ಸುಕ್ಮಾ (ಛತ್ತೀಸ್ಗಢ್): ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಮಾವೋವಾದಿಗಳು ಮತ್ತೆ ಅಟ್ಟಹಾಸ ಮೆರೆದಿದ್ದಾರೆ. ಸೋಮವಾರ ನೆಲದೊಳಗೆ ಅಡಗಿಸಿಟ್ಟಿದ್ದ ಸುಧಾರಿತ ಸ್ಫೋಟಕ ವಸ್ತು (IED) ಸ್ಫೋಟಿಸಿ ಹಿರಿಯ ಪೊಲೀಸ್ ಅಧಿಕಾರಿಯನ್ನು ಕೊಂದಿದ್ದಾರೆ.
ಹೌದು, ಕೊಂಟಾ ವಿಭಾಗದ ಹೆಚ್ಚುವರಿ ಪೊಲೀಸ್ ವರಿಷ್ಟಾಧಿಕಾರಿ (ASP) ಆಕಾಶ್ ರಾವ್ ಗಿರೆಪುಂಜೆ ನೆಲಬಾಂಬ್ ಸ್ಫೋಟದಲ್ಲಿ ಹುತಾತ್ಮರಾಗಿದ್ದಾರೆ. 2013ನೇ ಬ್ಯಾಚ್ನ ರಾಜ್ಯ ಪೊಲೀಸ್ ಇಲಾಖೆ ಅಧಿಕಾರಿಯಾಗಿದ್ದ ಅವರು ನಕ್ಸಲ್ ಬಾಂಬ್ ದಾಳಿಗೆ ಬಲಿಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ವಿಜಯ್ ಶರ್ಮಾ ತಿಳಿಸಿದ್ದಾರೆ. ಚತ್ತೀಸ್ಗಢ್ ನಕ್ಸಲ್ ಮುಕ್ತವಾಗುತ್ತಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹೇಳುತ್ತಿರುವಾಗಲೇ ಇಂದು ಹಿರಿಯ ಅಧಿಕಾರಿ ಬಾಂಬ್ ಸ್ಫೋಟದಿಂದ ಹುತಾತ್ಮರಾಗಿರುವುದು ಅಲ್ಲಿನ ಪೊಲೀಸರು ಮತ್ತು ಭದ್ರತಾ ಪಡೆಗಳ ನಿದ್ದೆಗೆಡಿಸಿದೆ.

ಕೊಂಟಾ-ಎರ್ರಾಬೋರ್ ರಸ್ತೆಯ ದೋಂಡ್ರಾ ಗ್ರಾಮದ ಬಳಿ ಘಟನೆ ನಡೆದಾಗ ಎಎಸ್ಪಿ ಮತ್ತು ಇತರ ಸಿಬ್ಬಂದಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ಸುಕ್ಮಾದ ಎಎಸ್ಪಿ ಆಕಾಶ್ ರಾವ್ ಗಿರೆಪುಂಜೆ ಕೊಂಟಾ ಎರ್ರಾಬೋರ್ ರಸ್ತೆಯಲ್ಲಿ ಗಸ್ತು ತಿರುಗುತ್ತಿದ್ದರು. ಈ ವೇಳೆ ಅವರು ದೋಂಡ್ರಾ ಬಳಿ ನೆಲದಡಿ ಇಟ್ಟಿದ್ದ ಐಇಡಿ ಬಾಂಬ್ ಅನ್ನು ತುಳಿದಿದ್ದರಿಂದ ಬಾಂಬ್ ಸ್ಫೋಟಗೊಂಡಿತು. ಐಇಡಿ ಸ್ಫೋಟದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಜವಾನರು ಕೂಡ ಗಾಯಗೊಂಡರು ಮತ್ತು ಅವರನ್ನು ತಕ್ಷಣ ಚಿಕಿತ್ಸೆಗಾಗಿ ಕೊಂಟಾ ಸಮುದಾಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಎಎಸ್ಪಿ ಆಕಾಶ್ ರಾವ್ ಚಿಕಿತ್ಸೆಯ ಸಮಯದಲ್ಲಿ ಉಸಿರು ಚೆಲ್ಲಿದರು. ಇತರ ಗಾಯಾಳುಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ" ಎಂದು ಬಸ್ತಾರ್ ಐಜಿ ಸುಂದರರಾಜ್ ಪಿ ಮಾಹಿತಿ ನೀಡಿದರು.

ಈ ಘಟನೆ ಇಂದು ಬೆಳಗ್ಗೆ 9 ರಿಂದ 10 ಗಂಟೆಯ ನಡುವೆ ನಡೆದಿದೆ ಎಂದು ಅವರು ಹೇಳಿದರು. ಮಂಗಳವಾರ ನಕ್ಸಲರು ಕರೆ ನೀಡಿದ್ದ ಬಂದ್ ಹಿನ್ನೆಲೆಯಲ್ಲಿ ಗಸ್ತು ತಿರುಗುವಿಕೆಯನ್ನು ಪ್ರಾರಂಭಿಸಲಾಯಿತು ಎಂದು ಅಧಿಕಾರಿ ಹೇಳಿದರು.
"ಎಎಸ್ಪಿ ಗಿರೆಪುಂಜೆ ಸ್ಫೋಟದಲ್ಲಿ ಹುತಾತ್ಮರಾದರು. ಅವರು ಧೈರ್ಯಶಾಲಿ ಅಧಿಕಾರಿ ಮತ್ತು ಶೌರ್ಯ ಪ್ರಶಸ್ತಿ ಪುರಸ್ಕೃತರು" ಎಂದು ಉಪ ಮುಖ್ಯಮಂತ್ರಿ ಶರ್ಮಾ ನಾಗ್ಪುರದಲ್ಲಿ ಹೇಳಿದರು. "(ನಕ್ಸಲರು ಮತ್ತು ಸರ್ಕಾರದ ನಡುವೆ) ಮಾತುಕತೆಗೆ ಒಂದು ಸನ್ನಿವೇಶ ನಿರ್ಮಾಣವಾದರೆ, ಅದು ಅಂತಹ ಘಟನೆಗಳೊಂದಿಗೆ (ಸ್ಫೋಟವನ್ನು ಉಲ್ಲೇಖಿಸಿ) ಕೊನೆಗೊಳ್ಳುತ್ತದೆ" ಎಂದು ಅವರು ಹೇಳಿದರು.
"ಒಂದೇ ಒಂದು ಗುಂಡನ್ನು ಹಾರಿಸಲು ಬಯಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ, ಆದರೆ ಅವರು (ನಕ್ಸಲರು) ಮುಖ್ಯವಾಹಿನಿಗೆ ಸೇರಬೇಕು, ಪುನರ್ವಸತಿ ಯೋಜನೆಯ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಮತ್ತು ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು ಎಂದು ಶರ್ಮಾ ಹೇಳಿದರು.
2025 ರಲ್ಲಿ ಛತ್ತೀಸ್ಗಢದಲ್ಲಿ ನಡೆದ ಐಇಡಿ ಸ್ಫೋಟ ಘಟನೆಗಳಿವು:
- ಮಾರ್ಚ್ 30: ಬಿಜಾಪುರದಲ್ಲಿ ನಕ್ಸಲ್ ಎನ್ಕೌಂಟರ್ನ ಎರಡನೇ ದಿನದಂದು ಐಇಡಿ ಸ್ಫೋಟದಲ್ಲಿ ಮಹಿಳೆ ಸಾವು
- ಏಪ್ರಿಲ್ 4: ನಾರಾಯಣಪುರದಲ್ಲಿ ನಕ್ಸಲರು ಐಇಡಿ ಸ್ಫೋಟಿಸಿದ್ದರಿಂದ ಓರ್ವ ಸಾವು ಮತ್ತು ಮತ್ತೊಬ್ಬನಿಗೆ ಗಾಯ
- ಏಪ್ರಿಲ್ 7: ಅಬುಜ್ಮದ್ ಅರಣ್ಯದಲ್ಲಿ ಐಇಡಿ ಸ್ಫೋಟದಲ್ಲಿ ಓರ್ವ ಗ್ರಾಮಸ್ಥರಿಗೆ ಗಾಯ
- ಏಪ್ರಿಲ್ 9: ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆ ಜವಾನನಿಗೆ ಗಾಯ
- ಏಪ್ರಿಲ್ 10: ಬಿಜಾಪುರದ ಅರಣ್ಯ ರಸ್ತೆಯಲ್ಲಿ ನಕ್ಸಲರು ಇಟ್ಟಿದ್ದ ಐಇಡಿಯನ್ನು ಯೋಧರು ನಿಷ್ಕ್ರಿಯಗೊಳಿಸಿದ್ದರು.
- ಏಪ್ರಿಲ್ 13: ಬಿಜಾಪುರದ ರಾಣಿಬೋಡ್ಲಿ ಕಟ್ಟೂರ್ ರಸ್ತೆಯಲ್ಲಿ 20 ಕೆಜಿ ಐಇಡಿ ನಿಷ್ಕ್ರಿಯಗೊಳಿಸಲಾಗಿತ್ತು.
- ಏಪ್ರಿಲ್ 14: ನಕ್ಸಲರು ಇಟ್ಟಿದ್ದ 5 ಐಇಡಿಗಳನ್ನು ಯೋಧರು ನಾಶಪಡಿಸಿದ್ದರು.
- ಏಪ್ರಿಲ್ 18: ಕೋಬ್ರಾ ಬೆಟಾಲಿಯನ್ ಹಾರ್ಡ್ಕೋರ್ ಮಾವೋವಾದಿಯನ್ನು ಸೆರೆಹಿಡಿಯಲಾಗಿದೆ. ಬಿಜಾಪುರದಿಂದ ಬಿಯರ್ ಬಾಟಲಿಗಳಲ್ಲಿ ತಯಾರಿಸಿದ 8 ಐಇಡಿಗಳನ್ನು ವಶಪಡಿಸಿಕೊಳ್ಳಲಾಗಿತ್ತು.
- ಏಪ್ರಿಲ್ 21: ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಸಿಎಎಫ್ ಜವಾನ್ ಹುತಾತ್ಮ
- ಏಪ್ರಿಲ್ 26: ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಡಿಆರ್ಜಿ ಜವಾನ್ಗೆ ಗಾಯ.
- ಮೇ 6: ಬಿಜಾಪುರದಲ್ಲಿ ಐಇಡಿ ಸ್ಫೋಟದಲ್ಲಿ ಸಿಆರ್ಪಿಎಫ್ ಅಧಿಕಾರಿಗೆ ಗಾಯ
- ಮೇ 19: ಗೌರ್ಮುಂಡ್ ಗ್ರಾಮದ ಕಾಡುಗಳಲ್ಲಿ ಬಾಂಬ್ ನಿಷ್ಕ್ರೀಯ ದಳ (ಬಿಡಿಎಸ್) 5 ಕೆಜಿ ತೂಕದ ಎರಡು ಇಡಿಗಳನ್ನು ನಾಶಪಡಿಸಿತ್ತು.
- ಮೇ 30: ಬಿಜಾಪುರದ ಮದ್ದೀದ್ ರಾಷ್ಟ್ರೀಯ ಉದ್ಯಾನವನದಲ್ಲಿ ಐಇಡಿ ಸ್ಫೋಟದಲ್ಲಿ ಮೂವರು ಗ್ರಾಮಸ್ಥರು ಗಾಯಗೊಂಡಿದ್ದರು.
- ಮೇ 31: ಗುರ್ಮಕಾ ಮತ್ತು ಖೋಡ್ಪರ್ ಗ್ರಾಮದ ಅರಣ್ಯ ಮಾರ್ಗದಲ್ಲಿ ಭದ್ರತಾ ಪಡೆಗಳಿಂದ 10 ಐಇಡಿಗಳ ನಿಷ್ಕ್ರಿಯ
ಇದನ್ನೂ ಓದಿ: ಬಿಜಾಪುರ ಎನ್ಕೌಂಟರ್ನಲ್ಲಿ ಮತ್ತೋರ್ವ ಮಾವೋವಾದಿ ನಾಯಕ ಸುಧಾಕರ್ ಹತ