ಕೊಚ್ಚಿ, ಕೇರಳ; ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಮುಖ್ಯ ಕಾರ್ಯದರ್ಶಿ ಕೆ.ಎಂ. ಅಬ್ರಹಾಂ ಅವರ ಆಸ್ತಿಯ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಕೇರಳ ಹೈಕೋರ್ಟ್ ಶುಕ್ರವಾರ ಆದೇಶಿಸಿದೆ. ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಅಬ್ರಹಾಂ, ಸಿಬಿಐ ತನಿಖೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಖ್ಯಾತ ಸಾಮಾಜಿಕ ಕಾರ್ಯಕರ್ತ ಜೋಮನ್ ಪುಥೆನ್ಪುರಕ್ಕಲ್ ಅವರು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ನ್ಯಾಯಾಲಯ ಸಿಬಿಐ ತನಿಖೆಗೆ ಆದೇಶಿಸಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಪುಥೆನ್ಪುರಕ್ಕಲ್, "ಅಬ್ರಹಾಂ ಬಹಳ ಹಿಂದಿನಿಂದಲೂ ತಮ್ಮ ಆಸ್ತಿಯನ್ನು ಮರೆಮಾಚಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಈ ಬಗ್ಗೆ ಯಾರಿಗೂ ಗೊತ್ತಾಗದಂತೆ ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಆದರೆ, ಅರ್ಜಿಯಲ್ಲಿನ ವಿಷಯಗಳನ್ನು ಗಮನಿಸಿದ ಹೈಕೋರ್ಟ್ ಸಿಬಿಐ ತನಿಖೆಗೆ ನಿರ್ದೇಶನ ನೀಡಿದೆ." ಎಂದರು.
"ತಮ್ಮ ವಿರುದ್ಧ ಯಾವುದೇ ತನಿಖೆ ನಡೆಯದಂತೆ ತಮ್ಮ ಸ್ಥಾನವನ್ನು ದುರುಯೋಗಪಡಿಸಿಕೊಳ್ಳುತ್ತಿರುವ ಅಬ್ರಹಾಂ ಮತ್ತೊಬ್ಬ ಶಿವಶಂಕರ್ ಆಗಲಿದ್ದಾರೆ" ಎಂದು ಪುಥೆನ್ಪುರಕ್ಕಲ್ ಹೇಳಿದರು. ಸಿಎಂ ವಿಜಯನ್ ಅವರ ನಿವೃತ್ತ ಮಾಜಿ ಪ್ರಧಾನ ಕಾರ್ಯದರ್ಶಿಯಾಗಿರುವ ಶಿವಶಂಕರ್ ಈ ಹಿಂದೆ ಎರಡು ಬಾರಿ ಜೈಲುವಾಸ ಅನುಭವಿಸಿದ್ದರು.
ಮುಖ್ಯಮಂತ್ರಿ ವಿಜಯನ್ ಅವರ ಮುಖ್ಯ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ರಹಾಂ, ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿಯ (ಕಿಫ್ಬಿ) ಸಿಇಒ ಕೂಡ ಆಗಿದ್ದಾರೆ.
ನ್ಯಾಯಾಲಯದ ಆದೇಶದ ಬಗ್ಗೆ ಪ್ರತಿಕ್ರಿಯಿಸಿದ ಮಾಜಿ ವಿಚಕ್ಷಣಾ ನಿರ್ದೇಶಕ ಜಾಕೋಬ್ ಥಾಮಸ್, "ಅಬ್ರಹಾಂ ಮತ್ತು ನಾನು 2016 ರಲ್ಲಿ ಅಧಿಕಾರದಲ್ಲಿದ್ದಾಗ ವಿಚಕ್ಷಣಾ ನ್ಯಾಯಾಲಯವು ತನಿಖೆಗೆ ಆದೇಶಿಸಿತ್ತು. ಆಗಿನಿಂದಲೂ ನಾನು ತನಿಖೆಗೆ ಸಹಕರಿಸಿದ್ದೇನೆ. ಆದರೆ, ಅವರು ಆಗ ಪ್ರಮುಖ ಹುದ್ದೆಯಲ್ಲಿದ್ದ ಕಾರಣ ತಮ್ಮ ಅಧಿಕಾರವನ್ನು ಬಳಸಿಕೊಂಡು ತಮ್ಮ ವಿರುದ್ಧ ತನಿಖೆ ನಡೆಯದಂತೆ ತಮ್ಮ ಕೈಲಾದುದೆಲ್ಲವನ್ನೂ ಮಾಡಿದರು. ಅಬ್ರಹಾಂ ಅವರು ಈಗಲೂ ಪ್ರಮುಖ ಹುದ್ದೆಯಲ್ಲಿ ಮುಂದುವರೆದಿರುವುದನ್ನು ನೋಡಿದರೆ, ಸಿಎಂ ವಿಜಯನ್ ಈ ಬಗ್ಗೆ ಕ್ರಮ ತೆಗೆದುಕೊಳ್ಳುವುದು ಅಗತ್ಯವಾಗಿದೆ. ಮುಖ್ಯಮಂತ್ರಿಗಳು ಕೆಲ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ" ಎಂದು ಹೇಳಿದರು.
ಅರ್ಜಿದಾರರಾದ ಪುಥೆನ್ಪುರಕ್ಕಲ್ ಅವರು ಸುಮಾರು ಒಂದು ದಶಕದಿಂದ ಈ ಪ್ರಕರಣದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಹಲವಾರು ವರ್ಷಗಳ ಪ್ರಯತ್ನದ ನಂತರ, ಅಬ್ರಹಾಂ ತನ್ನ ತಿಳಿದಿರುವ ಆದಾಯ ಮೂಲಕ್ಕಿಂತ ಹೆಚ್ಚಿನ ಆಸ್ತಿಯನ್ನು ಸಂಪಾದಿಸಿದ್ದಾರೆ ಎಂಬುದನ್ನು ಮೇಲ್ನೋಟಕ್ಕೆ ಸಾಬೀತುಪಡಿಸುವ ದಾಖಲೆಗಳನ್ನು ಪುಥೆನ್ಪುರಕ್ಕಲ್ ನ್ಯಾಯಾಲಯದ ಮುಂದೆ ಇಟ್ಟಿದ್ದಾರೆ.
ಇದನ್ನೂ ಓದಿ : ಮುಟ್ಟಾದ ವಿದ್ಯಾರ್ಥಿನಿಗೆ ತರಗತಿಯಿಂದ ಹೊರಗೆ ಪರೀಕ್ಷೆ ಬರೆಸಿದ ಶಾಲಾ ಸಿಬ್ಬಂದಿ; ಸಾರ್ವಜನಿಕರಿಂದ ಆಕ್ರೋಶ - TAMIL NADUS COIMBATORE