ಕದ್ದ ಬೈಕ್ನಲ್ಲಿ ಬಂದು ವೃದ್ದೆಯ ಚಿನ್ನದ ಸರ ಕದಿಯುವ ಯತ್ನ: ಕೃತ್ಯ ಸಿಸಿಟಿವಿಯಲ್ಲಿ ಸೆರೆ
ದೊಡ್ಡಬಳ್ಳಾಪುರ: ಬೈಕ್ ಕದ್ದ ಕಳ್ಳನೊಬ್ಬ ಅದೇ ಬೈಕ್ನಲ್ಲಿ ವೃದ್ದೆಯ ಸರ ಕದಿಯುವ ವಿಫಲ ಯತ್ನ ನಡೆಸಿದ ಘಟನೆ ನವೆಂಬರ್ 15ರ ಮುಂಜಾನೆ ನಗರದ ಚೌಡೇಶ್ವರಿ ದೇವಸ್ಥಾನದ ಬೆಳ್ಳಿ ಗಣಪತಿ ರಸ್ತೆಯಲ್ಲಿ ನಡೆದಿದೆ. ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೆಳ್ಳಿ ಗಣಪತಿ ರಸ್ತೆಯ ನಿವಾಸಿ ಸುಶೀಲಮ್ಮ ನಗರಸಭೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಮನೆಯ ಮುಂದಿನ ಕೊಳಾಯಿಗೆ ಪೈಪ್ ಹಾಕಲೆಂದು ಹೊರ ಬಂದಿದ್ದರು. ಇದೇ ಸಮಯದಲ್ಲಿ ಬೈಕ್ನಲ್ಲಿ ಬಂದ ಸರಗಳ್ಳ ವಿಳಾಸ ಕೇಳುವ ನೆಪದಲ್ಲಿ ವೃದ್ದೆಯ ಕೊರಳಿನಿಂದ ಸರ ಕದಿಯುವ ಯತ್ನ ನಡೆಸಿದ್ದಾನೆ. ಇದೇ ಸಮಯಕ್ಕೆ ಮತ್ತೊಂದು ಬೈಕ್ ಅದೇ ರಸ್ತೆಯಲ್ಲಿ ಬರುವುದನ್ನು ನೋಡಿ ಅಲ್ಲಿಂದ ಪರಾರಿಯಾಗಿದ್ದಾನೆ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.