ಹೈದರಾಬಾದ್ (ತೆಲಂಗಾಣ): ಕಷ್ಟಪಟ್ಟು ವಿದ್ಯಾಭ್ಯಾಸ ಕೊಡಿಸಿ ಉನ್ನತ ಸ್ಥಾನಕ್ಕೆ ತಲುಪಿಸಿದ ತಂದೆಗೆ ಉಡುಗೊರೆಯಾಗಿ ನೀಡಲು ಖರೀದಿಸಿದ್ದ ಬೈಕ್ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಉದ್ಯೋಗಿಯೊಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಮುನಗಲ ಮಂಡಲದ ಆಕುಪಮುಲಾ ಬಳಿಯ ರಾಷ್ಟ್ರೀಯ ಹೆದ್ದಾರಿ-65 ರಲ್ಲಿ ನಡೆದಿದೆ. ಪಶ್ಚಿಮ ಗೋದಾವರಿ ಜಿಲ್ಲೆಯ ಭೀಮಾವರಂ ಮಂಡಲದ ತುಂದೂರು ನಿವಾಸಿ ಚೇಡೆ ಜನಾರ್ದನ್ ಅವರ ಪುತ್ರಿ ಯಶಸ್ವಿನಿ (24) ಮೃತರು.
ತಂದೆಗೆ ಬೈಕ್ ಕೊಡಲು ಹೊರಟಾಗ ದುರಂತ: ಯಶಸ್ವಿನಿ ಹೈದರಾಬಾದ್ನ ಗಚಿಬೌಲಿಯಲ್ಲಿರುವ ಕಂಪನಿಯೊಂದರಲ್ಲಿ ಸಾಫ್ಟ್ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ತಂದೆಗೆ ಉಡುಗೊರೆ ನೀಡುವ ಸಲುವಾಗಿ ಇತ್ತೀಚಿಗೆ ಹೈದರಾಬಾದ್ನಲ್ಲಿ ರಾಯಲ್ ಎನ್ಫೀಲ್ಡ್ ಬೈಕ್ ಖರೀದಿಸಿದ್ದರು. ಅವರು ತಂದೆಗೆ ಬೈಕ್ ಕೊಡಲು, ಶುಕ್ರವಾರ ಸಂಜೆ 7 ಗಂಟೆಗೆ ತಮ್ಮ ಸಹೋದ್ಯೋಗಿ ಬದ್ದುಕೊಂಡ ನಾಗ ಅಚ್ಯುತ್ ಕುಮಾರ್ ಅವರೊಂದಿಗೆ ತಮ್ಮ ಸ್ವಗ್ರಾಮಕ್ಕೆ ಹೊರಟಿದ್ದರು.
ಯಶಸ್ವಿನಿ ತಲೆಯ ಮೇಲೆ ಹರಿದ ಲಾರಿ: ಶನಿವಾರ ಮಧ್ಯರಾತ್ರಿ 12:30ಕ್ಕೆ ಆಕುಪಮುಲ ಬಳಿ ರಸ್ತೆಯಲ್ಲಿ ಸತ್ತು ಬಿದ್ದಿದ್ದ ಎಮ್ಮೆಯನ್ನು ಗಮನಿಸದೇ ಡಿಕ್ಕಿ ಹೊಡೆದು ಇಬ್ಬರು ರಸ್ತೆ ಮೇಲೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ, ಹಿಂದಿನಿಂದ ವೇಗವಾಗಿ ಬಂದ ಲಾರಿ ಯಶಸ್ವಿನಿ ಅವರ ತಲೆಯ ಮೇಲೆ ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೈಕ್ ಚಲಾಯಿಸುತ್ತಿದ್ದ ನಾಗ ಅಚ್ಯುತ್ ಕುಮಾರ್ ಗಾಯಗೊಂಡಿದ್ದು, ದಾರಿಹೋಕರು ಅವರನ್ನು ಗಮನಿಸಿ ಕೊಡಾಡದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮೃತ ಯಶಸ್ವಿನಿ ಚಿಕ್ಕಪ್ಪ ಸುರೇಶ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಎಎಸ್ಐ ವೆಂಕಟರತ್ನಂ ತಿಳಿಸಿದ್ದಾರೆ. ಘಟನೆಯ ನಂತರ ಲಾರಿ ಚಾಲಕ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಬೈಕ್ಗೆ ಡಿಕ್ಕಿ ಹೊಡೆದು ಬಾವಿಗೆ ಬಿದ್ದ ಕಾರು: 6 ಮಂದಿ ಸಾವು
ಇದನ್ನೂ ಓದಿ: ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಕಾರು: 6 ಜನ ಸಾವು