ನವದೆಹಲಿ: ಈ ವರ್ಷದ ಶ್ರೀ ಅಮರನಾಥ ಯಾತ್ರೆಗಾಗಿ ಯಾತ್ರಾರ್ಥಿಗಳ ನೋಂದಣಿ ಪ್ರಕ್ರಿಯೆ ಮಂಗಳವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಾರಂಭವಾಗಿದೆ. ದೇಶಾದ್ಯಂತದ ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಜೆ&ಕೆ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ಗಳ 533 ಶಾಖೆಗಳಲ್ಲಿ ನೋಂದಣಿ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಅಮರನಾಥ ಯಾತ್ರೆಗಾಗಿ ದೇಶಾದ್ಯಂತ ಪಿಎನ್ಬಿಯ ಸುಮಾರು 309 ಶಾಖೆಗಳಲ್ಲಿ ನೋಂದಣಿ ಆರಂಭವಾಗಿದೆ. ಪಿಎನ್ಬಿ ಹೊರತುಪಡಿಸಿ, ಎಸ್ಬಿಐ, ಯೆಸ್ ಬ್ಯಾಂಕ್, ಜೆ&ಕೆ ಬ್ಯಾಂಕ್ ನ ಒಟ್ಟು 533 ಗೊತ್ತುಪಡಿಸಿದ ಶಾಖೆಗಳಲ್ಲಿ ನೋಂದಣಿ ಮಾಡಲಾಗುತ್ತಿದೆ. ಆಧಾರ್ ದೃಢೀಕರಣದ ಮೂಲಕ ಇ-ಕೆವೈಸಿ ನಂತರ ಅರ್ಜಿಯನ್ನು ಸ್ವೀಕರಿಸಲಾಗುತ್ತದೆ. ವೈದ್ಯಕೀಯ ಸಂಸ್ಥೆಗಳು ಮತ್ತು ದೇವಾಲಯ ಮಂಡಳಿಯಿಂದ ಅನುಮತಿಸಲಾದ ವೈದ್ಯರು ನೀಡಿದ ಆರೋಗ್ಯ ಪ್ರಮಾಣಪತ್ರವನ್ನು ಹಾಜರುಪಡಿಸುವುದು ಕಡ್ಡಾಯ. ಎರಡೂ ಮಾರ್ಗಗಳಿಗೆ ದೈನಂದಿನ ಕೋಟಾವನ್ನು ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚು ದೈನಂದಿನವಾರು ನೋಂದಣಿ ಮಾಡಲಾಗುವುದಿಲ್ಲ. ಯಾವುದೇ ನಿರ್ದಿಷ್ಟ ದಿನಾಂಕದ ಯಾತ್ರೆಗೆ ಆ ದಿನಾಂಕದ 8 ದಿನಗಳ ಮುನ್ನ ನೋಂದಣಿ ಕೊನೆಗೊಳ್ಳುತ್ತದೆ. ದೇವಾಲಯ ಮಂಡಳಿಯು ಪ್ರತಿ ನೋಂದಣಿಗೆ 150 ರೂ.ಗಳ ಶುಲ್ಕ ವಿಧಿಸುತ್ತದೆ" ಎಂದು ಪಿಎನ್ಬಿಯ ವಲಯ ಮುಖ್ಯಸ್ಥ ಅನಿಲ್ ಶರ್ಮಾ ತಿಳಿಸಿದರು.
ಯಾತ್ರೆಯ ನಿಯಮಗಳು ಮತ್ತು ನಿಬಂಧನೆಗಳ ಬಗ್ಗೆ ಮಾಹಿತಿ ನೀಡಿದ ಅನಿಲ್ ಶರ್ಮಾ, "ಗರ್ಭಿಣಿಯರು, 13 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟವರು ವೈದ್ಯಕೀಯ ಪ್ರಮಾಣಪತ್ರವನ್ನು ಹೊಂದಿದ್ದರೂ ಸಹ ಅವರಿಗೆ ಯಾತ್ರೆಗೆ ಅನುಮತಿ ನೀಡುವುದಿಲ್ಲ" ಎಂದು ಹೇಳಿದರು.
ಅಮರನಾಥ ಯಾತ್ರೆಯು ಈ ವರ್ಷದ ಜುಲೈ 3ರಂದು ಅನಂತ್ ನಾಗ್ ಜಿಲ್ಲೆಯ ಪಹಲ್ ಗಾಮ್ ಟ್ರ್ಯಾಕ್ ಮತ್ತು ಗಂದರ್ ಬಾಲ್ ಜಿಲ್ಲೆಯ ಬಾಲ್ಟಾಲ್ ಎರಡೂ ಮಾರ್ಗಗಳಲ್ಲಿ ಏಕಕಾಲದಲ್ಲಿ ಪ್ರಾರಂಭವಾಗಲಿದೆ. ರಕ್ಷಾ ಬಂಧನದ ಸಂದರ್ಭದಲ್ಲಿ ಆಗಸ್ಟ್ 9ರಂದು ಯಾತ್ರೆ ಮುಕ್ತಾಯಗೊಳ್ಳಲಿದೆ.
ಮಾರ್ಚ್ 5ರಂದು ರಾಜಭವನದಲ್ಲಿ ನಡೆದ ಶ್ರೀ ಅಮರನಾಥಜಿ ದೇವಾಲಯ ಮಂಡಳಿಯ (ಎಸ್ಎಎಸ್ಬಿ) 48ನೇ ಮಂಡಳಿ ಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಯಾತ್ರೆಯ ದಿನಾಂಕಗಳನ್ನು ಘೋಷಿಸಿದರು. ಈ ವರ್ಷದ ಅಮರನಾಥ ಯಾತ್ರೆಗೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯನ್ನು ಪರಿಗಣಿಸಿ ಜಮ್ಮು, ಶ್ರೀನಗರ ಮತ್ತು ಇತರ ಕೇಂದ್ರಗಳಲ್ಲಿ ವಸತಿ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ.
ಇದನ್ನೂ ಓದಿ: ಅಯೋಧ್ಯೆ ಶ್ರೀ ರಾಮ ಮಂದಿರದ ಶೇ 99ರಷ್ಟು ನಿರ್ಮಾಣ ಕೆಲಸ ಪೂರ್ಣ: ಟ್ರಸ್ಟ್ ಅಧ್ಯಕ್ಷ ಮಿಶ್ರಾ ಮಾಹಿತಿ - RAM TEMPLE