ್ಷಣಗಳಿವು!