ಮುಂಬೈ (ಮಹಾರಾಷ್ಟ್ರ) : ಡಿಜಿಟಲ್ ಅರೆಸ್ಟ್ ಪ್ರಕರಣಗಳ ಜಾಗೃತಿ ಪ್ರಯತ್ನದ ನಡುವೆಯೂ ವಾಣಿಜ್ಯ ನಗರಿ ಮುಂಬೈನಲ್ಲಿ ಹಿರಿಯ ನಾಗರಿಕ ಮಹಿಳೆಯೊಬ್ಬರು ಬರೋಬ್ಬರಿ 20 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ.
ದಕ್ಷಿಣ ಮುಂಬೈನ 86 ವರ್ಷದ ವೃದ್ಧೆಯನ್ನು ಸಿಬಿಐ ಅಧಿಕಾರಿಗಳು ಎಂದು ನಂಬಿಸಿದ ವಂಚಕರು ಎರಡು ತಿಂಗಳ ಕಾಲ ಡಿಜಿಟಲ್ ಅರೆಸ್ಟ್ ಮಾಡಿದ್ದು, ವೃದ್ಧೆಯ ಉಳಿತಾಯದ 20 ಕೋಟಿ ರೂ. ಹಣವನ್ನು ಲಪಟಾಯಿಸಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಏನಿದು ಘಟನೆ : 2024ರ ಡಿಸೆಂಬರ್ 26ರಂದು ವೃದ್ಧೆಗೆ ವಂಚಕರು ಕರೆ ಮಾಡಿದ್ದರು. ಅಜ್ಜಿಯ ಆಧಾರ್ ಕಾರ್ಡ್ ಆಧಾರದ ಮೇಲೆ ಬ್ಯಾಂಕ್ ಖಾತೆಯನ್ನು ತೆರೆದಿದ್ದು, ಅದನ್ನು ಮನಿ ಲಾಂಡರಿಂಗ್ಗೆ ಬಳಕೆ ಮಾಡಲಾಗುತ್ತಿದೆ ಎಂದು ಬೆದರಿಸಿದ್ದಾರೆ. ಈ ಪ್ರಕರಣವನ್ನು ಇದೀಗ ಸಿಬಿಐ ಅಧಿಕಾರಿಗಳು ತನಿಖೆ ಮಾಡುತ್ತಿದ್ದು, ನೀವು ನಿಮ್ಮ ಕೋಣೆಯಲ್ಲಿಯೇ ಇರಬೇಕು, ಡಿಜಿಟಲ್ ಅರೆಸ್ಟ್ಗೆ ಒಳಗಾಗಬೇಕು. ಇಲ್ಲದೇ ಹೋದಲ್ಲಿ ನಿಮ್ಮ ಮಕ್ಕಳನ್ನು ಬಂಧಿಸಲಾಗುವುದು ಎಂದು ಬೆದರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಇದರಿಂದ ಆತಂಕಗೊಂಡ ವೃದ್ಧೆ ಎರಡು ತಿಂಗಳ ಕಾಲ ಅಂದರೆ, 2024ರ ಡಿಸೆಂಬರ್ 26ರಿಂದ ಮಾರ್ಚ್ 3, 2025ರ ವರೆಗೆ ಡಿಜಿಟಲ್ ಬಂಧನಕ್ಕೆ ಒಳಗಾಗಿದ್ದಾರೆ. ಈ ವೇಳೆ ಮಹಿಳೆ ಮನೆಯಲ್ಲಿಯೇ ಇದ್ದಾರೆ ಎಂಬುದನ್ನು ಪರೀಕ್ಷಿಸಲು ಆಕೆಗೆ ಪ್ರತಿ ಮೂರು ಗಂಟೆಗೆ ಒಮ್ಮೆ ಕರೆ ಮಾಡಿ, ಸ್ಥಳದ ಮಾಹಿತಿಯನ್ನು ವಂಚಕರು ಪರಿಶೀಲಿಸುತ್ತಿದ್ದರು ಎಂದು ವರದಿಯಾಗಿದೆ.
ಈ ಬಂಧನದ ಅವಧಿಯಲ್ಲಿ ಆಕೆ ತಮ್ಮ ಬ್ಯಾಂಕ್ ಮಾಹಿತಿಯನ್ನು ನೀಡಿದ್ದು, ಎರಡು ತಿಂಗಳ ಅವಧಿಯಲ್ಲಿ ನ್ಯಾಯಾಲಯದ ಶುಲ್ಕ, ಪ್ರಕರಣದಲ್ಲಿ ಆಕೆ ಹೆಸರು ಕೈಬಿಡುವುದಾಗಿ ವಿವಿಧ ಕಾರಣ ತಿಳಿಸಿ 20.26 ಕೋಟಿ ರೂ. ಹಣವನ್ನು ವರ್ಗಾಯಿಸಿಕೊಂಡಿದ್ದಾರೆ. ಜೊತೆಗೆ ತನಿಖೆ ಮುಗಿದ ಬಳಿಕ ಸಂಪೂರ್ಣ ಹಣವನ್ನು ಹಿಂದಿರುಗಿಸುವುದಾಗಿ ಭರವಸೆಯನ್ನು ಅವರು ನೀಡಿದ್ದಾರೆ ಎಂದು ಹಿರಿಯ ನಾಗರಿಕ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವೃದ್ಧೆ ಕೇವಲ ಊಟಕ್ಕೆ ಮಾತ್ರ ಕೋಣೆಯಿಂದ ಹೊರ ಬರುತ್ತಿದ್ದು, ಅವರ ನಡವಳಿಕೆಯಲ್ಲಿ ಬದಲಾವಣೆಯಾಗಿರುವುದನ್ನು ಗಮನಿಸಿದ ಮನೆಗೆಲಸದ ಮಹಿಳೆ ಈ ಕುರಿತು ಅವರ ಮಗಳಿಗೆ ವರದಿ ಮಾಡಿದ್ದಾರೆ. ಈ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ತನಿಖೆಗೆ ಮುಂದಾದ ಪೊಲೀಸರು ಮಹಿಳೆ ಹಣ ವರ್ಗಾಯಿಸಿದ ಮಾಹಿತಿ ಪಡೆದುಕೊಂಡು 77 ಲಕ್ಷ ರೂ. ಹಣ ಹಿಂಪಡೆದಿದ್ದಾರೆ. ಈ ವೇಳೆ ಮಾಲ್ಡಾ ನಿವಾಸಿ ಶಯನ್ ಜಮಿಲ್ ಶೇಖ್ (20) ಸೇರಿದಂತೆ ವಿವಿಧ ಖಾತೆಗೆ ಹಣ ವರ್ಗಾವಣೆಯಾಗಿರುವುದು ಕಂಡುಬಂದಿದೆ. ಶೇಖ್ ಖಾತೆಗೆ 4.99 ಲಕ್ಷ ರೂ. ವರ್ಗಾವಣೆ ಆಗಿದ್ದು, ಅದನ್ನು ಮತ್ತೊಬ್ಬ ವಂಚಕನಿಗೆ ಒಪ್ಪಿಸಲಾಗಿದೆ ಎಂದು ತಿಳಿದು ಬಂದಿತು.
ಮತ್ತೊಬ್ಬ ಆರೋಪಿ ಹೃತಿಕ್ ಶೇಖರ್ ಠಾಕೂರ್ (25) ಖಾತೆಗೆ 9 ಲಕ್ಷ ರೂ. ವರ್ಗಾಯಿಸಲಾಗಿದ್ದು, ಅದನ್ನ ತನ್ನ ಸಹಚರರು ವೃದ್ಧೆಗೆ ವಂಚಿಸಿ ಹಾಕಿದ್ದರು ಎಂಬುದು ಬೆಳಕಿಗೆ ಬಂದಿದೆ.
ಮತ್ತೊಬ್ಬ ಆರೋಪಿ ರಾಜಿಕ್ ಅಜಾನ್ ಭುಟ್ಟಾ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದು, ಇದು ಅಂತಾರಾಷ್ಟ್ರೀಯ ಸೈಬರ್ ವಂಚಕರ ಜಾಲದ ಶಂಕಿತ ಸದಸ್ಯನಾಗಿದ್ದಾನೆ ಎಂದು ಪೊಲೀಸರು ತಿಳಿಸಿದರು.
ಇದನ್ನೂ ಓದಿ : 11 ತಿಂಗಳಲ್ಲಿ 641 ಪ್ರಕರಣ; ಏನಿದು ಡಿಜಿಟಲ್ ಅರೆಸ್ಟ್, ಜನ ವಹಿಸಬೇಕಿರುವ ಎಚ್ಚರಿಕೆಗಳೇನು?
ಇದನ್ನೂ ಓದಿ : ಯಾವುದೇ ತನಿಖಾ ಸಂಸ್ಥೆಗಳು 'ಡಿಜಿಟಲ್ ಅರೆಸ್ಟ್' ಮಾಡುವುದಿಲ್ಲ, ಜನರಿಗೆ ಸಾಮಾನ್ಯ ಕಾನೂನು ಜ್ಞಾನವಿರಬೇಕು: ಪೊಲೀಸ್ ಆಯುಕ್ತ ಬಿ.ದಯಾನಂದ್