ದೇವಸ್ಥಾನ ಪ್ರವೇಶಿಸಿದ್ದಕ್ಕೆ ದಲಿತರ ಮನೆ ಮೇಲೆ ದಾಳಿ ಆರೋಪ : 30 ಜನರ ವಿರುದ್ಧ ಪ್ರಕರಣ
ಹಾವೇರಿ: ದೇವಸ್ಥಾನ ಪ್ರವೇಶ ಮಾಡಿದ್ದಾರೆ ಎಂದು ದಲಿತ ವರ್ಗದ ತಾಯಿ-ಮಗನ ಮನೆ ಮೇಲೆ ಸವರ್ಣೀಯರು ದಾಳಿ ಮಾಡಿರುವ ಆರೋಪ ಪ್ರಕರಣ ರಾಣೆಬೆನ್ನೂರು ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಡೆದಿದೆ. ನಂದಿಹಳ್ಳಿಯ ಬಸವೇಶ್ವರ ದೇವಾಲಯಕ್ಕೆ ಕಳೆದ ಎರಡು ದಿನಗಳ ಹಿಂದೆ ತಾಯಿ ಮತ್ತು ಮಗ ಹೋಗಿದ್ದರು. ನಂದಿಹಳ್ಳಿ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ದೇವಸ್ಥಾನಕ್ಕೆ ಅವರು ತೆರಳಿದ್ದರು. ಆಗ ಸವರ್ಣೀಯರು ತಮ್ಮನ್ನು ದೇವಸ್ಥಾನದ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಗುಡಿ ಪ್ರವೇಶಿಸದಂತೆ ಎಚ್ಚರಿಕೆ ನೀಡಿದ್ದರು ಸಂತ್ರಸ್ತರು ಆರೋಪಿಸಿದ್ದಾರೆ.
ಈ ಎಚ್ಚರಿಕೆಯನ್ನು ಲೆಕ್ಕಿಸದೆ ದೇವಸ್ಥಾನ ಪ್ರವೇಶ ಮಾಡಿದ್ದ ದಲಿತ ತಾಯಿ, ಮಗನ ಮನೆಗೆ ತೆರಳಿದ ಸವರ್ಣೀಯರು ಅವರ ಮನೆಯ ಹಂಚು ಮತ್ತು ಬೈಕ್ ಅನ್ನು ಜಖಂಗೊಳಿಸಿ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಸವರ್ಣೀಯರ ವಿರುದ್ಧ ಕೇಳಿಬಂದಿದೆ. ಹೆಮ್ಮವ್ವ ಮಲ್ಲಾಡದ, ರಮೇಶ್ ಮಲ್ಲಾಡದ ಹಲ್ಲೆಗೊಳಗಾದ ತಾಯಿ, ಮಗ ಆಗಿದ್ದಾರೆ. ಈ ಸಂಬಂಧ ಸಂತ್ರಸ್ತರು ನೀಡಿದ ದೂರಿನ ಅನ್ವಯ ಹಲಗೇರಿ ಪೊಲೀಸ್ ಠಾಣೆಯಲ್ಲಿ 30 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಮನೆಯೊಡತಿಯ ಕೊಲೆಗೆ ಯತ್ನ.. ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ