ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಮಂಗಳವಾರ ನಡೆದ ಉಗ್ರರ ದಾಳಿ ಖಂಡಿಸಿ, ಇಂದು ರಾಷ್ಟ್ರ ರಾಜಧಾನಿಯಲ್ಲಿ ವ್ಯಾಪಾರಿಗಳು ಬಂದ್ಗೆ ಕರೆ ನೀಡಿದ್ದಾರೆ.
ಇಲ್ಲಿನ ಪ್ರಸಿದ್ಧ ವ್ಯಾಪಾರಿ ಮಾರುಕಟ್ಟೆಗಳಾದ ಸದರ್ ಬಜಾರ್, ಭಾಗೀರಥ್ ಪ್ಲೇಸ್, ಗಾಂಧಿನಗರ, ನಯಾ ಬಜಾರ್, ಖಾರಿ ಬಾವೊಲಿ, ಚಾವ್ರಿ ಬಜಾರ್, ಚಾಂದಿನಿ ಚೌಕ್, ಜಾಮಾ ಮಸೀದಿ, ಹೌಜ್ ಖಾಜಿ ಸೇರಿದಂತೆ 100ಕ್ಕೂ ಹೆಚ್ಚು ಮಾರುಕಟ್ಟೆ ಸಂಘಗಳು ಬಂದ್ಗೆ ಬೆಂಬಲ ಘೋಷಿಸಿವೆ. ಬಟ್ಟೆ ವ್ಯಾಪಾರದ ಹೊರತಾಗಿ, ಜವಳಿ, ಮಸಾಲೆಗಳು, ಪಾತ್ರೆಗಳು ಮತ್ತು ಬೆಳ್ಳಿ ಸೇರಿದಂತೆ ವಿವಿಧ ವ್ಯಾಪಾರಿ ಸಂಘಗಳು ಸಹ ಬಂದ್ಗೆ ಬೆಂಬಲಿಸಿವೆ.
ಇಲ್ಲಿನ ಅತಿದೊಡ್ಡ ತರಕಾರಿ ಮಾರುಕಟ್ಟೆಯಲ್ಲಿ ಒಂದಾದ ಸದರ್ ಬಜಾರ್ ಇಂದು ವಹಿವಾಟು ಬಂದ್ ಮಾಡಿರುವ ಪರಿಣಾಮ, ಆ ಪ್ರದೇಶವೂ ನಿರ್ಜನವಾಗಿದೆ ಎಂದು ವ್ಯಾಪಾರಿಗಳ ಸಂಘದ ಸದಸ್ಯರೊಬ್ಬರು ತಿಳಿಸಿದ್ದಾರೆ. ಏಷ್ಯಾದ ಅತಿದೊಡ್ಡ ಹೋಲ್ಸೇಲ್ ರೆಡಿಮೇಡ್ ಗಾರ್ಮೆಂಟ್ ಮಾರುಕಟ್ಟೆ ಗಾಂಧಿನಗರ ಕೂಡ ಸಂಪೂರ್ಣವಾಗಿ ಬಂದ್ ಆಗಿದ್ದು, ಬಿಕೋ ಎನ್ನುತ್ತಿದೆ.
ಪಹಲ್ಗಾಮ್ನಲ್ಲಿ ಪೈಶಾಚಿಕ ಕೃತ್ಯ ನಡೆಸಿದ ಭಯೋತ್ಪಾದಕರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು. ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಮೂಲಕ ಸಾವನ್ನಪ್ಪಿದ ಪ್ರವಾಸಿಗರಿಗೆ ನ್ಯಾಯ ಕೊಡಿಸಬೇಕು ಎಂದು ವರ್ತಕರು ಆಗ್ರಹಿಸಿದರು.
ಮೇಣದಬತ್ತಿ ಮೆರವಣಿಗೆ: ಗುರುವಾರ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ (ಸಿಟಿಐ) ಬಂದ್ಗೆ ಕರೆ ನೀಡಿತ್ತು. ಉಗ್ರರ ದಾಳಿಗೆ ಸಾವನ್ನಪ್ಪಿದ ಪ್ರವಾಸಿಗರಿಗೆ ಜೊತೆಗೆ ಒಗ್ಗಟ್ಟನ್ನು ಪ್ರದರ್ಶಿಸಲು ಕನ್ನಾಟ್ ಪ್ಲೇಸ್ನಲ್ಲಿ ಮೇಣದಬತ್ತಿ ಮೆರವಣಿಗೆಯನ್ನು ಸಹ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಿಟಿಐನ ಮುಖ್ಯಸ್ಥ ಬ್ರಿಜೇಶ್ ಗೋಯೆಲ್, ''ಇದು ಕೇವಲ ಹೋರಾಟವಲ್ಲ. ಇದು ಭಯೋತ್ಪಾದನೆ ವಿರುದ್ಧ ಒಗ್ಗಟ್ಟಿನ ನಿಲುವಾಗಿದೆ. ಈ ಹೋರಾಟದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಪಹಲ್ಗಾಮ್ನಲ್ಲಿ ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಬಂದ್ ಆಚರಿಸುತ್ತಿದ್ದೇವೆ'' ಎಂದರು.
ಇದೇ ವೇಳೆ ಅವರು, ''ಕೇಂದ್ರ ಸರ್ಕಾರವು ಪಾಕಿಸ್ತಾನದೊಂದಿಗಿನ ಎಲ್ಲಾ ವಾಣಿಜ್ಯ ಸಂಬಂಧಗಳನ್ನು ಕಡಿತಗೊಳಿಸಿ, ಭಾರತದಲ್ಲಿ ಪಾಕಿಸ್ತಾನಿ ಉತ್ಪನ್ನಗಳನ್ನು ಬಹಿಷ್ಕರಿಸಬೇಕು'' ಎಂದು ಆಗ್ರಹಿಸಿದರು.
ಇದನ್ನೂ ಓದಿ: ಪಹಲ್ಗಾಮ್ ಪೈಶಾಚಿಕ ದಾಳಿ: ಇಬ್ಬರು ಎಲ್ಇಟಿ ಉಗ್ರರ ಮನೆಗಳು ನೆಲಸಮ
ಇದನ್ನೂ ಓದಿ: ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ಸೇನೆ ದಾಳಿ: ಭಾರತದಿಂದ ತಕ್ಕ ಪ್ರತ್ಯುತ್ತರ