ಗುವಾಹತಿ (ಅಸ್ಸೋಂ): ಪಹಲ್ಗಾಮ್ ಉಗ್ರರ ಅಟ್ಟಹಾಸವನ್ನು ಭಾರತ ಸೇರಿ ವಿಶ್ವದ ಬಹುತೇಕ ರಾಷ್ಟ್ರಗಳು ಖಂಡಿಸಿವೆ. ಈ ಸಂದರ್ಭದಲ್ಲಿ ಪಾಕಿಸ್ತಾನ ಪರ ಬೆಂಬಲ ವ್ಯಕ್ತಪಡಿಸಿದವರಿಗೆ ಅಸ್ಸೋಂ ಮುಖ್ಯಮಂತ್ರಿ ಡಾ. ಹಿಮಂತ ಬಿಸ್ವಾ ಶರ್ಮಾ ಕಠಿಣ ಸಂದೇಶ ರವಾನಿಸಿದ್ದಾರೆ. ರಾಷ್ಟ್ರವಿರೋಧಿ ನಿಲುವುಗಳನ್ನು ತೆಗೆದುಕೊಳ್ಳುವವರ ವಿರುದ್ಧ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಅಸ್ಸೋಂ ಸರ್ಕಾರ ಕೆಲವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಇಲ್ಲಿಯವರೆಗೆ, ಪಹಲ್ಗಾಮ್ ವಿಷಯದಲ್ಲಿ ಪಾಕಿಸ್ತಾನವನ್ನು ಬೆಂಬಲಿಸುವ ಸಾರ್ವಜನಿಕ ಮತ್ತು ಸಾಮಾಜಿಕ ಮಾಧ್ಯಮ ಕಾಮೆಂಟ್ಗಳನ್ನು ಮಾಡಿದ್ದಕ್ಕಾಗಿ ಅಲ್ಲಿನ ಪೊಲೀಸರು ಶಾಸಕ ಸೇರಿದಂತೆ 10 ಜನರನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ವಕೀಲರು, ಪತ್ರಕರ್ತರು ಮತ್ತು ವಿದ್ಯಾರ್ಥಿ ಮುಖಂಡರು ಸೇರಿದ್ದಾರೆ.
ಇತ್ತೀಚೆಗೆ, ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ನಡೆದ ಉಗ್ರರ ಹೇಯ ಕೃತ್ಯದ ಬಗ್ಗೆ ದೇಶಾದ್ಯಂತ ಕಟು ಟೀಕೆ, ವಿರೋಧಗಳು ವ್ಯಕ್ತವಾಗಿವೆ. ಪಾಕಿಸ್ತಾನಿ ಭಯೋತ್ಪಾದಕರ ಈ ಹೇಡಿ ಕೆಲಸವನ್ನು ಜನರು ಖಂಡಿಸಿದ್ದಾರೆ. ಈ ನಡುವೆ ಭಯೋತ್ಪಾದಕರ ಭೀಕರ ದಾಳಿಗೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಪಾಕಿಸ್ತಾನವನ್ನು ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ವಿಶೇಷವಾಗಿ, ಅನೇಕರು ಸಾಮಾಜಿಕ ಮಾಧ್ಯಮಗಳ ಮೂಲಕ ಈ ಅನಾಗರಿಕ ಕೃತ್ಯ ಮತ್ತು ಪಾಕಿಸ್ತಾನವನ್ನು ಬೆಂಬಲಿಸಿದ್ದಾರೆ. ಅಸ್ಸೋಂನಲ್ಲಿ ಎಐಯುಡಿಎಫ್ನ ಧಿಂಗ್ ಶಾಸಕ ಅಮೀನುಲ್ ಇಸ್ಲಾಂ ಅವರು ಪಾಕಿಸ್ತಾನವನ್ನು ಬೆಂಬಲಿಸುವುದಾಗಿ ಸಾರ್ವಜನಿಕ ಸಭೆಯಲ್ಲಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ ಆರೋಪದಡಿ ಎರಡು ದಿನಗಳ ಹಿಂದೆ ಅವರನ್ನು ಬಂಧಿಸಲಾಗಿತ್ತು.
ಈ ಘಟನೆಗಳ ನಂತರ, ಶನಿವಾರ, ಗುವಾಹತಿಯಲ್ಲಿರುವ ಭಾರತೀಯ ಜನತಾ ಪಕ್ಷದ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ, ಅಸ್ಸೋಂ ಸಿಎಂ ಡಾ. ಹಿಮಂತ ಬಿಸ್ವಾ ಶರ್ಮಾ ಮಾತನಾಡಿ, ಸರ್ಕಾರವು ಅಂತಹ ವ್ಯಕ್ತಿಗಳನ್ನು ಗುರುತಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಕೆ ರವಾನಿಸಿದರು. ಅಲ್ಲದೆ, ಅಗತ್ಯವಿದ್ದರೆ ರಾಷ್ಟ್ರೀಯ ಭದ್ರತಾ ಕಾಯ್ದೆ (ಎನ್ಎಸ್ಎ) ಹೇರಬೇಕೆಂದು ಅವರು ಹೇಳಿದರು. "ಭಾರತ ಮತ್ತು ಪಾಕಿಸ್ತಾನ ಯಾವತ್ತೂ ಶತ್ರು ರಾಷ್ಟ್ರಗಳು. ಭಾರತ ವಿರೋಧಿ ಹೇಳಿಕೆಗಾಗಿ ಕೃಷಕ್ ಮುಕ್ತಿ ಸಂಗ್ರಾಮ ಸಮಿತಿ (ಕೆಎಂಎಸ್ಎಸ್) ನಾಯಕನನ್ನು ನಿನ್ನೆ ಬಂಧಿಸಿರುವ ಬಗ್ಗೆ ಅವರು ತಿಳಿಸಿದರು.
"ಇಂದು (ಶನಿವಾರ) ಬೆಳಗ್ಗೆ ಹಜೋದಿಂದ ಯುವಕನನ್ನು ಬಂಧಿಸಲಾಗಿದೆ. ನಾವು ಸಾಮಾಜಿಕ ಮಾಧ್ಯಮದಲ್ಲಿನ ಅಂತಹ ಪೋಸ್ಟ್ಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಅವುಗಳನ್ನು ರಾಷ್ಟ್ರ ವಿರೋಧಿ ಹೇಳಿಕೆಗಳೆಂದು ಪರಿಗಣಿಸಿ, ಅವರನ್ನು ಬಂಧಿಸಿದ್ದೇವೆ. ಪಾಕಿಸ್ತಾನವನ್ನು ಯಾರು ಬೆಂಬಲಿಸುತ್ತಾರೋ ಅವರನ್ನು ಬಂಧಿಸಲಾಗುವುದು. ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದ ನಂತರ ಅವರು ಎಷ್ಟು ದಿನ ಅಡಗಿಕೊಳ್ಳಬಹುದು? ನಾವು ಈ ವಿಷಯಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಮತ್ತು ಕಠಿಣ ಕ್ರಮ ಕೈಗೊಳ್ಳುತ್ತೇವೆ". ಪಹಲ್ಗಾಮ್ ಘಟನೆಯಲ್ಲಿ ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕಾಗಿ ರಾಷ್ಟ್ರ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಲ್ಪಟ್ಟ ವಿವಾದಾತ್ಮಕ ಶಾಸಕ ಅಮೀನುಲ್ ಇಸ್ಲಾಂ ಬಗ್ಗೆ, "ಅಂತಹ ಜನರು ಇದನ್ನು ಮಾಡಲು ಹೇಗೆ ಧೈರ್ಯ ಮಾಡುತ್ತಾರೆಂದು ನನಗೆ ತಿಳಿದಿಲ್ಲ" ಎಂದು ಅವರ ಹೇಳಿಕೆಯನ್ನು ಖಂಡಿಸಿದರು. ಅಲ್ಲದೆ ಅವರನ್ನು ಹೇಗೆ ತಣ್ಣಗಾಗಿಸಬೇಕೆಂಬುದು ನನಗೆ ತಿಳಿದಿದೆ. ಅವರು ಕೆಲವು ದಿನಗಳ ಕಾಲ ಜೈಲಿನಲ್ಲಿಯೇ ಇರಲಿ, ನಂತರ ನಾವು ಇತರ ಕ್ರಮಗಳನ್ನು ಪರಿಗಣಿಸುತ್ತೇವೆ" ಎಂದರು.
ಸಾಮಾಜಿಕ ಮಾಧ್ಯಮಗಳ ಮೂಲಕ, ಮುಖ್ಯಮಂತ್ರಿಗಳು ಶನಿವಾರ ಮಧ್ಯಾಹ್ನದ ವೇಳೆಗೆ ರಾಷ್ಟ್ರವಿರೋಧಿ ನಿಲುವುಗಳನ್ನು ತೆಗೆದುಕೊಂಡ ಹಿನ್ನೆಲೆ 10 ಜನರನ್ನು ಬಂಧಿಸಲಾಗಿದೆ ಎಂದು ದೃಢಪಡಿಸಿದರು. ಶುಕ್ರವಾರ 5 ಜನರನ್ನು ಬಂಧಿಸಿದ್ದರೆ, ಶನಿವಾರದ ಹೊತ್ತಿಗೆ ಈ ಸಂಖ್ಯೆ 10ಕ್ಕೆ ಏರಿದೆ". ಈ ಅಭಿಯಾನ ಮುಂದುವರಿಯಲಿದ್ದು, ಅಂತಹ ಯಾವುದೇ ರಾಷ್ಟ್ರ ವಿರೋಧಿ ಸಂದೇಶಗಳನ್ನು ಹರಿಬಿಟ್ಟರೆ ಅವರಿಗೆ ತಕ್ಕ ಶಾಸ್ತಿ ಮಾಡುವುದಾಗಿ ಸಂದೇಶ ರವಾನಿಸಿದರು.
ಇದನ್ನೂ ಓದಿ: 'ನಾನು ಭಾರತದ ಸೊಸೆ, ನನಗೆ ಇಲ್ಲೇ ಇರಲು ಅವಕಾಶ ನೀಡಿ'; ಪ್ರಧಾನಿಗೆ ಸೀಮಾ ಹೈದರ್ ಮನವಿ