ನವದೆಹಲಿ : ಕರ್ನಾಟಕ ಉಪಮುಖ್ಯಮಂತ್ರಿ ಡಿ. ಕೆ ಶಿವಕುಮಾರ್ ಅವರು ನೀಡಿರುವ ಮೀಸಲಾತಿ ಕುರಿತ ಹೇಳಿಕೆಗಳ ಕುರಿತು ಸದನವನ್ನು ದಿಕ್ಕುತಪ್ಪಿಸಿದ್ದಾರೆ ಎಂದು ಆರೋಪಿಸಿ ಸಭಾನಾಯಕ ಜೆ ಪಿ ನಡ್ಡಾ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ವಿರುದ್ಧ ರಾಜ್ಯಸಭೆಯಲ್ಲಿ ಕಾಂಗ್ರೆಸ್ನ ಮುಖ್ಯ ಸಚೇತಕ ಜೈರಾಮ್ ರಮೇಶ್ ಅವರು, ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ರಮೇಶ್ ಅವರು ರಾಜ್ಯಸಭೆಯಲ್ಲಿ (ರಾಜ್ಯಸಭೆ) ಕಾರ್ಯವಿಧಾನ ಮತ್ತು ವ್ಯವಹಾರದ ನಿಯಮಗಳ ನಿಯಮ 188 ರ ಅಡಿ ಈ ಇಬ್ಬರು ನಾಯಕರ ವಿರುದ್ಧ ಎರಡು ಪ್ರತ್ಯೇಕ ನೋಟಿಸ್ ನೀಡಿದ್ದಾರೆ.
ಅಧ್ಯಕ್ಷ ಜಗದೀಪ್ ಧನಖರ್ ಅವರಿಗೆ ಸಲ್ಲಿಸಿದ ನೋಟಿಸ್ನಲ್ಲಿ, ಮಾರ್ಚ್ 24 ರಂದು ರಾಜ್ಯಸಭೆಯು ಸಭೆ ಸೇರಿದ ಸ್ವಲ್ಪ ಸಮಯದ ನಂತರ, ರಿಜಿಜು ಅವರು, ಶಿವಕುಮಾರ್ ಅವರ ಹೇಳಿಕೆಯನ್ನ ತಿರುಚುವ ಮೂಲಕ ಸದನವನ್ನು ನಿಸ್ಸಂಶಯವಾಗಿ ದಾರಿತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ಸದಸ್ಯರು ಆರೋಪಿಸಿದ್ದಾರೆ.
'ಕರ್ನಾಟಕ ವಿಧಾನಸಭೆಯಲ್ಲಿ ಕಾಂಗ್ರೆಸ್ನವರು ಮುಸ್ಲಿಮರಿಗೆ ಶೇ 4 ರಷ್ಟು ಮೀಸಲಾತಿ ನೀಡಲು ನಿರ್ಣಯ ಅಂಗೀಕಾರಕ್ಕಾಗಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಸಭಾನಾಯಕರು ಆರೋಪಿಸಿದ್ದಾರೆ. ಇದು ಸರಿಯಲ್ಲ ಎಂದು ನಡ್ಡಾ ವಿರುದ್ಧದ ನೋಟಿಸ್ನಲ್ಲಿ ಜೈ ರಾಮ್ ರಮೇಶ್ ತಿಳಿಸಿದ್ದಾರೆ.
ನಡ್ಡಾ ಸದನದಲ್ಲಿ ಹೇಳಿದ್ದೇನು?: ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಯನ್ನು ತಿರಸ್ಕರಿಸಿದ ನಡ್ಡಾ, ವಿರೋಧ ಪಕ್ಷದ ನಾಯಕರು ಅಂಬೇಡ್ಕರ್ ಅವರ ರಕ್ಷಕರೆಂದು ಹೇಳಿಕೊಳ್ಳುತ್ತಾರೆ. ಆದರೆ ಅಂಬೇಡ್ಕರ್ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಬಾರದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮುಸ್ಲಿಮರು ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿ ನೀಡುವ ಮೂಲಕ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡ (ಎಸ್ಟಿ) ಮತ್ತು ಇತರ ಹಿಂದುಳಿದ ವರ್ಗಗಳ (ಒಬಿಸಿ) ಹಕ್ಕುಗಳನ್ನು ಕಾಂಗ್ರೆಸ್ ಕಸಿದುಕೊಂಡಿದೆ ಎಂದು ನಡ್ಡಾ ಇಂದು ಸದನದಲ್ಲಿ ಆರೋಪಿಸಿದ್ದರು.
ಸದನದ ನಿಯಮ ಉಲ್ಲಂಘನೆ : ಜೆ. ಪಿ ನಡ್ಡಾ ಅವರ ಆರೋಪಗಳು ಸಂಪೂರ್ಣವಾಗಿ ಸುಳ್ಳು, ವಾಸ್ತವಿಕ ಆಧಾರಗಳ ಕೊರತೆ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ನಾಯಕರನ್ನು ದೂಷಿಸುವ ಪೂರ್ವಯೋಜಿತ ಉದ್ದೇಶದಿಂದ ಈ ಆರೋಪಗಳನ್ನು ಮಾಡಲಾಗಿದೆ. ಈ ಆರೋಪಗಳು ವಾಸ್ತವದಿಂದ ಕೂಡಿಲ್ಲ, ಸಚಿವರ ಹೇಳಿಕೆಗಳನ್ನು ತಿರುಚಿ ಸದನಕ್ಕೆ ತಪ್ಪು ಮಾಹಿತಿ ನೀಡಲಾಗಿದೆ. ಇದು ಸದನದ ಉಲ್ಲಂಘನೆಯಾಗಿದೆ ಎಂದು ಜೈ ರಾಮ್ ರಮೇಶ್ ಹೇಳಿದ್ದಾರೆ.
"ಸದನದಲ್ಲಿ ಸುಳ್ಳು ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ನೀಡುವುದು ವಿಶೇಷ ಹಕ್ಕುಗಳ ಉಲ್ಲಂಘನೆ ಮತ್ತು ಇದು ಸದನದ ಅವಹೇಳನವಾಗಿದೆ. ಅವರ ಹೇಳಿಕೆಗಳನ್ನ ಗಮನದಲ್ಲಿಟ್ಟುಕೊಂಡು, ಈ ವಿಷಯದಲ್ಲಿ ಜೆ ಪಿ ನಡ್ಡಾ ವಿರುದ್ಧ ವಿಶೇಷಾಧಿಕಾರದ ಪ್ರಕ್ರಿಯೆಗಳನ್ನು ಪ್ರಾರಂಭಿಸಬಹುದು ಎಂದು ನಾನು ವಿನಂತಿಸುತ್ತೇನೆ" ಎಂದು ವಿಶೇಷಾಧಿಕಾರದ ನೋಟಿಸ್ನಲ್ಲಿ ಜೈರಾಂ ರಮೇಶ್ ತಿಳಿಸಿದ್ದಾರೆ.
ರಿಜಿಜು ಹೇಳಿಕೆಯಿಂದ ಸದನದ ಅವಹೇಳನವಾಗಿದೆ : ಡಿ ಕೆ ಶಿವಕುಮಾರ್ ರಿಜಿಜು ಅವರು ನೀಡಿದ ಹೇಳಿಕೆಗಳನ್ನು ತಳ್ಳಿ ಹಾಕಿದ್ದಾರೆ. ನನ್ನ ಹೇಳಿಕೆಗಳನ್ನು ರಾಜಕೀಯ ಕಾರಣಗಳಿಗಾಗಿ ತಿರುಚಿ ಹೇಳಿದ್ದಾರೆ, ನಾನು ಹಾಗೆ ಹೇಳಿಲ್ಲ ಎಂದು ಹೇಳಿದ್ದಾರೆ. ಆದ್ದರಿಂದ, ಕಿರಣ್ ರಿಜಿಜು ಅವರು ಮಾಡಿದ ಹೇಳಿಕೆಗಳು ಸುಳ್ಳು ಮತ್ತು ತಪ್ಪುದಾರಿಗೆಳೆಯುವಂತಿವೆ. ಇದು ಸದನದ ಅವಹೇಳನವಾಗಿದೆ" ಎಂದು ಜೈರಾಂ ರಮೇಶ್ ತಾವು ನೀಡಿರುವ ಹಕ್ಕುಚ್ಯುತಿ ನೋಟಿಸ್ ನಲ್ಲಿ ತಿಳಿಸಿದ್ದಾರೆ.