ಅಹಮದಾಬಾದ್(ಗುಜರಾತ್): ಗುರುತು ಪತ್ತೆಗಾಗಿ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟ 185 ಜನರ ರಕ್ತ ಮತ್ತು ಡಿಎನ್ಎ ಮಾದರಿಗಳನ್ನು ಬಿ.ಜೆ. ವೈದ್ಯಕೀಯ ಕಾಲೇಜು ಮತ್ತು ಸಿವಿಲ್ ಆಸ್ಪತ್ರೆಯಲ್ಲಿ ಸಂಗ್ರಹಿಸಲಾಗಿದೆ. ತಮ್ಮವರ ಗುರುತು ಪತ್ತೆಗೆ ಕುಟುಂಬಸ್ಥರು ಆಸ್ಪತ್ರೆಗೆ ಆಗಮಿಸಿದ್ದಾರೆ. ಆರಕ್ಕೂ ಹೆಚ್ಚು ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಮೃತರ ರಕ್ತ ಮತ್ತು ಡಿಎನ್ಎ ಮಾದರಿಯನ್ನು ಸಂಗ್ರಹಿಸಿದರು.
ಆರು ಮೃತದೇಹಗಳು ಕುಟುಂಬಸ್ಥರಿಗೆ ಹಸ್ತಾಂತರ: ಆರು ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿದ್ದು, ಮೃತದೇಹಗಳನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಇತರರ ಮೃತದೇಹಗಳು ಗುರುತಿಸಲಾಗದಷ್ಟು ಸುಟ್ಟು ಕರಕಲಾಗಿರುವುದರಿಂದ ಗುರುತು ಪತ್ತೆಗೆ ಡಿಎನ್ಎ ಪ್ರೊಫೈಲಿಂಗ್ ನಡೆಯುತ್ತಿದೆ. ಮೃತರ ಗುರುತು ಪತ್ತೆಗೆ ನಾವು ಕುಟುಂಬಸ್ಥರ ಡಿಎನ್ಎ ಮಾದರಿಗಳನ್ನೂ ಸಂಗ್ರಹಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. 215 ಮಂದಿ ಮೃತರ ಕುಟುಂಬಸ್ಥರು ಡಿಎನ್ಎ ಮಾದರಿಗಳನ್ನು ನೀಡಲು ನಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಮರಣೋತ್ತರ ಪರೀಕ್ಷೆ ಕೊಠಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಚಿರಾಗ್ ಗೋಸಾಯಿ ತಿಳಿಸಿದರು.
ಚಿಕ್ಕಮ್ಮ - ಚಿಕ್ಕಪ್ಪನ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ: ಮೃತರ ಸಂಬಂಧಿ ಕುಶಾಲ್ ಮೆಹ್ತಾ ಈಟಿವಿ ಭಾರತ ಜೊತೆ ಮಾತನಾಡಿ, "ವಡೋದರಾದ ನನ್ನ ಚಿಕ್ಕಮ್ಮ ಮತ್ತು ಚಿಕ್ಕಪ್ಪ ಲಂಡನ್ನಲ್ಲಿ ಕೆಲಸ ಮಾಡುತ್ತಿರುವ ಮಗಳನ್ನು ಭೇಟಿ ಮಾಡಲು ಪ್ರಯಾಣ ಬೆಳೆಸಿದ್ದರು. ಅವರು 3 ರಿಂದ 4 ತಿಂಗಳು ಅಲ್ಲಿಯೇ ಇದ್ದು, ಲಂಡನ್ನಲ್ಲಿ ದೇವಾಲಯದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಲು ಯೋಜಿಸಿದ್ದರು. ಆದರೆ ದುರಂತದಲ್ಲಿ ಸಾವನ್ನಪಿದ್ದಾರೆ. ಚಿಕ್ಕಮ್ಮ ಮತ್ತು ಚಿಕ್ಕಪ್ಪನ ಬಗ್ಗೆ ಮಾಹಿತಿ ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇನೆ" ಎಂದು ಹೇಳಿದರು.
ಒಬ್ಬನನ್ನು ಹೊರತುಪಡಿಸಿ ವಿಮಾನದಲ್ಲಿದ್ದವರೆಲ್ಲರೂ ಸಾವು: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಓರ್ವ ಮಾತ್ರ ಬದುಕುಳಿದಿದ್ದು, 241 ಮಂದಿ ಸಾವನ್ನಪ್ಪಿದ್ದಾರೆ. ಅವರಲ್ಲಿ 168 ಭಾರತೀಯರು, 53 ಬ್ರಿಟಿಷರು, ಏಳು ಪೋರ್ಚುಗೀಸರು ಮತ್ತು ಓರ್ವ ಕೆನಡಿದವರಾಗಿದ್ದಾರೆ. ಬಿಜೆ ವೈದ್ಯಕೀಯ ಕಾಲೇಜಿನ ಸಂಕೀರ್ಣದಲ್ಲಿ ಸಾವನ್ನಪ್ಪಿದವರಲ್ಲಿ ನಾಲ್ವರು ಎಂಬಿಬಿಎಸ್ ವಿದ್ಯಾರ್ಥಿಗಳು ಮತ್ತು ವೈದ್ಯರ ಪತ್ನಿ ಸೇರಿದ್ದಾರೆ. ಒಟ್ಟಾರೆ ಈ ದುರಂತದಲ್ಲಿ 265 ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ಈ ವಿಮಾನ ಅಹಮದಾಬಾದ್ ನಿಂದ ಲಂಡನ್ ಗೆ ತೆರಳುತ್ತಿತ್ತು. ಟೇಕ್ ಆಫ್ ಆದ ಕೆಲವೇ ಗಳಿಗೆಯಲ್ಲಿ ಅಂದರೆ ಸುಮಾರು ಮಧ್ಯಾಹ್ನ 1:38ಕ್ಕೆ ವಿಮಾನ ಪತನಗೊಂಡಿತ್ತು.
ಇದನ್ನೂ ಓದಿ: ಇನ್ನೂ ಸಿಕ್ಕಿಲ್ಲ ಏರ್ ಇಂಡಿಯಾ ವಿಮಾನದ ಬ್ಲ್ಯಾಕ್ ಬಾಕ್ಸ್, ಮುಂದುವರೆದ ಶೋಧ
ಇದನ್ನೂ ಓದಿ: ಹಾಸ್ಟೆಲ್ ಕಟ್ಟಡದ ಬಳಿ ಪುಟ್ಟದಾದ ಟೀ ಕೆಟಲ್ ನಡೆಸುತ್ತಿದ್ದ ಕುಟುಂಬ: ವಿಮಾನ ದುರಂತದಲ್ಲಿ 15 ವರ್ಷದ ಬಾಲಕ ಸಾವು, ತಾಯಿ ಗಂಭೀರ